Advertisement

22 ಭಾಷೆಗೆ ವೈದ್ಯಕೀಯ, ಎಂಜಿನಿಯರಿಂಗ್‌ ಪಠ್ಯ ಅನುವಾದ

01:08 PM Feb 21, 2018 | Team Udayavani |

ಮೈಸೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಪಠ್ಯ ವಿಷಯಗಳನ್ನು ದೇಶದ 22 ಭಾಷೆಗಳಿಗೆ ಅನುವಾದಿಸಲಾಗುವುದು ಎಂದು ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

Advertisement

ಮೈಸೂರಿನ ಭಾರತೀಯಭಾಷೆಗಳ ಕೇಂದ್ರ ಸಂಸ್ಥೆ(ಸಿಐಐಎಲ್‌) ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನೂತನ ಆವರಣ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೇವಲ ಎಂಟು ಮಿಲಿಯನ್‌ ಜನಸಂಖ್ಯೆ ಹೊಂದಿರುವ ಇಸ್ರೇಲ್‌ ದೇಶ ಅದರ ರಾಷ್ಟ್ರೀಯ ಭಾಷೆಯಾಗಿರುವ ಹಿಬ್ರೂ ಭಾಷೆಯಲ್ಲಿ ಪಠ್ಯವನ್ನು ನಿರ್ಮಿಸಿದ್ದು,

ಭಾರತದಲ್ಲೂ ಇದೇ ರೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಪಠ್ಯವನ್ನು ತಯಾರಿಸುವ ಅವಶ್ಯಕತೆ ಹೆಚ್ಚಾಗಿದ್ದು, ದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ದೇಶದಲ್ಲಿ ನಡೆಸಲಾಗುವ ನೀಟ್‌ ಪರೀಕ್ಷೆಯನ್ನು ದೇಶದ 9 ಲಕ್ಷ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಹಾಗೂ 1.5 ಲಕ್ಷ ವಿದ್ಯಾರ್ಥಿಗಳು ಹಿಂದೆ ಭಾಷೆಯಲ್ಲಿ ಬರೆದಿದ್ದು, ಕೆಲವು ವಿದ್ಯಾರ್ಥಿಗಳು ಮಾತ್ರವೇ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದು, ಇಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಒದಗಿಸುವ ಸಲುವಾಗಿ ನೀಟ್‌ ಪರೀಕ್ಷೆಯ ಪತ್ರಿಕೆಗಳನ್ನು ಸ್ಥಳೀಯ ಭಾಷೆಗಳಲ್ಲಿ ತಯಾರಿಸಲು ಈಗಾಗಲೇ ತಿಳಿಸಲಾಗಿದೆ ಎಂದರು.

ಕ್ರಿಯಾ ಯೋಜನೆ ತಯಾರಿ: ಭಾರತೀಯ ಭಾಷೆಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಕೋನದೊಂದಿಗೆ ಭಾರತೀಯ ಭಾಷಾ ತಜ್ಞರನ್ನು ಒಗ್ಗೂಡಿಸಲು ಸಮ್ಮೇಳನ ನಡೆಸಲು ಸಚಿವಾಲಯ ಯೋಜಿಸಿದೆ. ಮುಂದಿನ 15 ವರ್ಷಗಳಲ್ಲಿ ಭಾಷೆಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಸಮ್ಮೇಳನ ನಡೆಯಲಿದ್ದು, ಆ ಮೂಲಕ ಮೂರು ವರ್ಷಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು.

ಪ್ರಸ್ತುತ ಅಸ್ತಿತ್ವದಲ್ಲಿರುವ ಎಲ್ಲಾ ಭಾಷಾ ಆಧಾರಿತ ಸರ್ಕಾರಿ ಸಂಸ್ಥೆಗಳು ತಮ್ಮದೇ ಆದ ಕೆಲಸವನ್ನು ಮಾಡುತ್ತಿದ್ದರೂ, ಪರಸ್ಪರ ಹೊಂದಾಣಿಕೆ ಇಲ್ಲ ಎಂದ ಅವರು, ಭಾಷೆಯ ಅಭಿವೃದ್ಧಿ ಉದ್ದೇಶದಿಂದ ಉತ್ತಮ ಕ್ರಮಗಳು ಮತ್ತು ಯೋಜನೆಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.

Advertisement

ಸಂವಹನಕ್ಕಾಗಿ ಭಾಷೆ: ಪ್ರತಿಯೊಬ್ಬರು ತಮ್ಮದೇ ಭಾಷೆಗಳಿಂದ ಪ್ರಭಾವಿತರಾಗಿದ್ದು, ಪ್ರಾಣಿ, ಪಕ್ಷಿಗಳು ಸಹ ತಮ್ಮದೇ ಭಾಷೆ ಹೊಂದಿವೆ. ಭಾಷೆ ಎಂಬುದು ಸಂವಹನ ಉದ್ದೇಶಕ್ಕಾಗಿ ಬಳಸಲಿದ್ದು, ಪ್ರತಿಯೊಂದು ಬಾಷೆಗಳೂ ಲಕ್ಷಾಂತರ ಪದಗಳನ್ನು ಹೊಂದಿದ್ದು, ಜನರ ನಡುವಿನ ಸಂಬಂಧವನ್ನು ಬೆಳೆಸಲು ಅವುಗಳನ್ನು ಆಗಾಗ್ಗೆ ಬಳಸಲಾಗುತ್ತಿದೆ.

ಆಡುಭಾಷೆಯ ಭಾಷೆಗಳು ಮಾತೃಭಾಷೆಯ ಹೊರತಾಗಿಯೂ ಮಹತ್ವವನ್ನು ಪಡೆದುಕೊಳ್ಳುತ್ತವೆ. ಮಕ್ಕಳಿಗೆ ಬಾಲ್ಯದಲ್ಲಿ ಮಾತೃ ಭಾಷೆಯನ್ನು ಕಲಿಸುವ ಅಗತ್ಯವಿದ್ದು, ಇದರಿಂದ ಮುಂದೆ ಬಹು ಭಾಷೆಗಳನ್ನು ಕಲಿಯುವಲ್ಲಿ ಆಸಕ್ತಿ ಹೊಂದುತ್ತಾರೆ ಎಂದು ನಾಲ್ಕು ಭಾಷೆಗಳಲ್ಲಿ ಮಾತನಾಡುತ್ತಿದ್ದ ತಮ್ಮ ಮೊಮ್ಮಗಳನ್ನು ನೆನಪಿಸಿಕೊಂಡರು.

ಆಧುನಿಕತೆ ಬಳಸಿಕೊಳ್ಳಿ: ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜಾnನದ ಬಳಕೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಆನ್‌ಲೈನ್‌ ಶಿಕ್ಷಣವನ್ನು ಪರಿಚಯಿಸುವುದಕ್ಕೆ ಅಗತ್ಯವಿದೆ. ಇದರಿಂದ ಕಲಿಯುವ ಆಸಕ್ತಿ ಹೊಂದಿರುವ ಜನರಿಗೆ ಪ್ರತಿ ಭಾಷೆಗಳಿಂದ 100 ಪದಗಳನ್ನು ಕಲಿಯಲು ಸಹಾಯ ಮಾಡುವ ಜತೆಗೆ ವಿಶ್ವದ ನಾನಾ ಭಾಗಗಳಲ್ಲಿರುವ ಭಾರತೀಯರಿಗೂ ತಮ್ಮ ಭಾಷೆಯನ್ನು ಕಲಿಯಲು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಭಾಷಾ ಅಧ್ಯಯನ ಕೇಂದ್ರದ ಅಧಿಕಾರಿಗಳು ಆಧುನಿಕತೆಯ ಸಂಪನ್ಮೂಲಗಳನ್ನು ಬಳಸಿಕೊಂಡು ಡಿಜಿಟಲ್‌ ರೂಪದಲ್ಲಿ ಪುಸ್ತಕಗಳನ್ನು ಹೊರ ತರುವುದರ ಬಗ್ಗೆ ಗಮನವಹಿಸಬೇಕಿದೆ ಎಂದು ಸಲಹೆ ನೀಡಿದರು.

ಬಾಲ ರಾಮಾಯಣ ಬಿಡುಗಡೆ: ಇದೇ ಸಂದರ್ಭದಲ್ಲಿ ಭಾರತೀಯ ಭಾಷಾ ಸಂಸ್ಥೆಯಿಂದ ಹೊರತಂದಿರುವ ಬಾಲ ರಾಮಾಯಣ ಮಹಾಕಾವ್ಯವನ್ನು ಸಚಿವ ಪ್ರಕಾಶ್‌ ಜಾವಡೇಕರ್‌ ಬಿಡುಗಡೆ ಮಾಡಿದರು. ಕನ್ನಡ ಸೇರಿದಂತೆ ದೇಶದ 23 ಬಾಷೆಗಳಿಗೆ ಈ ಮಹಾಕಾವ್ಯವನ್ನು ಅನುವಾದ ಮಾಡಲಾಗಿದ್ದು, ಸದ್ಯ 17 ಭಾಷೆಗಳಿಗೆ ಅನುವಾದಿಸಲಾಗಿದ್ದು, ಬಾಕಿ 5 ಬಾಷೆಗಳಿಗೆ ಶೀಘ್ರದಲ್ಲೇ ಅನುವಾದ ಮಾಡಲಾಗುತ್ತದೆ. ಸಮಾರಂಭದಲ್ಲಿ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ(ಸಿಐಐಎಲ್‌) ನಿರ್ದೇಶಕ ಪೊ›.ಡಿ.ಜಿ.ರಾವ್‌, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಯೋಜಕ ಪೊ›.ದುರ್ಗಾದಾಸ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

ಭಾಷೆಗಳ ಭಾಷಾಂತರ ಪರಿಚಯಕ್ಕೆ ಸಿದ್ಧತೆ: ಪ್ರತಿಷ್ಠಿತ ಸಂಸ್ಥೆಗಳಾದ ಗೂಗಲ್‌, ಐಬಿಎಂ ಮತ್ತಿತರ ಕಂಪನಿಗಳ ಮೂಲಕ ಭಾರತೀಯ ಭಾಷೆಗಳನ್ನು ಪರಿಚಯಿಸಲು ಭಾಷಾಂತರ ಮಾಡಲು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (ಸಿಐಐಎಲ್‌) ನಿರ್ಧರಿಸಿದೆ. ಪ್ರತಿ ಭಾಷೆಯಲ್ಲಿಯೂ 10 ರಿಂದ 22 ಮಿಲಿಯನ್‌ವರೆಗಿನ ಪದಗಳನ್ನು ಸಿಐಐಎಲ್‌ ಈಗಾಗಲೇ ಸಂಗ್ರಹಿಸಿದ್ದು, ಪ್ರತಿಯೊಂದು ಪದಗಳ ವ್ಯಾಕರಣ, ಟಿಪ್ಪಣಿಗಳ ಕುರಿತು ಸಂಸ್ಥೆಯ ಅಧಿಕಾರಿಗಳು ಡೇಟಾ ನೀಡಲಿದ್ದಾರೆ.

ಇದರ ಮೂಲಕ ಒಂದು ಭಾಷೆಯಿಂದ ಇನ್ನೊಂದಕ್ಕೆ ಪದಗಳನ್ನು ಭಾಷಾಂತರಿಸಲು ಈ ಕಂಪನಿಗಳು ತಂತ್ರಾಂಶವನ್ನು ಸಿದ್ಧಪಡಿಸಲಿವೆ. ಪ್ರಸ್ತುತ ಕೆಲವು ಕಂಪನಿಗಳು ಭಾಷಾಂತರ ಯಂತ್ರವನ್ನು ಹೊಂದಿದ್ದರೂ, ಅವು ನಿಖರವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಕಂಪೆನಿಗಳೊಂದಿಗೆ ಸಿಐಐಎಲ್‌ ಪದಗಳ ನಿಖರವಾದ ಅನುವಾದ ಮಾಡಲಿವೆ ಎಂದು ಸಿಐಐಎಲ್‌ನ ಅಧಿಕಾರಿ ಎಲ್‌.ರಾಮಮೂರ್ತಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next