Advertisement

ಅವಳ ಮನದ ಇಣುಕು ನೋಟ

12:03 PM Oct 19, 2019 | mahesh |

ಮನಸ್ಸಿನಷ್ಟು ನಿಗೂಢವಾದದ್ದು ಬೇರೊಂದಿಲ್ಲ. ನಮ್ಮ ಎಲ್ಲ ಕ್ರಿಯೆಗಳಿಗೂ ಹೈಕಮಾಂಡ್‌ ಮನುಷ್ಯನ ಮಸ್ತಿಷ್ಕವೇ, ನಮ್ಮ ಅಂಗಾಗಗಳೆಲ್ಲ ನಮ್ಮ ಮನಸ್ಸಿನ ಅಧೀನ. ವಿಶ್ವವಿಖ್ಯಾತಿ ಪಡೆದ ವಿಜ್ಞಾನಿ ಇರಬಹುದು, ಹತ್ತಾರು ಕೊಲೆ ಮಾಡಿದ ಕೊಲೆಗಡುಕನಿರಬಹುದು, ವ್ಯವಹಾರ ಜ್ಞಾನಿ ಇರಬಹುದು, ಅವರವರ ವಿಖ್ಯಾತಿ, ಕುಖ್ಯಾತಿಗೆ ಮೂಲ ಕಾರಣ ಅವರ ಮೆದುಳು ಅಥವಾ ಬುದ್ಧಿಯೇ ಕಾರಣ. ಆಶ್ಚರ್ಯದ ವಿಷಯವೆಂದರೆ ನಾವು ದೇಹಕ್ಕೆ ಪ್ರಾಮುಖ್ಯ ಕೊಡುತ್ತ ಬಂದು ಮನಸ್ಸಿನ ಆರೋಗ್ಯವನ್ನು ಕಡೆಗಣಿಸಿದ್ದೇವೆ.

Advertisement

ಮಾನಸಿಕ ಆರೋಗ್ಯದ ಬಗ್ಗೆ ತಿಳಿವು ಮೂಡಿಸಲು, ಖನ್ನತೆಯ ಬಗ್ಗೆ ಮುಕ್ತ ಚರ್ಚೆಯನ್ನು ಹೆಚ್ಚಿಸಲು, ತಮ್ಮ ಅನುಭವವನ್ನು ಹೇಳಿಕೊಳ್ಳಲು 1992ರಲ್ಲಿ ಆಕ್ಟೋಬರ್‌ 10ನ್ನು ವಿಶ್ವ ಮಾನಸಿಕ ಆರೋಗ್ಯ ದಿನವೆಂದು ಗುರುತಿಸಿದರು. ಇದನ್ನು ಮೊದಲಿಗೆ 1992ರಲ್ಲಿ ವರ್ಲ್ಡ್ ಫೇಡರೇಶನ್‌ ಫಾರ್‌ ಮೆಂಟಲ್‌ ಹೆಲ್ತ್ (WFFMH) ಮತ್ತು ವರ್ಲ್ಡ್ ಹೆಲ್ತ್‌ ಆರ್ಗನೈಸೇಶನ್‌ (WHO) ಶುರು ಮಾಡಿದರು. ಆ ಮಹತ್ವದ ದಿನ ಮೊನ್ನೆ ಸರಿದು ಹೋದದ್ದೇ ತಿಳಿಯಲಿಲ್ಲ.

ಮಾನಸಿಕ ಅನಾರೋಗ್ಯದ ಬಗ್ಗೆ ಇರುವ ಕೆಲವು ಅಂಕಿಅಂಶಗಳು ಹೆದರಿಕೆ ಹುಟ್ಟಿಸುವಂತಹದ್ದು. ವರ್ಲ್ಡ್ ಹೆಲ್ತ್‌ ಆರ್ಗನೈಸೇಶನ್‌ ಪ್ರಕಾರ ಪ್ರತೀ ಆರು ಭಾರತಿಯರಲ್ಲಿ ಒಬ್ಬರು ಒಂದಿಲ್ಲೊಂದು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಇದರಲ್ಲಿ ಹೆಚ್ಚಿನವರು ಆರೋಗ್ಯವಂತರಂತೆ ಜೀವಿಸುತ್ತಿದ್ದು ಅದು ಗಂಭೀರವಾದಾಗಲೇ ಬೆಳಕಿಗೆ ಬರುತ್ತದೆ. ಭಾರತ ಮುಂದುವರೆಯುತ್ತಿರುವ ದೇಶಗಳಲ್ಲೊಂದು ಆದರೂ ಮಾನಸಿಕ ಅನಾರೋಗ್ಯದಿಂದ ಬಳಲುವ ಹತ್ತರಲ್ಲಿ ಒಬ್ಬರು ಮಾತ್ರ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರಂತೆ.

ಒಬ್ಬರ ಮಾನಸಿಕ ಅನಾರೋಗ್ಯ ಇನ್ನೊಬ್ಬರ ಆರೋಗ್ಯ ಕೆಡಿಸುವುದೂ ಇದೆ. ಇಲ್ಲೊಬ್ಬರು ಸಮಾಜದ ಗಣ್ಯ ವ್ಯಕ್ತಿ, ನೂರಾರು ಜನ ಹಿಂಬಾಲಕರು, ಸಮಾಜ ಸುಧಾರಣೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳು ಬೇರೆ, ನೋಡುಗರ ಕಣ್ಣಲ್ಲಿ ಆದರ್ಶ ವ್ಯಕ್ತಿ. ಆದರೆ, ಅವರ ಅನುಮಾನ ಪ್ರವೃತ್ತಿಯ ಬಗ್ಗೆ ಹೆಂಡತಿಗೆ ಮಾತ್ರ ಗೊತ್ತು, ಹೆಂಡತಿ ಗಂಡನನ್ನು ಬಿಟ್ಟು ಒಬ್ಬಳೇ ಸ್ನೇಹಿತೆಯರ ಜೊತೆ ಓಡಾಡುವಂತಿಲ್ಲ, ಫೋನಿನಲ್ಲಿ ಯಾರ ಹತ್ತಿರವಾದರೂ ನಗುತ್ತ ಮಾತಾಡಿದರೂ ಅನುಮಾನ, ಹಿಂಸೆ ತಪ್ಪಿದ್ದಲ್ಲ. ಹೆಂಡತಿಯಾದವಳಿಗೆ ಇದು ಉಸಿರುಗಟ್ಟುವ ವಾತಾವರಣ. ಪಂಜರದಲ್ಲಿಟ್ಟ ಗಿಳಿಯಂತಾದಳು, ಮೆಲ್ಲನೆ ಕುಗ್ಗುತ್ತ ಬಂದವಳು ನಗುವನ್ನು ಮರೆತಳು, ಸ್ವಾತಂತ್ರ್ಯವಿಲ್ಲದ ಮನಸ್ಸಿಗೆ ಊಟ, ತಿಂಡಿ, ನಿದ್ರೆಯೂ ಬೇಡವಾಯಿತು, ಡಿಪ್ರಶನ್‌ಗೆ ಒಳಗಾದಳು. ಇಲ್ಲಿ ಅವನ ಮಾನಸಿಕ ಅನಾರೋಗ್ಯ ಅವಳನ್ನು ಕುಗ್ಗಿಸಿತು, ಅವಳ ಮನಸ್ಸಿನ ಆರೋಗ್ಯವೂ ಕೆಡಿಸಿತು. ಸಮಾಜದಲ್ಲೀಗ ಅವಳು ಅರೆ ಹುಚ್ಚಿ, ಅವನು ಆರೋಗ್ಯವಂತ ವ್ಯಕ್ತಿ.

ಇನ್ನು “ಯುವ ಪೀಳಿಗೆ’ಯ ಮಾನಸಿಕ ಆರೋಗ್ಯದ ಬಗ್ಗೆ ಇರುವ ಅಂಕಿಅಂಶಗಳೂ ಚಿಂತನೆಗೆ ಹಚ್ಚುತ್ತವೆ. 15-35 ವರ್ಷದವರೆಗಿನ ಜನರ ಮೃತ್ಯುವಿಗೆ ಆತ್ಮಹತ್ಯೆ ಪ್ರಮುಖ ಕಾರಣಗಳಲ್ಲೊಂದು. ಸರಾಸರಿ ಪ್ರತೀ ಗಂಟೆಗೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ. ಮಾನಸಿಕ ಆಘಾತಕ್ಕೊಳಗಾದವರು ಕ್ರಮೇಣ ಖನ್ನತೆ (depression)ಯತ್ತ ಜಾರುವುದಿದೆ, ಖನ್ನತೆಯಿಂದ ಹೊರಬರಲಾರದವರು ಆತ್ಮಹತ್ಯೆಗೆ ಪ್ರಯತ್ನಿಸುವುದೂ ಇದೆ.

Advertisement

ಪ್ರಿಯಾ ರಾಂಕ್‌ ಸ್ಟೂಡೆಂಟ್‌. ತಂದೆ ತಾಯಿಯ ಒಬ್ಬಳೇ ಮಗಳು, ಕ್ಲಾಸಿನಲ್ಲಿ ಫ‌ಸ್ಟ್, ಹತ್ತು ಮತ್ತು ಹನ್ನೆರಡನೆಯ ತರಗತಿಯಲ್ಲಿ ರಾಜ್ಯಕ್ಕೇ ರಾಂಕ್‌, ಎಲ್ಲರ ಕಣ್ಮಣಿ, ಎಲ್ಲರಿಂದಲೂ ಭೇಷ್‌ ಎನ್ನಿಸಿಕೊಂಡೇ ಗೊತ್ತು. ಉತ್ತಮ ಕಾಲೇಜಿನಲ್ಲಿ ಮೆಡಿಕಲ… ಸೀಟೂ ಸಿಕ್ಕಿತು, ಮೊದಲ ವರ್ಷ ಸಹಜವಾಗಿ ಮುಕ್ತಯವಾಯಿತು, ಎರಡನೆಯ ವರ್ಷಕ್ಕೆ ಬರುತ್ತಿದ್ದಂತೆ ಕ್ಲಾಸಿನ ಮೊದಲ ಸ್ಥಾನ ಕಲ್ಪನಾಳದಾಯಿತು, ಈಗ ಎಲ್ಲರ ಕೇಂದ್ರ ಬಿಂದು ಕಲ್ಪನಾ ಆದಳು. ಇದನ್ನು ಅರಗಿಸಿಕೊಳ್ಳಲಾಗದ ಪ್ರಿಯಾ ಖನ್ನತೆಗೆ ಒಳಗಾಗಿ, ಎಲ್ಲವನ್ನು ಮರೆಯಲು ಆತ್ಮಹತ್ಯೆ ಮಾಡಿಕೊಂಡಳು, ಪ್ರಿಯಾ ಖನ್ನತೆ ಒಳಗಾದ ವಿಷಯ ಅವಳ ರೂಮ್‌ಮೇಟಿಗೂ ಗೊತ್ತಾಗಲಿಲ್ಲ. ಅತೀ ಸರಳ ಕಾರಣಕ್ಕೆ ತನ್ನ ಜೀವವನ್ನೇ ಹತ್ಯೆ ಮಾಡಿಕೊಂಡ ಪ್ರಿಯಾಳ ಮೂರ್ಖತನಕ್ಕೆ ಏನೆನ್ನಬೇಕು?

ಭಾವನೆಗಳನ್ನು ತೋರ್ಪಡಿಸುವುದರಲ್ಲಿ, ಸಂಬಂಧಗಳನ್ನು ಮತ್ತು ಒತ್ತಡಗಳನ್ನು ನಿಭಾಯಿಸುವುದರಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಖನ್ನತೆ, ಉದ್ವಿಗ್ನತೆ, ಬುದ್ಧಮಾಂದ್ಯತೆಯ ಲಕ್ಷಣಗಳು ಮಹಿಳೆಯರಲ್ಲಿ ಅಧಿಕವಂತೆ. ಸ್ವಾಭಾವಿಕವಾಗಿ ಮುಟ್ಟು, ಬಸುರಿ, ಹೆರಿಗೆ, ಮುಟ್ಟು ನಿಲ್ಲುವಿಕೆಯ ಕಾರ್ಯಗಳು ಮಹಿಳೆಯರ ಮುಂದಿದೆ, ಮಕ್ಕಳ ಲಾಲನೆ-ಪಾಲನೆ, ಮನೆಯ ಹಿರಿಯರ ಅರೈಕೆಯಂತಹ ಜವಾಬ್ದಾರಿಗಳೂ ಅವಳ ಹೆಗಲ ಮೇಲೆ, ಸಹಜವಾಗಿ ಒತ್ತಡಗಳು ಅಧಿಕ, ಇದರಿಂದಾಗಿ ಮನಸ್ಸಿನ ಕಿರಿಕಿರಿ, ನಿದ್ರಾಹೀನತೆ, ದುಃಖ, ಅಳು, ಉದ್ವೇಗದ ವಾತಾವರಣದಲ್ಲಿರುತ್ತಾಳೆ. ಭಾರತದಲ್ಲಿನ್ನೂ ಕೆಲವು ಕಡೆ ಮಹಿಳೆಯರು ವಿದ್ಯೆ, ಉತ್ತಮ ಕೆಲಸ, ಹಣ-ಕಾಸಿನಿಂದ ವಂಚಿತಳೆ. ಇದೂ ಆಗಾಗ ಅಭದ್ರತೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಒತ್ತಡದಲ್ಲಿರುವಂತೆ ಮಾಡುತ್ತದೆ. ಮಾನಸಿಕ ಆರೋಗ್ಯದ ವಿಷಯದಲ್ಲಿ ಮಹಿಳೆಯರೇ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ಕುಟುಂಬದ ಪುರುಷರಲ್ಲಿ ಯಾರಾದರೂ ಖನ್ನತೆಗೆ ಒಳಗಾದರೆ ಹೆಂಡತಿಯೋ, ತಾಯಿಯೋ, ಮಕ್ಕಳ್ಳೋ ನೋಡಿಕೊಳ್ಳುತ್ತಾರೆ. ಅದೇ ಮಹಿಳೆಯು ಮಾನಸಿಕವಾಗಿ ಅಸ್ವಸ್ಥಗೊಂಡರೆ ಕೆಲಸ ಬಾರದವಳಾಗಿ ಅವಳ ಕೈ ಬಿಡುವುದೇ ಹೆಚ್ಚು. ಮುಂಬಯಂತಹ ನಗರದಲ್ಲೂ ಇದು ನಡೆಯುತ್ತದೆ, ಮುಂಬಯಿಯ ಮೂವತ್ತರ ಅಂಚಿನಲ್ಲಿರುವ ರಮಾಗೆ ಎರಡು ಮಕ್ಕಳು, ಆಗಾಗ ಭಾವನೆಗಳ ವಿಪರೀತ ತಕಲಾಟಕ್ಕೆ ಒಳಗಾಗುತ್ತಾಳೆ. ಒಂದು ಬೆಳಿಗ್ಗೆ ಥಾಣೆಯ ಮಾನಸಿಕ ಆಸ್ಪತ್ರೆಯೊಂದರಲ್ಲಿ ರಮಾಳನ್ನು ಬಿಟ್ಟ ಅವಳ ಗಂಡ ಔಷಧಿ ತರಲು ಹೋದವನು ವಾಪಸು ಬಂದಿಲ್ಲ. ಇಂತಹ ಘಟನೆಗಳು ನಗರದಲ್ಲಿ ಸಾಕಷ್ಟು ನಡೆಯುತ್ತಿದ್ದು ಹಳ್ಳಿ ಯಲ್ಲಂತೂ ಹೇಳದೆಕೇಳದೆ ಮುಚ್ಚಿ ಹೋಗುವ ದುರ್ಘ‌ಟನೆಗಳೇ ಅಧಿಕ.

ಭಾರತಕ್ಕೆ ವಿಶ್ವದ ಅತೀ ದೊಡ್ಡ ಖನ್ನತೆಗೆ ಒಳಗಾದ ಜನರಿರುವ ದೇಶವೆಂದು ಹಣೆಪಟ್ಟಿ ಬೇರೆ ಇದೆ. ವಿದ್ಯೆಗೆ ಮಹತ್ವ ಕೊಟ್ಟು ಐಟಿ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ದೇಶ ಭಾರತ, ಆದರೆ ಇನ್ನೂ ಮಾನಸಿಕ ಅನಾರೋಗ್ಯ ಎಂದರೆ “ಹುಚ್ಚು’ ಎಂದು ಪರಿಗಣಿಸುವವರೇ ಹೆಚ್ಚು, ಅಲ್ಲದೆ ಖನ್ನತೆ ಮತ್ತು ಮಾನಸಿಕ ರೋಗದಿಂದ ಬಳಲುವವರನ್ನು ಅಂಟು ಜಾಡ್ಯ ಬಂದಿದೆ ಎಂಬಂತೆ ದೂರವಿಡುವುದೇ ಹೆಚ್ಚು. ತಮ್ಮ ಮಾನಸಿಕ ಅನಾರೋಗ್ಯವನ್ನು ಇನ್ನೊಬ್ಬರ ಹತ್ತಿರ ಹೇಳಿಕೊಳ್ಳಲು ಮುಜುಗರಪಟ್ಟುಕೊಳ್ಳುವವರ ಸಂಖ್ಯೆ ಅಧಿಕ. ತಮಗಾದ ಮಾನಸಿಕ ಖನ್ನತೆಯ ಬಗ್ಗೆ ರಾಜಾರೋಷವಾಗಿ ಹೇಳಿಕೊಳ್ಳುವವರಂತೂ ಬಹಳ ಕಡಿಮೆ ಎಂದೇ ಹೇಳಬಹುದು, ಆದರೆ ಇಲ್ಲವೆಂದಲ್ಲ, ಕಳೆದ ವರ್ಷ ಸಿನೆಮಾ ತಾರೆ ದೀಪಿಕಾ ಪಡುಕೋಣೆ ಕೆಲವು ವರ್ಷಗಳ ಹಿಂದೆ ಡಿಪ್ರಶನ್‌ಗೆ ಒಳಗಾದ ಸುದ್ದಿ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವನ್ನು ಪಡೆದ ಸುದ್ದಿಯನ್ನು ಹೇಳಿಕೊಂಡಳು.

ಕಲುಷಿತ ನೀರು, ಗಾಳಿ, ವಾತಾವರಣ ದೇಹದ ಆರೋಗ್ಯವನ್ನು ಕೆಡಿಸುತ್ತದೋ ಹಾಗೆ ಜೀವನದ ಸಿಕ್ಕುಗಳು ಆಗಾಗ ಮನಸ್ಸನ್ನು ಕಂಗೆಡಿಸುತ್ತವೆ. ಭಗ್ನ ಪ್ರೇಮವಿರಬಹುದು, ಶಾಲಾ ಕಾಲೇಜಿನಲ್ಲಿ ಸಿಗಬೇಕಾದ ಮಾರ್ಕುಗಳು ಸಿಗದ ಕಾರಣವಿರಬಹುದು, ಉದ್ಯೋಗದಲ್ಲಿ ನಿರೀಕ್ಷಿಸಿದ ಭಡ್ತಿ ಸಿಗದಿರಬಹುದು, ಮಹಿಳೆಯ ಮುಟ್ಟಿನ ದಿನಗಳ ಮತ್ತು ಮುಟ್ಟು ನಿಲ್ಲುವಾಗಿನ ಆತಂಕದ ದಿನಗಳಿರಬಹುದು, ಪತಿ/ಪತ್ನಿಯಿಂದ ಸಿಗಬೇಕಾದ ಪ್ರೀತಿ ಸಿಗದ ಕಾರಣ ಹೀಗೆ ಒಂದಿಲ್ಲೊಂದು ಕಾರಣದಿಂದ ಮನಸ್ಸು ತತ್ತರಿಸುತ್ತದೆ.

ಸುಲಕ್ಷಣಾ ಪಂಡಿತ್‌ ಒಂದು ಕಾಲದ ಹಿಂದಿ ಚಿತ್ರರಂಗದ ತಾರೆ, ಹಿನ್ನೆಲೆ ಗಾಯಕಿ. ನಾಯಕ ಸಂಜೀವ್‌ ಕುಮಾರನ ಪ್ರೇಮ ಪಾಶದಲ್ಲಿ ಸಿಲುಕಿದಳು, ಆದರದವಳದ್ದು ಏಕಮುಖ ಪ್ರೇಮ, ಪ್ರೇಮ ಸಫ‌ಲವಾಗದಿದ್ದಾಗ ಮಾನಸಿಕ ಅಸ್ವಸ್ಥತೆಯಲ್ಲಿ ಸಿಲುಕಿದವಳು ಚಿತ್ರರಂಗವನ್ನೇ ತೊರೆದಳು. ಖನ್ನತೆಯಿಂದ ಹೊರಬರಲು ಸಾಧ್ಯವಾಗದೆ ಬಹಳ ಕಾಲ ತಾಯಿ-ತಂಗಿಯೆನ್ನುತ್ತ ತನ್ನ ಜೀವನವನ್ನು ಕಳೆದಳು. ಸದಾ ಸುದ್ದಿಯಲ್ಲಿದ್ದು ಎಲ್ಲರ ಕೇಂದ್ರಬಿಂದುವಾಗಿದ್ದ ಸಿನೆಮಾ ತಾರೆಯರು ಅವರ ಪ್ರಸಿದ್ಧಿಯು ಕಡಿಮೆಯಾಗುತ್ತಿದ್ದಂತೆ ಖನ್ನತೆಗೆ ಒಳಗಾಗಿ ಕುಡಿತಕ್ಕೆ ಮೊರೆ ಹೋಗುವ ಸುದ್ದಿಯಂತೂ ಆಗಾಗ ಕೇಳಿ ಬರುತ್ತಿದೆ.

ಉತ್ತಮ ಹವ್ಯಾಸಗಳು, ದಿನದ ಸ್ವಲ್ಪ ಹೊತ್ತು ಯೋಗ, ಧ್ಯಾನ ಇವೇ ಮನಸ್ಸಿಗೆ ಬೇಕಾಗುವ ಟಾನಿಕ್‌ಗಳು, ಇವುಗಳು ಬೇರೆಲ್ಲೂ ಸಿಗದು. ನಮ್ಮ ಕೈಯಲ್ಲೇ ಇದೆ. ಒಳ್ಳೆಯ ಪೌಷ್ಟಿಕ ಆಹಾರ ತೆಗೆದುಕೊಳ್ಳುತ್ತ ಮನಸ್ಸು ಆದಷ್ಟು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಆರೋಗ್ಯಕರ ಮನಸ್ಸಿಗೆ ಬೇಕಾಗುವ ಸೂತ್ರಗಳಲ್ಲೊಂದು. ಆತ್ಮೀಯರೊಡನೆ ಮನಸ್ಸಿನಲ್ಲಿದ್ದದ್ದನ್ನು ಹಂಚಿಕೊಳ್ಳುವುದೂ ಒಳ್ಳೆಯದೇ. ಮನಸ್ಸು ಅಸ್ವಸ್ಥವಾಗಿದೆ ಎನಿಸಿದರೆ ವೈದ್ಯಕೀಯ ನೆರವನ್ನು ಪಡೆಯಲು ಹಿಂಜರಿಯಬಾರದು. ಖನ್ನತೆಗೆ ಒಳಗಾದವರು ಸುತ್ತಮುತ್ತಲಿದ್ದರೆ ನಮ್ಮ ಸಹಾಯ ಹಸ್ತವನ್ನು ಅವರತ್ತ ಚಾಚಬೇಕು. ಮಾನಸಿಕ ಆರೋಗ್ಯದ ವಿಷಯ ಶಾಲಾ-ಕಾಲೇಜುಗಳ ಪಠ್ಯಪುಸ್ತಕದ ಪಾಠವಾಗಿರಬೇಕು.

ಗೀತಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next