Advertisement

ಮೀರಾ-ಭಾಯಂದರ್‌ ಚುನಾವಣೆ : ತುಳು-ಕನ್ನಡಿಗ ಅಭ್ಯರ್ಥಿಗಳ ಸಭೆ

04:45 PM Jul 21, 2017 | Team Udayavani |

ಮುಂಬಯಿ: ರಾಜ್ಯದ ಮಂತ್ರಿಗಳು, ಸಂಸದರು, ಶಾಸಕರು, ನಗರ ಸೇವಕ ಹಾಗೂ ವಿವಿಧ ಪಕ್ಷಗಳ ಧುರೀಣರು ಮೀರಾ-ಭಾಯಂದರ್‌ ಪರಿಸರದ ತುಳು-ಕನ್ನಡಿಗರ ಕಾರ್ಯಸಾಧನೆಯನ್ನು ಮೆಚ್ಚಿ ಪ್ರಶಂಸಿಸಿದ್ದಾರೆ. ಪೂಜಾ ಮಂದಿರಗಳು, ಧಾರ್ಮಿಕ ಸಂಸ್ಥೆಗಳು, ಜಾತಿ, ಸಂಘಟನೆಗಳು ಸೇರಿದಂತೆ ತುಳು-ಕನ್ನಡಿಗರ ಸುಮಾರು 55 ಸಂಘ-ಸಂಸ್ಥೆಗಳಿವೆ. ಪ್ರತಿಯೊಂದು ಕಾರ್ಯಕಲಾಪ ಪರಸ್ಪರ ಸಹಕಾರದಿಂದ ಯಶಸ್ವಿಯಾಗಿದೆೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ನಾವೆಲ್ಲ ಒಂದೇ ಸೂರಿನಡಿ ಸಂಘಟಿತರಾಗಿ ಮೀರಾ-ಭಾಯಂದರ್‌ ಮಹಾನಗರ ಪಾಲಿಕೆಯ ಚುನಾವಣೆಯನ್ನು ಎದುರಿಸಬೇಕು. ಪಕ್ಷ ಮತ ಭೇದ ಮರೆತು ತುಳು-ಕನ್ನಡಿಗರನ್ನು ನಗರ ಸೇವಕರನ್ನಾಗಿ ಆಯ್ಕೆಮಾಡಬೇಕು. ಇದೇ ಸಿದ್ಧಾಂತದಲ್ಲಿ ನಾವೆಲ್ಲ ಅವಿರತರಾಗಿ ಶ್ರಮಿಸಬೇಕು ಎಂದು ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಹೇಳಿದರು.

Advertisement

ಜು. 19ರಂದು ಮೀರಾರೋಡ್‌ ಪೂರ್ವದ ಮೀರಾ-ಭಾಯಂದರ್‌ ರೋಡ್‌ ಸಮೀಪದ ಪಯ್ಯಡೆ ಹೊಟೇಲ್‌ ಸಭಾಗೃಹದಲ್ಲಿ ನಡೆದು ಮುಂಬರುವ ಮೀರಾ-ಭಾಯಂದರ್‌  ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಸಕ್ತ ತುಳು-ಕನ್ನಡಿಗ ಅಭ್ಯರ್ಥಿಗಳ ವಿಚಾರ-ವಿನಿಮಯ, ಪೂರ್ವ ಸಿದ್ಧತೆಗಳ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ವಿವಿಧ ರಾಜಕೀಯ ಪಕ್ಷಗಳ ನೇತಾರರು ತುಳು ಕನ್ನಡಿಗರ ವೇದಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಸ್ಯೆಗಳ ಪರಿಹಾರಕ್ಕೆ ಭರವಸೆ ನೀಡಿದ್ದಾರೆ. ಮತದಾನದ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಹಕರಿಸಿದ್ದೇವೆ. ಇಂದು ನಮಗೆ ಸನ್ನಿವೇಶ, ಸಂದರ್ಭಗಳು ಕೂಡಿ ಬಂದಿವೆ. ಇದೇ ಅವಕಾಶವನ್ನು ಸದುಪಯೋಗಿಸಿಕೊಂಡು ತುಳು-ಕನ್ನಡಿಗರ ಜನ ಸಂಖ್ಯೆಯ ಶಕ್ತಿ ಪ್ರದರ್ಶಿಸಿ ಆದಷ್ಟು ಹೆಚ್ಚಿನ ರಾಜಕೀಯ ಪಕ್ಷವಾಗಲಿ, ಸ್ವತಂತ್ರ ಅಭ್ಯರ್ಥಿಯಾಗಲಿ ಅವರನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ನಮ್ಮ ನಗರ ಸೇವಕರಿಂದ ಅನೇಕ ಸಮಸ್ಯೆಗಳು ಸರಕಾರದ ಗಮನಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ವಿದ್ವಾನ್‌ ಗುರುರಾಜ ಉಪಾಧ್ಯಾಯ ಅವರು, ಮಹಾರಾಷ್ಟ್ರದ ತುಳು-ಕನ್ನಡಿಗರ ರಾಜಕೀಯ ಇಚ್ಚಾ ಶಕ್ತಿಯನ್ನು ಬೆಳೆಸಬೇಕು. ಸುಸ್ಥಿರ ಸಮಾಜ ನಿರ್ಮಾಣ ರಾಷ್ಟÅದ ಅಭಿವೃದ್ಧಿಗೆ ರಾಜಕೀಯ ಹಿನ್ನೆಲೆ ಅಮೂಲ್ಯವಾದದ್ದು. ನಾನು ಜನ ನಾಯಕನಲ್ಲ. ಪ್ರಜಾ ಸೇವಕನೆಂಬ ಅರಿವು ಅಭ್ಯರ್ಥಿಗಳಲ್ಲಿ ಇರಬೇಕು ಎಂದರು.

ಬಂಟರ ಸಂಘ ಮುಂಬಯಿ ಜತೆ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಕುತ್ಯಾರ್‌ ಅವರು ಮಾತನಾಡಿ, 18 ವರ್ಷಗಳ ಹಿಂದೆ ನಾನು ಮತ್ತು ಸಂತೋಷ್‌ ರೈ ಬೆಳ್ಳಿಪಾಡಿ ಅವರು ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿ ಯಶಸ್ವಿಯಾಗಿದ್ದೇವೆ. ಅಂದು ನಮಗೆ ನಗರ ಸೇವಕರಾಗುವ ಅವಕಾಶ ಸಿಕ್ಕಿದರೂ ತಿರಸ್ಕರಿಸಿದ್ದೇವೆ. ನಮ್ಮಲ್ಲಿ ಒಗ್ಗಟ್ಟು ಇತ್ತು. ಆದರೆ ಅದನ್ನು ಪ್ರದರ್ಶಿಸುವ ಸೂಕ್ತ ಸಂದರ್ಭ ಇಂದೇ ಒದಗಿದ್ದು. ಎಲ್ಲರೂ ಏಕತೆಯಿಂದ ದುಡಿದು ನಮ್ಮವರನ್ನು ನಗರ ಸಭೆಗೆ ಕಳುಹಿಸಬೇಕು ಎಂದು ನುಡಿದರು.

ಕಾರ್ಯಕ್ರಮವನ್ನು ಪತ್ರಕರ್ತ ವೈ. ಟಿ. ಶೆಟ್ಟಿ ಹೆಜ್ಮಾಡಿ ನಿರೂಪಿಸಿ, ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯ ಜತೆ ಕಾರ್ಯದರ್ಶಿ ಲೀಲಾ ಡಿ. ಪೂಜಾರಿ, ಮೀರಾರೋಡ್‌-ವಿರಾರ್‌ ಕುಲಾಲ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಮೂಲ್ಯ, ಮೀರಾ-ಭಾಯಂದರ್‌ ಹೊಟೇಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ಮಧುಕರ ಶೆಟ್ಟಿ, ಮೀರಾ-ಭಾಯಂದರ್‌ ತುಳು ಸಮಾಜದ ಅಧ್ಯಕ್ಷ ಗೋಪಾಲಕೃಷ್ಣ ಗಾಣಿಗ, ಬ್ರಾಹ್ಮಣ ಸಮಾಜದ ಶಾಂತಾ ಆಚಾರ್ಯ, ಮೊಗವೀರ ಸಮಾಜದ ಪ್ರತಿನಿಧಿ ಮಂಜುನಾಥ ಮೆಂಡನ್‌, ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ ಅಧ್ಯಕ್ಷ ಜಯಪ್ರಕಾಶ್‌ ಭಂಡಾರಿ, ಬಂಟ್ಸ್‌ ಸಂಘ ಮೀರಾ-ಭಾಯಂದರ್‌ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

 ಟಿಕೆಟ್‌ ಆಕಾಂಕ್ಷಿಗಳಾದ ಉದಯ ಹೆಗ್ಡೆ ಎಲಿಯಾಳ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ಚೇತನ್‌ ಶೆಟ್ಟಿ ಮೂಡಬಿದ್ರೆ, ಲೀಲಾ ಡಿ. ಪೂಜಾರಿ, ಉದಯ ಶೆಟ್ಟಿ ಪೆಲತ್ತೂರು, ರವಿ ಶೆಟ್ಟಿ ಕೊಟ್ರಪಾಡಿ, ಅಮಿತಾ ಶೆಟ್ಟಿ ಅವರು ಮಾತನಾಡಿದರು.

ಅಭ್ಯರ್ಥಿಗಳು ತಮ್ಮ ವ್ಯಾಪ್ತಿ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯತ್ತ ಗಮನ ಇರಬೇಕು. ಸದಾ ಜನರೊಂದಿಗೆ ಬೆರೆತು ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಬೇಕು 
 – ಜಯಪ್ರಕಾಶ್‌ ಶೆಟ್ಟಿ (ರಾಷ್ಟ್ರೀಯ ಸ್ತರದ  ರಾಜಕೀಯ ಸಲಹೆಗಾರ).

ಪ್ರತಿಯೊಂದು ವಾರ್ಡ್‌ನಲ್ಲಿ ವಿವಿಧ ಪಕ್ಷಗಳ ನಾಲ್ಕು ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು. ಪ್ರತಿಯೊಬ್ಬರೂ ನಾಲ್ಕು ಮತ ಚಲಾಯಿಸಬೇಕಾಗುತ್ತದೆ. ವಾರ್ಡ್‌ ವಿಸ್ತಾರವಾಗಿದ್ದು, ಸುಮಾರು 21 ಸಾವಿರದಿಂದ 30 ಸಾವಿರ ಮತದಾರರನ್ನು ಸಂಪರ್ಕಿಸಬೇಕಾಗಿದೆ 
  – ಸಂತೋಷ್‌ ರೈ ಬೆಳ್ಳಿಪಾಡಿ (ಗೌರವಾಧ್ಯಕ್ಷ: ಬಂಟ್ಸ್‌ ಫೋರಂ ಮೀರಾ-ಭಾಯಂದರ್‌).

ರಾಜಕೀಯ ಪ್ರವೇಶದ ಪೂರ್ವ ತಯಾರಿ ಅಗತ್ಯ. ಸಂಘ-ಸಂಸ್ಥೆಗಳಲ್ಲಿ ದುಡಿದ ಅನುಭವ ಹೊಂದಿರಬೇಕು. ಮೈಮನಸ್ಸು, ವೈರತ್ವ ಮರೆತು ಸಮ ಬಾಳ್ವೆಯಿಂದ ಬಾಳಬೇಕು 
– ಮಹಾಬಲ ಸಮಾನಿ (ಅಧ್ಯಕ್ಷರು: ಭಗವಾನ್‌ಶ್ರೀ ನಿತ್ಯಾನಂದ ಸೇವಾ ಸಮಿತಿ ಮೀರಾರೋಡ್‌).

ತುಳು-ಕನ್ನಡಿಗ ಒಕ್ಕೂಟ ರಚನೆಯಾಗಬೇಕು. ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ದೊರಕಬೇಕು ಎಂಬ ಪ್ರಯತ್ನ 2007ರಲ್ಲಿ ನಡೆದಿತ್ತು. ಇಂದು ಗರಿಗೆದರಿ ಹೆಮ್ಮರವಾಗಿದೆ. ಎಲ್ಲರಿಗೂ ಸಮಾನ ಹಕ್ಕು ದೊರಕಿಸಲು ಆಸಕ್ತ ಆಕಾಂಕ್ಷಿಗಳು ಮುಂದಾಗಬೇಕು. ತಮ್ಮ ಸೇವೆ ಮುಂದೆ ಮಾನವ ಹಕ್ಕುಗಳ ಸಂರಕ್ಷಣೆಯಾಗಬೇಕು 
 -ದುರ್ಗಾಪ್ರಸಾದ್‌ ಸಾಲ್ಯಾನ್‌ ಅಧ್ಯಕ್ಷ : ವ್ಯಾಪಾರಿ ಸಂಘಟನೆ).
 

Advertisement

Udayavani is now on Telegram. Click here to join our channel and stay updated with the latest news.

Next