Advertisement

“ಸಾಮಾಜಿಕ ಸಮಸ್ಯೆ ಪರಿಹರಿಸಲು ಗರಿಷ್ಠ ಪ್ರಯತ್ನ’

09:44 PM May 27, 2019 | Team Udayavani |

ಪುತ್ತೂರು: ನ್ಯಾಯದ ನಿರೀಕ್ಷೆಯಲ್ಲಿ ಬರುವ ಜನರ ನಿರೀಕ್ಷೆಗೆ ಚ್ಯುತಿ ಬಾರದಂತೆ ನ್ಯಾಯ ಒದಗಿಸುವ ಜವಾಬ್ದಾರಿ ನ್ಯಾಯಾಲಯಕ್ಕಿದೆ. ನ್ಯಾಯಾಧೀಶರು ಮತ್ತು ವಕೀಲರು ಸೇರಿ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಗರಿಷ್ಠ ಪ್ರಯತ್ನ ಮಾಡಬೇಕು ಎಂದು ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಹೇಳಿದರು.

Advertisement

ನೂತನವಾಗಿ ಪುತ್ತೂರಿಗೆ ಮಂಜೂರಾದ ಎರಡನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂ ಎಫ್‌ಸಿ ನ್ಯಾಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರಿನಲ್ಲಿ ಅಧಿಕಾರ ಸ್ವೀಕರಿಸಿದ ಅವರು 150 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರಿನ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಣೆ ಅವಕಾಶ ಲಭಿಸಿರುವುದು ಖುಷಿ ನೀಡಿದೆ ಎಂದರು.

ಪಾರದರ್ಶಕ ನ್ಯಾಯ
ನ್ಯಾಯಾಧೀಶರು ಹಾಗೂ ನ್ಯಾಯವಾದಿ ಗಳು ಪರಸ್ಪರ ಸಹಕಾರ ಮನೋ ಭಾವದೊಂದಿಗೆ ಕೆಲಸ ನಿರ್ವಹಿಸುವ ಮೂಲಕ ನ್ಯಾಯಾಲಯ ವ್ಯವಸ್ಥೆಯ ಗೌರವ ಹೆಚ್ಚಿಸಬಹುದು. ಕ್ಲಪ್ತ ಹಾಗೂ ಪಾರದರ್ಶಕವಾಗಿ ನ್ಯಾಯ ಒದಗಿಸುವ ಆವಶ್ಯಕತೆ ಇಂದು ಇದೆ. ಕಲಿಕೆ ಎಂಬುದಕ್ಕೆ ಕೊನೆಯೇ ಇಲ್ಲದಿರುವುದರಿಂದ ಎಲ್ಲ ರಿಂದಲೂ ತಿಳಿದುಕೊಂಡು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಸಹಕಾರ ನಿರೀಕ್ಷೆ
ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾ ಧೀಶ ಮಂಜುನಾಥ್‌ ಮಾತನಾಡಿ, ನ್ಯಾಯಾಲಯ ವ್ಯವಸ್ಥೆಗೆ ಅಪಾರ ಗೌರವ ನೀಡುವ ಪುತ್ತೂರಿನಲ್ಲಿ ಕೆಲಸ ಮಾಡಲು ತುಂಬಾ ಖುಷಿ ಇದೆ. ವ್ಯವಸ್ಥೆಗೆ ತಪ್ಪಾಗುವಂತಹ ಯಾವುದೇ ಪ್ರಕರಣಗಳು ಇಲ್ಲಿ ನಡೆಯುವುದಿಲ್ಲ. ಇಂತಹ ಉತ್ತಮ ಸಹಕಾರವನ್ನು ಮುಂದೆಯೂ ನೀಡಬೇಕು ಎಂದು ವಿನಂತಿಸಿದರು.

ಕಲಾಪಕ್ಕೆ ಚಾಲನೆ
ಹಾಲಿ 5 ಕೋರ್ಟುಗಳಿರುವ ಪುತ್ತೂರಿಗೆ 6ನೇ ಕೋರ್ಟು ರೂಪದಲ್ಲಿ ಮಂಜೂರಾದ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವ್ಯವಸ್ಥೆಯನ್ನು ಮಿನಿ ವಿಧಾನಸೌಧದ ಬಳಿಯ ಮಧ್ಯಸ್ಥಿಕಾ ಕೇಂದ್ರದಲ್ಲಿ ನ್ಯಾಯಾಧೀಶ ರುಡಾಲ್ಫ್ ಪಿರೇರ ಅವರು ಉದ್ಘಾಟಿಸಿದರು. ಅನಂತರ ಆರಂಭಿಕ ನ್ಯಾಯಾಲಯ ಕಲಾಪಕ್ಕೆ ಚಾಲನೆ ನೀಡಲಾಯಿತು.

Advertisement

ಆನೆಮಜಲಿನಲ್ಲಿ ಕೋರ್ಟ್‌
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್‌ ಕೆ.ವಿ. ಸ್ವಾಗತಿಸಿ ಮಾತ ನಾಡಿ, 2016ರಲ್ಲಿ ನೂತನ ಕೋರ್ಟ್‌ಗೆ ನೋಟಿಫಿಕೇಶನ್‌ ಆಗಿತ್ತು ಎಂದು ತಿಳಿಸಿದರು. ಬೇಸಗೆ ರಜೆಯ ಸಂದರ್ಭ ಅನಿರೀಕ್ಷಿತವಾಗಿ ಮಂಜೂರಾತಿ ಲಭಿಸಿದೆ. ಮುಂದೆ ಬನ್ನೂರು ಆನೆಮಜಲಿನಲ್ಲಿ ನಿರ್ಮಾಣವಾಗುವ ನ್ಯಾಯಾಲಯ ಸಂಕೀರ್ಣದಲ್ಲಿ ಎಲ್ಲ ನ್ಯಾಯಾಲಯ ವ್ಯವಸ್ಥೆಗಳು ಒಂದೇ ಕಡೆ ಕಾರ್ಯನಿರ್ವಹಿಸಲಿವೆ ಎಂದರು.

ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಲತಾದೇವಿ ಜಿ.ಎ., 1ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಕಿಶನ್‌ ಬಿ. ಮಡಲಗಿ, ಪುತ್ತೂರು ವಕೀಲರ ಸಂಘದ ಪದಾಧಿಕಾರಿಗಳಾದ ಸುರೇಶ್‌ ರೈ, ಮಂಜುನಾಥ ಎನ್‌.ಎಸ್‌. ವೆಂಕಟೇಶ್‌ ಎನ್‌., ಮಮತಾ, ದಿವ್ಯರಾಜ್‌ ಹೆಗ್ಡೆ ಉಪಸ್ಥಿತರಿದ್ದರು.
ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಕಾರ್ಯಕ್ರಮ ನಿರ್ವಹಿಸಿದರು. ವಕೀಲರ ಸಂಘದ ಸದಸ್ಯರು, ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

ನ್ಯಾಯಾಧೀಶರಿಗೆ ಸ್ವಾಗತ
ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ನೂತನವಾಗಿ ಆಗಮಿಸಿದ ರುಡಾಲ್ಫ್ ಪಿರೇರ ಹಾಗೂ ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾಗಿ ಆಗಮಿಸಿದ ವೆಂಕಟೇಶ ಎನ್‌. ಅವರನ್ನು ಸ್ವಾಗತಿಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next