Advertisement

ಸಾಮಾನ್ಯರಿಗೆ ಸರಕಾರದಿಂದ ಸಾಮೂಹಿಕ ವಿವಾಹ

10:32 AM Oct 15, 2019 | sudhir |

ಬೆಂಗಳೂರು: ರಾಜ್ಯದ ಬಡವರು, ಸಾಮಾನ್ಯರು ಯಾವುದೇ ಜಾತಿ ಭೇದವಿಲ್ಲದೆ, ಖರ್ಚಿಲ್ಲದೆ ಹಿಂದೂ ಸಂಪ್ರದಾಯದಂತೆ ಸರಳವಾಗಿ ವಿವಾಹವಾಗಲು ಅನು ಕೂಲವಾಗುವಂತೆ ಮುಜರಾಯಿ ಇಲಾಖೆ ಸರಕಾರದ ವತಿಯಿಂದಲೇ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ವಿನೂತನ ಯೋಜನೆ ಜಾರಿಗೆ ಸಜ್ಜಾಗಿದೆ.

Advertisement

ರಾಜ್ಯದ ಆಯ್ದ 100 “ಎ’ ದರ್ಜೆ ದೇಗುಲಗಳಲ್ಲಿ ಸರಕಾರದ ವತಿಯಿಂದ ವರ್ಷಕ್ಕೆ ಒಮ್ಮೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಿದೆ. ಎಂಟು ಗ್ರಾಂ ಚಿನ್ನದ ಮಾಂಗಲ್ಯ, ವಧು ಮತ್ತು ವರನಿಗೆ ವಿವಾಹ ವಸ್ತ್ರ ವಿತರಿಸುವ ಜತೆಗೆ ವಿವಾಹ ನೋಂದಣಿಯನ್ನು ಮಾಡಿಸಿ ನೀಡುವ ಬಗ್ಗೆ ಯೋಚಿಸಿದೆ. ಜಿಲ್ಲಾ ಧಾರ್ಮಿಕ ಪರಿಷತ್‌ ಅಧ್ಯಕ್ಷರ ನೇತೃತ್ವದಲ್ಲಿ ಸಚಿವರು, ಸಂಸದರು, ಶಾಸಕರು, ಇತರ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿಕೊಂಡು ವರ್ಷದಲ್ಲಿ ಬರೋಬ್ಬರಿ 1,000 ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಲು ಚಿಂತಿಸಿದೆ.

ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇವಿ, ಮಲೆ ಮಹದೇಶ್ವರ, ಚಾಮುಂಡೇಶ್ವರಿ ದೇಗುಲ ಸಹಿತ ಆಯ್ದ 100 ದೇಗುಲಗಳನ್ನು ಸಾಮೂಹಿಕ ವಿವಾಹ ಆಯೋಜನೆಗೆ ಗುರು ತಿಸಲಾಗುತ್ತದೆ. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಆಯಾ ದೇವಸ್ಥಾನದಲ್ಲಿ ಸಂಗ್ರಹವಾಗುವ ಆದಾಯ ದಿಂದಲೇ ಭರಿಸಲಾಗುತ್ತದೆ. ಒಂದೊಮ್ಮೆ ಅಷ್ಟು ವೆಚ್ಚವನ್ನು ದೇಗುಲದಿಂದ ಭರಿಸಲು ಸಾಧ್ಯವಾಗದ ಕಡೆ ಇಲಾಖೆಯಿಂದಲೇ ಹಣ ನೀಡಿ ಸಾಮೂಹಿಕ ವಿವಾಹ ಆಯೋಜಿಸಲು ತೀರ್ಮಾನಿಸಿದೆ.

ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್‌ ಇನ್ನು 15 ದಿನಗಳಲ್ಲಿ ರಚನೆಯಾಗಲಿದೆ. ಎಲ್ಲ ಜಿಲ್ಲಾ ಧಾರ್ಮಿಕ ಪರಿಷತ್‌ಗೆ ಸ್ಥಳೀಯ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರಲಿದ್ದು, ಅವರ ನೇತೃತ್ವದಲ್ಲೇ ಸಾಮೂಹಿಕ ವಿವಾಹ ನಡೆಯಲಿದೆ.

ಧರ್ಮಸ್ಥಳದ ಮಾದರಿ ಪಾಲನೆ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜಿತ ರೀತಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಅದೇ ಮಾದರಿ ಯನ್ನಿಟ್ಟುಕೊಂಡು ಸಾಮೂಹಿಕ ವಿವಾಹ ಆಯೋಜಿಸಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸೂಚನೆ ನೀಡಿದ್ದಾರೆ.

Advertisement

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು, ಸಾಮಾನ್ಯರು ಆರ್ಥಿಕ ಹೊರೆಯಿಲ್ಲದೆ ಸರಳವಾಗಿ ಹಿಂದೂ ಸಂಪ್ರದಾಯದಂತೆ ವಿವಾಹ ವಾಗಲು ಅನುಕೂಲವಾಗು ವಂತೆ ಇಲಾಖೆಯಿಂದಲೇ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಯಾವುದೇ ಜಾತಿ ಭೇದವಿಲ್ಲದೆ ಆಯ್ದ 100 “ಎ’ ದರ್ಜೆ ದೇಗುಲಗಳಲ್ಲಿ ವರ್ಷದಲ್ಲಿ 1,000 ಜೋಡಿಗಳ ವಿವಾಹ ನಡೆಸುವ ಗುರಿ ಹೊಂದಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next