Advertisement
ಭಾಗವತ ರಮೇಶ ಭಟ್ಟರ ಸುರುಟಿ ಏಕತಾಳದ ಪಾಲಿಸು ಗಜವದನ… ಪದ್ಯ ಹಳೆಯ ಸಂಪ್ರದಾಯದಲ್ಲಿ ಗಣಪತಿ ಸ್ತುತಿಯನ್ನು ಹೇಗೆ ಮಾಡಬೇಕು ಎನ್ನುವುದನ್ನು ನೆನಪಿಸಿತು.ರಾಮಚಂದ್ರ ಪಾಂಗಣ್ಣಾಯ ಮತ್ತು ಮುರಾರಿ ಕಡಂಬಳಿತ್ತಾಯರ ಹಿಮ್ಮೇಳ ಪದ್ಯಕ್ಕೆ ಕಳೆ ನೀಡಿತು. ವಿಮರ್ಶಕರಾದ ಎ. ಈಶ್ವರಯ್ಯ, ಕೆ.ಎಲ್.ಕುಂಡಂತಾಯ, ವಾಸುದೇವ ಸಾಮಗ, ಪ್ರಭಾಕರ ಭಟ್, ನಾಗರಾಜ ಉಡುಪ,ಮೋಹನ ತೋನ್ಸೆ ಮುಂತಾದ ವಿಶೇಷ ಆಮಂತ್ರಿತರು ಮತ್ತು ಗಣ್ಯರೊಂದಿಗೆ ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಮೂಲಕ ಹಿರಿಯ ಹಿಮ್ಮೇಳ ವಾದಕರಾದ ರಾಮಚಂದ್ರ ಪಾಂಗಣ್ಣಾಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊದಲ ಗೋಷ್ಠಿಯಲ್ಲಿ ಶರಸೇತು ಬಂಧ ಪ್ರಸಂಗದ “ಕೇಳಯ್ಯ ಎಮ್ಮೆಯ ತನು ಬಡವಾದುದ…’ ಪದ್ಯದಿಂದ ಪ್ರಾರಂಭಿಸಿ ಕೇವಲ ಎರಡು ಪದ್ಯಗಳಿಂದ ಹನುಮಂತ ಮತ್ತು ಅರ್ಜುನನ ಸಂವಾದವನ್ನು ರಸವತ್ತಾಗಿ ಕಟ್ಟಿಕೊಟ್ಟವರು ತಾಳಮದ್ದಳೆ ಅರ್ಥಧಾರಿಗಳಾದ ಹರೀಶ ಬಳಂತಿಮೊಗರು ಮತ್ತು ರಾಧಾಕೃಷ್ಣ ಕಲ್ಚಾರ್ರವರು. ಅದೇ ಎರಡು ಪದ್ಯವನ್ನು ಬೇರೆ ರಾಗದಲ್ಲಿ ಹಾಡಿದಾಗ ಅರ್ಥದ ಭಾವದ ಮೇಲೆ ಮತ್ತು ಮಾತುಗಾರಿಕೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ತೋರಿಸಿಕೊಟ್ಟರು. ಭೈರವಿ ಅಷ್ಟತಾಳದ ಪದ್ಯವನ್ನು ತ್ರಿವುಡೆ ಏಕ ಕೋರೆತಾಳದಲ್ಲಿ ಹಾಡುವುದು ತೆಂಕು ಬಡಗು ಎರಡೂ ತಿಟ್ಟಿನಲ್ಲಿ ಛಾಲ್ತಿ ಇದೆ. ಆದರೆ ಘಂಟಾರವ ಅಷ್ಟತಾಳದ ಪದ್ಯದ ಸಾಹಿತ್ಯ ವಿಸ್ತಾರ ಕಡಿಮೆ ಇದ್ದು ಅದನ್ನು ಅದೇ ಮಟ್ಟಿನಲ್ಲಿ ಹಾಡುವುದು ಸುಲಭವಾದರೂ ತ್ರಿವುಡೆ ತಾಳದಲ್ಲಿ ಹಾಡಲು ಭಾಗವತಿಕೆಯಲ್ಲಿ ಅಸಾಧಾರಣ ಸಿದ್ಧಿ ಬೇಕಾಗುತ್ತದೆ. ರಮೇಶ ಭಟ್ಟರು ನಿರರ್ಗಳವಾಗಿ ಹಳೆಯ ಆರಭಿ,ಅಠಾಣ,ದುರ್ಗ ಸುರುಟಿ ಹಿಂದೋಳ ಇನ್ನೂ ಅನೇಕ ರಾಗಗಳನ್ನು ಬಳಸಿ ಪರಂಪರೆಯ ಮಟ್ಟಿನಲ್ಲಿ ಎರಡು ಪದ್ಯಗಳನ್ನು ಬೇರೆ ಬೇರೆ ವಿಧಾನದಲ್ಲಿ ಹಾಡಿದರು.ಪರಿಣಾಮ ಈ ಎರಡೂ ಬೇರೆ ಬೇರೆ ರಾಗದ ಸಂದರ್ಭದಲ್ಲಿ ಅದೇ ಅರ್ಥದಾರಿಗಳ ಮಾತಿನ ಶೈಲಿ ಅರ್ಥಗಾರಿಕೆ ಬೇರೆಯೇ ಆಗಿದ್ದು ವಿಶೇಷವೆನಿಸಿತು.ಇದೇ ರೀತಿ ಸುಭದ್ರಾ ಕಲ್ಯಾಣದ “ಆವ ನಾರಿಯ ಮೇಲೆ ಮನವಾಯ್ತು ನಿಮಗೆ ಈ ವಿದದಿ ನಗಲೇಕೆ ಕಾಂತ ಪೇಳೆನಗೆ…’ ಭಾಗದ ಸತ್ಯಭಾಮೆ-ಕೃಷ್ಣನ ಸಂವಾದ ಭಾಗದಲಿ Éಸತ್ಯಭಾಮೆಯಾಗಿ ಕರುಣಾಕರ ಶೆಟ್ಟಿ ಮತ್ತು ಕೃಷ್ಣನಾಗಿ ನಾರಾಯಣ ಹೆಗಡೆಯವರು ಅರ್ಧ ತಾಸು ಅವಧಿಯಲ್ಲಿ ಅರ್ಥಾಂತರಂಗದ ಸಾಧ್ಯತೆಯನ್ನು ಪ್ರಸ್ತುತ ಪಡಿಸಿದರು.ಬೇರೆ ಬೇರೆ ರಸದ ಸನ್ನಿವೇಷವನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಶ್ರೀ ಕ್ರಷ್ಣ ಪರಂಧಾಮದ ಕೃಷ್ಣನಾಗಿ ಹರೀಶ ಬೊಳಂಜಿಮೊಗರು, ದುರ್ವಾಸನಾಗಿ ರಾಧಾಕೃಷ್ಣ ಕಲ್ಚಾರ್ ಒಬ್ಬರಿಗೊಬ್ಬರು ಈ ಶತಮಾನದ ಅಪೂರ್ವ ಜೋಡಿ ಎನ್ನುವುದನ್ನು ಸಾಬೀತು ಪಡಿಸಿದರು. ಪಾರ್ವತಿ ಕಲ್ಯಾಣದ ಪಾರ್ವತಿ ಮತ್ತು ಭೈರಾಗಿ ಈಶ್ವರನ ಸಂವಾದದ ಬಳಿಕ ಬೆಳಗಿನ ಗೋಷ್ಠಿ ಮುಕ್ತಾಯವಾಯಿತು.ನಾಲ್ಕೂ ಪ್ರಸಂಗಗಳಲ್ಲಿ ರಮೇಶ ಭಟ್ ಮತ್ತು ಮುರಾರಿ ಕಡಂಬಳಿತ್ತಾಯರ ಹಿಮ್ಮೇಳ ರಂಜಿಸಿತು.
ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ