Advertisement

ವರ್ಷಾಕಾಲದ ನಡುವೆ ಮೀನಾಕ್ಷಿ ಕಲ್ಯಾಣ

06:00 AM Jul 13, 2018 | Team Udayavani |

ಯಕ್ಷಸಿರಿ ವನಿತಾ ಬಳಗ, ಬ್ರಹ್ಮಾವರ ಇವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಕಾರದೊಂದಿಗೆ ಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಮೀನಾಕ್ಷಿ ಕಲ್ಯಾಣ ಎನ್ನುವ ಯಕ್ಷಗಾನ ಪ್ರದರ್ಶನವನ್ನು ನಡೆಸಿಕೊಟ್ಟರು. ಪಾಂಡ್ಯ ದೇಶದ ಅರಸ ಮಲಯಧ್ವಜನ ಮಗಳು ಮೀನಾಕ್ಷಿಗೆ ಹುಟ್ಟುತ್ತಲೆ ಮೂರು ಸ್ತನಗಳು. ಹಾಗಾಗಿ ಚಿಂತಾಕ್ರಾಂತನಾದ ಅರಸನಿಗೆ ನಾರದರು ಸಮಾಧಾನಿಸಿ ಮುಂದೆ ಈಕೆ ದಿಗ್ವಿಜಯಕ್ಕೆ ಹೋಗುವ ಸಂದರ್ಭದಲ್ಲಿ ಯಾವಾತನಿಂದ ಘಾಸಿಗೊಂಡು ಮೂರನೇ ಸ್ತನ ಮಾಯವಾಗುತ್ತದೋ ಆತನೇ ಇವಳ ಪತಿಯಾಗುತ್ತಾನೆ ಎಂದು ತಿಳಿಸಿರುತ್ತಾರೆ. ತಂದೆಯ ನಂತರ ಅಧಿಕಾರ ಪಡೆದ ಮೀನಾಕ್ಷಿ ಮಂತ್ರಿ ವೀರಸೇನನೊಂದಿಗೆ ದಿಗ್ವಿಜಯಕ್ಕೆ ಹೊರಟು, ಸುತ್ತುಮುತ್ತಲಿನ ರಾಜರನ್ನು ಸೋಲಿಸಿ, ಕಾಶ್ಮೀರದರಸ ಶೂರಸೇನನಲ್ಲಿ ಯುದ್ಧಗೈಯುವ ಸಂದರ್ಭ ನಾರದರು ತಡೆದು ಈಕೆ ನಿನ್ನ ಮಗಳಾದ ಕಾಂಚನಮಾಲೆಯ ಮಗಳು ಎಂದಾಗ ಮೊಮ್ಮಗಳಾದ ಆಕೆಯನ್ನು ಉಪಚರಿಸುತ್ತಾನೆ. ಮುಂದೆ ಸ್ತ್ರೀ ಮಲಯಾಳ ರಾಜ್ಯ ಪ್ರವೇಶಿಸಿ ರಾಣಿ ಪದ್ಮಗಂಧಿನಿಯನ್ನು ಸೋಲಿಸಿ ಕಪ್ಪ ಪಡೆದು, ಕೊನೆಯಲ್ಲಿ ಕೈಲಾಸಕ್ಕೆ ಲಗ್ಗೆಯಿಟ್ಟು ಶಿವನ ಗಣಗಳನ್ನು ಸೋಲಿಸಿ ಶಿವನೊಂದಿಗೆ ಸೆಣೆದಾಡಿ ಸೋತ ಸಂದರ್ಭದಲ್ಲಿ ಆಕೆಯ ಮೂರನೇ ಸ್ತನ ಮಾಯವಾಗುತ್ತದೆ. 

Advertisement

ನಾರದರ ಮಾತಿನಂತೆ ಈರ್ವರ ವಿವಾಹವಾಗುವಲ್ಲಿಗೆ ಪ್ರಸಂಗ ಮುಕ್ತಾಯವಾಗುತ್ತದೆ. ಮೀನಾಕ್ಷಿಯಾಗಿ ಭಾಗೀರಥಿ ಎಂ. ರಾವ್‌ ಅವರು ತನ್ನ ಲವಲವಿಕೆಯ ಹೆಜ್ಜೆ ಮತ್ತು ಧೀರತನದ ಮಾತಿನ ಶೈಲಿಯ ಮೂಲಕ ಪಾತ್ರವನ್ನು ಅನಾವರಣಗೊಳಿಸಿದ ಪರಿ ಸೊಗಸಾಗಿತ್ತು. ಶೂರಸೇನನ ಗಾಂಭೀರ್ಯತೆ ಮತ್ತು ಈಶ್ವರನ ಕೋಪಾವೇಷವನ್ನು ನಾಗರತ್ನಾ ಹೇಳೆìಯವರು ಉತ್ತಮವಾಗಿ ಅಭಿವ್ಯಕ್ತಿಗೊಳಿಸಿದ್ದರು. ಪದ್ಮಗಂಧಿನಿಯಾಗಿ ಕು| ಸಹನಾರವರ ಪಾತ್ರ ನಿರ್ವಹಣೆ ಚೆನ್ನಾಗಿದ್ದು, ಮಂತ್ರಿ ವೀರಸೇನನಾಗಿ ಕು| ವಿಶ್ರುತಾ ಹೇಳೆì, ನಾರದ ಮತ್ತು ನಂದಿಯಾಗಿ ಗಾಯತ್ರಿ ಶಾಸ್ತ್ರಿಯವರು ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದರು. ಬಾಲಗೋಪಾಲರಾಗಿ ಮಾ| ವಿಭಾವನ ಹೇಳೆì ಮತ್ತು ಮಾ| ಸೃಜನ್‌ ಕುಂದರ್‌, ಪೀಠಿಕಾ ಸ್ತ್ರೀವೇಷದಲ್ಲಿ ಮಾ| ರೋಹನ್‌ ಹೆಬ್ಟಾರ್‌ ಮತ್ತು ಮಾ| ಪ್ರಣವ್‌ ಹೊಳ್ಳ ಇವರುಗಳು ಪೂರ್ವರಂಗದ ಚೆಲುವನ್ನು ಹೆಚ್ಚಿಸಿದರೆ, ಭಾಗವತರಾಗಿ ಉದಯ ಕುಮಾರ್‌ ಹೊಸಾಳ, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಹಿಮ್ಮೇಳದ ಸೊಗಸನ್ನು ಹೆಚ್ಚಿಸಿದರು. ವೇಷಭೂಷಣ ಬಾಲಕೃಷ್ಣ ನಾಯಕ್‌ ಹಂದಾಡಿಯವರದ್ದಾಗಿತ್ತು. ಎರಡು ಗಂಟೆ ಅವಧಿಯ ಈ ಯಕ್ಷಗಾನ ಪ್ರೇಕ್ಷಕರಿಂದ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಯಿತು.

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next