Advertisement

ಮಾಸ್‌ಗೂ, ಕ್ಲಾಸ್‌ಗೂ ಸೈ!

10:20 AM Aug 13, 2017 | Team Udayavani |

ಚುನಾವಣೆ ಸಮೀಕ್ಷೆಗಳು ನೋಡಿದರೆ, ಆತ ಗೆಲ್ಲೋದೇ ಇಲ್ಲ ಎಂದು ತೀರ್ಪು ಕೊಟ್ಟಿರುತ್ತವೆ. ಆತನಿಗೆ ಹೇಗಾದರೂ ಮಾಡಿ, ಈ ಬಾರಿ ಗೆಲ್ಲಲೇಬೇಕು ಎಂಬ ಅನಿವಾರ್ಯತೆ ಇರುತ್ತದೆ. ಅವನನ್ನು ಗೆಲ್ಲಿಸುವುದಕ್ಕೆ ಆತನ ಅಣ್ಣ ದೊಡ್ಡ ಮಾಸ್ಟರ್‌ ಪ್ಲಾನ್‌ ಹಾಕುತ್ತಾನೆ. ಆ ಪ್ಲಾನ್‌ ಕಾರ್ಯರೂಪಕ್ಕೆ ಬರಬೇಕು ಎನ್ನುವಷ್ಟರಲ್ಲೇ ಮೇಜರ್‌ ಶಿವರಾಜ್‌ ಮತ್ತು ಎಂಟ್ರಿ ಕೊಡುತ್ತಾರೆ. ನಂತರ ಸುಮಾರು ಐದು ನಿಮಿಷಗಳ ಕಾಲ ಎರಡೂ ಗುಂಪುಗಳ ನಡುವೆ ದೊಡ್ಡ ಯುದ್ಧವೇ ನಡೆದು ಹೋಗುತ್ತದೆ, ಗುಂಡುಗಳ ಮೊರೆತ ಕೇಳಿಸುತ್ತದೆ, ಲೀಟರ್‌ಗಟ್ಟಲೆ ರಕ್ತ ನೆಲದ ಪಾಲಾಗುತ್ತದೆ …

Advertisement

ಅಲ್ಲಿಗೆ ಆ ಕೇಸ್‌ ಕ್ಲೋಸ್‌. ಆದರೆ, ಚುನಾವಣೆ ಗೆಲ್ಲುವುದಕ್ಕೆ ಅಣ್ಣ-ತಮ್ಮ ಮಾಡುವ ಮಾಸ್ಟರ್‌ ಪ್ಲಾನ್‌ ಆದರೂ ಏನು? ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಗಾಲದಿಂದ ಕರೆದುಕೊಂಡು ಬಂದು ಮತ ಹಾಕಿಸುವುದು. ಅದ್ಯಾರನ್ನೋ ಎಲ್ಲಿಂದಲೋ ಅಕ್ರಮವಾಗಿ ಕರೆದುಕೊಂಡು ಬಂದು ಸಾಕಿ, ಸಲಹಿದರೆ ಅದರಿಂದ ನೂರೆಂಟು ಸಮಸ್ಯೆಗಳು. ಅಕ್ರಮವಾಗಿ ಬಂದವರು ದರೋಡೆ, ವೇಶ್ಯಾವಟಿಕೆ, ಡ್ರಗ್ಸ್‌ ಮಾರಾಟ ಹೀಗೆ ಹಲವಾರು ಚಟುವಟಿಕೆಗಳನ್ನು ಮಾಡಿ ರಾಜ್ಯಕ್ಕೆ ಕೆಟ್ಟ ಹೆಸರು ತರುವವರು. ಇಂತಹವರ ವಿರುದ್ಧ ಶಿವರಾಜ್‌ ಮತ್ತು ತಂಡ ತೊಡೆ ತಟ್ಟಿ ನಿಲ್ಲುತ್ತದೆ.

ಆಗ ಆ ತಂಡದ ಮೇಲೆ ದೊಡ್ಡ ಅಟ್ಯಾಕ್‌ ಆಗುತ್ತದೆ. ಆ ಅಟ್ಯಾಕ್‌ ಮಾಡಿದವನ್ಯಾರು ಗೊತ್ತಾ? ಅರ್ಷದ್‌ … ಈ ಅರ್ಷದ್‌ ಯಾರು ಎಂದು ಹುಡುಕುತ್ತಾ ಹೊರಟರೆ, ಅದಕ್ಕೊಂದು ಫ್ಲಾಶ್‌ಬ್ಯಾಕ್‌ ಇದೆ. ಅಲ್ಲೇನಾಗುತ್ತದೆ ಎಂದು ಗೊತ್ತಾಗಬೇಕಿದ್ದರೆ, ಚಿತ್ರ ನೋಡಬೇಕು. “ಮಾಸ್‌ ಲೀಡರ್‌’ ಒಂದು ದೇಶಪ್ರೇಮ ಮತ್ತು ದೇಶಪ್ರೇಮಿಯ ಕುರಿತಾದ ಚಿತ್ರ. ಈ ಚಿತ್ರದಲ್ಲಿ ಮೇಜರ್‌ ಶಿವರಾಜ್‌ದು ಪ್ರಮುಖವಾದ ಪಾತ್ರ. ಬರೀ ಅಕ್ರಮ ವಲಸಿಗರಷ್ಟೇ ಅಲ್ಲ,

ಭಯೋತ್ಪಾದಕರಿಗೂ ಸಿಂಹಸ್ವಪ್ನವಾಗಿರುವ ಈ ಶಿವರಾಜ್‌ ಜೀವನದಲ್ಲಿ ಏನಾಗುತ್ತದೆ ಎಂಬುದರ ಜೊತೆಗೆ, ಒಬ್ಬ ದೇಶಪ್ರೇಮಿಯು ತನ್ನ ತಾಯ್ನಾಡನ್ನು ಉಳಿಸಿಕೊಳ್ಳುವುದಕ್ಕೆ ಏನೆಲ್ಲಾ ಸಾಹಸಗಳನ್ನು ಮಾಡುತ್ತಾನೆ ಎನ್ನುವುದು ಈ ಚಿತ್ರದ ಕಥೆ. ಈ ಕಥೆಗೆ ಸಾಕಷ್ಟು ರೋಚಕತೆ, ಟ್ವಿಸ್ಟ್‌ಗಳನ್ನು ಸೇರಿಸಿ ಒಂದು ಫ್ಯಾಮಿಲಿ ಚಿತ್ರ ಮಾಡಿದ್ದಾರೆ ನಿರ್ದೇಶಕ ನರಸಿಂಹ. ಈ ಚಿತ್ರದ ಕಥೆಯೇನು ಎಂದರೆ ಹೇಳುವುದು ಕಷ್ಟವೇ. ಚಿತ್ರದಲ್ಲ ಅಂತಹ ಮಹತ್ವವಾದ ಕಥೆ ಇಲ್ಲದಿದ್ದರೂ, ಹಲವು ಘಟನೆಗಳನ್ನಿಟ್ಟುಕೊಂಡು ತೂಗಿಸಿಕೊಂಡು ಹೋಗುತ್ತಾರೆ ನರಸಿಂಹ.

ಚಿತ್ರ ಅಲ್ಲಲ್ಲಿ ಸ್ವಲ್ಪ ನಿಧಾನ ಎನಿಸಬಹುದು, ಆದರೂ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ ನರಸಿಂಹ. ಚಿತ್ರದ ವಿಶೇಷತೆಯೆಂದರೆ, ಸ್ಟಂಟ್‌ ದೃಶ್ಯಗಳು ಸೆರೆ ಹಿಡಿದಿರುವ ರೀತಿ. ಶಿವರಾಜಕುಮಾರ್‌ ಅವರ ಇಂಟ್ರೊಡಕ್ಷನ್‌ ಫೈಟ್‌ ಆಗಲೀ, ಯೋಗಿಯೊಂದಿಗಿನ ಮಚ್ಚಿನ ಯುದ್ಧವಾಗಲೀ, ಕಾಶ್ಮೀರದ ಹಿಮದ ನಡುವಿನ ಹೊಡೆದಾಟಗಳಾಗಲೀ … ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಟ್ಟಿಕೊಡುವುದರಲ್ಲಿ ಗುರುಪ್ರಶಾಂತ್‌ ರೈ ಛಾಯಾಗ್ರಹಣ ಮತ್ತು ಸ್ಟಂಟ್‌ ಮಾಸ್ಟರ್‌ ವಿಜಯನ್‌ ಅವರ ಪಾತ್ರ ದೊಡ್ಡದು.

Advertisement

ಇನ್ನು ಇಡೀ ಚಿತ್ರದ ಹೈಲೈಟ್‌ ಎಂದರೆ ಶಿವರಾಜಕುಮಾರ್‌. ಅವರಿಗೆ ಈ ಪಾತ್ರ ಹೇಳಿ ಮಾಡಿಸಿದಂತಿದೆ ಮತ್ತು ಈ ಪಾತ್ರವನ್ನು ಅವರು ಅದ್ಭುತವಾಗಿ ಜೀವಿಸಿದ್ದಾರೆ. ಮಿಕ್ಕಂತೆ ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿವೆ. ಅದರಲ್ಲಿ ಶಿವರಾಜಕುಮಾರ್‌ ಅವರ ಪಾತ್ರ ಮತ್ತು ಅಭಿನಯ ಬಿಟ್ಟರೆ ಗಮನಸೆಳೆಯುವುದು ಯೋಗಿ ಅವರ ಪಾತ್ರ ಮಾತ್ರ. ವೀರ್‌ ಸಮರ್ಥ್ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ಕೊಡುತ್ತವೆ.

ಚಿತ್ರ: ಮಾಸ್‌ ಲೀಡರ್‌
ನಿರ್ದೇಶನ: ನರಸಿಂಹ
ನಿರ್ಮಾಣ: ತರುಣ್‌ ಶಿವಪ್ಪ
ತಾರಾಗಣ: ಶಿವರಾಜಕುಮಾರ್‌, ವಿಜಯ್‌ ರಾಘವೇಂದ್ರ, ಯೋಗಿ, ಗುರು, ಶರ್ಮಿಳಾ ಮಾಂಡ್ರೆ, ಪ್ರಣೀತಾ, ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next