Advertisement

ದಾನ ಇರಲಿ, ಆದರೆ ಬೇಡ ಪ್ರಚಾರದ ಖಯಾಲಿ 

12:30 AM Oct 28, 2018 | |

ಕೆಲವು ಸಲ ಸಹಾಯ ಪಡೆದ ಅಪ್ಪ ಅಮ್ಮಂದಿರ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅವರ ಮಕ್ಕಳು ಸಮಾಜದ ಕೊಂಕು ಮಾತುಗಳಿಗೆ ತುತ್ತಾಗುವುದುಂಟು. ಎಷ್ಟೋ ಸಲ ಅಸಹಾಯಕನೊಬ್ಬನಿಗೆ ಕೆಲವು ಸಾವಿರಗಳನ್ನು ಕೊಟ್ಟು ದೊಡ್ಡ ದಾನಿ ತಾನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ಅದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳುವ ಹುಚ್ಚುತನ ಹಲವರಲ್ಲಿದೆ. ಅಂತಹ ಸಹಾಯವನ್ನು ದಾನವೆನ್ನಲು ಸಾಧ್ಯವಿಲ್ಲ.

Advertisement

ಪರಸ್ಪರ ಸಹಕಾರ, ಸೌಹಾರ್ದತೆ, ಸಹಾಯ,ಅವಲಂಬನೆ, ತ್ಯಾಗ, ಪ್ರೀತಿ, ಸ್ನೇಹ ಎಲ್ಲವೂ ಒಂದು ಆರೋಗ್ಯ ಪೂರ್ಣ ಸಮಾಜದ ಲಕ್ಷಣಗಳು. ದಾನ ನೀಡುವುದು ಕೂಡಾ ಇದರಲ್ಲಿ ಪ್ರಮುಖವಾದುದು. ಸಾಮಾನ್ಯವಾಗಿ ಇರುವವರು ಇಲ್ಲದವರಿಗೆ ನೀಡುವಂತಹ ಯಾವುದೇ ರೀತಿಯ ವಸ್ತುಗಳಿರಲಿ ಹಣಕಾಸಿನ ಸಹಾಯವಿರಲಿ ಅದು ದಾನ ಎಂದು ಕರೆಯಲ್ಪಡುತ್ತದೆ. 

ಎಲ್ಲಾ ಧರ್ಮಗಳು ದಾನದ ಮಹತ್ವವನ್ನು ಸಾರಿ ಹೇಳುತ್ತವೆ. ಮಹಾಭಾರತದಲ್ಲಿನ ಕರ್ಣನ ಪಾತ್ರ ದಾನಕ್ಕೆ ಒಂದು ಅಪ್ರತಿಮ ಸಂಕೇತವಾಗಿ ಉಳಿಯುವಂಥದ್ದು.  ಮಹಾಭಾರತ ಯುದ್ಧದ ಬಳಿಕ ಜಯದ ಸಂಭ್ರಮದಲ್ಲಿದ್ದ ಪಾಂಡವರಿಗೆ ಕೃಷ್ಣನು ಪಾಂಡವರ ಜಯದ ಹಿಂದಿನ ಮುಖ್ಯ ಕಾರಣ ಕರ್ಣನ ದಾನವೇ ಆಗಿತ್ತು ಎಂದು ದಾನದ ಮಹತ್ವವನ್ನು ವಿವರಿಸುತ್ತಾನೆ. ಪ್ರತ್ಯುಪಕಾರವನ್ನು ಬಯಸದೆ ದೇಶ ಕಾಲ ಪಾತ್ರಗಳನ್ನರಿತು ಮಾಡುವ ಸಾತ್ವಿಕ ದಾನ ದಾನಗಳಲ್ಲಿ ಶ್ರೇಷ್ಠವಾದದ್ದು ಎಂದು ಕೃಷ್ಣ ಹೇಳುತ್ತಾನೆ. ಅನ್ನದಾನ ಮಾಡಿದರೆ ದಾರಿದ್ರé ನೀಗುತ್ತದೆ, ಅಕ್ಕಿ ದಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ, ತುಪ್ಪ ದಾನ ಮಾಡಿದರೆ ರೋಗ ನಿವಾರಣೆಯಾಗುತ್ತದೆ ಎನ್ನುವಂತಹ ನಂಬಿಕೆಗಳೂ ಕೂಡ ಇವೆ. 

ದಾನ ಮಾಡಲು ಶ್ರೀಮಂತರೇ ಆಗಿರಬೇಕೆಂದಿಲ್ಲ. ಹಂಚಿ ತಿನ್ನುವುದೇ ದಾನ. ದಾನವು ತ್ಯಾಗದ ಒಂದು ರೂಪ. ದಾನ ಮಾಡುವುದು ದೈವೀಗುಣ. ಒಂದಿನಿತೂ ದಾನ ಮಾಡದೆ ಸಂಪತ್ತನ್ನು ಸಂಗ್ರಹಿಸಿ ಇಡುವುದು ಅಸುರೀ ಗುಣ ಎನಿಸುತ್ತದೆ. ದಾನವೆಂದರೆ ಬೇಕಾಬಿಟ್ಟಿ ಮಾಡುವಂಥದ್ದಲ್ಲ. ಅಥವಾ ನಮ್ಮಲ್ಲಿ ಇರುವಂತಹ ಅನುಪಯುಕ್ತ ವಸ್ತುಗಳನ್ನು ಹೇಗೂ ಬಿಸಾಡಬೇಕಲ್ಲ ಅವರಾದರೂ ಬಳಸಲಿ ಎಂದು ನೀಡುವಂಥದ್ದು ದಾನ ಎನಿಸುವುದಿಲ್ಲ. ಅಯೋಗ್ಯರಿಗೆ, ಅಪಾತ್ರರಿಗೆ ದಾನ ಮಾಡದೆ ಸತ್ಪಾತ್ರರಿಗೆ ದಾನ ಮಾಡಬೇಕು. ಇಲ್ಲವಾದಲ್ಲಿ ದಾನ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. 

ದಾನ ಮಾಡುವಾಗಲೂ “ಇದಂ ನ ಮಮ’ ಅಂದರೆ ಇದು ತನಗೆ ಸೇರಿದ್ದಲ್ಲ ಎನ್ನುವಂತಹ ಭಾವನೆಯಿಂದಲೇ ದಾನ ಮಾಡಬೇಕು ಎನ್ನುತ್ತಾರೆ. ಮಾಡಬೇಕೋ ಬೇಡವೋ ಎನ್ನುವ ಅನುಮಾನದಿಂದ ದಾನ ಮಾಡದೆ ಸಂಪೂರ್ಣ ಮನಸ್ಸಿನಿಂದ ದಾನ ಮಾಡಬೇಕು. ದಾನ ಮಾಡಿದ್ದಕ್ಕೆ ಹೆಮ್ಮೆ ಪಡಬೇಕಿಲ್ಲ. ನೀಡುವುದನ್ನು ಗೌರವದಿಂದ ನೀಡಬೇಕು ಜೊತೆಯಲ್ಲಿ ದಾನ ಮಾಡುವಾಗ ಯಾವುದೇ ರೀತಿಯ ಪ್ರತಿಫ‌ಲವನ್ನು ಅಪೇಕ್ಷಿಸಬಾರದು. ಪ್ರಚಾರವನ್ನು ಕೂಡ ಬಯಸಬಾರದು.

Advertisement

 ಈ ದಿನಗಳಲ್ಲಿ ಕಷ್ಟದಲ್ಲಿದ್ದವರಿಗೆ ಉಪಕಾರ ಮಾಡಿದ ಬಗೆಗೆ ದಾನ ನೀಡಿದ ಬಗೆಗೆ ಮಾಹಿತಿಯ ಜೊತೆಗೆ ದಾನ ಅಥವಾ ಸಹಾಯಧನ ನೀಡುತ್ತಿರುವ ತಮ್ಮ ಫೋಟೋಗಳನ್ನು ಪತ್ರಿಕೆಗಳಲ್ಲಿ ಹಾಕಿಕೊಳ್ಳುವುದು ಮಾಮೂಲಿ ಎನ್ನುವಂತಾಗಿಬಿಟ್ಟಿದೆ. ಕೆಲವೊಂದು ಸಂದರ್ಭದಲ್ಲಿ ಅದು ತಪ್ಪೇನಲ್ಲ. ಕೆಲವೊಮ್ಮೆ ಕಾನೂನಿನ ಪರಿಧಿಯಲ್ಲೂ ಅದು ಅವಶ್ಯಕವಾಗಿರಬಹುದು. ಆದರೆ ತೀರಾ ವೈಯಕ್ತಿಕವಾಗಿ ಬಡತನದಲ್ಲಿರುವವರಿಗೆ ಅನಾರೋಗ್ಯ ಪೀಡಿತರಿಗೆ, ಅಂಗವಿಕಲರಿಗೆ ಸಹಾಯವನ್ನು ನೀಡುವಾಗ ಅವರ ಜೊತೆಗೆ ನಿಂತು ಫೋಟೋಗಳನ್ನು ತೆಗೆಸಿಕೊಂಡು ಅದನ್ನು ಪತ್ರಿಕೆಗಳಲ್ಲಿ ಅಥವಾ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿಕೊಳ್ಳುವುದು ಕೆಲವರಿಗೆ ಒಂದು ರೀತಿಯ ಖಯಾಲಿ ಎನ್ನುವಂತಾಗಿಬಿಟ್ಟಿದೆ. ಇಂತಹ ನಿಲುವುಗಳು ಖಂಡಿತಾ ಸರಿಯಲ್ಲ. 

 ಇಂತಹ ಫೋಟೋಗಳು ಪ್ರಕಟವಾದಾಗ ಒಂದರ್ಥದಲ್ಲಿ ಅವು ಅವರ ಹೀನ ಸ್ಥಿತಿಯನ್ನು ಅವಮಾನಿಸುವಂತಿರುತ್ತವೆ. ಅಂತಹ ಚಿತ್ರಗಳು ಕೆಲವೊಮ್ಮೆ ಸಹಾಯ ಪಡೆದವರ ಕೀಳರಿಮೆಗೂ ಕಾರಣವಾಗಬಲ್ಲವು. ನಿಮ್ಮ ಫೋಟೋ ಬಂದಿದೆಯಲ್ಲಾ ಮರಾಯೆ ಅಂತ ಸುತ್ತಲಿನವರು ತಿಳಿಸಿದಾಗ ಬಹಳಷ್ಟು ಸಲ ಅದು ಒಂದು ರೀತಿಯ ಮುಜುಗರವನ್ನುಂಟು ಮಾಡಿ ಸಹಾಯ ಪಡೆದವರು ತಲೆತಗ್ಗಿಸುವಂತೆ ಮಾಡುತ್ತದೆ. ಕೆಲವು ಸಲ ಸಹಾಯ ಪಡೆದ ಅಪ್ಪ ಅಮ್ಮಂದಿರ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅವರ ಮಕ್ಕಳು ಸಮಾಜದ ಕೊಂಕು ಮಾತುಗಳಿಗೆ ತುತ್ತಾಗುವುದುಂಟು. ಎಷ್ಟೋ ಸಲ ಅಸಹಾಯಕನೊಬ್ಬನಿಗೆ ಕೆಲವು ಸಾವಿರಗಳನ್ನು ಕೊಟ್ಟು ದೊಡ್ಡ ದಾನಿ ತಾನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ಅದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳುವ ಹುಚ್ಚುತನ ಹಲವರಲ್ಲಿದೆ. ಅಂತಹ ಸಹಾಯವನ್ನು ದಾನವೆನ್ನಲು ಸಾಧ್ಯವಿಲ್ಲ. 

ಇತ್ತೀಚೆಗೆ ನಾಲ್ಕು ಜನ ಕೇವಲ ಎರಡು ಬಾಳೆಹಣ್ಣನ್ನು ಮಂಚದ ಮೇಲೆ ಕುಳಿತಿರುವ ರೋಗಿಯೊಬ್ಬನಿಗೆ ನೀಡುತ್ತಿರುವ ಚಿತ್ರ ಜಾಲತಾಣಗಳಲ್ಲಿ ಬಹಳ ವೈರಲ್‌ ಆಗಿತ್ತು. ಇಂತಹ ಸಣ್ಣ ಪುಟ್ಟ ದಾನ ಮಾಡಿದ್ದನ್ನೆಲ್ಲಾ ಪೇಪರ್‌ಗಳಲ್ಲಿ ಹಾಕಲು ಹೊರಟರೆ ದಿನಪತ್ರಿಕೆಗಳ ಬದಲಿಗೆ ದಿನಪುಸ್ತಕಗಳನ್ನೇ ಮುದ್ರಿಸಬೇಕಾದೀತು. 

ಒಟ್ಟಿನಲ್ಲಿ ಒಂದು ವಿಚಾರವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬೇರೆಯವರಿಗೆ ಮಾಡುವ ಸಹಾಯ ಅವರನ್ನು ಬೇರಾವುದೇ ರೀತಿಯಲ್ಲಿ ಘಾಸಿಗೊಳಿಸುವಂತಿ ರಬಾರದು. ಅವರ ವ್ಯಕ್ತಿತ್ವವನ್ನು ಗೌರವವನ್ನು ಕುಂದಿಸ ಬಾರದು. ದಾನ ಮಾಡಿದ್ದನ್ನು ನಾಲ್ಕು ಜನರಿಗೆ ತಿಳಿಸುವು ದಕ್ಕಿಂತ ನಾವು ಹೊಂದುವ ಆತ್ಮತೃಪ್ತಿ ದೊಡ್ಡದು. ಅಂತಹ ಮನೋಭಾವ ನಮ್ಮಲ್ಲಿ ಒಡಮೂಡಬೇಕು. ಪರೋಪ ಕಾರಾರ್ಥಂ ಇದಂ ಶರೀರಂ ಎನ್ನುವ ಮಾತಿಗನುಗುಣವಾಗಿ ಬದುಕಿರುವಷ್ಟು ದಿನ ನಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಯಾವುದೇ ಪ್ರತಿಫ‌ಲಾಪೇಕ್ಷೆಯಿಲ್ಲದೆ ಅರ್ಹರಿಗೆ ಮಾಡಿ ಆ ಮೂಲಕ ಅವರ ಮನೆ ಮನಗಳಲ್ಲಿ ಕೊಂಚವಾದರೂ ಬೆಳಕನ್ನು ಮೂಡಿಸಿದರೆ ಅದು ಜಗತ್ತಿನ ಶ್ರೇಷ್ಠ ದಾನ ಎನ್ನಿಸಿಕೊಳ್ಳುತ್ತದೆ.

ನರೇಂದ್ರ ಎಸ್‌. ಗಂಗೊಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next