Advertisement

ಮತ್ಸ ಕ್ಷಾಮ: ನಾಡದೋಣಿ ಮೀನುಗಾರಿಕೆಗೆ ಹೊಡೆತ

01:44 AM Mar 31, 2019 | sudhir |

ಗಂಗೊಳ್ಳಿ: ಮತ್ಸಕ್ಷಾಮದಿಂದಾಗಿ ಗಂಗೊಳ್ಳಿ, ಕೋಡಿ, ಮರವಂತೆ, ಕೊಡೇರಿ ಸಹಿತ ಹೆಚ್ಚಿನ ಎಲ್ಲ ಕಡೆಗಳಲ್ಲಿ ಕಳೆದ 2 ತಿಂಗಳಿನಿಂದ ನಾಡದೋಣಿಗಳಿಗೆ ಸರಿಯಾಗಿ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

Advertisement

ಮರವಂತೆ, ಶಿರೂರು, ಗಂಗೊಳ್ಳಿ, ಕೋಡಿ, ಕೊಡೇರಿ ಭಾಗದ ಸುಮಾರು 600 ನಾಡದೋಣಿಗಳಿದ್ದು, ಸಾವಿರಾರು ಮಂದಿ ಮೀನುಗಾರರು ಸಾಂಪ್ರದಾಯಿಕ ಮೀನು ಗಾರಿಕೆಯನ್ನೇ ಆಶ್ರಯಿಸಿದ್ದಾರೆ. ಈಗ ಹಲವು ದಿನ ಗಳಿಂದ ಮೀನುಗಾರಿಕೆಯಿಲ್ಲದೆ ಮೀನುಗಾರರು ಕಂಗಾಲಾಗಿದ್ದಾರೆ.

ನಾಡದೋಣಿಯಲ್ಲಿ 1 ಜೋಡು ಅಂದರೆ (3 ದೋಣಿ) ತಲಾ 10 ಮಂದಿಯಂತೆ 30 ಜನ ಇರುತ್ತಾರೆ. ಒಮ್ಮೆ ಮೀನುಗಾರಿಕೆಗೆ ತೆರಳಿದರೆ ಕನಿಷ್ಠ 15 ಸಾವಿರ ರೂ. ಖರ್ಚಾಗುತ್ತದೆ. ಆದರೆ ಈಗ ಸಿಗುವ ಮೀನು 10 ಸಾವಿರ ರೂ. ಕೂಡ ಆದಾಯ ಸಿಗುತ್ತಿಲ್ಲ ಎನ್ನುತ್ತಾರೆ ಮೀನುಗಾರರು.

ಮುಂಗಾರಿನಲ್ಲೂ ಹೊಡೆತ
ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುವ ಜೂನ್‌ನಿಂದ ಆಗಸ್ಟ್‌ವರೆಗೆ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಆದರೆ ಈ ಬಾರಿ ಮುಂಗಾರಿನ ಮೀನುಗಾರಿಕೆಯು ಕೂಡ ನಾಡದೋಣಿಗಳಿಗೆ ಅಷ್ಟೇನೂ ಆಶಾ ದಾಯಕವಾಗಿರಲಿಲ್ಲ. ಮೀನುಗಾರಿಕೆಗೆ ತೆರಳಿದ್ದರೂ ಸಹ ಉತ್ತಮ ಪ್ರಮಾಣದಲ್ಲಿ ಮೀನುಗಳು ಸಿಗದೇ ಹೆಚ್ಚಿನ ಸಂದರ್ಭ ಬರಿಗೈಯಲ್ಲಿ ವಾಪಸು ಬಂದಂತಹ ನಿದರ್ಶನ ಸಹ ಇದೆ.

ಯಾಂತ್ರೀಕೃತ ಮೀನುಗಾರಿಕೆಯೂ ಇಲ್ಲ
ನಾಡದೋಣಿ ಮೀನುಗಾರಿಕೆ ಮಾತ್ರವಲ್ಲ, ಈ ಬಾರಿ ಯಾಂತ್ರೀಕೃತ ಮೀನುಗಾರಿಕೆಗೂ ಹೊಡೆತ ಬಿದ್ದಿದೆ. ಮತ್ಸ ಕ್ಷಾಮದಿಂದಾಗಿ ಬೋಟ್‌ಗಳಿಗೂ ಉತ್ತಮ ಪ್ರಮಾಣದಲ್ಲಿ ಮೀನುಗಳು ಸಿಕ್ಕಿಲ್ಲ. ಇದರಿಂದ ಗಂಗೊಳ್ಳಿ ಸಹಿತ ಎಲ್ಲ ಕಡೆಗಳ ಬಂದರಿನಲ್ಲಿಯೂ ಕೂಡ ಹೆಚ್ಚಿನ ಬೋಟ್‌ಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲಿಯೇ ಲಂಗರು ಹಾಕಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next