ತುಮಕೂರು: ಬಸವಣ್ಣನವರ ತತ್ವಾದರ್ಶಗಳ ಬಗ್ಗೆ ಇಂದು ಚಿಂತನೆ ಅತ್ಯಗತ್ಯ ವಾಗಿದ್ದು, ಅಸಮಾನತೆ, ಲಿಂಗಭೇದ, ಮೇಲುಕೀಳುಗಳನ್ನು ಹೋಗಲಾಡಿ ಸಲು ನಾವೇನು ಮಾಡಬೇಕು ಎಂಬ ಬಗ್ಗೆ ಚಿಂತಿಸಬೇಕು. ಸಾಮಾಜಿಕ ಕ್ರಾಂತಿಯನ್ನುಂಟು ಮಾಡುವ ಕಾರ್ಯದಲ್ಲಿ ಮಠಗಳು ಮುಂಚೂಣಿಯಲ್ಲಿ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶ್ರೀಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಶನಿವಾರ ಏರ್ಪಡಿಸಿದ್ದ ಡಾ| ಶ್ರೀ ಶಿವಕುಮಾರ ಸ್ವಾಮೀಜಿ ಅವರ 4ನೇ ಪುಣ್ಯ ಸಂಸ್ಮರಣೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಠದ ಉಸಿರು: ಸಂತೋಷ್
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, ಮಠದಲ್ಲಿರುವ ಹತ್ತಾರು ಸಾವಿರ ಮಕ್ಕಳು ಶ್ರೀ ಮಠದ ಉಸಿರು. ಇಲ್ಲಿನ ಪರಿಸರಕ್ಕೆ ಚೈತನ್ಯ ನೀಡಿರುವುದು ಶ್ರೀಶಿವಕುಮಾರ ಸ್ವಾಮೀಜಿಗಳು ಎಂದರು.
ಮಹಾನ್ ಚೇತನ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಅನ್ನ, ಜ್ಞಾನ, ಆಶ್ರಯದ ದಾಸೋಹ ಮಾಡಿದ ಶ್ರೀ ಶಿವಕುಮಾರ ಸ್ವಾಮೀಜಿಗಳು ಮಕ್ಕಳಲ್ಲಿ ದೇವರನ್ನು ಕಂಡು ದೇವರಾದರೂ, ಬಸವಣ್ಣ ಅವರು ಹೇಳಿದಂತೆ ಮಾನವೀಯತೆ ದಾರಿಯಲ್ಲಿ ಸಾಗಿದ ಮಹಾನ್ ಚೇತನ ಎಂದು ಹೇಳಿದರು.
Related Articles
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಶ್ರೀಶಿವಕುಮಾರ ಸ್ವಾಮೀಜಿ ಅವರನ್ನು ಮಠದಲ್ಲಿ ಕಟ್ಟಿ ಹಾಕಿದ್ದೀರಿ. ಅವರು ಹೊರಗೆ ಬಂದರೆ ವಿಶ್ವಕ್ಕೆ ಬೆಳಕಾಗುವ ವ್ಯಕ್ತಿಯಾಗುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದರು. ಅಂತಹ ಮಹಾನ್ ಜ್ಯೋತಿ ಡಾ| ಶಿವಕುಮಾರ ಸ್ವಾಮೀಜಿ ಎಂದರು.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕೇಂದ್ರ ಸಚಿವ ಭಗವಂತ ಖೂಬ, ರಾಜ್ಯದ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್, ಎಸ್. ಟಿ. ಸೋಮಶೇಖರ್, ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಎಸ್.ಶಿವಣ್ಣ, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಮಸಾಲೆ ಜಯರಾಮ್, ರಾಜೇಶ್ಗೌಡ, ಮಸಾಲೆ ಜಯರಾಮ್, ವೈ.ಎ.ನಾರಾಯಣ ಸ್ವಾಮಿ ಮುಂತಾದವರಿದ್ದರು.