Advertisement

ಬೃಹತ್‌ ಡೋಲೋಮೈಟ್‌ ಗಣಿಗಾರಿಕೆಗೆ ಪರವಾನಗಿ ಬೇಡ

01:10 PM Feb 11, 2021 | Team Udayavani |

ಬಾಗಲಕೋಟೆ: ತಾಲೂಕಿನ ಶಿರೂರ ಮತ್ತು ನೀಲಾನಗರ ಗ್ರಾಪಂ ವ್ಯಾಪ್ತಿಯಲ್ಲಿ ಬಾಗಲಕೋಟೆಯ ಸೋನಾ ಮೈನ್ಸ ಕಂಪನಿಯಿಂದ ಸುಮಾರು 35 ಎಕರೆ ಭೂಮಿಯಲ್ಲಿ ಡೋಲೋಮೈಟ್‌ ಗಣಿಗಾರಿಕೆ  ನಡೆಸಲು ಮುಂದಾಗಿದ್ದು, ಈ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಗ್ರಾಮಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳಿಂದ ನಕಲಿ ಸಭೆ ನಡೆಸಲಾಗಿದೆ. ಕೂಡಲೇ ಈ ಸಭೆಯ ಮಾನ್ಯತೆ ರದ್ದುಗೊಳಿಸಿ, ಸಾರ್ವಜನಿಕರ, ರೈತರ ಹಾಗೂ ಪರಿಸರವಾದಿಗಳ ಸಭೆ ನಡೆಸಬೇಕು ಎಂದು ಗುಂಡನಪಲ್ಲೆ ಗ್ರಾಮದ ಯುವ ಮುಖಂಡ ಪ್ರವೀಣ ಪಾಟೀಲ ಒತ್ತಾಯಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರೂರ ಗ್ರಾಮದ ಸರ್ವೇ ನಂ. 283, 277 ಹಾಗೂ 276 ಅಡಿ ಬರುವ 13.69 ಹೆಕ್ಟೇರ್‌ ಭೂಮಿಯಲ್ಲಿ ಸೋನಾ ಮಿನರಲ್ಸನಿಂದ ಡೋಲೋಮೈಟ್‌ ಗಣಿಗಾರಿಕೆ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬಾಧಿತ ಪ್ರದೇಶದ ರೈತರು, ಸಾರ್ವಜನಿಕರು ಹಾಗೂ ಗ್ರಾಮಸ್ಥರ ಸಭೆ ನಡೆಸಬೇಕು ಎಂಬ ನಿಯಮವಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಾಗಲಕೋಟೆಯ ಅಪರ ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ಈ ಕಂಪನಿಯ ಉದ್ಯೋಗಿಗಳು, ಬೇರೆ ಊರಿನ ಜನರನ್ನು ಕರೆಸಿ ಸಭೆ ನಡೆಸಿದ್ದಾರೆ. ಅಲ್ಲದೇ ಬೇರೊಬ್ಬರ ಹೊಲದಲ್ಲಿ ದುಡಿಯಲು ಹೋದವರಿಗೆ ಕಾರ್ಯಕ್ರಮವಿದೆ ಬನ್ನಿ ಎಂದು ಮಹಿಳೆಯರನ್ನು ಕರೆದುಕೊಂಡು ಹೋಗಿ, ಅವರಿಗೆ ಉಪಹಾರ ಮಾಡಿಸಿ, ಬಳಿಕ 100 ಹಣ ಕೊಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಿದರು.

ಅಂದಿನ ಸಭೆಯಲ್ಲಿ ಮುಗ್ದ ಮಹಿಳೆಯರಿಂದ ಸಹಿ ಪಡೆದಿದ್ದು, ಅವರಿಗೆ ಡೋಲೋಮೈಟ್‌ ಗಣಿಗಾರಿಕೆ  ಕುರಿತ ಸಭೆಗೆ ಸಹಿ ಪಡೆದಿದ್ದಾರೆ ಎಂದೂ ಗೊತ್ತಿಲ್ಲ. ಅಲ್ಲದೇ ಸೋನಾ ಮಿನರಲ್ಸನಲ್ಲಿ ಕೆಲಸ ಮಾಡುವ ಕಂಪ್ಯೂಟರ್‌ ಆಪರೇಟರ್‌, ಸೂಪರ್‌ವೈಜರ್‌ ಗಳು, ವಿವಿಧ ಕಾರ್ಮಿಕರು, ಗುಳೇದಗುಡ್ಡ, ಕಲಾದಗಿಯ ಕೆಲವರ ಸಹಿ ಮಾಡಿಸಿದ್ದಾರೆ.

ಈ ಗಣಿಗಾರಿಕೆಯಿಂದ ಬಾಧಿತಗೊಳ್ಳುವ ಗುಂಡನಪಲ್ಲೆ, ಬೇವಿನಮಟ್ಟಿ ಗ್ರಾಮಸ್ಥರ ಅಹವಾಲು ಪಡೆದಿಲ್ಲ. ಈ ಕುರಿತು ಹೋರಾಟ ನಡೆಸಿದರೆ, ನಮ್ಮ ಮೇಲೆಯೇ ಪೊಲೀಸ್‌ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ದೂರಿದರು.

ಗಣಿಗಾರಿಕೆ ಕನಿಷ್ಠ 4ರಿಂದ ಐದು ಎಕರೆ ಪ್ರದೇಶದಲ್ಲಿ ನಡೆಯುತ್ತವೆ. ಆದರೆ, ಸೋನಾ ಮಿನರಲ್ಸನವರು 38 ಎಕರೆ ಬೃಹತ್‌ ಪ್ರದೇಶದಲ್ಲಿ ಈ ಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಗರಿಷ್ಠ 15 ಟನ್‌ ಭಾರವಾದ ವಾಹನ ಸಂಚಾರಕ್ಕೆ ಅನುಮತಿ ಇದ್ದರೂ, 40 ಟನ್‌ ಭಾರದ ವಾಹನ ಓಡಿಸುತ್ತಿದ್ದಾರೆ. ಇದರಿಂದ ರಸ್ತೆಗಳೂ ಹಾಳಾಗಿವೆ. ಸಧ್ಯ ಗಣಿಗಾರಿಕೆ ನಡೆಸಲು ಉದ್ದೇಶಿಸಿರುವ ಸರ್ವೆ ನಂಬರ್‌ಗಳ ಪಕ್ಕದ ಭೂಮಿಯ ರೈತರ ಅಹವಾಲು ಅಥವಾ ಅಭಿಪ್ರಾಯ ಪಡೆದಿಲ್ಲ. ಈಗಾಗಲೇ ಖೊಟ್ಟಿ ಸಭೆ ನಡೆಸಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿದ್ದು, ಇದನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

Advertisement

ಇದನ್ನೂ ಓದಿ :ಸಮಯಕ್ಕೆ ಬಾರದ ಬಸ್‌: ವಿದ್ಯಾರ್ಥಿಗಳ ಪರದಾಟ

ಸೋನಾ ಮಿನಲರನವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಮಂಡಳಿಯ ಹಿರಿಯ ಅಧಿಕಾರಿಗಳಿಗೂ ಮೋಸ ಮಾಡಿದ್ದಾರೆ. ಅಧಿಕಾರಿಗಳೂ, ಸಭೆಯಲ್ಲಿ ಭಾಗವಹಿಸಿದವರು ಬಾಧಿತ ಪ್ರದೇಶದವರಾ ಇಲ್ಲವೇ ಬೇರೆ ಭಾಗದವರಾ ಎಂಬುದನ್ನೂ ವಿಚಾರಣೆ ಮಾಡಿಲ್ಲ. ಹೀಗಾಗಿ ಕಂಪನಿ ಮತ್ತು ಸಭೆ ನಡೆಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ದ್ಯಾಮಣ್ಣ ಗಾಳಿ, ಕರಿಯಪ್ಪ ಪಾದನಕಟ್ಟಿ, ಮಹಾಂತೇಶ ಕೋಟಿಕಲ್‌, ಸಿದ್ದಪ್ಪ ದೊಡಮನಿ, ಮಹಾದೇವ ಸನ್ನಗೋಳ, ಸಿದ್ದಪ್ಪ ಜುಮನಾಳ,   ಸಂಗಮೇಶ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next