Advertisement

ಟೀಚಿಂಗ್‌ ಪ್ರಾಕ್ಟೀಸ್‌ನ ಅಚ್ಚಳಿಯದ ನೆನಪುಗಳು

11:21 PM Mar 28, 2019 | Team Udayavani |

ನಮ್ಮ ಕಾಲೇಜಿನಿಂದ “ಟೀಚಿಂಗ್‌ ಪ್ರಾಕ್ಟೀಸ್‌’ಗೆ ಎಂದು ನಮ್ಮನ್ನೆಲ್ಲ ಹಲ‌ವಾರು ಗುಂಪುಗಳನ್ನಾಗಿ ವಿಂಗಡಿಸಿ, ಬೇರೆ ಬೇರೆ ಶಾಲೆಗಳಿಗೆ ಕಳುಹಿಸಿದರು. ನನಗೆ ಸಿಕ್ಕಿದ್ದು ಸರಕಾರಿ ಸಂಯುಕ್ತ ಪ್ರೌಢಶಾಲೆ, ಅಜ್ಜರಕಾಡು ಉಡುಪಿ. ಮೊದಲ ದಿನ ಅವ್ಯಕ್ತ ಭಯ ಕಾಡುತ್ತಿತ್ತು. ಆದರೆ, ಇಲ್ಲಿನ ಎಲ್ಲ ಅಧ್ಯಾಪಕರು ಬಹು ಆತ್ಮೀಯತೆಯಿಂದ ನಮ್ಮನ್ನು ಮಾತನಾಡಿಸಿದ ಪರಿ, ನಮ್ಮೆಲ್ಲರಿಗೂ ಸ್ವಲ್ಪ ಮಟ್ಟಿನ ಧೈರ್ಯವನ್ನು ತಂದುಕೊಟ್ಟಿತು. ಶಾಲೆಯ ಸುಂದರ ವಾತಾವರಣ ನನಗೆ ನನ್ನ ಹೈಸ್ಕೂಲ್‌ ಜೀವನವನ್ನು ನೆನಪಿಸಿತ್ತು.

Advertisement

ಕುಕ್ಕೆಹಳ್ಳಿಯಿಂದ ಉಡುಪಿಗೆ ಹೋಗುವ ಎಲ್ಲ ಬಸ್ಸುಗಳು ಫ‌ುಲ್‌ ರಶ್‌. ಹಾಗಿದ್ದರೂ ಕೂಡ ನನ್ನ ಚಾರ್ಟ್‌ಗಳನ್ನು ಒಂದು ಚೂರೂ ಹಾಳಾಗದಂತೆ ಬಸ್ಸಿನಲ್ಲಿ ಮುಂದೆ ಇಟ್ಟು ಇಳಿಯುವಾಗ ಕೊಟ್ಟು ಸಹಕರಿಸಿದ ಬಸ್ಸನ್ನು ಖಂಡಿತ ಮರೆಯಲಾಗದು.

ಮೊದಲ ದಿನ ನನಗೆ 9ನೇ ತರಗತಿಗೆ ವಿಜ್ಞಾನದ ಪಾಠವನ್ನು ಬೋಧಿಸಲು ಇದ್ದು, lesson paln, TLM’s, 5E approach ಎಂದೆಲ್ಲ ಬಡಬಡಿಸಿ, ಶಾಲೆಗೆ ಹೊರಟೆ. ದಾರಿಯುದ್ದಕ್ಕೂ ಚಿಂತೆಯೇ ಚಿಂತೆ. ನಾನು ಕೇಳಿದ ಪ್ರಶ್ನೆಗಳಿಗೆ ಮಕ್ಕಳು ಉತ್ತರಿಸದಿದ್ದರೆ ಏನು ಮಾಡುವುದು? ಎಂಬಿತ್ಯಾದಿ ಯೋಚನೆಗಳು. ಆದರೆ, ಈ ಭಯವನ್ನು ಹೋಗಲಾಡಿಸಿದ್ದು ಈ ಮಕ್ಕಳು ಉತ್ತರ ಹೇಳುವ ಮೂಲಕ. ತಮಗೆ ಗೊತ್ತಿರುವ ಉತ್ತರವನ್ನು ಯಾವುದೇ ಅಳುಕಿಲ್ಲದೆ ಪಟಪಟನೆ ಎದ್ದು ನಿಂತು ನೀಡುತ್ತಿದ್ದಾಗ, ನಮ್ಮ ಕಾಲೇಜಿನಿಂದ ಪರಿವೀಕ್ಷಕರಾಗಿ ಆಗಮಿಸುತ್ತಿದ್ದ ನಮ್ಮ ಲೆಕ್ಚರರ್ಗೂ ಖುಷಿಯಾಗುತ್ತಿತ್ತು. ಪಾಠದ ಅವಧಿ ಮುಗಿದು, ಚಾರ್ಟ್‌ಗಳನ್ನೆಲ್ಲ ಮಡಚುವಾಗ, “ಟೀಚರ್‌, ನಾವು ಮಡಚಿ ಕೊಡಬೇಕೆ? ಅಧ್ಯಾಪಕರ ಕೊಠಡಿಗೆ ತಂದುಕೊಡಬೇಕೆ?’ ಎಂದು ಕೇಳುವ ಆ ಮಕ್ಕಳ ಪ್ರೀತಿ, ಗೌರವವನ್ನು ವರ್ಣಿಸಲು ಸಾಧ್ಯವಿಲ್ಲ.

“ಮಕ್ಕಳ ದಿನಾಚರಣೆ’ಯಂದು ಹಲವಾರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಇಲ್ಲಿನ ಶಿಕ್ಷಕರು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದಾಗ ನಮ್ಮ ಗುಂಪಿನ ಎಲ್ಲರಿಗೂ ಆದ ಖುಷಿ ಅಷ್ಟಿಷ್ಟಲ್ಲ. ಒಂದೂವರೆ ತಿಂಗಳು ಇಲ್ಲಿದ್ದು, ಕೊನೆಗೆ ನಾವು ಶಾಲೆಯನ್ನು ಬಿಟ್ಟು ನಮ್ಮ ಕಾಲೇಜಿಗೆ ಹಿಂತಿರುಗುವಾಗ ನಮ್ಮ ಆಪ್ತರನ್ನು ಬಿಟ್ಟು ಹೋಗುತ್ತಿದ್ದೇವಲ್ಲ ಎಂಬ ಬೇಸರ. ಮಕ್ಕಳೆಲ್ಲರೂ ಬಂದು, “ಟೀಚರ್‌, ನಮ್ಮನ್ನು ಬಿಟ್ಟು ಹೋಗಬೇಡಿ, ಇಲ್ಲೇ ಇರಿ’ ಎಂದಾಗ ನಮ್ಮ ಕಣ್ಣಲ್ಲಿ ನೀರು ತುಂಬಿ, ಅದನ್ನು ಮುಚ್ಚಿಟ್ಟು , ಮಕ್ಕಳ ಎದುರಿಗೆ ಅಳಬಾರದೆಂದು ಏನೇನೋ ಕಸರತ್ತು ಮಾಡಿ, ಕಣ್ಣೀರನ್ನು ನಿಯಂತ್ರಿಸಿಕೊಂಡ ಪರಿ, ಸದಾ ಹಸಿರಾಗಿರುವಂತಿದೆ.

ಮೊದಮೊದಲು ಈ ಟೀಚಿಂಗ್‌ ಪ್ರಾಕ್ಟೀಸ್‌ ಯಾಕಾದರೂ ಇದೆಯೇನೋ ಎಂದುಕೊಂಡಿದ್ದೆವು. ಆದರೆ, ಶಾಲೆಗಳಿಗೆ ಹೋದ ನಂತರ ಇನ್ನೂ ಸ್ವಲ್ಪ ಸಮಯ ಇಲ್ಲೇ ಇರುತ್ತಿದ್ದರೆ ಆಗುತ್ತಿತ್ತು ಎಂದೆನಿಸುತ್ತಿತ್ತು. ನಮ್ಮೆಲ್ಲ ಕೆಲಸಗಳಿಗೂ ಬೆನ್ನೆಲುಬಾಗಿ ನಿಂತು, ಹೆಜ್ಜೆ ಹೆಜ್ಜೆಗೂ ನಮ್ಮನ್ನು ಪ್ರೋತ್ಸಾಹಿಸಿ, ಸಹಕರಿಸಿದ ಅಧ್ಯಾಪಕ ವೃಂದ ದವರ ಪ್ರೀತಿ, ವಿಶ್ವಾಸ, ಕಾಳಜಿ ಹಾಗೂ ಮುದ್ದು ಮನಸ್ಸಿನ ಮುಗ್ಧ ಮಕ್ಕಳಿಗೂ ಎಂದೆಂದಿಗೂ ಚಿರಋಣಿ. ಇಲ್ಲಿನ ಅಧ್ಯಾಪಕರು ನಮ್ಮನ್ನು ಅವರ ವಿದ್ಯಾರ್ಥಿಗಳಂತೆಯೇ ಆದರದಿಂದ ಮಾತನಾಡಿಸಿ, ನೀಡಿದ ನೆರವು ಎಂದೆಂದಿಗೂ ನೆನಪಿಟ್ಟುಕೊಳ್ಳುವಂತಹದ್ದು. ಇದಕ್ಕೆ ಕಾರಣವಾದ “ಟೀಚಿಂಗ್‌ ಪ್ರಾಕ್ಟೀಸ್‌’ಗೂ ಧನ್ಯವಾದಗಳು.

Advertisement

ಅನುಷಾ ಎಸ್‌. ಶೆಟ್ಟಿ
ಬಿ.ಎಡ್‌ ತೃತೀಯ ಸೆಮಿಸ್ಟರ್‌
ಡಾ. ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next