Advertisement

ಜಿಇಗೆ ಕಾರ್ಮಿಕ ಅಧಿಕಾರಿಗಳ ಭೇಟಿ

10:53 AM May 20, 2018 | Team Udayavani |

ಶಹಾಬಾದ: ನಗರದ ಜಿಇ ಕಾರ್ಖಾನೆ ಕಾನೂನು ಬಾಹಿರವಾಗಿ ಕಂಪನಿಯ ಮುಖ್ಯದ್ವಾರ ಮುಚ್ಚಿ ಕಾರ್ಮಿಕರಿಗೆ ಶೋಷಣೆ ಮಾಡುತ್ತಿರುವ ಬಗ್ಗೆ ಕಾರ್ಮಿಕರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ತಂಡ ಜಿಇ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿತು.

Advertisement

ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಅವರ ತಂಡ ಹಾಗೂ ಸಿಪಿಐ ಆನಂದರಾವ ಜಿಇ ಕಾರ್ಖಾನೆಯ ಮುಖ್ಯದ್ವಾರಕ್ಕೆ ಬೀಗ ಹಾಕಿರುವುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಿಪಿಐ ಆನಂದರಾವ ಕಾರ್ಖಾನೆ ಕಾವಲುಗಾರರಾಗಿ ನೇಮಕವಾದ ಸುಮಾರು 11 ಸುರಕ್ಷತಾ ಸಿಬ್ಬಂದಿ ಕಾರ್ಖಾನೆ ಒಳಗಡೆ ಇದ್ದಾರೆ. ಅವರಿಗೆ ಕುಡಿಯಲು ನೀರಿಲ್ಲ ಹಾಗೂ ತಿನ್ನಲು ಆಹಾರವಿಲ್ಲ. ಸುಮಾರು ನಾಲ್ಕು ದಿನಗಳಿಂದ ಕಂಪನಿಯ ಒಳಗಡೆ ಪರದಾಡುತ್ತಿದ್ದಾರೆ. ಅಲ್ಲದೇ ಕಾರ್ಮಿಕರು ಯಾವುದೇ ಆಹಾರ ನೀಡಲು ಕೊಡುತ್ತಿಲ್ಲ. ಏನಾದರೂ ಅನಾಹುತವಾದರೆ ಯಾರು ಜವಾಬ್ದಾರರು ಎಂದು ಸಿಪಿಐ ಆನಂದರಾವ ಕಾರ್ಮಿಕ ಅಧಿಕಾರಿ ಗಮನಕ್ಕೆ ತಂದರು. ಆಗ ಜಿಲ್ಲಾ ಕಾರ್ಮಿಕ ಅಧಿಕಾರಿ ಸುರಕ್ಷತಾ ಸೂಪರ್‌ ವೈಸರ್‌ ವೀರಣ್ಣ ಅವರಿಗೆ ಆಹಾರ ಸೇವನೆ ಇಲ್ಲದೇ ಹೆಚ್ಚು ಕಮ್ಮಿ ಏನಾದರೂ ಆದರೆ ಯಾರು ಜವಾಬ್ದಾರರು. ಮೊದಲು ಗೇಟಿನ ಕೀಲಿ ತೆಗೆದು ಊಟ ಮಾಡಿ ಬನ್ನಿ. ಪಾಳಿಗೊಬ್ಬರಂತೆ ಕೆಲಸ ಮಾಡಿ ಎಂದರು. ಆದರೆ ಸುರಕ್ಷತಾ ಸೂಪರ್‌ ವೈಸರ್‌ ವೀರಣ್ಣ ನಮ್ಮ ಹತ್ತಿರ ಕೀಲಿ ಕೈ ಇಲ್ಲ ಎಂದರು. ಅಲ್ಲದೇ ಸುರಕ್ಷತಾ ಮೇಲಾಧಿಕಾರಿಗಳಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದರೂ ಯಾವುದಕ್ಕೂ ಸ್ಪಂದಿಸಲಿಲ್ಲ. ಸಿಪಿಐ ಆನಂದರಾವ್‌ ಕೀಲಿ ತೆಗೆಯುವಂತೆ ತಿಳಿಸಿದರೂ ತೆಗೆಯಲಿಲ್ಲ. ಇವರು ಕಾರ್ಮಿಕ ಅಧಿಕಾರಿಗಳ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ ಎಂದರೆ ನಮಗೆ ಹೇಗೆ ಕೊಡುತ್ತಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ನಾವು ಕೆಲಸಗಾರರು ಸರ್‌.ಜಿಇ ಕಂಪನಿಯವರು ಹೇಳಿದಂತೆ ನಾವು ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ಬಿಟ್ಟರೆ ಮತ್ತೇನು ಹೇಳಲು ಸುರಕ್ಷತಾ ಸಿಬ್ಬಂದಿ ಹಿಂಜರಿಯುತ್ತಿರುವದು ಕಂಡು ಬಂತು.

ಕಾರ್ಮಿಕ ಮುಖಂಡರಾದ ಸತ್ಯನಾರಾಯಣ ಜೋಷಿ, ಮಹಾದೇವ ಮಾನಕರ್‌, ಭೀಮರಾಯ ಸಿರಗೊಂಡ, ದಾವೂದ್‌ ಹುಸೇನ್‌, ಜಿ.ರಮೇಶ, ಶರಣು ಪಾಟೀಲ, ಸುಧಾಕರ, ವಿರೇಂದ್ರ, ಸೂರ್ಯಕಾಂತ ಕಲಾಲ, ನಿಂಗಣ್ಣ ಕಾರೊಳ್ಳಿ, ಸ್ಟಾನಿಲಿ, ಜಾನ್‌, ಮಹೇಶ ಹೀರಾಳ ಹಾಗೂ ಇನ್ನಿತರರ ಕಾರ್ಯಕರ್ತರು ಹಾಜರಿದ್ದರು. 

ಯಾವುದೇ ಮುನ್ಸೂಚನೆಯಿಲ್ಲದೇ ಕಾರ್ಖಾನೆ ಆಡಳಿತ ಮಂಡಳಿ ಮುಖ್ಯ ದ್ವಾರ ಬಂದ್‌ ಮಾಡುವ ಕ್ರಮ ಕೈಗೊಂಡಿರುವುದರಿಂದ ಕಾರ್ಮಿಕರು ಕಂಗಾಲಾಗಿದ್ದಾರೆ. ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಒಮ್ಮಿಂದೊಮ್ಮೆಲೆ ಈ ರೀತಿ ಮಾಡಿರುವ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು.ಅಲ್ಲದೇ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು.
ಸತ್ಯನಾರಾಯಣ ಜೋಷಿ, ಜಿಇ ಕಾರ್ಮಿಕ ಮುಖಂಡ

ಮುನ್ಸೂಚನೆಯಿಲ್ಲದೇ ಹಾಗೂ ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸದೆ ಕಾರ್ಖಾನೆ ಗೇಟ್‌ ಬಂದ್‌ ಮಾಡಿರುವುದು ಕಾನೂನು ಬಾಹಿರ ಕ್ರಮ. ಈಗಾಗಲೇ ಕಾರ್ಮಿಕ ಆಯುಕ್ತರ ಬಳಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿ ಕ್ರಮ ಕೈಗೊಂಡಿರುವುದು ಸರಿಯಲ್ಲ. ಈಗಾಗಲೇ ಜಿಲ್ಲಾ ಕಾರ್ಮಿಕ ಆಯುಕ್ತರ ಆದೇಶದ ಮೇರೆಗೆ ನಾವು ಬೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಮೇ 21ರಂದು ಆಯುಕ್ತರು ಕಾರ್ಮಿಕ ಮುಖಂಡರಿಗೆ ಹಾಗೂ ಕಂಪನಿ ಆಡಳಿತ ಮಂಡಳಿ ಸಭೆ ಕರೆಯಲಾಗಿದೆ.
ಶ್ರೀಹರಿ ದೇಶಪಾಂಡೆ,ಜಿಲ್ಲಾ ಕಾರ್ಮಿಕ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next