Advertisement

ಎಂಇಪಿ ಪ್ರಣಾಳಿಕೆಯಲ್ಲಿಮಹಿಳಾ ಮೀಸಲಿಗೆ ಆದ್ಯತೆ

02:42 PM Apr 12, 2018 | Team Udayavani |

ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲು, ಪ್ರತಿ ಜಿಲ್ಲೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಆಸ್ಪತ್ರೆ, ಶಾಲಾ-ಕಾಲೇಜು ಹೆಣ್ಣುಮಕ್ಕಳಿಗೆ ಉಚಿತ ಬಸ್‌ ಪಾಸು, ಮಹಿಳಾ ಉದ್ಯಮಿಗಳಿಗೆ ಬಡ್ಡಿರಹಿತ ಸಾಲ, ರೈತರ ಬಡ್ಡಿಸಹಿತ ಸಾಲ ಸಂಪೂರ್ಣ ಮನ್ನಾ… ಇದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಆಲ್‌ ಇಂಡಿಯಾ ಮಹಿಳಾ ಎಂಪವರ್‌ವೆುಂಟ್‌ ಪಾರ್ಟಿ (ಎಐಎಂಇಪಿ)ಯ ಚುನಾವಣಾ ಪ್ರಣಾಳಿಕೆ ಹೈಲೈಟ್ಸ್‌.

Advertisement

ವಿವಿಧ ಪಕ್ಷಗಳು ಇದುವರೆಗೆ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಕೂಡ ಮೀಸಲಾತಿ ನೀಡಲು ಅಡ್ಡಿಪಡಿಸುತ್ತಿವೆ. ಆದರೆ, ಎಂಇಪಿಯು ಸ್ಥಳೀಯ ಸಂಘ-ಸಂಸ್ಥೆಗಳ ಪೈಕಿ ಶೇ. 50ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ದಿನದಿಂದ ದಿನಕ್ಕೆ ಮಹಿಳಾ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿನ ಪೊಲೀಸ್‌ ಠಾಣೆಯಗಳಲ್ಲಿ ಮಹಿಳೆಯರ ದೂರು-ದುಮ್ಮಾನಗಳನ್ನು ಪರಿಹರಿಸಲು ಪ್ರತ್ಯೇಕ ವಿಭಾಗ ತೆರೆಯಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ಆಸ್ಪತ್ರೆಗಳನ್ನು ತೆರೆಯಲಾಗುವುದು ಎಂದು ಪಕ್ಷವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ನಗರದ ಹೋಟೆಲ್‌ ಲೀಲಾ ಪ್ಯಾಲೇಸ್‌ನಲ್ಲಿ ಬುಧವಾರ ಎಂಇಪಿ ಸಂಸ್ಥಾಪಕಿ ನೌಹೀರಾ ಶೇಖ್‌ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ಪುರುಷ ವಿರೋಧಿ ನಿಲುವುಗಳಿಂದ ಮಹಿಳೆ ಸ್ವಾವಲಂಬಿ ಆಗುವುದಿಲ್ಲ. ದೇಶದ ಎಲ್ಲ ಸಹೋದರರನ್ನು ಗೌರವಿಸುವುದರ ಜತೆಗೆ ಪ್ರತಿಯೊಬ್ಬ ಮಹಿಳೆಯರ ಏಳಿಗೆಗೆ ಶ್ರಮಿಸುವುದು ನಿಜವಾದ ಸ್ವಾವಲಂಬನೆ. ಈ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಈ ಭರವಸೆಗಳು ಈಡೇರಲಿದ್ದು, ವೀಡಿಯೊ ಮೂಲಕ ಜನರ ಮುಂದಿಡಲಾಗುವುದು ಎಂದೂ ಹೇಳಿದರು.

ಜಿಲ್ಲಾವಾರು ಸಮಸ್ಯೆಗಳಿಗೆ ಪರಿಹಾರ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೆ ಎಲ್‌ಕೆಜಿ ಯಿಂದ ಸ್ನಾತಕೋತ್ತರದವರೆಗೆ ಉಚಿತ ಶಿಕ್ಷಣ ಒದಗಿಸಲಾಗುವುದು. 1 ರೂ.ಗೆ ತಿಂಗಳಿಗೆ 35 ಕೆಜಿ ಅಕ್ಕಿ, ಯುವಕರಿಗೆ ಹತ್ತು ಲಕ್ಷ ಉದ್ಯೋಗ ಸೃಷ್ಟಿ, ಪಾರ ದರ್ಶಕತೆ ತರುವ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡುವುದು ಸೇರಿದಂತೆ ಹಲವು ಭರವಸೆಗಳನ್ನು ಅವರು ನೀಡಿದರು.

ಅಲ್ಲದೆ, ಬೆಳಗಾವಿಯಲ್ಲಿ ಗಡಿ ಸಮಸ್ಯೆಗೆ ಪರಿಹಾರ, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಗೆ ಕಟ್ಟುನಿಟ್ಟಿನ ಕ್ರಮ, ಬೆಂಗಳೂರಿನಲ್ಲಿ ಸಂಚಾರದಟ್ಟಣೆ ಸಮಸ್ಯೆ ನಿವಾರಣೆ ಮತ್ತು ಕೆರೆಗಳ ಸಂರಕ್ಷಣೆ, ಗ್ರಾಮಾಂತರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಮಂಡ್ಯದಲ್ಲಿ ಕಾವೇರಿ ವಿವಾದ ಬಗೆಹರಿಸುವುದು ಒಳಗೊಂಡಂತೆ ಆಯಾ ಜಿಲ್ಲೆಗಳಲ್ಲಿ ಸುಮಾರು ವರ್ಷಗಳಿಂದ ಕಾಡುತ್ತಿರುವ ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

Advertisement

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ. ಆದರೆ, ಲೋಕಸಭೆಗೆ ಖಂಡಿತ ಕಣಕ್ಕಿಳಿಯುತ್ತೇನೆ. ಎಲ್ಲ 224 
ಕ್ಷೇತ್ರಗಳಲ್ಲೂ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸಮೀಕ್ಷೆ ಪ್ರಕಾರ 70 ಸೀಟುಗಳನ್ನು ಗೆಲ್ಲುವ ವಿಶ್ವಾಸ ಇದೆ. ಏ.15 ಅಥವಾ 16ರಂದು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. 
ನೌಹೀರಾ ಶೇಖ್‌, ಎಂಇಪಿ ಸಂಸ್ಥಾಪಕರು 

Advertisement

Udayavani is now on Telegram. Click here to join our channel and stay updated with the latest news.

Next