Advertisement

ಜಲ ಸ್ವಾತಂತ್ರ್ಯಕ್ಕೆ ಕಣಕುಂಬಿಯಲ್ಲಿ ಮಧ್ಯರಾತ್ರಿ ರಾಷ್ಟ್ರಧ್ವಜಾರೋಹಣ

11:57 AM Aug 15, 2017 | Team Udayavani |

ನವಲಗುಂದ: ವಿವಿಧ ನದಿಗಳ ನೀರು ಬಳಕೆಯಲ್ಲಿ ರಾಜ್ಯ ಹಿಂದೆ ಉಳಿದಿದ್ದು, ನೆರೆ ರಾಜ್ಯಗಳಿಂದ ನಾವು ಪಾಠ ಕಲಿಯಬೇಕಿದೆ. 70 ವರ್ಷ ಕಳೆದರೂ ರಾಷ್ಟ್ರೀಯ ಜಲನೀತಿ ಜಾರಿಯಾಗದಿರುವುದು ಬೇಸರದ ಸಂಗತಿ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು. 

Advertisement

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಮಹಾವಲಿ ದೇವಸ್ಥಾನದ ಮುಂಭಾಗದಲ್ಲಿ ಮಹದಾಯಿ, ಕಳಸಾ ಬಂಡೂರಿ ನೀರಿನ ಸ್ವಾತಂತ್ರ್ಯಕ್ಕಾಗಿ ಜೆಡಿಎಸ್‌ನಿಂದ ಸೋಮವಾರ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 

ಉಭಯ ಸರ್ಕಾರಗಳು ಈ ಭಾಗದಲ್ಲಿ ಎರಡು  ವರ್ಷಗಳಿಂದ ನಡೆಯುತ್ತಿರುವ ಜನಾಂದೋಲನವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನೀರಿನ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ಉಗಮ ಸ್ಥಾನವಾದ ಕಣಕುಂಬಿಯಲ್ಲಿ ಜೆಡಿಎಸ್‌ ವತಿಯಿಂದ ಮಧ್ಯರಾತ್ರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಹೋರಾಟದ ತೀವ್ರತೆ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ ಎಂದರು. 

ಪ್ರಾಮಾಣಿಕ ಯತ್ನ ಮಾಡಲಿ: ಸರ್ವಪಕ್ಷ ಸಭೆಯಲ್ಲಿ ನ್ಯಾಯಾ ಧಿಕರಣದ ಹೊರಗಡೆಯೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಲು ರಾಜ್ಯ ಬಿಜೆಪಿ ನಾಯಕರು ಸಮ್ಮತಿಸಿದ್ದು ಆಶಾದಾಯಕ ಬೆಳವಣಿಗೆ. ಆದರೆ ಅವರು ಅದನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಗೋವಾದ ಮೇಲೆ ಕರ್ನಾಟಕ ಎಂದಿಗೂ ಪರಿಸರ ಬಾಂಬ್‌ ಹಾಕಿಲ್ಲ. ಈ ಯೋಜನೆ ಜಾರಿಯಿಂದ ಗೋವಾಕ್ಕೆ ಯಾವುದೇ ಹಾನಿಯಿಲ್ಲ. ಆದರೂ ಗೋವಾ ಸಿಎಂ ಮನೋಹರ ಪರಿಕ್ಕರ್‌ ಉದ್ದಟತನ ತೋರಿಸುತ್ತಿದ್ದಾರೆ. ಅವರು ಕೂಡಲೇ ನಮ್ಮ ರಾಜ್ಯದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. 

Advertisement

ಮಲಪ್ರಭಾ ಕಾಲುವೆಯಿಂದ ಕುಡಿವ ನೀರಿನ ಕೆರೆ ತುಂಬಿಸಿಕೊಳ್ಳಲು ಇಂದು ರಾಜ್ಯ ಸರ್ಕಾರ ವಿವಿಧ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಲ್ಲದೆ, ಬರದಿಂದ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಹೋಗಿ ಪ್ರಕರಣ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ.

ಮಲಪ್ರಭಾ ಜಲಾಶಯದ ನೀರನ್ನು ನಾವೇ ಪಡೆಯಲು ಇಷ್ಟೆಲ್ಲಾ ಹೆಣಗಾಡುತ್ತಿದ್ದರೂ ಕಣ್ಣು ಮುಚ್ಚಿ ಕುಳಿತ ಕೇಂದ್ರ ಸರ್ಕಾರವೇ ನೇರ ಹೋಣೆಯಾಗಿದೆಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯುವಂತೆ ಈ ಹಿಂದಿನಿಂದಲೂ ಒತ್ತಾಯಿಸುತ್ತಾ ಬರಲಾಗಿದೆ.

ಅದರ ಪರಿಣಾಮ ಕೆಲವರ ಮೇಲಿನ ಪ್ರಕರಣ ವಾಪಸ್ಸಾಗಿದ್ದರೆ, ಇನ್ನೂ ಕೆಲವರ ಮೇಲಿನ ಪ್ರಕರಣ ಹಾಗೆಯೇ ಉಳಿದಿವೆ. ಅವುಗಳನ್ನು ಕೂಡ ವಾಪಸ್‌ ಪಡೆದು ಎಲ್ಲ ರೈತರಿಗೆ ನ್ಯಾಯ ದೊರೆಯುವಂತೆ ಮಾಡಬೇಕು. ಅಲ್ಲದೆ, ಮಹದಾಯಿ, ಕಳಸಾ-ಬಂಡೂರಿ ಹೋರಾಟದ ವೇಳೆ ಮೃತಪಟ್ಟ ಎಲ್ಲ ರೈತ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ರೈತ ಘಟಕದ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ, ಮುಖಂಡರಾದ ಗುರುರಾಜ ಹುಣಸಿಮರದ, ಮುಜಾಹಿದ್‌ ಕಾಂಟ್ರಾಕ್ಟರ್‌, ಎಂ.ಎಸ್‌.ರೋಣದ, ವಿಕಾಸ ಸೊಪ್ಪಿನ, ಶಿವಶಂಕರ ಕಲ್ಲೂರ, ರಾಜಣ್ಣ ಕೊರವಿ, ಬಿ.ಬಿ. ಗಂಗಾಧರಮಠ, ವೀರಣ್ಣ ಅಧ್ಯಕ್ಷ, ಶಿವಣ್ಣ ಹುಬ್ಬಳ್ಳಿ, ಮಹಾಂತೇಶ ನಿಂಬರಗಿ, ರಿಯಾಜ್‌ ಅಹ್ಮದ್‌ ಪಟೇಲ್‌, ಎಚ್‌.ಎನ್‌. ದೇಸಾಯಿ, ಮಹಾಂತೇಶ ರಾವೂತ, ಸಲೀಂ  ನಾಯ್ಕರ್‌, ಮೇಘಾ ಕುಂದರಗಿ, ಸಪ್ನಾ ಪಾಟೀಲ,

-ಜಯಶ್ರೀ ಸೂರ್ಯವಂಶಿ, ಜೀವನ ಪವಾರ, ಸಂತೋಷ ರಾಯ್ಕರ್‌, ನಾಗನಗೌಡ ಪಾಟೀಲ, ಎಚ್‌.ವಿ. ಬಳಿಗೇರ, ದೇವೇಂದ್ರಪ್ಪ ಹಳ್ಳದ, ಪ್ರವೀಣ ಬಲ್ಲರವಾಡ, ನಂದಿ ಚಾಕಲಬ್ಬಿ, ಶಿವಶಂಕರ ಕಲ್ಲೂರ, ಶಂಕರಗೌಡ ಪಾಟೀಲ, ಬಸನಗೌಡ ಕಾಶಪ್ಪಗೌಡ,  ಶರಣು ಹಿರೇಮಠ ಯಮನೂರ, ಕಾಶೀಂಸಾಬ ಅಲ್ಲಿಬಾವಿ, ಸೈಫುದ್ದಿನ್‌ ಅವರಾದಿ, ಆರೂಢಪ್ಪ ಕಾತರಕಿ, ಸೋಮಶೇಖರ ವೀರೇಶನವರ, ಬಿ.ಎಚ್‌. ಮುಗನೂರ ಮುಂತಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next