Advertisement

ಸಂವಿಧಾನದ ಮೂಲ ಆಶಯ ಈಡೇರಲಿ: ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ

03:52 PM Jul 22, 2022 | Team Udayavani |

ಚಿತ್ರದುರ್ಗ: ಸರ್ವರಿಗೂ ಸಮಬಾಳು-ಸಮಪಾಲು ಎಂಬ ಸಂವಿಧಾನದ ಆಶಯ ಹಾಗೂ ಅಂಬೇಡ್ಕರ್‌ ಅವರ ಸಿದ್ಧಾಂತ ಮತ್ತು ಹೋರಾಟಗಳನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಡಾ| ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌ ಆಯೋಜಿಸಿದ್ದ ರಂಗಾಯಣ ಮೈಸೂರು ಅಭಿನಯದ “ಸೂತ್ರಧಾರ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಾನ್‌ ನಾಯಕರ ಜಯಂತಿಗೆ ರಜೆ ಘೋಷಣೆ ಮಾಡುತ್ತವೆ. ಇದರಿಂದ ಆ ವ್ಯಕ್ತಿಗಳ ಮಹತ್ವ ತಿಳಿಯಲು ಸಾಧ್ಯವಾಗುವುದಿಲ್ಲ. ಆದರೆ ಇಂದಿನ ಪೀಳಿಗೆಗೆ ಮಹಾತ್ಮರ ಜೀವನ ಚರಿತ್ರೆಗಳನ್ನು ಅರ್ಥ ಮಾಡಿಸುವ ಅಗತ್ಯವಿದೆ ಎಂದರು.

ಡಾ| ಬಿ.ಆರ್‌.ಅಂಬೇಡ್ಕರ್‌ ಜಾತಿ, ವರ್ಗ, ಧರ್ಮಕ್ಕೆ ಸೀಮಿತರಾದವರಲ್ಲ. ಇಡೀ ಜಗತ್ತೇ ಮೆಚ್ಚುವಂತಹ ಸರ್ವ ಶ್ರೇಷ್ಠ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿ. ಅವರು ಸರ್ವರ ಆಸ್ತಿ. ಸಂವಿಧಾನ ಅಧ್ಯಯನ ಮಾಡುವ ಮೂಲಕ ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌. ರಾಜು ಮಾತನಾಡಿ, ಸಂವಿಧಾನದ ಧ್ಯೇಯಗಳಾದ ಶಿಕ್ಷಣ, ಸಂಘಟನೆ, ಹೋರಾಟವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳಿಗೆ ಸಂವಿಧಾನ ಪರಿಚಯಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌ ನಾಟಕೋತ್ಸವ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

Advertisement

ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಸಂಚಾಲಕ ಬಿ.ಪಿ. ತಿಪ್ಪೇಸ್ವಾಮಿ ಮಾತನಾಡಿ, ಭಾರತದ ರಾಷ್ಟ್ರೀಯ ಗ್ರಂಥ ಸಂವಿಧಾನವಾದರೆ, ಪ್ರಜಾಪ್ರಭುತ್ವವೇ ರಾಷ್ಟ್ರೀಯ ಧರ್ಮ. ಸಂವಿಧಾನ ಸಮರ್ಥಿಸಿದಾಗ ಪಾರ್ಲಿಮೆಂಟಿನಲ್ಲಿ ಮಾತನಾಡಿದ ಬಾಬಾ ಸಾಹೇಬರು ಇನ್ನು ಮುಂದೆ ದೇಶವನ್ನಾಳುವ ರಾಜ, ರಾಣಿಯ ಹೊಟ್ಟೆಯಲ್ಲಿ ಜನಿಸದೆ ಮತಪೆಟ್ಟಿಗೆಯಲ್ಲಿ ಜನಿಸುತ್ತಾನೆ ಎಂದಿದ್ದರು. ಸಂವಿಧಾನ ರಚಿಸಿಕೊಳ್ಳಲು ಬ್ರಿಟಿಷರು ಭಾರತೀಯರಿಗೆ ಸೂಚಿಸಿದಾಗ ಹತ್ತಾರು ಧರ್ಮಗಳು, ನೂರಾರು ಸಂಸ್ಕೃತಿಗಳು, ಪ್ರಜಾಪ್ರಭುತ್ವದ ಅರ್ಥವೇ ತಿಳಿಯದ ಅರವತ್ತು ಸಾವಿರಕ್ಕೂ ಹೆಚ್ಚಿನ ಜಾತಿಗಳು, ಅನೇಕ ಭಾಷೆಗಳ ಸಂಕೀರ್ಣ ಪ್ರೇರಣೆಯಿಂದ ತುಂಬಿದ್ದ ಭಾರತೀಯ ಸಮಾಜದ ಸಂವಿಧಾನ ರಚಿಸುವುದು ಸವಾಲಿನ ಕೆಲಸವಾಗಿತ್ತು ಎಂದರು.

ಜಿಪಂ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ, ಹಿರಿಯ ಸಾಹಿತಿ ಪ್ರೊ| ಎಚ್‌. ಲಿಂಗಪ್ಪ, ಆರ್ಥಿಕ ವಿಶ್ಲೇಷಕ ಜಿ.ಎನ್‌. ಮಲ್ಲಿಕಾರ್ಜುನಪ್ಪ, ನಿವೃತ್ತ ಸಮಾಜ ಕಲ್ಯಾಣಾಧಿ ಕಾರಿ ಬಿ.ಪಿ. ಪ್ರೇಮನಾಥ್‌, ಸ್ಲಂ ಜನಾಂದೋಲನ ಅಧ್ಯಕ್ಷ ಕೆ. ರಾಜಣ್ಣ, ಚಳ್ಳಕೆರೆ ನಗರಸಭಾ ಸದಸ್ಯ ಕೆ. ವೀರಭದ್ರಪ್ಪ, ಪ್ರಾಚಾರ್ಯರಾದ ಗುರುಮೂರ್ತಿ, ದೇವೇಂದ್ರಪ್ಪ, ರಾಮಣ್ಣ, ಮೈಸೂರಿನ ರಂಗಕರ್ಮಿ ಶಿವಲಿಂಗಯ್ಯ ಮತ್ತಿತರರು ಇದ್ದರು.

ನ್ಯಾಯವಾದಿ ಬೆನಕನಹಳ್ಳಿ ಚಂದ್ರಪ್ಪ ಸ್ವಾಗತಿಸಿದರು. ನ್ಯಾಯವಾದಿ ಸಿ. ಕುಮಾರ್‌ ಪಾಳ್ಯ ವಂದಿಸಿದರು. ಉಪನ್ಯಾಸಕ ಡಾ| ಬಿ.ಎಂ. ಗುರುನಾಥ್‌ ನಿರೂಪಿಸಿದರು.

‌ವಿಧಾನ ಎಷ್ಟೇ ಒಳ್ಳೆಯದಿದ್ದರೂ ಅದನ್ನು ಆಚರಣೆಗೆ ತರುವವರು ಕೆಟ್ಟವರಾಗಿದ್ದರೆ ಯಾವುದೇ ಆಶಯ ಈಡೇರುವುದಿಲ್ಲ. ಆದ್ದರಿಂದ ಆಡಳಿತ ನಡೆಸುವವರು ಸಂವಿಧಾನದ ಮೂಲ ಆಶಯಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಂಬೇಡ್ಕರ್‌ ಬಹಳ ಹಿಂದೆಯೇ ಹೇಳಿದ್ದಾರೆ. ∙ಬಿ.ಪಿ. ತಿಪ್ಪೇಸ್ವಾಮಿ, ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next