Advertisement

ಮೆಲ್ಕಾರ್‌ ಜಂಕ್ಷನ್‌: ಮೂಲ ಸೌಕರ್ಯ ಒದಗಿದರೆ ಉನ್ನತಿ ಖಚಿತ 

10:36 AM Aug 02, 2018 | |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಲ್ಕಾರ್‌ ಜಂಕ್ಷನ್‌ ಬಹಳ ಮುಖ್ಯವಾದುದು. ಪ್ರತಿಷ್ಠಿತ ಮಂಗಳೂರು ವಿವಿ ಸಹಿತ ವಿವಿಧ ಸ್ವಾಯತ್ತ ವಿದ್ಯಾಸಂಸ್ಥೆಗಳಿಗೆ ರಹದಾರಿಯಷ್ಟೇ ಅಲ್ಲ ; ಸುತ್ತಲಿನ ಗ್ರಾಮಗಳಿಗೆ, ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್‌.

Advertisement

ಇದರೊಂದಿಗೆ ಕೊಣಾಜೆ ಮಂಗಳ ಗಂಗೋತ್ರಿ, ದೇರಳಕಟ್ಟೆಯಲ್ಲಿ ನಿಟ್ಟೆ, ಯೇನಪೊಯ, ಫಾದರ್‌ ಮುಲ್ಲರ್‌ ಸ್ವಾಯತ್ತ ವಿದ್ಯಾ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್‌ ಸಹ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ 66ರ ವಾಹನ ದಟ್ಟಣೆಯಲ್ಲದೆ, ಈ ವಿದ್ಯಾಸಂಸ್ಥೆಗಳಿಗೆ ಸಹಸ್ರಾರು ವಿದ್ಯಾರ್ಥಿಗಳನ್ನು ಹೊತ್ತು ಸಾಗಿಸುವ ವಾಹನಗಳ ಒತ್ತಡವನ್ನೂ ಇದೇ ಜಂಕ್ಷನ್‌ ನಿಭಾಯಿಸಬೇಕು.

ದಿನವೊಂದಕ್ಕೆ ಈ ಜಂಕ್ಷನ್‌ ಮೂಲಕ ಸಜೀಪಮುನ್ನೂರು, ಮುಡಿಪು, ಕೊಣಾಜೆ, ಮಂಚಿ, ಸಾಲೆತ್ತೂರು, ದೇರಳಕಟ್ಟೆ ಮಾರ್ಗವಾಗಿ ಮಂಗಳೂರಿಗೆ 40 ಬಸ್‌ ಗಳು 120 ಟ್ರಿಪ್‌ ಮಾಡುತ್ತವೆ. ಬಿ.ಸಿ.ರೋಡ್‌ -ಕಾಸರಗೋಡಿಗೆ ಐದು ಸರಕಾರಿ ಬಸ್‌ಗಳು ಹತ್ತು ಟ್ರಿಪ್‌ ಮಾಡುತ್ತವೆ. ಪ್ರತೀ ಟ್ರಿಪ್‌ನಲ್ಲಿ ಕನಿಷ್ಠ 50 ಮಂದಿ ಎಂದು ಲೆಕ್ಕ ಹಾಕಿದರೂ ಕನಿಷ್ಠ 12 ಸಾವಿರ ಮಂದಿ ಸಂಚರಿಸುತ್ತಾರೆ. ಇದರೊಂದಿಗೆ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ಸೇರುತ್ತಾರೆ.

ಇನ್ನೇನು ವಿಶೇಷ
ಮಂಗಳವಾರ, ಶುಕ್ರವಾರ, ರವಿವಾರದಂದು ಇಲ್ಲಿನ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನವೊಂದಕ್ಕೆ ಕನಿಷ್ಠ 3-4 ಸಾವಿರ. ಇವರೂ ಹಾದು ಹೋಗುವುದು ಇದೇ ಜಂಕ್ಷನ್‌ ಮೂಲಕ. ಈ ದಿನಗಳಂದು ವಾಹನ ದಟ್ಟಣೆ ಇನ್ನೂ ಹೆಚ್ಚು. ಉಳಿದಂತೆ ಖಾಸಗಿ ವಾಹನ, ದ್ವಿಚಕ್ರ ವಾಹನಗಳ ಲೆಕ್ಕ ಹಿಡಿದರೆ ಇನ್ನೂ ಹೆಚ್ಚು. ಆದ ಕಾರಣ ಇದೊಂದು ಮಿನಿಪೇಟೆ.

ಸೌಲಭ್ಯ ಒದಗಿಸಿದರೆ ಅದೃಷ್ಟ
ಜಂಕ್ಷನ್‌ ಎಂಬುದು ಯಾವಾಗಲೂ ಪೇಟೆಯ ಅಭಿವೃದ್ಧಿಗೆ ಪೂರಕವಾದುದು. ಅದನ್ನು ಅರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ದುಡಿಸಿಕೊಳ್ಳುವುದು, ಬಿಡುವುದು ಸ್ಥಳೀಯ ಸಂಸ್ಥೆಗಳ ಲೆಕ್ಕಾಚಾರಕ್ಕೆ ಸಂಬಂಧಿಸಿದ್ದು. ಒಂದಿಷ್ಟು ವಾಹನ ನಿಲುಗಡೆ ಸೌಲಭ್ಯ, ಬಸ್‌ ಶೆಲ್ಟರ್‌, ಶೌಚಾಲಯ ಇತ್ಯಾದಿ ಸೌಲಭ್ಯ ಕಲ್ಪಿಸಬೇಕು. ಇವುಗಳನ್ನು ಲೆಕ್ಕ ಹಾಕಿದಾಗ ಮೇಲ್ಕಾರ್‌ ಜಂಕ್ಷನ್‌ನಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ.

Advertisement

ಕಳೆದ ವರ್ಷ ಇಲ್ಲೊಂದು ಬಸ್‌ ಬೇ ನಿರ್ಮಾಣ ಆಗಿತ್ತು. ಇಲ್ಲಿ ವೃದ್ಧರಿಗೆ ಕುಳಿತುಕೊಳ್ಳಲು ಆಸನ, ಮಹಿಳೆಯರಿಗೆ/ಪುರುಷರಿಗೆ ಪ್ರತ್ಯೇಕ ವಿಂಗಡಣೆ, ಬೀಸುವ ಗಾಳಿಗೆ, ರಭಸದ ಮಳೆಯಿಂದ ರಕ್ಷಿಸಿಕೊಳ್ಳಲು ವ್ಯವಸ್ಥೆಯೂ ಅಗತ್ಯವಿದೆ. ರಸ್ತೆಯ ಎರಡೂ ಬದಿಗಳಲ್ಲಿ ಬಸ್‌ ನಿಲುಗಡೆಗೆ ವ್ಯವಸ್ಥೆ ಆಗಬೇಕು. ಈಗ ಬಸ್‌ಗಳು ಹೆದ್ದಾರಿಯಲ್ಲಿಯೇ ನಿಲ್ಲುತ್ತವೆ. ಹಾಗಾಗಿ ವಾಹನ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಬಸ್‌ ನಿಲುಗಡೆಗೆ ಸ್ಥಳವನ್ನು ಗುರುತಿಸಿ ಖಾಸಗಿ ವಾಹನಗಳ ಪಾರ್ಕಿಂಗ್‌ಗೂ ಜಾಗ ಕಲ್ಪಿಸಬೇಕು.

ಆವಶ್ಯಕತೆ
ಮೆಲ್ಕಾರ್‌ ಜಂಕ್ಷನ್‌ನಲ್ಲಿ ಬಸ್‌ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಯೋಜಿತ ಕಸದ ತೊಟ್ಟಿ , ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಬೇಕು. ಬೆಳಗ್ಗೆ ಮತ್ತು ಸಂಜೆಯ ಜನ/ ವಾಹನ ನಿಬಿಡ ಸಮಯಕ್ಕೆ ಸೂಕ್ತ ಪೊಲೀಸ್‌ ಸಿಬಂದಿ ನಿಯೋಜನೆಯೂ ಅಗತ್ಯ. ಸಾರ್ವಜನಿಕರೂ ಈ ಸೌಕರ್ಯಗಳಿಗೆ ಆಗ್ರಹಿಸಬೇಕು.

ಸಂಪರ್ಕ
ವಿಟ್ಲ, ಉಪ್ಪಿನಂಗಡಿ, ಪುತ್ತೂರು, ಮಂಗಳೂರಿನಿಂದ ವಿವಿಧ ಊರುಗಳಿಗೆ, ರಾಷ್ಟ್ರ, ರಾಜ್ಯ ಕೇಂದ್ರಕ್ಕೆ ಸಂಪರ್ಕಿಸುವ ಎಲ್ಲ ವಾಹನಗಳು ಮೆಲ್ಕಾರ್‌ ಜಂಕ್ಷನ್‌ ಮೂಲಕವೇ ಹಾದು ಹೋಗಬೇಕು. ಅನ್ಯ ದಾರಿಯೇ ಇಲ್ಲ ಎಂಬುದು ಮೆಲ್ಕಾರ್‌ ಜಂಕ್ಷನ್‌ನ ಮಹತ್ವವಾಗಿದೆ. ಮಂಚಿ, ಸಾಲೆತ್ತೂರು, ಸಜೀಪಮುನ್ನೂರು, ಸಜೀಪಮೂಡ, ಸಜೀಪನಡು, ಸಜೀಪಪಡು, ಚೇಳೂರು, ಅಮೂrರು, ಕುರ್ನಾಡು, ಫಜೀರು ತನಕದ ಹತ್ತು ಗ್ರಾಮಗಳಿಗೆ ಮೆಲ್ಕಾರ್‌- ಕೊಣಾಜೆ ರಸ್ತೆ ನೇರವಾಗಿ ಸಂಪರ್ಕವಾಗಿದ್ದು ಮೆಲ್ಕಾರ್‌ ಜಂಕ್ಷನ್‌ ಮೂಲವಾಗಿದೆ.

ಜಮೀನು ನೀಡಿದರೆ ಸೌಲಭ್ಯ
ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸುವ ಆಸಕ್ತಿ ಇದೆ. ಆದರೆ ಇಲ್ಲಿ ಪುರಸಭೆಯ ಸ್ವಂತ ಜಮೀನಿಲ್ಲ. ಅನೇಕ ಸಂಘ ಸಂಸ್ಥೆಗಳು, ಸಂಘಟನೆಗಳು, ಕ್ಲಬ್‌ ಗಳು ಅವರದೇ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಮುಂದೆ ಬಂದಿದ್ದವು. ಕೆಲವೆಡೆ ಸ್ಥಳೀಯ ಉದ್ಯಮಿಗಳು ಆಕ್ಷೇಪಿಸಿದರು. ಹೆದ್ದಾರಿ ಇಲಾಖೆ ಸೂಕ್ತ ಜಮೀನು ನೀಡಿದರೆ ಪುರಸಭೆ ಅನುದಾನ ಹೊಂದಾಣಿಕೆ ಮಾಡಿ ಶೌಚಾಲಯ, ತಂಗುದಾಣ ಕಲ್ಪಿಸಬಹುದು.
– ಪಿ.ರಾಮಕೃಷ್ಣ ಆಳ್ವ,
ಅಧ್ಯಕ್ಷರು , ಬಂಟ್ವಾಳ ಪುರಸಭೆ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next