Advertisement

Tehsildar office: 9 ತಹಶೀಲ್ದಾರ್‌ ಕಚೇರಿ ಮೇಲೆ ಮೆಗಾ ರೇಡ್‌!

12:00 PM Jan 21, 2024 | Team Udayavani |

ಬೆಂಗಳೂರು: ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ 9 ತಹ ಶೀಲ್ದಾರ್‌ ಕಚೇರಿಗಳ ಮೇಲೆ ಶನಿವಾರ ದಿಢೀರ್‌ ದಾಳಿ ನಡೆಸಿದ ಲೋಕಾಯುಕ್ತ ಸಿಬ್ಬಂದಿಗಳು ಅಲ್ಲಿನ ಅಧಿಕಾರಿಗಳ ಕರ್ತವ್ಯ ಲೋಪ, ಅವ್ಯವಹಾರಗಳನ್ನು ಬಯಲಿಗೆಳೆದಿದ್ದಾರೆ.

Advertisement

ಬೆಂಗಳೂರು ನಗರದಲ್ಲಿ 5 ಹಾಗೂ ಗ್ರಾಮಾಂತರದಲ್ಲಿ 4 ತಹಶೀಲ್ದಾರ್‌ ಕಚೇರಿಗೆ ಮಧ್ಯಾಹ್ನ 12 ಗಂಟೆಗೆ ಏಕಕಾಲಕ್ಕೆ ದಾಳಿ ನಡೆದಿದೆ. ಜಿಲ್ಲಾ ನ್ಯಾಯಾಧೀಶರು, ಎಸ್‌ಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ ಒಳಗೊಂಡ ಪ್ರತ್ಯೇಕ 9 ತಂಡ ರಚಿಸಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕಂದಾಯ ಭವನದಲ್ಲಿರುವ ಉತ್ತರ ಹಾಗೂ ದಕ್ಷಿಣ ತಹಶೀಲ್ದಾರ್‌ ಕಚೇರಿ, ಯಲಹಂಕ ತಹಶೀಲ್ದಾರ್‌ ಕಚೇರಿಗಳಿಗೆ ಖುದ್ದು ಲೋಕಾಯುಕ್ತ ನ್ಯಾ.ಬಿ.ಎಸ್‌ .ಪಾಟೀಲ್‌ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಇನ್ನು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಹಶೀಲ್ದಾರ್‌ ಕಚೇರಿ ಮೇಲೆ ಉಪ ಲೋಕಾಯುಕ್ತ ನ್ಯಾ.ಕೆ.ಎನ್‌.ಫ‌ಣೀಂದ್ರ ನೇತೃತ್ವದ ತಂಡವು ದಾಳಿ ನಡೆಸಿದೆ.

ಹಲವು ಅಕ್ರಮಗಳು ಬೆಳಕಿಗೆ: ಬೆಂಗಳೂರು ಉತ್ತರ ತಹಶೀಲ್ದಾರ್‌ ಕಚೇರಿಗೆ ಲೋಕಾಯುಕ್ತರು ತೆರಳಿದಾಗ ಅಲ್ಲಿ ತಹಶೀಲ್ದಾರರೇ ಇರಲಿಲ್ಲ. ಇಲ್ಲಿನ ಸಿಬ್ಬಂದಿ ಅರ್ಜಿ ತೆಗೆದುಕೊಂಡು ಸಕಾಲ ದಲ್ಲಿ ನಮೂದಿಸದೇ ಸಾರ್ವಜನಿಕರನ್ನು ಸತಾಯಿಸುತ್ತಿದ್ದ ಸಂಗತಿ ಗೊತ್ತಾಗಿದೆ. ಅಲ್ಲಿನ ತಹಶೀಲ್ದಾರ್‌ ಕಳೆದ 15 ದಿನಗಳಿಂದ ಕಚೇರಿಗೆ ಬಾರದೇ, ಒಂದು ಕಡತಕ್ಕೂ ಸಹಿ ಹಾಕದಿರುವುದುಪತ್ತೆಯಾಗಿದೆ. ಇನ್ನು ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ಕಚೇರಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಇಲ್ಲಿ ಸಾವಿರಾರು ಅರ್ಜಿಗಳನ್ನು ವಿಲೇವಾರಿ ಮಾಡದಿರುವುದು ಕಂಡು ಬಂದಿದೆ.

ಲಂಚಕ್ಕೆ ಬೇಡಿಕೆ: ಯಲಹಂಕ ತಹಶೀಲ್ದಾರ್‌ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರ ಜಾಗಕ್ಕೆ ತೆರಳಲು ಕಾಲುದಾರಿ ಇದೆ ಎಂದು ವಿಲೇಜ್‌ ಮ್ಯಾಪ್‌ನಲ್ಲಿ ನಮೂದಾಗಿತ್ತು. ಆದರೆ, ಪಕ್ಕದ ಸರ್ವೆ ನಂಬರ್‌ ನವರು ಆ ಕಾಲು ದಾರಿಯನ್ನು ಒತ್ತುವರಿ ಮಾಡಿಕೊಂಡಿದ್ದರು. ಕಳೆದ 6 ವರ್ಷಗಳಿಂದ ಈ ವ್ಯಕ್ತಿ ತಹಶೀಲ್ದಾರ್‌ ಕಚೇರಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಆ ವ್ಯಕ್ತಿಯ ನೆರೆ ಹೊರೆ ಯವರು ಈ ವಿಚಾರವನ್ನು ಲೋಕಾಯುಕ್ತರ ಗಮನಕ್ಕೆ ತಂದರು. ದಾಳಿಯಾದ ಇತರ ತಾಲೂಕು ಕಚೇರಿಗಳಲ್ಲೂ ಅಧಿಕಾರಿಗಳು ಅರ್ಜಿ ವಿಲೇವಾರಿ ಬಾಕಿ ಉಳಿಸಿಕೊಂಡಿರುವುದು, ಏಜೆಂಟರ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಲೋಕಾಯುಕ್ತ ಸಿಬ್ಬಂದಿ ಗಮನಕ್ಕೆ ಬಂದಿದೆ.

ಕ್ರಿಕೆಟ್‌ ಆಟ ಮೊಬೈಲ್‌ನಲ್ಲಿ ಸೆರೆಹಿಡಿದ ಲೋಕಾಯುಕ್ತರು :  ಯಲಹಂಕ ತಹಶೀಲ್ದಾರ್‌ ಕಚೇರಿಗೆ ಲೋಕಾಯುಕ್ತರು ತೆರಳಿದಾಗ ಅಲ್ಲಿ ತಹಶೀಲ್ದಾರ್‌, ಉಪ ತಹಶೀಲ್ದಾರ್‌ ಸೇರಿ ಅರ್ಧ ಸಿಬ್ಬಂದಿ ಕಚೇರಿಯಲ್ಲಿ ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಕ್ರಿಕೆಟ್‌ ಪಂದ್ಯ ಆಯೋಜಿಸಿ ಆಟವಾಡುತ್ತಿದ್ದ ಸಂಗತಿ ಗೊತ್ತಾಗಿದೆ. ಮತ್ತೂಂದೆಡೆ ಸಾರ್ವಜನಿಕರು ಅಧಿಕಾರಿಗಳಿಲ್ಲದೇ ಪರದಾಡುತ್ತಿರುವುದು ಬೆಳಕಿಗೆ ಬಂದಿತ್ತು. ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಕ್ರಿಕೆಟ್‌ ಆಡುತ್ತಿರುವುದನ್ನು ಲೋಕಾಯುಕ್ತರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

Advertisement

ಏಕಾಏಕಿ ದಾಳಿ ಮಾಡಿದ್ದು ಏಕೆ? :

ತಾಲೂಕು ಕಚೇರಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅವ್ಯವಹಾರ, ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಗಿಂದಾಗ್ಗೆ ಲೋಕಾಯುಕ್ತ ಸಂಸ್ಥೆಯ ಗಮನ ಸೆಳೆಯುತ್ತಿದ್ದರು. ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂದು ಲೋಕಾಯುಕ್ತಕ್ಕೆ ಪದೇ ಪದೆ ದೂರುಗಳು ಬರುತ್ತಿದ್ದವು. ಲೋಕಾಯುಕ್ತರು ಸಂಸ್ಥೆಯ ಅಧಿಕಾರಿಗಳ ಮುಖಾಂತರ ಗೌಪ್ಯ ತನಿಖೆ ನಡೆಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ತನಿಖೆಯಲ್ಲಿ ಅಲ್ಲಿನ ಅಕ್ರಮಗಳು ಖಾತ್ರಿಯಾಗಿತ್ತು. ಲೋಕಾಯುಕ್ತ ಸಂಸ್ಥೆಯಲ್ಲಿಯೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ತಾಲೂಕು ಕಚೇರಿಗಳಿಗೆ ಸಂಬಂಧಿಸಿದಂತೆ 599 ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತಾಲೂಕು ಕಚೇರಿಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಈ ಪ್ರಕರಣಗಳು ಪುಷ್ಟಿಕರಿಸುತ್ತವೆ.

ಕಚೇರಿಗೆ ಬಾರದ ಅಧಿಕಾರಿಗೆ ತರಾಟೆ :

ಹಲವು ವರ್ಷಗಳಿಂದ ಖಾತಾ ಆಗಲಿಲ್ಲ, ಅರ್ಜಿ ವಿಲೇವಾರಿ ಮಾಡಲಿಲ್ಲ ಎಂಬ ಹತ್ತಾರು ದೂರುಗಳನ್ನು ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಬಳಿ ಸಂತ್ರಸ್ತರು ಹಂಚಿಕೊಂಡರು. ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್‌ ನೀಡಿ ಲೋಕಾಯುಕ್ತ ಕಚೇರಿಗೆ ಕರೆಯಿಸಿ ಈ ಬಗ್ಗೆ ವಿವರಣೆ ಪಡೆದು ಸಮಸ್ಯೆ ಬಗೆಹರಿಸುವುದಾಗಿ ನ್ಯಾ.ಬಿ.ಎಸ್‌.ಪಾಟೀಲ್‌ ಭರವಸೆ ನೀಡಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ನ್ಯಾ.ಬಿ.ಎಸ್‌ .ಪಾಟೀಲ್‌, ಕರ್ತವ್ಯ ಲೋಪ ಮಾಡಿರುವುದು ಕಂಡು ಬಂದರೆ ಕೂಡಲೇ ನಿಮ್ಮ ಅಮಾನತಿಗೆ ಶಿಫಾರಸು ಮಾಡುತ್ತೇನೆ. ಕಚೇರಿಗೆ ಬಾರದಿರುವುದು ಸೇರಿ ಸೂಕ್ತ ಕೆಲಸ ನಿರ್ವಹಿಸದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next