Advertisement

36ರ ಮುಖಭಂಗ ಮರೆಸೀತೇ ಮೆಲ್ಬರ್ನ್?

12:56 AM Dec 25, 2020 | sudhir |

ಮೆಲ್ಬರ್ನ್: ಅಡಿಲೇಡ್‌ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ 36 ರನ್ನಿಗೆ ಅಡಿಮೇಲಾದ ಟೀಮ್‌ ಇಂಡಿಯಾದ ಮುಂದೀಗ ಮೆಲ್ಬರ್ನ್ನ “ಬಾಕ್ಸಿಂಗ್‌ ಡೇ ಟೆಸ್ಟ್‌’ ಸವಾಲು ಎದುರಾಗಿದೆ. ಸಂಪ್ರದಾಯದಂತೆ ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನ‌ಲ್ಲಿ ಶನಿವಾರದಿಂದ ಈ ಪಂದ್ಯ ಮೊದಲ್ಗೊಳ್ಳಲಿದ್ದು, ಭಾರತದ ಮುಖ ಭಂಗವನ್ನು ಮರೆಸೀತೇ ಎಂಬುದೊಂದು ನಿರೀಕ್ಷೆ.

Advertisement

ಆದರೆ 36ರ ಆ ಘೋರ ಪತನ ವನ್ನು ಮರೆಯುವುದು ಅಷ್ಟು ಸುಲಭ ವಲ್ಲ. ಆಸ್ಟ್ರೇಲಿಯವನ್ನೂ ಇದೇ ರೀತಿ ಬಗ್ಗುಬಡಿದು ಸರಣಿಯನ್ನು ಸಮ ಬಲಕ್ಕೆ ತಂದು ನಿಲ್ಲಿಸಿದರಷ್ಟೇ ಭಾರತ ಕ್ಕೊಂದು ಘನತೆ. ಇಲ್ಲಿ ಡ್ರಾ ಕೂಡ ಪರ್ಯಾಯವಲ್ಲ. ಅಕಸ್ಮಾತ್‌ ಮೆಲ್ಬರ್ನ್ ನಲ್ಲೂ ಮುಗ್ಗರಿಸಿದರೆ ಭಾರತ ತಂಡದ ಮೇಲಿನ ಅಳಿದುಳಿದ ನಂಬಿಕೆ ಕೂಡ ಹೊರಟು ಹೋಗುತ್ತದೆ. ಕೋಚ್‌ ರವಿ ಶಾಸ್ತ್ರೀ, ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಹಾಗೂ ಇಡೀ ತಂಡದ ಮೇಲೆ ಭಾರತೀಯ ಕ್ರಿಕೆಟಿನ ಪ್ರತಿಷ್ಠೆ ಹಾಗೂ ಭವಿಷ್ಯ ನಿಂತಿದೆ.

ಟೆಸ್ಟ್‌ ಪಿಲ್ಲರ್‌ಗಳೇ ಇಲ್ಲ!
ಟೀಮ್‌ ಇಂಡಿಯಾದ ದೊಡ್ಡ ಸಮಸ್ಯೆಯೆಂದರೆ “ಟೆಸ್ಟ್‌ ಪಿಲ್ಲರ್‌’ಗಳೇ ಇಲ್ಲದಿರುವುದು. ವಿರಾಟ್‌ ಕೊಹ್ಲಿ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ, ರೋಹಿತ್‌ ಶರ್ಮ ಅವರ ಅನುಪಸ್ಥಿತಿ ಪ್ರವಾಸಿಗರನ್ನು ಗಂಭೀರವಾಗಿ ಕಾಡು ತ್ತಿದೆ. ಆಸ್ಟ್ರೇಲಿಯದಲ್ಲಿ ಯಾವತ್ತೂ ಘಾತಕ ಬೌಲಿಂಗ್‌ ದಾಳಿ ನಡೆಸುವ ಇಶಾಂತ್‌ ಈ ಬಾರಿ ಕಾಂಗರೂ ನಾಡಿಗೆ ಆಗಮಿಸದಿರುವುದು ಭಾರತಕ್ಕೆ ಬಿದ್ದ ದೊಡ್ಡ ಹೊಡೆತ. ರೋಹಿತ್‌ ಶರ್ಮ ಆಗಮಿಸಿದರೂ ಅವರ ಕ್ವಾರಂಟೈನ್‌ ಇನ್ನೂ ಮುಗಿದಿಲ್ಲ. ಒಟ್ಟಾರೆ, ಕಳೆದ ಸಲ ಕಾಂಗರೂ ನಾಡಿನಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪಾಲಿಗೆ ಈ ಪ್ರವಾಸ ದೊಡ್ಡ ಪ್ರಯಾಸದ ಸೂಚನೆಯೊಂದನ್ನು ರವಾನಿಸಿದೆ.

ಕಾದಿದೆ ಭಾರೀ ಬದಲಾವಣೆ
ಟೀಮ್‌ ಇಂಡಿಯಾ ಬಾಕ್ಸಿಂಗ್‌ ಡೇ ಪಂದ್ಯಕ್ಕೆ ಭಾರೀ ಬದಲಾವಣೆ ಮಾಡಿ ಕೊಳ್ಳುವುದು ಅನಿವಾರ್ಯ. ಆದರೆ ಇದೇ ದೊಡ್ಡ ಗೊಂದಲವಾಗಿ ಪರಿಣಮಿಸಿದೆ. ಅಡಿಲೇಡ್‌ ಟೆಸ್ಟ್‌ ವೇಳೆ ಒಂದು ದಿನ ಮುಂಚಿತವಾಗಿ ತಂಡವನ್ನು ಅಂತಿಮ ಗೊಳಿಸಿದ್ದ ಭಾರತವಿಲ್ಲಿ ಟಾಸ್‌ ಸಮಯದ ವರೆಗೂ ಹನ್ನೊಂದರ ಬಳಗದ ಲೆಕ್ಕಾಚಾರ ದಲ್ಲೇ ಮುಳುಗಿರುವುದು ಖಂಡಿತ!
ಗಿಲ್‌, ರಾಹುಲ್‌, ಜಡೇಜ, ಪಂತ್‌, ಸೈನಿ, ಸಿರಾಜ್‌ ಅವರೆಲ್ಲ ಲೈನ್‌ನಲ್ಲಿ ದ್ದಾರೆ. ಶಾ, ಸಾಹಾ ಅಸಹಾಯಕ ಸ್ಥಿತಿ ಯಲ್ಲಿದ್ದಾರೆ. ಆದರೆ ಯಾರೇ ಬಂದರೂ ನಿಂತು ಆಡದೇ ಹೋದರೆ ಯಾವ ಪ್ರಯೋಜನವೂ ಇಲ್ಲ.

ಕಳೆದ ಸಲ ಒಲಿದಿತ್ತು ಮೆಲ್ಬರ್ನ್
ವಿಶ್ವದ ಪ್ರಪ್ರಥಮ ಟೆಸ್ಟ್‌ ತಾಣವಾದ ಮೆಲ್ಬರ್ನ್ ಕ್ರಿಕೆಟ್‌ ಅಂಗಳಕ್ಕೆ 143 ವರ್ಷಗಳ ಸುದೀರ್ಘ‌ ಹಾಗೂ ಭವ್ಯ ಇತಿಹಾಸವಿದೆ. ಭಾರತ ಸ್ವಾತಂತ್ರ್ಯ ಲಭಿಸಿದ ಬೆನ್ನಲ್ಲೇ 1948ರಲ್ಲಿ ಇಲ್ಲಿ ಟೆಸ್ಟ್‌ ಆಡಲಾರಂಭಿಸಿತ್ತು. ಈ ವರೆಗೆ ಮೆಲ್ಬರ್ನ್ ನಲ್ಲಿ 13 ಟೆಸ್ಟ್‌ ಆಡಿದ್ದು, ಮೂರನ್ನಷ್ಟೇ ಗೆದ್ದು, ಎಂಟರಲ್ಲಿ ಸೋಲನುಭವಿಸಿದೆ. ಉಳಿದೆರಡು ಪಂದ್ಯ ಡ್ರಾಗೊಂಡಿದೆ.

Advertisement

2018ರ ಪ್ರವಾಸದಲ್ಲಿ ಭಾರತದ ಸರಣಿ ಜಯದಲ್ಲಿ ಮೆಲ್ಬರ್ನ್ ಜಯ ಭೇರಿ ಪ್ರಮುಖ ಪಾತ್ರ ವಹಿಸಿದ್ದನ್ನು ಮರೆ ಯುವಂತಿಲ್ಲ. ಕೊಹ್ಲಿ ಪಡೆ ಇದನ್ನು 137 ರನ್ನುಗಳ ದೊಡ್ಡ ಅಂತರದಿಂದ ಜಯಿಸಿ 2-1 ಮುನ್ನಡೆ ಸಾಧಿಸಿತ್ತು. ಪೂಜಾರ ಶತಕ, ಬುಮ್ರಾ 9 ವಿಕೆಟ್‌ ಬೇಟೆ ಹೈಲೈಟ್‌ ಆಗಿತ್ತು.

ಇದು ಅಗರ್ವಾಲ್‌ ಅವರ ಪದಾರ್ಪಣ ಟೆಸ್ಟ್‌ ಕೂಡ ಆಗಿತ್ತು. 76 ಹಾಗೂ 42 ರನ್‌ ಹೊಡೆದು ತಮ್ಮ ಟೆಸ್ಟ್‌ ಪ್ರವೇಶವನ್ನು ಸಾರ್ಥಕಪಡಿಸಿಕೊಂಡಿದ್ದರು. ಇವ ರೊಂದಿಗೆ ಹನುಮ ವಿಹಾರಿ ಇನ್ನಿಂಗ್ಸ್‌ ಆರಂಭಿಸಿದ್ದರು. ಅಂದಿನ ಈ ಮೂರೂ ಹೀರೋಗಳು ಈ ತಂಡದಲ್ಲೂ ಇದ್ದಾರೆ ಎಂಬುದೊಂದು ಸಮಾಧಾನದ ಸಂಗತಿ.

ಭಾರತಕ್ಕೆ ಹೇಳಿಸಿದ ಪಿಚ್‌
ಭಾರತ ತನ್ನ ಟೆಸ್ಟ್‌ ಇತಿಹಾಸದ ನಿಕೃಷ್ಟ ಸ್ಕೋರ್‌ ದಾಖಲಿಸಿದರೂ ಆತಿಥೇಯರ ಮೇಲೆ ತಿರುಗಿ ಬೀಳುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂಬುದಾಗಿ ಆಸ್ಟ್ರೇಲಿಯದ ಮಾಜಿಗಳನೇಕರು ಹೇಳಿದ್ದಾರೆ. ಇವರಲ್ಲಿ ಮಾಜಿ ಕೋಚ್‌ ಡ್ಯಾರನ್‌ ಲೇಹ್ಮನ್‌ ಕೂಡ ಒಬ್ಬರು. ಮೆಲ್ಬರ್ನ್ ಪಿಚ್‌ ಭಾರತದ ಬ್ಯಾಟ್ಸ್‌ಮನ್‌ಗಳಿಗೆ, ಅದರಲ್ಲೂ ಪೂಜಾರ, ರಹಾನೆ ಶೈಲಿಯ ಆಟಕ್ಕೆ ಹೆಚ್ಚಿನ ನೆರವು ನೀಡಲಿದೆ ಎಂದಿದ್ದಾರೆ.

ಆದರೆ ಅಡಿಲೇಡ್‌ ಟೆಸ್ಟ್‌ ಪಂದ್ಯದ ಗಾಯ ಮಾತ್ರ ಅಷ್ಟು ಸುಲಭದಲ್ಲಿ ಮಾಸು ವಂಥದ್ದಲ್ಲ. ಇದರ ಮೇಲೆ ಭಾರತ ಬರೆ ಹಾಕಿಸಿಕೊಳ್ಳದಿರಲಿ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next