Advertisement

ಸ್ಮಾರಕ ಭವನ: 1.35 ಕೋಟಿ ವೆಚ್ಚದ ಕಾಮಗಾರಿ ಮಾತ್ರ ಪೂರ್ಣ 

02:37 PM Mar 31, 2017 | Team Udayavani |

ಇಂದು ಜನರಲ್‌ ತಿಮ್ಮಯ್ಯ ಜನ್ಮ ದಿನಾಚರಣೆ
ಮಡಿಕೇರಿ: ಸುಮಾರು ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವೀರ ಸೇನಾನಿ ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ಸ್ಮಾರಕ ಭವನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ತಿಮ್ಮಯ್ಯ ಅವರ ಜನ್ಮ ದಿನವಾದ ಮಾ. 31ರಂದು ಸ್ಮಾರಕ ಭವನವನ್ನು ಉದ್ಘಾಟಿಸುವ ಗುರಿ ಇತ್ತಾದರೂ ಅಷ್ಟರೊಳಗೆ ಕಾಮಗಾರಿಯನ್ನು ಪೂರ್ಣ ಗೊಳಿಸುವುದು ಕಷ್ಟಸಾಧ್ಯವಾಗಿದೆ. 

Advertisement

ನಿರ್ಮಿತಿ ಕೇಂದ್ರ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಮೊದಲನೇ ಹಂತದ ಕಾಮಗಾರಿ 5.50 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಮಡಿಕೇರಿಯಲ್ಲಿರುವ ತಿಮ್ಮಯ್ಯ ಜನ್ಮ ನಿವಾಸ ಸನ್ನಿಸೈಡ್‌ ಸ್ಮಾರಕವಾಗಿ ಪರಿವರ್ತನೆ ಯಾಗುತ್ತಿದ್ದು, ಈಗಾಗಲೇ ಸುಮಾರು 1.35 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. 

ಸನ್ನಿಸೈಡ್‌ಗೆ ಹೊಸ ಮೆರುಗು
“ಸನ್ನಿಸೈಡ್‌’  ನಿವಾಸದ ಮೇಲ್ಛಾವಣಿಯನ್ನು ಸಂಪೂ ರ್ಣವಾಗಿ ಬದಲಾಯಿಸಲಾಗಿದ್ದು, ಹಳೆಯ ಹಂಚುಗಳ ಮೆರುಗನ್ನು ನೀಡಲಾಗಿದೆ. ಸ್ಮಾರಕದ ಒಳ ಆವರಣದಲ್ಲಿ ಮರದ ನೆಲಹಾಸುಗಳನ್ನು ಹಾಸಲಾಗಿದೆ. ಗೋಡೆಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ ನಡೆದಿದೆ. ಗುಣಮಟª ನೂತನ ಕಿಟಕಿ, ಬಾಗಿಲುಗಳನ್ನು ಅಳವಡಿಸಲಾಗಿದೆ.
  
ತಿಮ್ಮಯ್ಯ ಅವರ ಜನ್ಮ ನಿವಾಸಕ್ಕೆ ಸೇರಿದ ಒಟ್ಟು 2.70 ಎಕರೆ ಪ್ರದೇಶವಿದ್ದು, ಎಲ್ಲ ಜಾಗವನ್ನು ಸ್ಮಾರಕ ಹಾಗೂ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕಾಗಿ ಬಳಸಿಕೊಳ್ಳಬೇಕೆನ್ನುವ ಯೋಜನೆ ಇದೆ. ತಿಮ್ಮಯ್ಯ ಅವರು ಸೇನೆಯಲ್ಲಿದ್ದಾಗ ಬಳಸುತ್ತಿದ್ದ ಸೇನಾ ಸಮವಸ್ತ್ರಗಳ ಪ್ರದರ್ಶನ, ಸ್ಮಾರಕದಲ್ಲಿ ಪರಿಣಾಮಕಾರಿ ಧ್ವನಿಯ ಮೂಲಕ ತಿಮ್ಮಯ್ಯ ಅವರ ಬಗ್ಗೆ ಮಾಹಿತಿ ನೀಡುವುದು, ಯುವ ಸಮೂಹಕ್ಕೆ ಸ್ಫೂರ್ತಿ ತುಂಬಬಲ್ಲ ಸೇನಾಪರಿಕರಗಳ ಸಂಗ್ರಹ, ಭೂಸೇನೆ, ವಾಯುಸೇನೆ ಮತ್ತು ನೌಕಾದಳಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ.

ಫೀ| ಮಾ| ಕಾರ್ಯಪ್ಪ ಮತ್ತು ಜ|  ತಿಮ್ಮಯ್ಯ ಫೋರಂ ಹಾಗೂ ಮಾಜಿ ಸೇನಾಧಿಕಾರಿಗಳ ಸಹಯೋಗದೊಂದಿಗೆ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರಗೊಳಿಸಲು ಜಿಲ್ಲಾಡಳಿತ ಕ್ರಮಗಳನ್ನು ಕೈಗೊಂಡಿದೆ. 

ಜನರಲ್‌ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಮನೆ ಸನ್ನಿಸೈಡ್‌ನ್ನು ಸ್ಮಾರಕ ನಿರ್ಮಾಣಕ್ಕಾಗಿ 2006-07ರಲ್ಲಿ ಆಯವ್ಯಯದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಘೋಷಿಸಿದ್ದರು. ಅದರಂತೆ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ತಾಂತ್ರಿಕತೆ ಯೊಂದಿಗೆ ಕಾಮಗಾರಿ ಕೈಗೊಂಡಿದ್ದು, ಜನರಲ್‌ ತಿಮ್ಮಯ್ಯ ಅವರು ಸೇವೆ ಸಲ್ಲಿಸಿದ ಸ್ಥಳದಿಂದ ಸಂಗ್ರಹಿಸಿದ ದಾಖಲೆಗಳು, ಸೇನಾ ಅಧಿಕಾರಿಗಳಿಂದ ನೀಡಲ್ಪಟ್ಟಿರುವ ಎರಡು ಬ್ಯಾಟಲ್‌ ಟ್ಯಾಂಕ್‌ಗಳು, ಫೈಟರ್‌ ವಿಮಾನ ಮತ್ತು ಇತರ ಸೇವೆ ಸಲ್ಲಿಸಿದ ಯುದ್ಧ ಟ್ಯಾಂಕರ್‌ಗಳನ್ನು ಸನ್ನಿಸೈಡ್‌ನ‌ ಹೊರಾಂಗಣದಲ್ಲಿ ಇಡುವ ಗುರಿಯನ್ನು ಹೊಂದಲಾಗಿದೆ.

Advertisement

ಪ್ರವಾಸಿಗರನ್ನು ಆಕರ್ಷಿಸುವ‌ ಮತ್ತು ಯುವ ಸಮೂ ಹಕ್ಕೆ ಸ್ಫೂರ್ತಿ ತುಂಬಬಲ್ಲ ಸ್ಮಾರಕ ಇದಾಗಬೇಕೆನ್ನುವ ಗುರಿಯನ್ನು ಇಟ್ಟುಕೊಂಡಿರುವ ಅಧಿಕಾರಿಗಳು ಗುಣ ಮಟ್ಟದ ಕಾಮಗಾರಿ ಮೂಲಕ ವೀರಸೇನಾನಿಗೆ ಗೌರವ ನೀಡುವ ಭರವಸೆಯಲ್ಲಿದ್ದಾರೆ. ಮೊದಲ ಹಂತದ ಕಾಮಗಾರಿ  5.50 ಕೋಟಿ ರೂ.ಗಳಲ್ಲಿ ನಡೆಯಲಿದ್ದು, 2ನೇ ಹಂತದ ಯೋಜನೆಗೆ ಹೆಚ್ಚುವರಿ ಅನುದಾನದ ಅಗತ್ಯವಿದೆ.

ಇದರೊಂದಿಗೆ ಜನರಲ್‌ ತಿಮ್ಮಯ್ಯ ಅವರ ಪುತ್ಥಳಿ, ಯುದ್ಧ ಸ್ಮಾರಕ ನಿರ್ಮಾಣ, ಉದ್ಯಾನವನ, ವಾಹನ ನಿಲುಗಡೆಗೆ ವ್ಯವಸ್ಥೆ ಮತ್ತಿತರ ಉಪಯೋಗಕ್ಕಾಗಿ ಸನ್ನಿಸೈಡ್‌ಸುತ್ತಮುತ್ತಲಿನ ಜಾಗ ಬಿಟ್ಟುಕೊಡಲು ಪ್ರಾದೇಶಿಕ ಸಾರಿಗೆ ಇಲಾಖೆಯನ್ನು ಕೋರಲಾಗಿತ್ತು. ಅದರಂತೆ ಸಾರಿಗೆ ಇಲಾಖೆಯ ಸಿಬಂದಿಗಳು ವಾಸವಿದ್ದ 7 ವಸತಿ ಗೃಹಗಳು ಸೇರಿದಂತೆ ಒಟ್ಟು 2.40 ಎಕರೆ ಜಾಗವನ್ನು ಜನರಲ್‌ ತಿಮ್ಮಯ್ಯ ಸ್ಮಾರಕ ಭವನದ ಯೋಜನೆಗಳಿಗಾಗಿ ಹಸ್ತಾಂತರಿಸಲಾಗಿದೆ.
 
ಬಿಡುಗಡೆಯಾಗಿದ್ದು ಕೇವಲ 35 ಲಕ್ಷ ರೂ.
ಸುಮಾರು 5.50 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ 1.35 ಕೋಟಿಯ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸರಕಾರ ಇಲ್ಲಿಯವರೆಗೆ ನೀಡಿರುವ ಅನುದಾನ 35 ಲಕ್ಷ ರೂ. ಮಾತ್ರ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. 

ಫೀ|ಮಾ| ಕಾರ್ಯಪ್ಪ ಮತ್ತು ಜನರಲ್‌ ತಿಮ್ಮಯ್ಯ ಫೋರಂಗೆ ಸರಕಾರ ಕಾರ್ಯಪ್ಪ ಅವರ ನಿವಾಸದ ಅಭಿವೃದ್ಧಿಗಾಗಿ ನೀಡಿದ್ದ 1 ಕೋಟಿ ರೂ.ವನ್ನು ತಿಮ್ಮಯ್ಯ ಅವರ ಸ್ಮಾರಕಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಸರಕಾರ ಹಣ ಬಿಡುಗಡೆ ಮಾಡಿದ ಅನಂತರ ಫೋರಂಗೆ ಮರಳಿಸ ಬೇಕಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಕೈತೊಳೆದುಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಆರಂಭದಲ್ಲಿ ತಿಮ್ಮಯ್ಯ ಅವರ ಸ್ಮಾರಕ ಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕವೇ ನಿರ್ಮಿಸುವ ಯೋಜನೆ ಇತ್ತು. ಆದರೆ ಇದೀಗ ಹಣ ನೀಡುವುದು ಮಾತ್ರ ನಮ್ಮ ಕೆಲಸ, ಸರಕಾರದಿಂದ ಬಂದ ಹಣವನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ಎಲ್ಲದಕ್ಕೂ ನಿರ್ಮಿತಿ ಕೇಂದ್ರವೇ ಜವಬ್ದಾರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಪಷ್ಟಪಡಿಸಿದೆ. ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ ಎನ್ನುವ ಬಗ್ಗೆಯೂ ಇಲಾಖೆಗೆ ಮಾಹಿತಿ ಇಲ್ಲ.

ಅಕಾಡೆಮಿಯಿಂದ ಜನ್ಮದಿನಾಚರಣೆ 
ಮಾ.31 ವೀರಸೇನಾನಿ ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರ ಜನ್ಮದಿನ. ಆದರೆ ಜನ್ಮದಿನಾಚರಣೆಯ ಜವಾ ಬ್ದಾರಿಯನ್ನು ಕೂಡ ಕೊಡವ ಸಾಹಿತ್ಯ ಅಕಾಡೆಮಿಗೆ ನೀಡುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈತೊಳೆದುಕೊಂಡಿದೆ. ದೇಶ ಕಂಡ ಅಪ್ರತಿಮ ವೀರನ ಜನ್ಮ ದಿನವನ್ನು ಸರಕಾರವೇ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಯುವ ಸಮೂಹದಲ್ಲಿ ಸ್ಫೂರ್ತಿಯನ್ನು ತುಂಬುವ ಮತ್ತು ತಿಮ್ಮಯ್ಯ ಅವರಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕಾಗಿತ್ತು. ಆದರೆ ಇಲಾಖೆ ಕೊಡವ ಸಾಹಿತ್ಯ ಅಕಾಡೆಮಿಗೆ ಜವಾಬ್ದಾರಿ ನೀಡುವುದರೊಂದಿಗೆ ತಿಮ್ಮಯ್ಯ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಪ್ರಯತ್ನ ಮಾಡಲಾಗಿದೆ ಎನ್ನುವ ಟೀಕೆ ಕೇಳಿ ಬಂದಿದೆ.

ತಿಮ್ಮಯ್ಯ ಅವರ ಜನ್ಮದಿನಾಚರಣೆಗೆ ಕೇವಲ ಮೂರು ದಿನ ಬಾಕಿ ಉಳಿದಿದ್ದರೂ ಆಚರಣೆಯ ಬಗ್ಗೆ ಯಾವುದೇ ಸಿದ್ಧತೆಗಳು ನಡೆದ ಬಗ್ಗೆ ಮಾಹಿತಿ ಇಲ್ಲ. ಜನ್ಮದಿನಾಚರಣೆಯನ್ನು ಸನ್ನಿಸೈಡ್‌ ಆವರಣದಲ್ಲೇ ನಡೆಸಲಾಗುವುದೆಂದು ತಿಳಿದು ಬಂದಿದೆ. ಅಷ್ಟರೊಳಗೆ ಸ್ಮಾರಕ ಭವನದ ಪ್ರಾಥಮಿಕ ಹಂತದ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿದೆ. 

– ಎಸ್‌.ಕೆ. ಲಕ್ಷ್ಮೀಶ್‌ 

Advertisement

Udayavani is now on Telegram. Click here to join our channel and stay updated with the latest news.

Next