Advertisement

ಕುಮ್ಮಟದುರ್ಗದ ಕುಮಾರರಾಮ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆ : ಸ್ಥಳೀಯರ ಆಕ್ರೋಶ

08:55 PM Apr 29, 2022 | Team Udayavani |

ಗಂಗಾವತಿ : ವಿಜಯನಗರ ಸಾಮ್ರಾಜ್ಯದ ಮೂಲವಾಗಿರುವ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮ ಆಡಳಿತ ನಡೆಸಿದ ಗುಡ್ಡಬೆಟ್ಟ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸುವ ಮನವಿಯನ್ನು ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಟಾಸ್ಕಪೋರ್ಸ್ ಸಮಿತಿ ಪರಿಶೀಲಿಸುವ ಚಿಂತನೆ ನಡೆಸಿದ್ದು ಇದರಿಂದ ಕುಮ್ಮಟ ದುರ್ಗ ಕೋಟೆ ಕೊತ್ತಲು ಹಾಗೂ ರೈತರ ನೂರಾರು ಎಕರೆ ಪ್ರದೇಶ ಭೂಮಿ ಧೂಳಿನಿಂದ ನಾಶವಾಗುವ ಸಂಭವವಿದೆ.

Advertisement

ಕುಮ್ಮಟದುರ್ಗದ ಬೆಟ್ಟದ ಕೆಳಗಿರುವ ಸರ್ವೇ ನಂಬರ್ 51 ಸುತ್ತಲಿನ ಪ್ರದೇಶದಲ್ಲಿ ಗುಡ್ಡದಲ್ಲಿ ಕಲ್ಲುಗಣಿಗಾರಿಕೆಯನ್ನು ನಡೆಸಲು ಜಿಲ್ಲಾಡಳಿತ ಖಾಸಗಿ ವ್ಯಕ್ತಿಗೆ ಕಳೆದ 10 ವರ್ಷಗಳ ಹಿಂದೆ ಷರತ್ತು ಬದ್ಧ ಲೀಜ್ ಮಂಜೂರಿ ಮಾಡಿತ್ತು. ಸ್ಮಾರಕಗಳ ನಾಶ ಹಾಗೂ ಸುತ್ತಲಿನ ಫಲವತ್ತಾದ ಭೂಮಿಯಲ್ಲಿ ಗಣಿಗಾರಿಕೆ ಧೂಳಿನ ಸಮಸ್ಯೆಯ ಹಿನ್ನೆಲೆಯಲ್ಲಿ ಗಂಡುಗಲಿ ಕುಮಾರ ರಾಮನ ಅಭಿಮಾನಿಗಳು ಮತ್ತು ಜಬ್ಬಲಗುಡ್ಡ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಕಲ್ಲುಗಣಿಗಾರಿಕೆಗೆ ಅವಕಾಶ ನೀಡದಂತೆ ಮನವಿ ಹಿನ್ನೆಲೆಯಲ್ಲಿ ಇದುವರೆಗೂ ಕಲ್ಲುಗಣಿಗೆ ನಡೆಸುತ್ತಿಲ್ಲ. ಕೊಪ್ಪಳದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಟಾಸ್ಕಪೋರ್ಸ್ ಸಭೆಯಲ್ಲಿ ಪುನಹ ಜಬ್ಬಲಗುಡ್ಡ ಸರ್ವೇ ನಂ.51 ಹಾಗೂ ಸುತ್ತಲಿನ ಬೆಟ್ಟ ಗುಡ್ಡ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಲೀಜ್ ಪಡೆದ ವ್ಯಕ್ತಿಗಳು ಜಿಲ್ಲಾ ಉಸ್ತುವಾರಿ ಸಚಿವ ಮೂಲಕ ಒತ್ತಡ ಹಾಕಿಸಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ಈಗಾಗಲೇ ಸ್ಥಳೀಯರು ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ದೌರ್ಜನ್ಯವಾಗಿ ಗಣಿಗಾರಿಕೆ ನಡೆಸಲು ಲೀಜ್ ಪಡೆದವರಿಗೆ ಜಿಲ್ಲಾಡಳಿತ ಅವಕಾಶ ನೀಡಿದರೂ ಗಂಡುಗಲಿ ಕುಮಾರರಾಮನ ಅಭಿಮಾನಿಗಳು ಹಾಗೂ ಜಬ್ಬಲಗುಡ್ಡ ಹಾಗೂ ಸುತ್ತಲಿನ ಗ್ರಾಮದವರು ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಶಾಸಕರು ಸಂಸದರಿಗೆ ತಿಳಿಸಿದ್ದಾರೆ.

ಕುಮ್ಮಟದುರ್ಗವು ಏಳುಗುಡ್ಡ ಪ್ರದೇಶದಲ್ಲಿದ್ದು ವೈರಿಗಳಿಂದ ಸಂರಕ್ಷಣೆ ಪಡೆಯಲು ಮತ್ತು ಶತ್ರುಗಳು ರಾಜ್ಯ ಪ್ರವೇಶವನ್ನು ವೀಕ್ಷಣೆ ಮಾಡಲು ಕಂಪಿಲ ರಾಯನ ಸಂಸ್ಥಾನದ ಗಡಿ ಭಾಗದಲ್ಲಿ ಕೋಟೆ ಕೊತ್ತಲ ಮತ್ತು ಅಂದಿನ ಅರಸರ ಆರಾಧ್ಯದೈವ ಜಟ್ಟಂಗಿ ರಾಮೇಶ್ವರ ದೇವಾಲಯವೂ ಇಲ್ಲಿದೆ. ಕುದುರೆ ಕಾಲು ಕೋಟೆ ಇಲ್ಲಿಯ ವಿಶೇಷವಾಗಿದೆ. ಈಗಾಗಲೇ ಶಾಸಕರು ಸಂಸದರ ಅನುದಾನದಲ್ಲಿ ಕುಮ್ಮಟದುರ್ಗ ಪ್ರದೇಶಕ್ಕೆ ಸಿಸಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕುಮ್ಮಟ ದುರ್ಗ ಸುತ್ತಲು ಅರಣ್ಯ ಪ್ರದೇಶವಿದ್ದು ಜಿಲ್ಲಾಡಳಿತ ಈ ಪ್ರದೇಶವನ್ನು ಸಂರಕ್ಷಣೆ ಮಾಡಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡದೇ ಸಚಿವ ಒತ್ತಡಕ್ಕೆ ಮಣಿದು ಇದುವರೆಗೂ ಸ್ಥಗಿತಗೊಂಡಿದ್ದ ಕಲ್ಲುಗಣಿಗಾರಿಕೆಗೆ ಪುನಹ ಪರವಾನಿಗೆ ಕೊಡುವ ಚಿಂತನೆ ನಡೆಸಿದ್ದು ಇಲ್ಲಿಯ ಇತಿಹಾಸದ ಕುರುಹುಗಳು ನಾಶವಾಗುವ ಸಂಭವ ಹೆಚ್ಚಿದೆ.

ಕೆಡಿಪಿ ಸಭೆಯಲ್ಲಿ ಚರ್ಚೆ
ಕುಮ್ಮಟದುರ್ಗ ಪ್ರದೇಶ ಭಾರತೀಯ ಇತಿಹಾಸದ ಮಹತ್ವದ ಸ್ಥಳವಾಗಿದೆ.ಇಲ್ಲಿ ಯಾವುದೇ ಒತ್ತಡ ಬಂದರೂ ಕಲ್ಲುಗಣಿಗಾರಿಕೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಗಂಡುಗಲಿ ಕುಮಾರರಾಮನ ಆಡಳಿತ ಇತಿಹಾಸದ ತವರು ಕುಮ್ಮಟ ದುರ್ಗವಾಗಿದೆ. ಸ್ಥಳೀಯರು ಇಲ್ಲಿ ಕಲ್ಲುಗಣಿಗಾರಿಕೆ ನಡೆಸುವುದು ಬೇಡ ಎಂದು ಹತ್ತು ವರ್ಷಗಳ ಹಿಂದೆ ತಡೆದಿದ್ದು ಈಗ  ಟಾಸ್ಕ್ ಪೋರ್ಸ್ ಸಮಿತಿ ಅವೈಜ್ಞಾನಿಕವಾಗಿ ಪುನಹ ಗಣಿಗಾರಿಕೆ ನಡೆಸುವ ಪರಿಶೀಲನೆ ಸರಿಯಲ್ಲ.ಮೇ06 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ಇದನ್ನು ಪ್ರಶ್ನಿಸುತ್ತೇನೆ ಎಂದು ಶಾಸಕ ಪರಣ್ಣ ಮನವಳ್ಳಿ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.

Advertisement

ಆಕ್ರೋಶ
ಕರ್ನಾಟಕದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದ ಗಂಡುಗಲಿ ಕುಮಾರರಾಮ ಹಾಗೂ ಕುಮ್ಮಟ ದುರ್ಗ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ನೀಲನಕ್ಷೆ ತಯಾರಿಸುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಯಾರದ್ದೋ ಒತ್ತಡಕ್ಕೆ ಮಣಿದು ಜಬ್ಬಲಗುಡ್ಡ ಸರ್ವೇ ನಂ.51 ಹಾಗೂ ಕುಮ್ಮಟದುರ್ಗ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಅವಕಾಶ ನೀಡುವ ಕುರಿತು ಪರಿಶೀಲನೆ ಮಾಡುವಂತೆ ಜಿಲ್ಲಾ ಟಾಸ್ಕ್ ಪೋರ್ಸ್ ಕಮೀಟಿ ಮೂಲಕ ಆದೇಶ ಮಾಡಿಸುವ ಯತ್ನ ಖಂಡನೀಯವಾಗಿದೆ. ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಜಬ್ಬಲಗುಡ್ಡ ಗ್ರಾಮದ ಬಿಜೆಪಿ ಕಾರ್ಯಕರ್ತ ಇಳಿಗೇರ್ ವೆಂಕಟೇಶ ಉದಯವಾಣಿಯೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .

ವಿಶೇಷ ವರದಿ ಕೆ.ನಿಂಗಜ್ಜ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next