Advertisement

ಕಟ್ಟಡ ಕಾರ್ಮಿಕರಿಗೆ ಮೆಟ್ರೋ ದುಂಬಾಲು

06:22 AM Jun 04, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಹಿನ್ನೆಲೆಯಲ್ಲಿ ಕಾರ್ಮಿಕರ ವಲಸೆಯಿಂದ ಕಂಗಾಲಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಮನೆ ಕಟ್ಟುವ ಕಾರ್ಮಿಕರಿಗೆ ದುಂಬಾಲು ಬೀಳುತ್ತಿದೆ. ಆದರೆ ಇಲ್ಲಿನ ದೈತ್ಯ ಸ್ಲ್ಯಾಬ್‌ ಗಳನ್ನು ನೋಡಿ ಆ ಕಾರ್ಮಿಕರು, “ಅಯ್ಯೋ ಈ ಮೆಟ್ರೋ ಸಹವಾಸ ಬೇಡ’ ಎಂದು ಕಾಲ್ಕಿಳುತ್ತಿದ್ದಾರೆ. ಲಾಕ್‌ಡೌನ್‌ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಗರದ ವಿವಿಧ ಕಡೆಗಳಲ್ಲಿ ನಿರತರಾಗಿ ದ್ದ ಉತ್ತರ ಭಾರತದ ಪರಿಣಿತ  ಕಾರ್ಮಿಕರು ತವರಿಗೆ ತೆರಳಿದ್ದಾರೆ.

Advertisement

ಇದರಲ್ಲಿ “ನಮ್ಮ ಮೆಟ್ರೋ’ ನಿರ್ಮಾ ಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೂರಾರು ಕಾರ್ಮಿ ಕರೂ ಸೇರಿದ್ದಾರೆ. ಪರಿಣಾಮ ಇತರೆ ಕ್ಷೇತ್ರ ಗಳಂತೆ ಮೆಟ್ರೋ ಯೋಜನೆಗೂ ಕಾರ್ಮಿಕರ ಕೊರತೆ  ಉಂಟಾಗಿದ್ದು, ಇದನ್ನು ನೀಗಿಸಲು ಸುತ್ತಲಿನ ಗ್ರಾಮೀಣ ಭಾಗದಲ್ಲಿರುವ ಕಟ್ಟಡ ಕಾರ್ಮಿಕರ ಮೊರೆ ಹೋಗಲಾಗಿದೆ. ಕಾರ್ಮಿಕರ ಗುತ್ತಿಗೆದಾರರು ಹತ್ತಿರದ ಹಳ್ಳಿಗಳಿಗೆ ತೆರಳಿ, ಮನೆ ಕಟ್ಟುವ ಕಾರ್ಮಿಕರ ಮನವೊಲಿಸಿ ನಗರಕ್ಕೆ  ಕರೆತರುತ್ತಿದ್ದಾರೆ. ಆದರೆ, ಇಲ್ಲಿಗೆ ಬರುತ್ತಿದ್ದಂತೆ ನೂರಾರು ಟನ್‌ ಗಾತ್ರದ ದೈತ್ಯ ಸ್ಲ್ಯಾಬ್‌ಗಳನ್ನು ನೋಡಿ ದಂಗಾಗುತ್ತಿದ್ದಾರೆ. “ಈ ಮೆಟ್ರೋ ಸಹವಾಸ ಬೇಡ ಸರ್‌. ನಮ್ಮನ್ನು ವಾಪಸ್‌ ಊರಿಗೆ ಕಳುಹಿಸಿಕೊಡಿ’ ಎಂದು ಗುತ್ತಿಗೆದಾರರು  ಹಾಗೂ ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಹೇಳುತ್ತಿದ್ದಾರೆ.

ಸಾಮಾನ್ಯವಾಗಿ ಮನೆ ಕಟ್ಟುವ ಕಾರ್ಮಿಕರು ಅಬ್ಬಬ್ಟಾ ಎಂದರೆ ಇಡೀ ಸ್ಲ್ಯಾಬ್‌ ಗೆ 4-5 ಟನ್‌ ಕಬ್ಬಿಣ ಬಳಕೆ ಮಾಡುತ್ತಾರೆ. ಆದರೆ, ಮೆಟ್ರೋದಲ್ಲಿ ಕೇವಲ ಒಂದು ಸ್ಲ್ಯಾಬ್‌ಗಳಿಗೆ 300-400 ಟನ್‌ ಕಬ್ಬಿಣ ಹಾಕಲಾಗುತ್ತದೆ. ಅತ್ತ ಇದ್ದ ಕಾರ್ಮಿಕರಿಗೆ ಎಲ್ಲ ಸೌಲಭ್ಯಗಳನ್ನು ನೀಡಿದರೂ ನಿಲ್ಲುತ್ತಿಲ್ಲ. ವಿವಿಧ ಶಿಬಿರಗಳಲ್ಲಿ ಒಟ್ಟಾರೆ ಹತ್ತು ಸಾವಿರ ಕಾರ್ಮಿಕರು ಇದ್ದರು. ಆ ಪೈಕಿ ಈಗ ಶೇ. 30-40ರಷ್ಟು ಜನ ತವರಿಗೆ  ಹಿಂತಿರುಗಿದ್ದಾರೆ. ಇತ್ತ ಹಳ್ಳಿಗೆ ಹೋಗಿ ಕರೆತಂದ ಕಾರ್ಮಿಕರು ಭಯ ಭೀತರಾಗಿದ್ದಾರೆ. ಇದು ನಿಗಮಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ, ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಗಡುವು ವಿಸ್ತರಣೆ: 2024ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಬಿಎಂಆರ್‌ಸಿಎಲ್‌ ಹೊಂದಿತ್ತು. ಆದರೆ, ಕೋವಿಡ್‌ 19 ಹಿನ್ನೆಲೆಯಲ್ಲಿ ಈ ಗಡುವು ವಿಸ್ತರಣೆ ಆಗಲಿದೆ. ಅದು ಯೋಜನಾ ವೆಚ್ಚ ಹೆಚ್ಚಳ ರೂಪದಲ್ಲಿ ಇದು ಪರಿಣಮಿಸಲಿದೆ.  ಈ ಹಿಂದೆ 2021ರ ಗುರಿ ಇಟ್ಟುಕೊಳ್ಳಲಾಗಿತ್ತು. ತದನಂತರ 2023ಕ್ಕೆ ಅದು ವಿಸ್ತರಣೆಯಾಗಿ, ಈಚೆಗೆ ಹಲವು ತಾಂತ್ರಿಕ ಕಾರಣಗಳನ್ನು ನೀಡಿ 2024ಕ್ಕೆ ಬಿಎಂಆರ್‌ಸಿಎಲ್‌ ಸ್ವಯಂ ಗಡುವು ವಿಧಿಸಿಕೊಂಡಿತ್ತು.  ಈ  ನಿಟ್ಟಿನಲ್ಲಿ ಕಾಮಗಾರಿಗಳು ಈಚೆಗಷ್ಟೇ ಚುರುಕು  ಗೊಂಡಿದ್ದವು. ವಿಸ್ತರಿಸಿದ ಮಾರ್ಗಗಳ ಪೈಕಿ ನಾಗಸಂದ್ರ- ಬಿಐಇಸಿ ಹಾಗೂ ಬೈಯಪ್ಪನಹಳ್ಳಿ-ವೈಟ್ಫೀಲ್ಡ್‌ ಮತ್ತು ಆರ್‌.ವಿ. ರಸ್ತೆ-ಎಲೆಕ್ಟ್ರಾನಿಕ್‌ ಸಿಟಿ-ಬೊಮ್ಮಸಂದ್ರ ಮಾರ್ಗಗಳಲ್ಲಿ  ನಿರ್ಮಾಣ ಕಾರ್ಯ ನಡೆದಿತ್ತು.

ಅದೇ ರೀತಿ, ಸುಮಾರು 13.5 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಫೆಬ್ರವರಿಯಲ್ಲೇ ಚಾಲನೆ ಸಿಗಬೇಕಾಗಿತ್ತು. ಟನಲ್‌ ಬೋರಿಂಗ್‌ ಯಂತ್ರ (ಟಿಬಿಎಂ)ಗಳು ತುಸು ತಡವಾಗಿ ಬಂದಿಳಿದವು. ಇನ್ನೇನು ಜೋಡಣೆ ಮಾಡಿ, ನೆಲದಡಿ ಇಳಿಸಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಘೋಷಣೆ ಆಯಿತು. ಈ ಮಧ್ಯೆ ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆ ಮಾರ್ಗ  ಗಳನ್ನು ಗಡುವಿಗೂ ಮುನ್ನ ಅಂದರೆ ಜೂನ್‌-ಜುಲೈನಲ್ಲೇ ಲೋಕಾರ್ಪಣೆ ಮಾಡುವ ಗುರಿ ಇತ್ತು. ಆದರೆ, ಕೋವಿಡ್‌ 19 ವೈರಸ್‌ ಈ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.

Advertisement

ಉಳಿದವರ ಹಿಡಿದಿಡುವ ಸವಾಲು: ವಲಸೆಯಿಂದ “ನಮ್ಮ ಮೆಟ್ರೋ’ ಯೋಜನೆ ಪ್ರಗತಿಗೆ ಹಿನ್ನಡೆಯಾಗುವುದರ ಜತೆಗೆ ಯೋಜನಾ ವೆಚ್ಚ ಹೆಚ್ಚಳ ಆಗುವ ಸಾಧ್ಯತೆ ಇದೆ. ಮರುವಲಸೆ ಹೋದವರಲ್ಲಿ ಸುರಂಗ ಮಾರ್ಗ ನಿರ್ಮಾಣ,  ಎತ್ತರಿಸಿದ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಇದ್ದಾರೆ. ಸಾಮಾನ್ಯವಾಗಿ ಮೆಟ್ರೋ ಯೋಜನೆಯಲ್ಲಿ ಕಾಂಕ್ರೀಟ್‌, ಎಲೆಕ್ಟ್ರಿಕ್‌, ಶೆಟರಿಂಗ್‌ ಸೇರಿದಂತೆ ನಾನಾ ವಿಭಾಗಗಳಲ್ಲಿ ಪ್ರತಿ ಕಾಮಗಾರಿಯು ಒಂದಕ್ಕೊಂದು  ಪೂರಕವಾಗಿರುತ್ತದೆ.

ಯಾವುದಾದರೂ ಒಂದು ತಂಡ ಹೋದರೂ, ಉಳಿದ ಕೆಲಸ ಮುಂದುವರಿಸಲು ಕಷ್ಟವಾಗುತ್ತದೆ. ಇದರ ಜತೆಗೆ ಕೆಲವರು ಊರುಗಳಿಗೆ ವಾಪಸ್‌ ಹೋಗಿರುವುದರಿಂದ, ಉಳಿದವರನ್ನು ಹಿಡಿದಿಡುವುದು ಕೂಡ  ಸವಾಲಾಗಿದೆ. ಒತ್ತಾಯಪೂರ್ವಕವಾಗಿ ತಡೆಯುವಂತೆಯೂ ಇಲ್ಲ. ಈ ಮಧ್ಯೆ ರಾಜ್ಯದಲ್ಲೂ ನಿತ್ಯ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರಲ್ಲಿ ಆತಂಕ ಮತ್ತಷ್ಟು ಮನೆಮಾಡಿದೆ. ಹಾಗಾಗಿ, ಮರುವಲಸಿಗರ  ಪ್ರಮಾಣ ಅಧಿಕವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಉದ್ಯೋಗ ಖಾತರಿ ಬಳಸಿಕೊಳ್ಳಲು ತಜ್ಞರ ಸಲಹೆ: “ನಮ್ಮ ಮೆಟ್ರೋ’ ಯೋಜನೆ ನಿರ್ಮಾಣಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಕಾರ್ಮಿಕರನ್ನು ಕರೆತಂದು ಬಳಸಿಕೊಳ್ಳುವ ಅವಶ್ಯಕತೆ ಇದೆ ಎಂಬ  ಸಲಹೆ ತಜ್ಞರಿಂದ ವ್ಯಕ್ತವಾಗಿದೆ. ಸ್ಥಳೀಯವಾಗಿ ಸಾಕಷ್ಟು ಕಾರ್ಮಿಕರು ಇದ್ದಾರೆ. ಅವರಿಗೆ ಉದ್ಯೋಗ ಖಾತರಿ ಅಡಿ ಕೆಲಸ ನೀಡಬೇಕು. ಇದರಿಂದ ಬಿಎಂಆರ್‌ಸಿಎಲ್‌ ಎದುರಿಸುತ್ತಿರುವ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗಲಿದೆ.  ಲ್ಲರೂ  ಕೌಶಲ್ಯಯುತ ಕಾರ್ಮಿಕರೇ ಆಗಿರುವುದಿಲ್ಲ. ತರಬೇತಿ ನೀಡಿ ತಯಾರು ಮಾಡಬೇಕಾಗುತ್ತದೆ. ಇದಕ್ಕಾಗಿ ಶೇ. 50ರಷ್ಟು ಕೌಶಲ್ಯ ಇದ್ದರೆ ಸಾಕು ಎಂದು ಮೆಟ್ರೋ ತಜ್ಞರು ಅಭಿಪ್ರಾಯಪಡುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next