Advertisement

ಮಾ.24ಕ್ಕೆ ಮೇಲುಕೋಟೆ ವೈರಮುಡಿ ಸರಳ ಉತ್ಸವ : ನೇರ ಪ್ರಸಾರ ವೀಕ್ಷಣೆಗೆ ಇಲ್ಲಿದೆ ಮಾಹಿತಿ

08:40 PM Mar 23, 2021 | Team Udayavani |

ಮಂಡ್ಯ: ಮೇಲುಕೋಟೆಯ ಚೆಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆಯಲಿದೆ. ಮಾ.24ರಂದು ಮಧ್ಯಾಹ್ನ 2ರಿಂದ ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 12 ಗಂಟೆಯವರೆಗೆ ವಿಶೇಷ ಪೂಜೆ, ಕೈಂಕರ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ ವೇಳೆಗೆ ವಜ್ರಖಚಿತ ಚಲುವನಾರಾಯಣನ ವೈರಮುಡಿ ಉತ್ಸವ ನೆರವೇರಲಿದೆ.

Advertisement

ಜಿಲ್ಲಾ ಖಜಾನೆಯಿಂದ ಆಭರಣ ರವಾನೆ:
ಮಂಡ್ಯ ನಗರದ ಜಿಲ್ಲಾ ಖಜಾನೆಯಿಂದ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ವಜ್ರಖಚಿತ ಆಭರಣ ಹೊರಡಲಿದೆ. ಮೊದಲಿಗೆ ಆಭರಣಕ್ಕೆ ಪೂಜೆ ನಡೆಯಲಿದೆ. ನಂತರ ನಗರದ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ಆಭರಣಕ್ಕೆ ಪೂಜೆ ಸಲ್ಲಿಸಿ ಬಳಿಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೇಲುಕೋಟೆಯತ್ತ ಕೊಂಡೊಯ್ಯಲಾಗುವುದು.

ಯುಟ್ಯೂಬ್‌ನಲ್ಲಿ ವೀಕ್ಷಣೆ:
ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುತ್ತಿರುವುದರಿಂದ ಹೊರಗಿನ ಭಕ್ತರಿಗೆ ಮೇಲುಕೋಟೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಉತ್ಸವವನ್ನು ಭಕ್ತರು ಕಣ್ತುಂಬಿಕೊಳ್ಳಲು ಯುಟ್ಯೂಬ್, ಜಿಲ್ಲಾಧಿಕಾರಿ ವೆಬ್‌ಸೈಟ್ ಹಾಗೂ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರವಾಗಲಿದೆ.

ಇದನ್ನೂ ಓದಿ :ನಕ್ಸಲರ ಐಇಡಿ ಸ್ಪೋಟದಲ್ಲಿ 5 ಮಂದಿ ಯೋಧರು ಹುತಾತ್ಮ

ಕೋವಿಡ್ ಮಾರ್ಗಸೂಚಿಯಂತೆ ಆಚರಣೆ:
ಈ ಬಾರಿ ಸರಳವಾಗಿ ವೈರಮುಡಿ ಉತ್ಸವ ನಡೆಯಲಿದ್ದು, ಕೋವಿಡ್ ಮಾರ್ಗಸೂಚಿ ಅನ್ವಯ ಸರ್ಕಾರದ ಸೂಚನೆಯಂತೆ ಸರಳ ರೀತಿಯಲ್ಲಿ ಉತ್ಸವ ನಡೆಯಲಿದೆ. ಕಳೆದ ವರ್ಷ ಕೊರೊನಾ ಹೆಚ್ಚಾಗಿದ್ದರಿಂದ ಉತ್ಸವ ರದ್ದು ಮಾಡಲಾಗಿತ್ತು. ಈ ಬಾರಿಯೂ ಕೊರೊನಾ ೨ನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಸರಳ ಆಚರಣೆ ನಡೆಯುತ್ತಿದೆ.

Advertisement

ಪಾಂಡವಪುರ ಭಕ್ತರಿಗೆ ಪ್ರವೇಶ:
ಉತ್ಸವಕ್ಕೆ ಪಾಂಡವಪುರ ಹೊರತುಪಡಿಸಿ ಮಂಡ್ಯ ಜಿಲ್ಲೆಯ ಭಕ್ತರಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಇನ್ನು ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳಾದಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದರಿಂದ ಯಾರಿಗೂ ಸಹ ಈ ಬಾರಿ ಅವಕಾಶ ಕಲ್ಪಿಸಲಾಗಿಲ್ಲ.

50 ಸಿಬ್ಬಂದಿಗಳ ನೇಮಕ:
ಇನ್ನು ದೇವಾಲಯದ ಒಳಗೆ ಅರ್ಚಕರು ಸೇರಿ ಪೊಲೀಸ್ ಸಿಬ್ಬಂದಿಗಳಿಗೆ ಕೇವಲ 50 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಭಾಗವಹಿಸುವ ಪೊಲೀಸ್ ಸಿಬ್ಬಂದಿ, ಪತ್ರಕರ್ತರು, ಅರ್ಚಕರು ಹಾಗೂ ಇನ್ನಿತರರಿಗೆ ಗುರುತಿನ ಚೀಟಿ ಕಡ್ಡಾಯವಾಗಿದೆ.

ಕೋವಿಡ್ ಪರೀಕ್ಷೆ ಕಡ್ಡಾಯ:
ಆಗಮಿಸುವ ಭಕ್ತರಿಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ಮಾಡಲಿದ್ದು, ಕೊರೊನಾ ಪಾಸಿಟಿವ್ ಬಂದರೆ ಅವರನ್ನು ಅಲ್ಲಿಂದ ವಾಪಸ್ ಕಳುಹಿಸಲಾಗುವುದು. ಎರಡು ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸುತ್ತಿದ್ದು, ಪೊಲೀಸರು ಕಡ್ಡಾಯವಾಗಿ ತಪಾಸಣೆ ನಡೆಸಿ ಒಳಗೆ ಬಿಡಲಿದ್ದಾರೆ.

ಪೊಲೀಸ್ ಬಂದೋಬಸ್ತ್:
ಉತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, 4 ಡಿವೈಎಸ್ಪಿ, 16 ಸಿಪಿಐ, 31 ಪಿಎಸ್‌ಐ, 100 ಎಸ್‌ಐ, 432 ಪಿಸಿ, 2 ಕೆಎಸ್‌ಆರ್‌ಪಿ ತುಕಡಿ, 9 ಡಿಎಆರ್, 2 ಕ್ಯೂಆರ್‌ಟಿ ತಂಡವನ್ನು ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next