ಮೈಸೂರು: ಕಳೆದ 5 ವರ್ಷಗಳ ಅವಧಿಯಲ್ಲಿ ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಕೆಎಸ್ಸಾರ್ಟಿಸಿಯ 85 ಚಾಲಕರಿಗೆ ಬೆಳ್ಳಿ ಪದಕ, ನಗದು ಹಾಗೂ ಪ್ರಶಂಸಾಪತ್ರ ನೀಡಿ ಗೌರವಿಸಲಾಯಿತು.
ಮೈಸೂರು ಗ್ರಾಮಾಂತರ ವಿಭಾಗದ ವತಿಯಿಂದ ಗಣರಾಜ್ಯೋತ್ಸವದೊಂದಿಗೆ ಚಾಲಕರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಗ್ರಾಮಾಂತರ ಘಟಕ- 3ರಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ 32 ಗ್ರಾಂ ತೂಕದ ಬೆಳ್ಳಿ ಪದಕದೊಂದಿಗೆ 2,000ರೂ. ನಗದು ಹಾಗೂ ಪ್ರಶಂಸನಾ ಪತ್ರ ನೀಡಲಾಯಿತು.
ಜತೆಗೆ ಅಪರಾಧ ರಹಿತ ಸೇವೆ ಸಲ್ಲಿಸಿ ಸಂಸ್ಥೆಗೆ ಉತ್ತಮ ಆದಾಯ (ಇಪಿಕೆಎಂ) ತಂದುಕೊಟ್ಟ 23ಜನ ನಿರ್ವಾಹಕರಿಗೆ 2,000ರೂ. ನಗದು ಪುರಸ್ಕಾರದೊಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಸತತ 3 ವರ್ಷಗಳ ಕಾಲ ಸಂಸ್ಥೆಗೆ ಉತ್ತಮ ಆದಾಯ (ಇಪಿಕೆಎಂ) ತಂದು, ಏಪ್ರಿಲ್, ಮೇ, ಜೂನ್ನಲ್ಲಿ 75ದಿನ ಹಾಜರಾತಿ ಹೊಂದಿದ್ದ ಇಬ್ಬರು ನಿರ್ವಾಹಕರಿಗೆ ಬೆಳ್ಳಿ ಪದಕ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಕೆಎಸ್ಸಾರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವಾಸು, ಮಂಡಳಿ ನಿರ್ದೇಶಕ ಗೋವಿಂದರಾಜು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.