Advertisement

ಗ್ರಾಮೀಣ ಯುವಕನ ಸಾಧನೆ : ರೈತ ಪರ ಡಂಪರ್‌

08:32 PM Sep 28, 2020 | Suhan S |

ಸ್ಥಳೀಯ ರೈತಾಪಿ ಜನರ ಅಗತ್ಯವನ್ನು ಗಮನಿಸಿದ ಬಡ ರೈತಕುಟುಂಬದ ಹುಡುಗ, ಹೊಸ ಬಗೆಯ ಯಂತ್ರ ರೂಪಿಸಿದ್ದಾನೆ. ತನ್ನ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದಾನೆ. ಅವನು ರೂಪಿಸಿದ ಗಾಡಿ ಈಗಾಗಲೇ ಗುಡ್ಡ ಹತ್ತಿದೆ. ತೋಟಕ್ಕೆ ಇಳಿದಿದೆ…

Advertisement

ಅದು ಕರಾವಳಿ-ಮಲೆನಾಡಿನ ಎಲ್ಲ ಹಳ್ಳಿಗಳಂತೆಯೇ ಇರುವ ಪುಟ್ಟಊರು. ಹೆಸರು ಬಂಬಿಲ. (ದಕ್ಷಿಣ ಕನ್ನಡ ಜಿಲ್ಲೆಯ ನೂತನ ತಾಲೂಕು ಕಡಬಕ್ಕೆ ಸೇರುತ್ತದೆ) ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ಕಟೀಲ್‌ ಅವರ ಮನೆ ಇರುವುದು ಇಲ್ಲೇ. ಅವರ ಮನೆಯಿಂದ ಪರ್ಲಾಂಗು ದೂರದಲ್ಲಿ ಈ ಯುವಕನ ಪುಟ್ಟ ಹೆಂಚಿನ ಮನೆಯಿದೆ. ಹುಡುಗನ ಹೆಸರು ಪುರುಷೋತ್ತಮ. ಮುಖದ ಮುಗ್ಧತೆ, ತೂಕ, ಆಕಾರ ನೋಡಿದರೆ ಈಗಷ್ಟೇ10ನೇ ತರಗತಿ ದಾಟಿದಂತೆ ಕಾಣುತ್ತಾನೆ. ಏನಿದು ಈ ಪುರುಷೋತ್ತಮನ ಸಾಹಸ ಅಂದಿರಾ? ಈತ ಡ್ರೋನ್‌ ಹಾರಿಸಿಲ್ಲ. ವಿಮಾನ ಏರಿಸಿಲ್ಲ. ಈತ ಮಾಡಿರುವುದಿಷ್ಟೇ; ತನ್ನ ಹಳೆಯ ಯಮಹ ಬೈಕ್‌ ಅನ್ನು ಅಡ್ಡಕ್ಕೆಕತ್ತರಿಸಿ, ಅದರ ಬಾಲಕ್ಕೊಂದು ಬಕೆಟ್‌ಕೂರಿಸಿ ಅದನ್ನು ಡಂಪರ್‌ ಆಗಿಸಿದ್ದಾನೆ! ಇಂಥ ಪ್ರಯೋಗವನ್ನು ಬೇರೆಯವರು ಮಾಡಿಲ್ಲವೇ? ಖಂಡಿತಾ ಮಾಡಿದ್ದಾರೆ.

ಚೀನಾದ ಹತ್ತಾರು ಎಂಜಿನ್‌ಕೂರಿಸಿ ರಸ್ತೆ- ತೋಟಗಳಿಂದ ಟ್ರಾಲಿ- ಗಾಡಿಗಳನ್ನು ರೂಪಿಸಿದ್ದಾರೆ. ಅದಕ್ಕೆಲ್ಲಾ ಸರ್ಕಾರದ ವತಿಯಿಂದ ಸಬ್ಸಿಡಿಯೂ ಸಿಕ್ಕಿದೆ. ಆದರೆ ಅವೆಲ್ಲ ಹೆಚ್ಚಾಗಿ, ದೊಡ್ಡ ಉದ್ಯಮಿಗಳಿಗಷ್ಟೇ ಸೀಮಿತವಾದ ಸಾಂಸ್ಥಿಕ ಉತ್ಪನ್ನಗಳು. ಯಂತ್ರದಾರಿಯ ಸಿದ್ಧ ಟೂಲ್ಸ…ಗಳನ್ನು ಜೋಡಿಸಿ ರಸ್ತೆಗಿಳಿದಂಥವು ಅವು. ಪುರುಷೋತ್ತಮನ ಡಂಪರ್‌ ಹಾಗಲ್ಲ. ಸ್ಥಳೀಯ ಅಗತ್ಯಕ್ಕೆ ಸ್ಥಳೀಯವಾಗಿಯೇ ಹುಟ್ಟಿ ಕೊಂಡ ಆವಿಷ್ಕಾರ ಅದು. ಸಂಶೋಧನೆ-ಅಭಿವೃದ್ಧಿಯ ಆಯಪಾಯದ್ದಲ್ಲ. ಸ್ಥಳೀಯ ರೈತಾಪಿ ಜನರ ಅಗತ್ಯವನ್ನುಕಂಡು ಈ ಹೊಸ ಬಗೆಯ ಯಂತ್ರ ರೂಪಿಸಿದವನು, ಬಡ ರೈತ ಕುಟುಂಬದ ಮಗ. ಹೊಸ ಯಂತ್ರ ರೂಪಿಸಲು ಈತಕೆಲವೊಂದು ವಸ್ತುಗಳನ್ನು ಗುಜರಿಯಿಂದ ಹೆಕ್ಕಿ ತಂದಿದ್ದಾನೆ. ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾನೆ. ಅವನು ರೂಪಿಸಿದ ಗಾಡಿ ಈಗಾಗಲೇ ಗುಡ್ಡ ಹತ್ತಿದೆ. ತೋಟಕ್ಕೆ ಇಳಿದಿದೆ. ಅದು ಸರಾಗವಾಗಿ ಹಿಂದೆ ಮುಂದೆ ಚಲಿಸಬಲ್ಲದು. ಎರಡುಕ್ವಿಂಟಲ್‌ ಭಾರ ಹೊರಬಲ್ಲದು. ಮೈಲೇಜು ಚೆನ್ನಾಗಿದೆ. ಲೀಟರ್‌ಗೆ30ರಿಂದ35ಕಿ. ಮೀ. ಓಡಬಲ್ಲದು. ಹೈಡ್ರೋಲಿನ್‌ ಮೂಲಕ ಹಿಂಬದಿಯ ಬಕೆಟ್‌ ಅನ್ನು ಸಲೀಸಾಗಿ ಏರಿಸಿ ಅನ್‌ ಲೋಡ್‌ ಮಾಡಬಹುದು.

ಸಾಮಾನ್ಯವಾಗಿ ಮಲೆನಾಡು- ಕರಾವಳಿಯಲ್ಲಿ ಅಡಕೆ, ತೆಂಗು, ರಬ್ಬರ್‌- ಯಾವುದೇಕೃಷಿ ಇರಲಿ, ಒಂದೇ ಮಟ್ಟಸದಲ್ಲಿರುವುದಿಲ್ಲ. ಗಿಡ ಮರಗಳ ನಡುವಿನ ನಂತರಕಡಿಮೆ ಇರುತ್ತದೆ. ಅಲ್ಲೆಲ್ಲಾ ಗೊಬ್ಬರ, ಮಣ್ಣು, ಹುಟ್ಟುವಳಿ ಸಾಗಿಸಲು ಘನ ವಾಹನಗಳು ಚಲಿಸಲಾರವು. ಪುರುಷೋತ್ತಮನ ಮುಖ್ಯ ಉದ್ದೇಶವೇ ಅದು. ತೋಟದ ತುಂಬೆಲ್ಲಾ ಸಲೀಸಾಗಿ ಸಾಗುವ ಸ್ವಯಂಚಾಲಿತ ಗಾಡಿಯೊಂದು ಬೇಕು. ಚಾಲಕ ಅದರ ಮೇಲೆಯೇಕೂತು ಚಲಾಯಿಸಬೇಕು. ಈ ಗಾಡಿ, ಎಂಟಡಿ ಉದ್ದ- ಮೂರಡಿ ಅಗಲವಿದೆ. ಎಂಜಿನ್‌ ಗೆ ಹೆಚ್ಚು ತ್ರಾಣ ಕೊಡಲು ಎರಡು ಸ್ಟ್ರೋಕ್‌ನ ಆಟೋ ರಿಕ್ಷಾದ ಗೇರ್‌ ಬಾಕ್ಸ್ ಇದೆ. ರಿವರ್ಸ್‌ ಗೇರ್‌ ಸೇರಿ ಐದು ಗೇರ್‌ಗಳಿವೆ. ದಾರಿ ಚೆನ್ನಾಗಿದ್ದರೆ, ಗಂಟೆಗೆ40 ರಿಂದ60ಕಿ.ಮೀ. ವೇಗದಲ್ಲಿ ಓಡಿಸಬಹುದು. ಇಂಡಿಕೇಟರ್‌, ಸಿಗ್ನಲ್, ಟ್ರಯಲ್‌ ಲೈಟ್‌ ಇದೆ. ರೈತ ಕುಟುಂಬದಲ್ಲಿ ಹುಟ್ಟಿದ ಈ ಬಾಲ ವಿಜ್ಞಾನಿ ಓದಿದ್ದು ನಗರಕೇಂದ್ರಿತ ಪ್ರತಿಷ್ಠಿತ ಶಾಲೆಗಳಲ್ಲಿ ಅಲ್ಲ. ಸ್ಥಳೀಯ ಮಂಜುನಾಥ ನಗರದಕನ್ನಡ ಶಾಲೆಯಲ್ಲಿ. ಪ್ರೌಢಶಾಲೆಯನ್ನುಊರಲ್ಲಿಯೇ ಮುಗಿಸಿ ನಿಂತಿಕಲ್ಲಿನ ಕೆ.ಎಸ್‌. ಗೌಡ ಶಿಕ್ಷಣಾಲಯದಲ್ಲಿ ಐ.ಟಿ.ಐ. ಮುಗಿಸಿ ಇದೀಗ ಧರ್ಮಸ್ಥಳದ ಇಂಜಿನಿಯರಿಂಗ್‌ಕಾಲೇಜಿನಲ್ಲಿಕೆಲಸಕ್ಕೆ ಸೇರಿದ್ದಾನೆ.

ತಂದೆ ಬಾಬು ಶೆಟ್ಟಿ, ತಾಯಿ ಯಮುನಾ. ಡಂಪರ್‌ ಒಂದೇ ಅಲ್ಲ, ಬಾಲ್ಯದಿಂದಲೇ ಇಂಥ ಹತ್ತಾರು ಆವಿಷ್ಕಾರಗಳು, ಚಿತ್ರಕಲೆಗಳನ್ನು ಪುರುಷೋತ್ತಮ ಮಾಡಿದ್ದಾನೆ. ಮನೆ ತುಂಬಾ ಹರಡಿಕೊಂಡಿರುವ ಆ ಪಳೆಯುಳಿಕೆಗಳು ಬಾಲಕನ ಭವಿಷ್ಯ ನಿರ್ಧರಿಸುತ್ತವೆ. ಈ ಡಂಪರ್‌ ಯಂತ್ರವು ಮುಂದಿನ ವಾರ ಧರ್ಮಸ್ಥಳ ಸೇರುತ್ತದೆ. ಇದನ್ನು ಖಾವಂದರು (ವೀರೇಂದ್ರ ಹೆಗ್ಗಡೆ) ನೋಡಬೇಕೆಂದು ಪುರುಷೋತ್ತಮನ ಆಸೆ.

Advertisement

ಈ ಹಿಂದೆ ಈತ ಮಾಡಿದ್ದ ಎರಡು ಆವಿಷ್ಕಾರಗಳನ್ನೂ ಹೆಗ್ಗಡೆಯವರು ಗಮನಿಸಿ ಬೆನ್ನು ತಟ್ಟಿದ್ದಾರೆ. ಈ ಬಾರಿ ಈ ಪರಿಪೂರ್ಣ ರೈತಮಿತ್ರ ಯಂತ್ರವನ್ನು ಧರ್ಮಾಧಿಕಾರಿಗಳು ಕಂಡರೆ, ಬರೀ ಮೆಚ್ಚುಗೆ ಮಾತ್ರವಲ್ಲ, ಈ ಯುವ ಹಳ್ಳಿ ಶೋಧಕನ ಭವಿಷ್ಯ, ಆಸೆ ಸುಸ್ಪಷ್ಟವಾಗಬಹುದು. ಹೆಗ್ಗಡೆಯವರ, ಸ್ಥಳೀಯರ ಬೆಂಬಲ ಪ್ರೋತ್ಸಾಹ ಏನೇ ಇರಲಿ, ಸರಕಾರ- ಪ್ರಭುತ್ವಗಳು ಇಂಥಾ ಅನುಶೋಧಕರನ್ನು ಬೆಂಬಲಿಸುವುದು ಯಾವಾಗ? ಡಂಪರ್‌ಕುರಿತ ಹೆಚ್ಚಿನ ಮಾಹಿತಿಗೆ, ಪುರುಷೋತ್ತಮ ಅವರನ್ನು ಸಂಪರ್ಕಿಸಲು- 9945828276.

 

-ನರೇಂದ್ರ ರೈ ದೇರ್ಲ

Advertisement

Udayavani is now on Telegram. Click here to join our channel and stay updated with the latest news.

Next