Advertisement

ಮಠಗಳು ಜಾತಿಗೆ ಸೀಮಿತವಲ್ಲ

02:22 PM Jan 12, 2020 | Suhan S |

ಗುತ್ತಲ: ಸಮಾಜಕ್ಕಾಗಿ, ಭಕ್ತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾತ್ಮರನ್ನು ನೆನೆದರೆ ಮುಕ್ತಿ ಪ್ರಾಪ್ತಿಯಾಗುವುದು. ಅದರಂತೆ ಅವರ ಪುಣ್ಯ ಸ್ಮರಣೋತ್ಸವ ಆಚರಣೆ ಮಾಡಲಾಗುವುದು ಎಂದು ಶಿರಹಟ್ಟಿ ಫಕ್ಕಿರೇಶ್ವರ ಸಂಸ್ಥಾನಮಠದ ಜಗದ್ಗುರು ಫಕ್ಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.

Advertisement

ಸಮೀಪದ ಅಗಡಿಯ ರುದ್ರಮುನಿ ಶಿವಯೋಗಿಗಳ 60ನೇ ಪುಣ್ಯ ಸ್ಮರಣೋತ್ಸವ ಹಾಗೂ ಲಿಂ| ಸಂಗನಬಸವ ಸ್ವಾಮೀಜಿ ಸ್ಮರಣೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಜನಪದ ಸಂಗೀತ ಹಾಗೂ ಧರ್ಮಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಠದಲ್ಲಿನ ಪುರಾಣ ಪ್ರವಚನಗಳು ಭಕ್ತಿ ಹೆಚ್ಚಿಸುವ ಮೂಲಕ ಸಮಾಜವನ್ನು ಬದಲಾವಣೆ ಕಡೆಗೆ ಸಾಗಿಸುತ್ತವೆ. ಅದರಂತೆ ಮಠಗಳು ಯಾವುದೇ ಜಾತಿಗೆ ಸೀಮಿತವಾಗಿರದೆ ಜಾತ್ಯಾತೀತತೆಯ ಮಠಗಳಾಗಿ ಪರಿವರ್ತನೆ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಸ್ವಾಮೀಜಿ ಮಾತನಾಡಿ, ಸಮಾಜ ಹಾಗೂ ಮಠಗಳ ಮಧ್ಯೆ ಸಹಕಾರದ ಅವಿನಾಭಾವ ಸಂಬಂಧ ಹೊಂದಿರುವ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೇ ಸಾಂಗವಾಗಿ ನೆರವೇರುತ್ತವೆ. ಲಿಂಗಪೂಜಾ ನಿಷ್ಠರಾದ ಸಂಗನಬಸವ ಶ್ರೀಗಳು ಲಿಂಗೈಕ್ಯರಾಗಿದ್ದರೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಕಲ್ಮಠ ಹಾಗೂ ಪ್ರಭುಸ್ವಾಮಿಮಠವನ್ನು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಮೂಲಕ ಗುರುಸಿದ್ಧ ಸ್ವಾಮೀಜಿ ಕಾಯಕಯೋಗಿ ಆಗಿದ್ದಾರೆ ಎಂದರು.

ನೆಗಳೂರ ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ ಮಾತನಾಡಿ, ಧರ್ಮ ಜಾಗೃತಿಗಾಗಿ ಮಠಗಳಲ್ಲಿ ಧಾರ್ಮಿಕಕಾರ್ಯಕ್ರಮಗಳು ಜರುಗುತ್ತವೆ. ಧರ್ಮದ ಉಳಿವಿನಲ್ಲಿ ಮಾತೃ ಸ್ವರೂಪ ಮಹಿಳೆಯರ ಪಾತ್ರ ಹಿರಿದು. ತಮ್ಮ ಮಕ್ಕಳಿಗೆ ಮನೆಯಲ್ಲಿ ಧರ್ಮದ ಬಗ್ಗೆ ತಿಳಿವಳಿಕೆ ನೀಡುವ ಮೂಲಕ ಮನೆಯಿಂದಲೇ ಧರ್ಮ ಶಿಕ್ಷಣ ನೀಡಬೇಕು ಎಂದರು.

ಕಾರ್ಯಕ್ರಮ ಪೂರ್ವದಲ್ಲಿ ಪ್ರಭುಸ್ವಾಮಿಮಠದ ಗುರುಸಿದ್ಧ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡದ ಹಾಸ್ಯ ಮತ್ತು ಜನಪದ ಕಲಾತಂಡದ ಇಮಾಮಸಾಬ್‌ ವಲ್ಲಪ್ಪನವರ ಹಾಗೂ ವಾಗೀಶ ಭಿಕ್ಷಾವರ್ತಿಮಠ ತಂಡ ಸಂಗೀತ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮದಲ್ಲಿ ಕಂಪ್ಲಿಯ ಅಭಿನವ ಪ್ರಭು ಸ್ವಾಮೀಜಿ, ಬಸವಕಲ್ಯಾಣದ ಶ್ರೀ ಸಂಗಮೇಶ್ವರ ದೇವರು, ಶಾಸಕ ನೆಹರು ಓಲೇಕಾರ, ಮುಖಂಡರಾದ ಕೋಟ್ರಯ್ಯ ಕೋವಳ್ಳಿಮಠ, ನಾಗರಾಜ ಎರಿಮನಿ, ಶಂಭಣ್ಣ ಬಸೇಗೆಣ್ಣಿ, ನಾಗರಾಜ ಬಸೆಗೇಣ್ಣಿ, ಪ್ರಭು ಮರಗೂರ, ನೀಲಪ್ಪ ಚಾವಡಿ ಸೇರಿದಂತೆ ಅನೇಕರಿದ್ದರು. ಶಿಕ್ಷಕಿಯರಾದ ರೇಣುಕಾ ಕಮ್ಮಾರ ಹಾಗೂ ದಾಕ್ಷಾಯಣಿ ಮಠದ ನಿರೂಪಿಸಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next