Advertisement

ಅತಿಹೆಚ್ಚು ಪ್ರಶಸ್ತಿ ನೀಡಿ ದಾಖಲೆ ಬರೆದ ಮೇಯರ್‌

11:58 AM Sep 02, 2018 | Team Udayavani |

ಬೆಂಗಳೂರು: ಬಿಬಿಎಂಪಿಯಲ್ಲಿ ಅತಿ ಹೆಚ್ಚು ಸಭೆಗಳನ್ನು ನಡೆಸಿದ ಮೇಯರ್‌ ಎಂಬ ಹೆಗ್ಗಳಿಕೆ ಪಡೆದಿರುವ ಸಂಪತ್‌ರಾಜ್‌, ಪಾಲಿಕೆಯಲ್ಲಿ ಅತಿ ಹೆಚ್ಚು ಕೆಂಪೇಗೌಡ ಪ್ರಶಸ್ತಿಗಳನ್ನು ನೀಡಿದ ಮೇಯರ್‌ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. 

Advertisement

ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ಪಾಲಿಕೆಯಿಂದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಆದರೆ, ಹಲವು ವರ್ಷಗಳಿಂದ ಕೆಂಪೇಗೌಡ ಪ್ರಶಸ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾವುದೇ ಸಾಧನೆ ಮಾಡದವರು ಆಯ್ಕೆಯಾಗುತ್ತಿರುವುದು ಪ್ರಶಸ್ತಿಯ ಮೌಲ್ಯ ಕುಸಿಯುವಂತೆ ಮಾಡಿದೆ.

ಈ ಹಿಂದೆ ಮೇಯರ್‌ ಆಗಿದ್ದ ಎಸ್‌.ಕೆ.ನಟರಾಜ್‌ ಅವರ ಅವಧಿಯಲ್ಲಿ 300ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, ಈವರೆಗೆ ದಾಖಲೆಯಾಗಿತ್ತು. ಇದೀಗ 500ಕ್ಕೂ ಹೆಚ್ಚಿನ ಜನರಿಗೆ ಪ್ರಶಸ್ತಿ ನೀಡುವ ಮೂಲಕ ಅತಿಹೆಚ್ಚಿನ ಜನರಿಗೆ ಪ್ರಶಸ್ತಿ ನೀಡಿದ ಹೆಗ್ಗಳಿಕೆಯನ್ನೂ ಸಂಪತ್‌ರಾಜ್‌ ತಮ್ಮದಾಗಿಸಿಕೊಂಡಿದ್ದಾರೆ. 

ಮೇಯರ್‌ ಸಂಬಂಧಿ, ಬೆಂಬಲಿಗರಿಗೆ ಪ್ರಶಸ್ತಿ!: ಪಾಲಿಕೆಯಿಂದ ಈ ಹಿಂದೆಯೇ ಅಂತಿಮಗೊಳಿಸಿದ್ದ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ದಿಢೀರ್‌ 500 ದಾಟಲು ಮೇಯರ್‌ ಆರ್‌.ಸಂಪತ್‌ರಾಜ್‌ ಅವರೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ಶನಿವಾರ ಬೆಳಗ್ಗೆ ಏಕಾಏಕಿ 200 ಪುರಸ್ಕೃತರನ್ನು ಪಟ್ಟಿಗೆ ಸೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಈ ಕುರಿತು ಪ್ರತಿಕ್ರಿಯಿಸಿ ಹಿರಿಯ ಕಾಂಗ್ರೆಸ್‌ ಹಿರಿಯ ಸದಸ್ಯರೊಬ್ಬರು, ಪಾಲಿಕೆಯಿಂದ ಈ ಹಿಂದೆ 277 ಸಾಧಕರನ್ನು ಗುರುತಿಸಲಾಗಿತ್ತು. ಶನಿವಾರ ಬೆಳಗ್ಗೆ ಮೇಯರ್‌ ಅವರು ತಮ್ಮ ಸಂಬಂಧಿಗಳು, ತಮ್ಮ ಬೆಂಬಗರನ್ನೊಳಗೊಂಡ 200 ಮಂದಿಯನ್ನು ಸಾಧಕರ ಪಟ್ಟಿಗೆ ಸೇರಿಸಿದ್ದಾರೆ. ಅವರ ಅವಧಿ ಮುಗಿಯಲು ಒಂದು ತಿಂಗಳಿರುವುದರಿಂದ ತಮಗೆ ಬೇಕಾದವರಿಗೆ ಪ್ರಶಸ್ತಿ ನೀಡಿದ್ದು, ಇದರಿಂದಾಗಿ ಕಾರ್ಯಕ್ರಮದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿ ಸಾಧಕರಿಂದ ಬೈಗುಳ ಕೇಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. 

Advertisement

ಎಲ್ಲೆಂದರಲ್ಲಿ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಗಂಟೆ ಗಂಟೆಗೆ ಹೆಚ್ಚಾಗುತ್ತಿರುವುದನ್ನು ಅರಿತ ಪಾಲಿಕೆ ಸದಸ್ಯರು ತಾವು ಸೂಚಿಸಿದ ಸಾಧಕರಿಗೆ ಅವರೇ ಪ್ರಶಸ್ತ ನೀಡಿ ಸನ್ಮಾನಿಸಿದ ದೃಶ್ಯ ಎಲ್ಲೆಂದರಲ್ಲಿ ಕಾಣಸಿಗುತ್ತಿತ್ತು. ಕೊನೆಗೆ ಸ್ಮರಣಿಕೆಗಳು ಕೊರತೆಯಾದ ಹಿನ್ನೆಲೆಯಲ್ಲಿ ಕೇವಲ ಶಾಲು ಹಾಗೂ ಹಾರ ಹಾಕಿ ಮತ್ತೆ ಬಂದು ಸ್ಮರಣಿಕೆ ಸ್ವೀಕರಿಸುವಂತೆ ಹೇಳಿದರು. 

ನಿರೂಪಕರ ವಿರುದ್ಧ ಪುರಸ್ಕೃತರು ಗರಂ: ಪಾಲಿಕೆಯಿಂದ ಕಾರ್ಯಕ್ರಮ ನಿರ್ವಹಣೆಗೆ ನಿಯೋಜಿಸಿದ್ದ ನಿರೂಪಕರು ಬಳಸುತ್ತಿದ್ದಂತಹ ಭಾಷೆಗೆ ಹಲವಾರು ಸಾಧಕರು ತೀವ್ರ ಮುಜುಗರಕ್ಕೆ ಒಳಗುವಂತಹ ವಾತಾವರಣ ಸೃಷ್ಟಿಯಾಗಿತ್ತು. ನಿರೂಪಕರು ಬಳಿಸಿದ ಕೆಲವು ವಾಕ್ಯಗಳು ಹೀಗಿವೆ…

“ಪ್ರಶಸ್ತಿ ಪಡೆದವರು ಆದಷ್ಟು ಬೇಗ ವೇದಿಕೆಯಿಂದ ಕೆಳಗಿಳಿದು ಹೋಗಿ’, “ಹೆಸರು ಕರೆಯದೆ ವೇದಿಕೆ ಮೇಲೆ ಬಂದರೆ ಕ್ರಾಸ್‌ ಚೆಕ್‌ ಮಾಡಿ ವಾಪಸ್‌ ಕಳಿಸ್ತೀವಿ’, “ಹೆಸರಿಲ್ಲದವರಿಗೆ ಪ್ರಶಸ್ತಿ ನೀಡುವುದಿಲ್ಲ’, “ನಮಗೆ ಬೇಗ ಪ್ರಶಸ್ತಿ ಕೊಡಿ ಎಂದು ಕೇಳಬೇಡಿ ಎಲ್ಲರಿಗೂ ಪ್ರಶಸ್ತಿ ದೊರೆಯುತ್ತದೆ’, “ಮನೆಯಲ್ಲಿ ಗ್ಯಾಸ್‌ ಆಫ್ ಮಾಡಿಲ್ಲ, ಮಳೆ ಬಂದರೆ ಮನೆ ನೀರು ನುಗ್ಗುತ್ತೆ ಎಂಬ ಕಾರಣಗಳನ್ನು ನೀಡಬೇಡಿ”.

ಪ್ರಶಸ್ತಿ ಮೊತ್ತ ಕಡಿತ: ಕೆಂಪೇಗೌಡ ಪ್ರಶಸ್ತಿಗೆ ಪಾಲಿಕೆಯಿಂದ 25 ಸಾವಿರ ನಗದು ಬಹುಮಾನ ಮೀಸಲಿಡಲಾಗಿದೆ. ಆದರೆ, ಪ್ರಶಸ್ತಿ ಪುರಸ್ಕೃತರ ಸಂಖ್ಯೆ 500ರ ಗಡಿ ದಾಟಿದ ಪರಿಣಾಮ ಪ್ರಶಸ್ತಿಯ ಮೊತ್ತ 5 ರಿಂದ 10 ಸಾವಿರಕ್ಕೆ ಇಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ. 

ಐದು ವರ್ಷಗಳಲ್ಲಿ ಎಲೆಕ್ಟ್ರಿಕಲ್‌ ಬಸ್‌ಗಳ ಸಂಚಾರ: ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್‌, ಡಿಸೇಲ್‌ ಬಸ್‌ಗಳನ್ನು ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಎಲೆಕ್ಟ್ರಿಕಲ್‌ ಬಸ್‌ಗಳ ಸೇವೆ ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು. 

ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ವಾತಾವರಣದಲ್ಲಿ 20 ಯುನಿಟ್‌ ಮಾಲಿನ್ಯವಿರಬೇಕು. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ಈ ಪ್ರಮಾಣ 198ರಷ್ಟಿದ್ದು, ಬೆಂಗಳೂರಿನಲ್ಲಿ ಈ ಪ್ರಮಾಣ 80 ಇದೆ. ಹೀಗಾಗಿ ಮಾಲಿನ್ಯ ಪ್ರಮಾಣ ನಿಯಂತ್ರಣಕ್ಕಾಗಿ ಪೆಟ್ರೋಲ್‌, ಡಿಸೇಲ್‌ ಬಸ್‌ಗಳ ಬದಲಿಗೆ, ಎಲೆಕ್ಟ್ರಿಕಲ್‌ ಬಸ್‌ಗಳ ಮೂಲಕ ಸೇವೆ ನೀಡಲಾಗುವುದು ಎಂದರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟ ಸೃಜನ್‌ ಲೋಕೇಶ್‌, ಹಲವು ಕಾರಣಗಳಿಂದ ನಟ ದರ್ಶನ್‌ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ, ದರ್ಶನ್‌ ಹಾಗೂ ತಾವು 1 ಲಕ್ಷ ರೂ.ಗಳನ್ನು ಪಾಲಿಕೆಯ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಪಾಲಿಕೆಗೆ ನೀಡುತ್ತಿದ್ದೇವೆ ಎಂದು ಘೋಷಿಸಿದರು. 

ಕಾರ್ಯಕ್ರಮದಲ್ಲಿ ನಿರ್ದೇಶಕ ಬಿ.ಸುರೇಶ್‌, ನಿರೂಪಕಿ ಅನುಶ್ರೀ, ರಂಗಕರ್ಮಿ ಶ್ರೀನಿವಾಸ್‌ ಜಿ ಕಪ್ಪಣ್ಣ ಸೇರಿದಂತೆ 500ಕ್ಕೂ ಹೆಚ್ಚಿನ ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಮೇಯರ್‌ ಆರ್‌.ಸಂಪತ್‌ರಾಜ್‌, ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಶಾಸಕಿ ಸೌಮ್ಯರೆಡ್ಡಿ, ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಸೇರಿದಂತೆ ಪ್ರಮುಖರು ಹಾಜರಿದ್ದರು. 

ನನ್ನ ಜೀವನದಲ್ಲಿ ನಾನು ತೆಗೆದುಕೊಂಡಂತಹ ಅತಿದೊಡ್ಡ ತಪ್ಪು ನಿರ್ಧಾರ ಎಂದರೆ ಅದು ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಲು ಒಪ್ಪಿಕೊಂಡಿದ್ದು, ನನ್ನ 75 ವರ್ಷಗಳ ವಯಸ್ಸಿನಲ್ಲಿ ಎಂದೂ ಸಹ ಇಂತಹ ಮುಜುಗರವಾಗಿರಲಿಲ್ಲ. 
-ಎಂ.ಎ.ಚಲ್ಲಯ್ಯ, ಸ್ಕೌಟ್ಸ್‌ ಮತ್ತು ಗೌಡ್ಸ್‌ನಿಂದ ಪ್ರಶಸ್ತಿಗೆ ಆಯ್ಕೆಯಾದವರು

ಪಾಲಿಕೆಯಿಂದ ಸಂಗ್ರಹಿಸಲಾಗುವ ಆಸ್ತಿ ತೆರಿಗೆಯಲ್ಲಿ ಬಹುಪಾಲು ತ್ಯಾಜ್ಯ ವಿಲೇವಾರಿಗೆ ವೆಚ್ಚವಾಗುತ್ತಿದೆ. ಹೀಗಾಗಿ ವೃತ್ತಿ ಹಾಗೂ ಮನರಂಜನಾ ತೆರಿಗೆಯನ್ನು ಸರ್ಕಾರ ಪಾಲಿಕೆಗೆ ಬಿಟ್ಟುಕೊಡಬೇಕು. ಜತೆಗೆ ನಗರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಬೇಕು. 
-ಪದ್ಮನಾಭರೆಡ್ಡಿ, ಪಾಲಿಕೆಯ ವಿಪಕ್ಷ ನಾಯಕ

ಪ್ರಶಸ್ತಿ ಪಡೆಯಲು ಅನಾಗರಿಕರವಾಗಿ ನಡೆದುಕೊಳ್ಳುವವರಿಗೆ ಮೊದಲು ಪ್ರಶಸ್ತಿ ನೀಡುತ್ತಾರೆ. ಎಲ್ಲರೂ ಸಾಧನೆ ಮಾಡಿರುವುದರಿಂದಲೇ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆದರೆ, ಪ್ರಶಸ್ತಿ ವಿತರಣೆಯಲ್ಲಿ ತಾರತಮ್ಯ ಮಾಡುವುದು ಎಷ್ಟು ಸರಿ?
-ಕೆ.ಆರ್‌.ಸೌಮ್ಯ, ಯುವ ಲೇಖಕಿ, ಪ್ರಶಸ್ತಿ ಪುರಸ್ಕೃತರು

Advertisement

Udayavani is now on Telegram. Click here to join our channel and stay updated with the latest news.

Next