Advertisement

ವನಿತೆಯರೇ ನೆರವೇರಿಸಿದ ಮೀನಾಕ್ಷಿ ಕಲ್ಯಾಣ

06:46 PM Jan 10, 2020 | mahesh |

ನೆರೆಹೊರೆಯ ರಾಜರನ್ನ ಗೆದ್ದ ಬಳಿಕ ಕಾಶ್ಮೀರದ ಅರಸ ಶೂರ ಸೇನನಲ್ಲಿ ಕಾದಾಡುತ್ತಾಳೆ.ಆ ಸಂದರ್ಭಕ್ಕೆ ನಾರದರ ಪ್ರವೇಶವಾಗಿ ಶೂರಸೇನನಲ್ಲಿ ಈಕೆ ನಿನ್ನ ಮಗಳಾದ ಕಾಂಚನಮಾಲೆಯ ಮಗಳು ಎಂದು ತಿಳಿ ಹೇಳಿದ ಬಳಿಕ ಆಕೆಯನ್ನು ಸತ್ಕರಿಸುತ್ತಾನೆ.

Advertisement

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರಿನ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ವನಿತಾ ಬಳಗದ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನ ರಂಜಿಸಿತು. ಯಕ್ಷಗಾನದಲ್ಲಿ ತನ್ನದೇ ಛಾಪು ಮೂಡಿಸಿ ಭರವಸೆ ಇಮ್ಮಡಿಗೊಳಿಸಿರುವ “ಯಕ್ಷಸಿರಿ ವನಿತಾ ಬಳಗ, ಬ್ರಹ್ಮಾವರ’ ತಂಡವು ಶಾಲಾ ವಾರ್ಷಿಕೋತ್ಸವ ಸಮಿತಿಯ ಸಹಕಾರದೊಂದಿಗೆ “ಮೀನಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರಸಂಗ ಕಾಲಮಿತಿ ಪ್ರದರ್ಶನದೊಂದಿಗೆ ಕಲಾಭಿಮಾನಿಗಳ ಮನಸೂರೆಗೊಳಿಸಿತು.

ಧೀರೆ,ರೂಪವತಿ ಮೀನಾಕ್ಷಿ ಹುಟ್ಟಿನಿಂದಲೇ ಹೊಂದಿದ ಅಧಿಕ ಸ್ತನದಿಂದಾಗಿ ನೆರೆಹೊರೆಯ ಪ್ರಜಾ ಸಮೂಹದ ಮೂದಲಿಕೆಗೆ ಒಳಗಾದಾಗ ತಂದೆ ಮಲಯಧ್ವಜ ಭೂಪತಿಯ ಚಿಂತೆ ದ್ವಿಗುಣಗೊಳಿಸಿತು.ಆ ಸಂದರ್ಭದಲ್ಲಿ ಆಗಮಿಸಿದ ದೇವ ಋಷಿ ನಾರದರು ಮುಂದೆ ಈಕೆ ದಿಗ್ವಿಜಯ ಮಾಡುವ ಸಮಯಕ್ಕೆ ಯಾರಿಂದ ಈಕೆ ಸೋಲುತ್ತಾಳ್ಳೋ ಆಗ ಈಕೆಯ ಅಧಿಕ ಸ್ತನ ಮಾಯವಾಗುವುದರೊಂದಿಗೆ ಆತನೆ ಈಕೆಯನ್ನು ವರಿಸುತ್ತಾನೆ ಎಂದು ಹೇಳುತ್ತಾರೆ. ತಂದೆಯ ಕಾಲನಂತರ ಪಟ್ಟವೇರಿದ ಮೀನಾಕ್ಷಿ ದಿಗ್ವಿಜಯ ಕೈಗೊಳ್ಳುವುದರ ಮೂಲಕ ತನಗೆ ಅನುರೂಪನಾದ ವರನನ್ನು ತಾನೇ ಆರಿಸಿಕೊಳ್ಳುವ ಪಣತೊಟ್ಟು ತನ್ನ ಸುಸಜ್ಜಿತ ಸೇನೆಯೊಂದಿಗೆ ಅಣಿಯಾಗುತ್ತಾಳೆ.ನೆರೆಹೊರೆಯ ರಾಜರನ್ನ ಗೆದ್ದ ಬಳಿಕ ಕಾಶ್ಮೀರದ ಅರಸ ಶೂರ ಸೇನನಲ್ಲಿ ಕಾದಾಡುತ್ತಾಳೆ.ಆ ಸಂದರ್ಭಕ್ಕೆ ನಾರದರ ಪ್ರವೇಶವಾಗಿ ಶೂರಸೇನನಲ್ಲಿ ಈಕೆ ನಿನ್ನ ಮಗಳಾದ ಕಾಂಚನಮಾಲೆಯ ಮಗಳು ಎಂದು ತಿಳಿ ಹೇಳಿದ ಬಳಿಕ ಆಕೆಯನ್ನು ಸತ್ಕರಿಸುತ್ತಾನೆ.ಮುಂದುವರಿದು ಸ್ತ್ರೀ ಮಲಯಾಳ ರಾಜ್ಯ ಪ್ರವೇಶಿಸಿ ರಾಣಿ ಪದ್ಮಗಂಧಿನಿಯನ್ನು ಸೋಲಿಸಿ ಕಪ್ಪ ಪಡೆದು ದಿಗ್ವಿಜಯ ಮುಂದುವರಿಸಿ ಕಡೆಯ ದಿಕ್ಕಿನ ಒಡೆಯನಾದ ಶಿವನಲ್ಲಿ ಕಾದಾಡಲು ಮುಂದಾಗುತ್ತಾಳೆ.ಶಿವನ ಗಣಗಳನ್ನು ಸೋಲಿಸಿ ಶಿವನಲ್ಲಿಯೇ ಹೋರಾಡುವ ಸಂದರ್ಭದಲ್ಲಿ ಮೀನಾಕ್ಷಿಯ ಅಧಿಕ ಸ್ತನ ಮಾಯವಾಗುತ್ತದೆ. ಬಳಿಕ ನಾರದರ ಮಾತಿನಂತೆ ಶಿವನನ್ನೆ ವರಿಸುತ್ತಾಳೆ.

ಈ ಕಥಾಹಂದರವನ್ನು ರಂಗದಲ್ಲಿ ಕಟ್ಟಿಕೊಡುವುದರ ಮೂಲಕ ಪ್ರೇಕ್ಷಕರ ಮನತಣಿಸುವಲ್ಲಿ ವನಿತಾ ಬಳಗದ ಕಲಾ ಪ್ರೌಢಿಮೆ ಶ್ಲಾಘನೀಯವಾದದ್ದು. ಮುಮ್ಮೇಳದಲ್ಲಿ ಧೀರೆ ಮೀನಾಕ್ಷಿಯಾಗಿ ಚುರುಕು ಹೆಜ್ಜೆಗಾರಿಕೆ ಮತ್ತು ಸ್ಪುಟವಾದ ಮಾತಿನ ಮೂಲಕ ಶಿಕ್ಷಕಿ ನಾಗರತ್ನ ಹೇಳೆì ತಮ್ಮ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದರು.ಶೂರಸೇನನ ಗತ್ತು,ಗಾಂಭಿರ್ಯತೆ ಹಾಗೂ ಈಶ್ವರನ ಕೋಪಾವೇಶವನ್ನು ಭಾಗೀರಥಿ ಎಂ.ರಾವ್‌ ಅಚ್ಚುಕಟ್ಟಾಗಿ ತೋರ್ಪಡಿಸಿದ ರೀತಿ ಅಮೋಘವಾಗಿತ್ತು.ಪಾತ್ರಕ್ಕೆ ಬೇಕಾದ ಪೋಷಣೆಯನ್ನು ನೀಡಿ ಪದ್ಮಗಂಧಿನಿ ಪಾತ್ರವನ್ನು ಕುಮಾರಿ ಅಶ್ವಿ‌ನಿ ಸೊಗಸಾಗಿ ನಿರ್ವಹಿಸಿದರು.ನಂದಿಯ ಪಾತ್ರ ವನ್ನು ಗಾಯತ್ರಿ ಶಾಸ್ತ್ರಿಯವರು ನಿರ್ವಹಿಸಿದರು. ಭಾಗವತಿಕೆಯಲ್ಲಿ ಸುಶ್ರಾವ್ಯವಾಗಿ ಹಾಡಿ ರಂಗಕ್ಕೆ ಮೆರುಗು ತಂದವರು ಕೇಶವ ಆಚಾರ್‌, ಚಂಡೆಯಲ್ಲಿ ಕೃಷ್ಣಾನಂದ ಶೆಣೈ ಶಿರಿಯಾರ,ಮದ್ದಳೆಯಲ್ಲಿ ಭರತ್‌ ಚಂದನ್‌ ಕೋಟೇಶ್ವರ ಸಹಕರಿಸಿದರು.ಒಟ್ಟಾರೆಯಾಗಿ ಮೀನಾಕ್ಷಿ ಕಲ್ಯಾಣ ಪ್ರೇಕ್ಷಕರನ್ನು ರಂಜಿಸಿತು.

ರಾಘವೇಂದ್ರ ಡಿ.ಆಲೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next