Advertisement

ಎಳೆಯರ ಹೆಜ್ಜೆಯಲ್ಲಿ ಮೀನಾಕ್ಷಿ ಕಲ್ಯಾಣ 

12:30 AM Jan 04, 2019 | |

ಶ್ರೀ ವಿನಾಯಕ ಯಕ್ಷಗಾನ ಸಂಘ(ರಿ.), ಉಪ್ಪೂರು, ಇದರ ಎಳೆಯರ ಬಳಗದಿಂದ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಮಲಯಧ್ವಜ ಭೂಪತಿಯ ಮಗಳು ಮೀನಾಕ್ಷಿ ಬಲು ಧೀರೆ. ಅವಳ ದೇಹ ವಿಶೇಷತೆಯಿಂದ ಚಿಂತಾಕ್ರಾಂತರಾದ ಭೂಪತಿಯನ್ನು ನಾರದರು ಬಂದು ಸಮಾಧಾನಿಸಿ, ಈಕೆಯು ದಿಗ್ವಿಜಯಗೈಯ್ಯುವ ಸಂದರ್ಭದಲ್ಲಿ ಯಾವಾತನಿಂದ ಇವಳ ದೇಹ ವಿಶೇಷತೆ ಮಾಯವಾಗುತ್ತದೋ ಆತನೇ ಇವಳ ಪತಿಯಾಗುತ್ತಾನೆ ಎಂದು ನಾರದರು ಹರಸುತ್ತಾರೆ. ಮುಂದೆ ಮೀನಾಕ್ಷಿ ದಿಗ್ವಿಜಯ ಕೈಗೊಂಡು ಸ್ತ್ರೀಮಲಯಾಳ ದೇಶದ ಪದ್ಮಗಂಧಿನಿಯೂ ಸೇರಿದಂತೆ ವಿವಿಧ ದೇಶದ ಮಹಾರಾಜರುಗಳನ್ನು ಜಯಿಸಿ, ಕಾಶ್ಮೀರದ ಅರಸ ಶೂರಸೇನನೊಡನೆ ಹೋರಾಡುವ ಸಂದರ್ಭದಲ್ಲಿ ನಾರದರ ಆಗಮನದಿಂದ ಅವರೀರ್ವರು ಅಜ್ಜ-ಮೊಮ್ಮಗಳು ಎನ್ನುವ ವಿಚಾರ ತಿಳಿಯುತ್ತದೆ. ಹಾಗೆಯೇ ಅಷ್ಟದಿಕಾ³ಲಕರನ್ನೂ ಜಯಿಸಿದ ಮೀನಾಕ್ಷಿ ಕೊನೆಯದಾಗಿ ಕೈಲಾಸದ ಶಿವನೊಂದಿಗೆ ಯುದ್ಧ ಗೈಯುವಾಗ ಅವಳ ದೇಹ ವಿಶೇಷತೆ ಮಾಯವಾಗಿ, ಆತನೇ ಪತಿಯಾಗುವಲ್ಲಿಗೆ ಪ್ರಸಂಗ ಕೊನೆಗೊಳ್ಳುತ್ತದೆ. ಮೀನಾಕ್ಷಿಯಾಗಿ ಪ್ರಾರ್ಥನಾ ಕೆ. ದಿಟ್ಟ ಅಭಿನಯದಿಂದ ಮನ ಸೆಳೆದರೆ, ಪದ್ಮಗಂಧಿನಿಯಾಗಿ ಪ್ರಾರ್ಥನಾ ಎನ್‌., ಶೂರಸೇನನಾಗಿ ವೈಭವ್‌, ದೇವೇಂದ್ರನಾಗಿ ಸ್ವಸ್ತಿಕ್‌, ಈಶ್ವರನಾಗಿ ಶ್ರಾವ್ಯ, ಮದನಾಂಗಿಯಾಗಿ ಅಮೃತಾ, ಗುಣವಂತೆಯಾಗಿ ಯಶಸ್ವಿನಿ ಇವರುಗಳು ಪಾತ್ರದ ಗತ್ತು ಗೈರತ್ತುಗಳನ್ನು ಅಭಿವ್ಯಕ್ತಿ ಗೊಳಿಸಿದ ರೀತಿ ಚೆನ್ನಾಗಿತ್ತು. ಮೀನಾಕ್ಷಿಯ ಮಂತ್ರಿಯಾಗಿ ಸಾತ್ವಿಕ್‌ ಆರ್‌., ಕಿರಾತನಾಗಿ ವಿಶ್ವಾಸ್‌, ಅಗ್ನಿಯಾಗಿ ಸೌಜನ್ಯ, ಭೃಕುಟಿಯಾಗಿ ನಿತಿನ್‌, ನಂದಿಯಾಗಿ ಅಕ್ಷಯ್‌, ಕಾಲಭೈರವನಾಗಿ ಹರ್ಷಿತ್‌, ವೀರಭದ್ರನಾಗಿ ಶ್ರೀಶ, ಕಿರಾತ ಪಡೆ ನಾಯಕನಾಗಿ ದೈವಿಕ್‌, ನಾರದ ಮತ್ತು ಭೃಂಗಿಯಾಗಿ ಸಾತ್ವಿಕ್‌ ತಮ್ಮ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಿದರು. ಪ್ರಾರ್ಥನೆಯಲ್ಲಿ ಪ್ರಾಪ್ತಿ, ಪ್ರಣಮ್ಯ, ತೇಜಸ್ವಿನಿ, ಸಮೃದ್ಧಿ, ಬಾಲಗೋಪಾಲರಾಗಿ ನವ್ಯಾ, ಮಾಣಿಕ್ಯ ಹಾಗೆಯೇ ಪೀಠಿಕಾ ಸ್ತ್ರೀವೇಷದಲ್ಲಿ ಯಶಸ್ವಿನಿ, ಅಮೃತಾ ಒಟ್ಟಾಗಿ ಪೂರ್ವರಂಗದ ಚೆಲುವನ್ನು ಹೆಚ್ಚಿಸಿದರು. ಆರು ವರುಷದ ಪುಟಾಣಿಗಳಿಂದ ಹಿಡಿದು ಹದಿನೆಂಟರ ವಯೋಮಾನದ ವರೆಗಿನ ಈ ಇಪ್ಪತ್ತೆರಡು ಮಂದಿ ಎಳೆಯರನ್ನು ಸೀಮಿತ ಅವಧಿಯಲ್ಲಿ ತಿದ್ದಿ ತೀಡಿ ತರಬೇತಿಗೊಳಿಸಿದ ಯಕ್ಷಗುರುಗಳಾದ ಕರ್ಜೆ ಎಮ್‌. ಶ್ರೀಧರ್‌ ಹೆಬ್ಟಾರರು ನಿಜವಾಗಿಯೂ ಸ್ತುತ್ಯಾರ್ಹರು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಧರ್‌ ಹೆಬ್ಟಾರ್‌, ಮದ್ದಲೆಯಲ್ಲಿ ಜಗದೀಶ್‌ ಆಚಾರ್ಯ ಕಿದಿಯೂರು, ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಸಹಕರಿಸಿದ್ದರು. ವೇಷಭೂಷಣ ಅಜಪುರ ಯಕ್ಷಗಾನ ಸಂಘ, ಬ್ರಹ್ಮಾವರ ಅವರದಾಗಿತ್ತು. 

Advertisement

ದಿಶಾ ಬ್ರಹ್ಮಾವರ 

Advertisement

Udayavani is now on Telegram. Click here to join our channel and stay updated with the latest news.

Next