Advertisement

ಪಾಂಚಾಲಿಗೆ ಮರುಹುಟ್ಟು ಕೊಟ್ಟ ಸಮೂಹ ಕಲಾಲಾಂಛನ

07:08 PM Jan 24, 2020 | mahesh |

ಮಹಾಭಾರತದಲ್ಲಿ ಪಾಂಚಾಲಿಯಷ್ಟು ಸಂಕೀರ್ಣವಾದ ಮತ್ತೂಂದು ಪಾತ್ರವೇ ಇಲ್ಲ. ಆಕೆಯ ಕತೆಯನ್ನು ಇಲ್ಲಿನ ತನಕ ಕವಿಗಳು ಪುನರಪಿ ನಿರ್ಮಾಣ ಮಾಡುತ್ತಲೇ ಬಂದಿದ್ದಾರೆ. ರಂಗಕರ್ಮಿಗಳು ಆ ಕತೆಗೆ ಜೀವದುಂಬುತ್ತಲೇ ಬಂದಿದ್ದಾರೆ.

Advertisement

ಉದ್ಯಾವರ ಮಾಧವಾಚಾರ್ಯರ ಪಾಂಚಾಲಿಯು ದ್ರೌಪದಿಯ ಬದುಕಿನ ಏರಿಳಿತ ಗಳನ್ನು ಪದ್ಯ ಗದ್ಯ ಮಿಶ್ರಣದ ಸರಳಲಯದಲ್ಲಿ ಅಭಿವ್ಯಕ್ತಿಸುವ ನೃತ್ಯಮನೋಧರ್ಮದ ಹಿನ್ನೆಲೆಯ ಗೀತರೂಪಕ. ಇದನ್ನು ಯಕ್ಷ ಭರತ ಸಂಗಮ ನೃತ್ಯರೂಪಕವಾಗಿಯೂ ಅಭಿನಯಿಸುವುದು ಸಾಧ್ಯವಿರುವುದರಿಂದ ರಾಗ ತಾಳ ರಂಗಸಂಗತಿ ಮತ್ತು ವೇಷಭೂಷಣಗಳ ಕುರಿತು ಉದ್ಯಾವರರು ಹಲವು ಪ್ರಯೋಗಗಳನ್ನು ಮಾಡಿದ್ದಾರೆ.

ಉದ್ಯಾವರ ಮಾಧವಾಚಾರ್ಯರ ಪ್ರಯೋಗ ದ್ರೌಪದಿಯ ಜೀವಿತದ ಸ್ಥಿತ್ಯಂತರಗಳನ್ನು ನೃತ್ಯ ಮನೋಧರ್ಮದ ನೆಲೆಯಲ್ಲಿ ಸಂಗೀತವಾಗಿಸಲಿಕ್ಕೆ ಯಕ್ಷಗಾನ ಚೌಕಟ್ಟಿನ ಪದ್ಯದೊಂದಿಗೆ ಗದ್ಯಸಮ್ಮಿಶ್ರಣ ವನ್ನೂ ಬಳಸಿಕೊಂಡಿದೆ. ಈ ರೂಪಕದಲ್ಲಿ ಅವರು ಯಕ್ಷಗಾನ ಭಾಗವತರನ್ನು, ಚೆಂಡೆ ಮೃದಂಗ ವಾದಕರನ್ನು ಬಳಸಿದ್ದು ಮಾತ್ರವಲ್ಲ, ಪಾಂಚಾಲಿಯ ನೃತ್ಯವನ್ನು ಕಲಾತ್ಮಕಗೊಳಿಸಲು ಯಕ್ಷಗಾನದ ನಡೆ, ಹೆಜ್ಜೆಗಾರಿಕೆಗಳನ್ನು ದುಡಿಸಿಕೊಂಡಿದ್ದಾರೆ. ಭಾಗವತರಾದ ಕೆ.ಜೆ. ಗಣೇಶ್‌, ಕವಿ ಅಪೇಕ್ಷಿಸಿದ ರಾಗ, ತಾಳ, ರಂಗಸಂಗತಿಗಳನ್ನು ಗಮನದಲ್ಲಿರಿಸಿಕೊಂಡೇ ಪಾಂಚಾಲಿಯ ಪ್ರಯೋಗವನ್ನು ವಿಶಿಷ್ಟವಾಗಿಸುತ್ತಾ ಬಂದಿದ್ದಾರೆ.

ಉಡುಪಿ ರಾಜಾಂಗಣದಲ್ಲಿ ಜ.12ರಂದು, ಪಾಂಚಾಲಿಯ ಮತ್ತೂಂದು ಪ್ರದರ್ಶನವಾಯಿತು. ನಿರ್ದೇಶನ ಮತ್ತು ಗದ್ಯಕ್ಕೆ ಸ್ವರ ಕೊಟ್ಟಿದ್ದು ಮಾಧವಾಚಾರ್ಯರೇ. ಹಿಮ್ಮೇಳದಲ್ಲಿ ಕೆ.ಜೆ. ಗಣೇಶ್‌ ಸಹೋದರರು ಮತ್ತು ಪಾಂಚಾಲಿಯಾಗಿ ಭ್ರಮರಿ ಶಿವಪ್ರಕಾಶ್‌. ಮಾಧವಾಚಾರ್ಯರರಷ್ಟೇ ನೀಡಬಹುದಾದ ಸ್ವರ ಗಾಂಭೀರ್ಯವು ಅವರ ರೂಪಕಗಳನ್ನು ಬಹಳ ಎತ್ತರಕ್ಕೆ ಏರಿಸುತ್ತದೆ. ಅವರ ಏರುಸ್ವರವು ಆಪ್ಯಾಯಮಾನ ಅನುಭವವೊಂದನ್ನು ಉಳಿಸಿ ಬಿಡುತ್ತದೆ. ದ್ರೌಪದಿ ಸ್ವಯಂವರ, ವಸ್ತ್ರಾಪಹರಣ, ಮಹಾಪ್ರಸ್ಥಾನ ಸಂದರ್ಭಗಳನ್ನು ಉದ್ಯಾವರರು ಭಾವೋದ್ರಿಕ್ತ ಏರುಸ್ವರದಿಂದ ಅನೂಹ್ಯ ಎತ್ತರಕ್ಕೆ ಏರಿಸಿಬಿಡುತ್ತಾರೆ.

ಮೂಲ ನೃತ್ಯಕ್ಕೂ, ನೃತ್ಯದ ಮೂಲಕ ಪಾತ್ರನಿರ್ಮಾಣಕ್ಕೂ ಇರುವ ವ್ಯತ್ಯಾಸವನ್ನು ಭ್ರಮರಿ ಅರ್ಥಮಾಡಿಕೊಂಡಿದ್ದಾರೆ. ಶಾಸ್ತ್ರೀಯ ನೃತ್ಯ ಮತ್ತು ಯಕ್ಷಗಾನದ ಹೆಜ್ಜೆಗಾರಿಕೆಗಳ ನಡುವೆ ಹಸ್ತಭಾವ, ದೃಷ್ಟಿಭಾವಗಳ ಸಮತೋಲಿತ ಪ್ರಯತ್ನವನ್ನು ಅವರಿಲ್ಲಿ ಮುಂದುವರಿಸಿದ್ದಾರೆ. ಆಂಗಿಕವನ್ನು ಭಿನ್ನವಾಗಿ ಮತ್ತು ಸುಕುಮಾರವಾಗಿ ಪ್ರಯತ್ನಿಸುವ ಮನೋಧರ್ಮ ಅವರ ಹೆಚ್ಚು ಗಾರಿಕೆ. ಸ್ವಯಂವರದ ಸಂದರ್ಭದ ಹಿಂದೋಳ ಆಲಾಪ, ನಾಹಂವರ ಯಾಮಿಸೂತಂ ಎಂಬ ಗದ್ಯ ಸಂದರ್ಭಗಳಲ್ಲಿ ಅವರ ಆಂಗಿಕದ ನೆಗೆತವಂತೂ ಪ್ರಶಂಸಾರ್ಹ. “ಹೆಣ್ಣಲ್ಲವೇ ನೀವು ಅತ್ತೆ? ನಾನು ಕೇವಲ ಭಿಕ್ಷೆಯಾಗಿಬಿಟ್ಟೆನೆ?’ ಎಂಬಲ್ಲಿನ ಅವರ ಭಾವಾಭಿನಯ, ವಸ್ತ್ರಾಪಹರಣದ ಸಂದರ್ಭದಲ್ಲಿ ದುಶ್ಯಾಸನ, “ನನ್ನ ಮನದ ಮಗು, ನನ್ನ ಮೈದುನ’ ಎಂಬಲ್ಲಿನ ನಟನೆ ಇವೆಲ್ಲ ಆಂಗಿಕಕ್ಕೆ, ಆಹಾರ್ಯಕ್ಕೆ, ಸಾತ್ವಿಕಕ್ಕೆ ಬೆಲೆತರುವಂತಹದು.

Advertisement

ಬೆಳಗೋಡು ರಮೇಶ್‌ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next