Advertisement

ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ

03:18 PM May 18, 2019 | Sriram |

ಒಬ್ಬ ಮನುಷ್ಯನು ತನ್ನ ಜೀವನದ ಶೇ. 70% ಕಾಲವನ್ನು ಕೆಲಸದಲ್ಲಿ ತೊಡಗಿಸುತ್ತಾನೆ. ಕೆಲಸ ಅಥವಾ ಉದ್ಯೋಗವೆಂಬುದು ಒಬ್ಬ ಮನುಷ್ಯನಿಗೆ ಅಗತ್ಯವಾದ ಚಟುವಟಿಕೆ. ಈ ಕೆಲಸದಿಂದಾಗಿ ನಮಗೆ ಸಂಪಾದನೆಯ ಹೊರತು ಹಲವಾರು ಉಪಯೋಗಗಳಿವೆ. ಉದಾಹರಣೆಗೆ ಕೆಲಸದಿಂದಾಗಿ ನಮಗೆ ನಮ್ಮ ವೈಯಕ್ತಿಕ ಧ್ಯೇಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಮ್ಮ ಸಾಮಾಜಿಕ ಜಾಲ (Social network)ಹೆಚ್ಚಾಗುತ್ತದೆ ಹಾಗೂ ನಾವು ನಮ್ಮ ವೃತ್ತಿ (Profession) ಮತ್ತು ಸಮುದಾಯಕ್ಕೆ (Community) ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.

Advertisement

ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿದ್ದಲ್ಲಿ ನಾವು ಕೆಲಸದಲ್ಲಿ ಉತ್ಸುಕರಾಗಿರಲು, ಫ‌ಲದಾಯಕರಾಗಿರಲು (Productive) ಸಾಧ್ಯವಾಗುತ್ತದೆ. ಜಾಗತಿಕ ಸ್ಪರ್ಧಾತ್ಮಕ ಪ್ರಕ್ರಿಯೆಗಳಿಂದಾಗಿ (Global competitive processes) ಉದ್ಯೋಗ ಸಂಸ್ಥೆಗಳು (Organizations), ಸಹೋದ್ಯೋಗಿಗಳೊಡನೆ ಇರುವ ಸಂಬಂಧಗಳು (Employee relations) ಹಾಗೂ ಉದ್ಯೋಗ ಮಾದರಿಗಳು (employment patterns) ಕೆಲಸದೊತ್ತಡವಾಗಿ ಪರಿವರ್ತನೆಯಾಗಿದೆ. ಇದರಿಂದಾಗಿ ಮಾನಸಿಕ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳು ಹೆಚ್ಚಾಗಿವೆ. ಜಾಗತಿಕ ಸ್ಪರ್ಧೆ ಹಾಗೂ ತ್ವರಿತ ಸಂವಹನದಿಂದಾಗಿ (Instant communication) ಕೆಲಸ ಹಾಗೂ ಜೀವನವನ್ನು ಪ್ರತ್ಯೇಕಿಸಲು ಕಷ್ಟವಾಗುತ್ತಿದೆ. ನಾವೆಲ್ಲರೂ ಇತ್ತೀಚೆಗೆ ಅನುಭವಿಸಿದ ಜಾಗತಿಕ ಆರ್ಥಿಕ ಬಿಕ್ಕಟ್ಟು (Global economic crisis) ಹಾಗೂ ಹಿಂಜರಿತದಿಂದಾಗಿ (recession) ಬಹಳಷ್ಟು ಉದ್ಯಮಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ವಿಲೀನಗೊಳಿಸುವಿಕೆ (Merging), ಹೊರಗುತ್ತಿಗೆ (Outsourcing), ಉಪಗುತ್ತಿಗೆಗಳ (Subcontracting) ಮುಖಾಂತರ ನಡೆಸುತ್ತಿವೆ. ಹೀಗಾಗಿ ಕೆಲಸದ ತಾಣಗಳಲ್ಲಿ ಸ್ಪರ್ಧೆಗಳು ಹೆಚ್ಚಿವೆ, ಉದ್ಯೋಗ ನೀಡಿರುವವರಿಂದ ನಿರೀಕ್ಷೆಗಳು, ವೇಗದ ರೀತಿಯ ತೀವ್ರ ಕೆಲಸ, ಅನಿಯಮಿತ ಕೆಲಸದ ಸಮಯ, ಕೆಲಸದ ಹೆಚ್ಚುತ್ತಿರುವ ಬೇಡಿಕೆಗಳು, ಉದ್ಯೋಗದ ಅಭದ್ರತೆ, ಕೆಲಸದ ವಿಷ‌ಯಗಳ ಬಗ್ಗೆ ನಿಯಂತ್ರಣದ ಕೊರತೆ, ಕೆಲಸದ ಸಂಘಟನೆ ಹಾಗೂ ಕುಸಿಯುತ್ತಿರುವ ಉದ್ಯೋಗಾವಕಾಶಗಳು, ಇವೆಲ್ಲ ಕಾರಣಗಳಿಂದಾಗಿ ಕೆಲಸ ಮಾಡುವವರಲ್ಲಿರುವ ಪ್ರೇರಣೆ, ತೃಪ್ತಿ ಹಾಗೂ ಸೃಜನಶೀಲತೆ ಕುಂಠಿತವಾಗಿದೆ.

ಉದ್ಯೊಗದಿಂದ ಉಂಟಾಗುವ ದೀರ್ಘ‌ಕಾಲದ ಒತ್ತಡಗಳು ನಮ್ಮ ದೈಹಿಕ ಆರೋಗ್ಯವನ್ನು ಕೆಡಿಸುತ್ತಿದೆ. ಕೆಲಸದ ಜವಾಬ್ದಾರಿಗಳ ಬಗ್ಗೆ ನಿರಂತರವಾದ ಮುಂದಾಲೋಚನೆಯಿಂದಾಗಿ ಅನಿಯಮಿತ ಆಹಾರ ಸೇವಿಸುವ ಅಭ್ಯಾಸಗಳು, ಅಧಿಕ ರಕ್ತದೊತ್ತಡ, ಸಾಕಷ್ಟು ವ್ಯಾಯಾಮದ ಕೊರತೆ, ದೇಹದ ತೂಕ ಹೆಚ್ಚುವಿಕೆ ಇತ್ಯಾದಿಗಳು ಉಂಟಾಗಿವೆ. ಬರ್ನ್ ಔಟ್‌ (Burn out) ಎಂಬ ಸಮಸ್ಯೆ ಉಂಟಾಗಿ ಉದ್ಯೋಗಿಗಳಲ್ಲಿ ಮಾನಸಿಕ ಖನ್ನತೆ ಉದ್ಭವಿಸುತ್ತಿದೆ. ಅತಿಯಾದ ಹಾಗೂ ದೀರ್ಘ‌ಕಾಲದ ಒತ್ತಡದಿಂದಾಗಿ ಉಂಟಾಗುವ ಭಾವನಾತ್ಮಕ, ಮಾನಸಿಕ ಹಾಗೂ ದೈಹಿಕ ಬಳಲಿಕೆಯನ್ನು ಬರ್ನ್ ಔಟ್‌ ಎನ್ನುವರು. ಇದರಿಂದಾಗಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು, ಸ್ಟ್ರೋಕ್‌, ಸ್ಥೂಲಕಾಯತೆ, ತಿನ್ನುವ ಅಸ್ವಸ್ಥತೆಗಳು, ಸಕ್ಕರೆ ಕಾಯಿಲೆ ಮುಂತಾದುವುಗಳು ಉಂಟಾಗಬಹುದು. ಬಹುಕಾಲದ ಖನ್ನತೆಯಿಂದಾಗಿ ವಿನಾಯಿತಿ (immunity) ಕಡಿಮೆಯಾಗಿ ಇನ್ನಿತರ ಕಾಯಿಲೆಗಳು ಉಂಟಾಗಬಹುದು. ಇವೆಲ್ಲವುಗಳಿಂದ ಕೆಲಸದ ಅಪಘಾತಗಳು ಹೆಚ್ಚಬಹುದು ಹಾಗೂ ಓರ್ವ ಉದ್ಯೋಗಿಯ ಕೆಲಸಕ್ಕೆ ಗೈರುಹಾಜರಿ ಹೆಚ್ಚಾಗಬಹುದು.

ಕೆಲಸದ ಸ್ಥಳಗಳಲ್ಲಿ ಉಂಟಾಗುವ ಒತ್ತಡಗಳಿಗೆ ಹಲವಾರು ಕಾರಣಗಳಿರಬಹುದು. ಉದಾಹರಣೆಗೆ: ಕೆಲಸದಲ್ಲಿ ಬೆದರಿಕೆ (bullying),ಕಿರುಕುಳ (harassment), ಅತಿಯಾದ ಕೆಲಸ, ಗುರುತಿಸಲಾಗದ ಅಥವಾ ಕಳಪೆ ನಿರ್ವಹಣೆ, ಅಧಿಕ ಕೆಲಸದ ಹೊರೆ, ಕೆಲಸದಲ್ಲಿ ಸಂಕೀರ್ಣತೆ (job complexity), ಸಮಯದ ಒತ್ತಡ, ಕೆಲಸದ ಸಂಘರ್ಷಗಳು, ನಾಯಕತ್ವ ಹಾಗೂ ಸಹಯೋಗದ ಕೊರತೆ ಇತ್ಯಾದಿ. ಇಂತಹ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾದ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ನಿವಾರಿಸುವ ಪ್ರಯತ್ನಪಡುವುದು ಮುಖ್ಯವಾಗಿದೆ.

ಪ್ರತೀ ವರ್ಷ ಅಕ್ಟೋಬರ್‌ 10ರಂದು ಇಡೀ ವಿಶ್ವ ವಿಶ್ವ ಮಾನಸಿಕ ಆರೋಗ್ಯ ದಿನವೆಂದು ಆಚರಿಸುತ್ತದೆ. ವಿಶ್ವ ಆರೋಗ್ಯ ಸಂಘಟನೆಯು (World Health Organization) 2017ನೇ ಸಾಲಿನ ಈ ಆಚರಣೆಗೆ ಕೆಲಸದಲ್ಲಿ ಅಥವಾ ಉದ್ಯೋಗದಲ್ಲಿ ಮಾನಸಿಕ ಆರೋಗ್ಯವೆಂಬ ಧ್ಯೇಯವನ್ನು ಹೊಂದಿದೆ. ಈ ದಿಶೆಯಿಂದಾಗಿ ವಿಶ್ವ ಆರೋಗ್ಯ ಸಂಘಟನೆಯು ಈ ಕೆಳಗೆ ಕಾಣಿಸಿದ ಕೆಲವು ವಿಷಯಗಳ ಬಗ್ಗೆ ಗಮನಹರಿಸಿದೆ.

Advertisement

ಉದ್ಯೋಗದಲ್ಲಿ ಸದ್ಯಕ್ಕೆ ಇರುವ ಪರಿಸ್ಥಿತಿಯನ್ನು ಹತೋಟಿಯಲ್ಲಿರಿಸಲು ಈ ಕೆಳಗೆ ಕಾಣಿಸಲಾದ ಕೆಲವು ವಿಧಾನಗಳನ್ನು ಪ್ರಯತ್ನಿಸಬಹುದು

– ನಿಮಗೆ ಯಾವ ರೀತಿಯ ಕೆಲಸ ಇಷ್ಟ ಅಥವ ಇಷ್ಟವಿಲ್ಲ ಎಂಬುದನ್ನು ಗುರುತಿಸಿ
– ಈಗ ನಿಮಗೆ ಇರುವ ಅಗತ್ಯಗಳನ್ನು ಪರಿಶೀಲಿಸಿ
– ನಿಮ್ಮಲ್ಲಿ ಯಾವ ಯಾವ ಕಲೆಗಳನ್ನು ಕಲಿತು ಬೆಳೆಸಬಹುದೆಂದು ಗುರುತಿಸಿ
– ಸ್ವ ಇಚ್ಛೆಯಿಂದ ಕೆಲಸಕ್ಕೆ ಬೇಕಾದ ಶಿಕ್ಷಣವನ್ನು ಪಡೆದುಕೊಳ್ಳಿ
– ಸದ್ಯಕ್ಕೆ ಇರುವ ಕೆಲಸವನ್ನು ಮುಂದುವರಿಸಲು ಸಾಧ್ಯವೇ ಆಗದಿ¨ªಾಗ ಹೊಸ ಕೆಲಸವನ್ನು ಹುಡುಕಲು ಪ್ರಯತ್ನಿಸಿ
– ಮಾನಸಿಕ ತೊಂದರೆಗಳು ಇದ್ದಲ್ಲಿ ಮಾನಸಿಕ ತಜ್ಞರನ್ನು ಭೇಟಿಯಾಗಲು ಹಿಂಜರಿಯದಿರಿ

ಇವುಗಳಲ್ಲದೆ ಇನ್ನೂ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು
– ಬೆಂಬಲಯುತ ಪರಿಸರವನ್ನು ಸೃಷ್ಟಿಸುವುದು
– ಬರ್ನ್ ಔಟ್‌ನ ಚಿಹ್ನೆಗಳಾದ ದೀರ್ಘ‌ಕಾಲದ ಆಯಾಸ, ನಿದ್ರಾಹೀನತೆ, ಮರೆವು, ಏಕಾಗ್ರತೆಯ ಕೊರತೆ, ದೈಹಿಕ ಸಮಸ್ಯೆಗಳ ಹೆಚ್ಚಳ, ಕುಂಠಿತವಾದ ಹಸಿವು, ಖನ್ನತೆ ಇತ್ಯಾದಿಗಳನ್ನು ಗುರುತಿಸುವುದು
– ಮೌಲ್ಯಗಳನ್ನು ಹಾಗೂ ನಂಬಿಕೆಗಳನ್ನು ಪ್ರದರ್ಶಿಸುವ ಸಂಸ್ಥೆಯ ಸಂಸ್ಕೃತಿಯನ್ನು ಸೃಷ್ಟಿಸುವುದು
– ಕೆಲಸದಲ್ಲಿ ಬೆದರಿಸುವುದನ್ನು ತಡೆಗಟ್ಟುವುದು
– ಕೆಲಸದಲ್ಲಿ ತರಬೇತಿ (coaching)
-ಮೇಲ್ವಿಚಾರಕ ಬೆಂಬಲ
– ಕೆಲಸ ಹಾಗೂ ನೈಜ ಜೀವನದಲ್ಲಿ ಸಮತೋಲನ
– ಮಾನಸಿಕ ತೊಂದರೆಗಳ ಅರಿವನ್ನು ಮೂಡಿಸುವ ದಿನಗಳನ್ನು ಆಚರಿಸುವುದು
-ಉದ್ಯೋಗಿಗಳಿಗೆ ಮಾನಸಿಕ ತೊಂದರೆಗಳ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು
-ಕೆಲಸದಲ್ಲಿ ಒತ್ತಡಕ್ಕೆ ಕಾರಣವಾಗುವಂತಹ ವಿಷಯಗಳನ್ನು ಗುರುತಿಸಿ ಅವುಗಳನ್ನು ತಡೆಗಟ್ಟಲು ಪ್ರಯತ್ನಿಸುವುದು
– ಉದ್ಯೋಗಿಗಳಿಗೆ ಸ್ವಲ್ಪ ಮಟ್ಟದ ಸ್ವಾಯತ್ತತೆ (autonomy) ನೀಡುವುದು
– ಉದ್ಯೋಗಿಗಳಿಗೆ ಕೆಲ ವಿಷಯಗಳಲ್ಲಾದರೂ ತೀರ್ಮಾನ ಮಾಡುವ (decision making) ಹಕ್ಕು ನೀಡುವುದು
– ಸಹೋದ್ಯೋಗಿಗಳ ನಡುವೆ ಹಿತವಾದ ಸಂಬಂಧವನ್ನು ಖಾತ್ರಿಪಡಿಸುವುದು

ಒಳ್ಳೆಯ ಮಾನಸಿಕ ಆರೋಗ್ಯವು ಒಬ್ಬ ಮನುಷ್ಯನ ಪೂರ್ಣ ಸಾಮರ್ಥ್ಯವನ್ನು ಅರಿತು ಕೊಳ್ಳಲು, ಜೀವನದ ಸಮಸ್ಯೆಗಳನ್ನು ಬಗೆಹರಿಸಲು, ಕೆಲಸದ ಉತ್ಪಾದಕ ಫ‌ಲಿತಾಂಶವನ್ನು ಹೆಚ್ಚಿಸಲು ಹಾಗೂ ಸಮಾಜಕ್ಕೆ ಒಳಿತನ್ನು ಮಾಡಲು ಬಹು ಸಹಕಾರಿಯಾಗಿವೆ. ಹಾಗಾಗಿ ನಮ್ಮ ಮಾನಸಿಕ ಆರೊಗ್ಯವನ್ನು ಪ್ರಬಲಗೊಳಿಸುವ ಪ್ರಯತ್ನವನ್ನು ಮಾಡೋಣ.

-ಶಾಲಿನಿ ಕ್ವಾಡ್ರಸ್‌,
ಅಸಿಸ್ಟೆಂಟ್‌ ಪ್ರೊಫೆಸರ್‌,
ಅಕ್ಯುಪೇಶನಲ್‌ ಥೆರಪಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next