Advertisement

ಗ್ರಹಣ ಕಾಲೇ ಪಾಣಿಗ್ರಹಣ…!

12:25 PM Jul 28, 2018 | |

ಚಿತ್ರದುರ್ಗ: ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಲ್ಲ. ಅದರಲ್ಲೂ ಮದುವೆಯನ್ನಂತೂ ಮಾಡೊದೇ ಇಲ್ಲ. ಹೊಸದಾಗಿ ಮದುವೆಯಾದ ದಂಪತಿಗಳೂ ಸಹ ಇದೊಂದು ಮಾಸ ಬೇರೆ ಬೇರೆ ಇರುತ್ತಾರೆ. ಇಂತಹ ಆಷಾಢ ಮಾಸದ ಚಂದ್ರಗ್ರಹಣದ ದಿನ ಮುರುಘಾಮಠದಲ್ಲಿ ಮದುವೆಯೊಂದು ನಡೆದಿದೆ.!

Advertisement

ಹೌದು. ಹಲವು ಹೊಸತನಕ್ಕೆ ನಾಂದಿ ಹಾಡಿದ ಮುರುಘಾ ಮಠ ಶುಕ್ರವಾರ ಮತ್ತೂಂದು ವಿಶೇಷಕ್ಕೆ ಸಾಕ್ಷಿಯಾಗಿದೆ. ಮುರುಘಾ ಶರಣರ ಸಮ್ಮುಖದಲ್ಲಿ ಯುವಪ್ರೇಮಿಗಳು ಪಾಣಿಗ್ರಹಣ ಮಾಡಿದ್ದಾರೆ.

ಗ್ರಹಣ ಸಮಯದಲ್ಲಿ ಮನೆಯಲ್ಲಿ ಮಾಡಿಟ್ಟ ಅಡುಗೆ, ಕೂಡಿಟ್ಟಿದ್ದ ನೀರು ಎಲ್ಲವನ್ನು ಹೊರ ಚೆಲ್ಲಿ ಬರೀ ಹೊಟ್ಟೆಯಲ್ಲಿ ಮಲಗುವುದು, ಜನ ಜಾನುವಾರುಗಳಿಗೆ ಗ್ರಹಣದ ದಿನದಂದು ತೊಂದರೆ ಆಗದಂತೆ ಜಾನುವಾರುಗಳ ಮೈ ಮೇಲೆ ಚಂದ್ರ ಸೂರ್ಯರನ್ನು ಸುಣ್ಣದಲ್ಲಿ ಬರೆದು ರಕ್ಷಣೆ ಮಾಡುವುದನ್ನು ನೋಡಿದ್ದೇವೆ. ಆದರೆ ಇದೆಲ್ಲವನ್ನು ಮೀರಿ ವೈಚಾರಿಕ ಚಿಂತಕ ಡಾ| ಶಿವಮೂರ್ತಿ ಮುರುಘಾ ಶರಣರು ರಕ್ತ ಚಂದ್ರ ಗ್ರಹಣದಲ್ಲಿ ಮದುವೆ ಮಾಡಿಸುವ ಮೂಲಕ ಮೌಢಾಚರಣೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ಗ್ರಹಣದ ದಿನ ಮದುವೆಯಾದ ವಧು-ವರರು ಒಂದೇ ಕೋಮಿ(ಜಾತಿ)ಗೆ ಸೇರಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ವರನ ಕಡೆಯವರಿಗೆ ಸಂಪೂರ್ಣ ಒಪ್ಪಿಗೆ ಇದ್ದು ವಧುವಿನ ಕಡೆಯವರಿಗೆ ಈ ರೀತಿಯ ಮದುವೆ ಇಷ್ಟವಿರಲಿಲ್ಲ ಎನ್ನಲಾಗುತ್ತಿದೆ. ಆದರೆ, ಮುರುಘಾ ಮಠದ ಸ್ವಾಮೀಜಿಗಳು ನೇತೃತ್ವ ವಹಿಸಿ ಮುಂದೆ ನಿಂತು ಗ್ರಹಣದ ದಿನ ಮದುವೆ ಮಾಡಿಸಿದ್ದು ಮಾತ್ರ ಇತಿಹಾಸದಲ್ಲೊಂದು ಮೈಲುಗಲ್ಲು. 

ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಶೋಷಿತ ಬುಡಕಟ್ಟು ಸಮುದಾಯದ ಮರಡಿ ರಂಗ ನಾಯಕ(28) ಮತ್ತು ಅದೇ ಗ್ರಾಮದ ವಧು, ಬಿಕಾಂ ಪದವೀಧರೆ ವಸಂತಾ(22) ಗ್ರಹಣದ ದಿನ ಸಪ್ತಪದಿ ತುಳಿದಿದ್ದಾರೆ.

ಈ ಇಬ್ಬರು ಯುವ ಪ್ರೇಮಿಗಳು ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಆದರೆ ಇವರೊಟ್ಟಿಗೆ ಆಗಬೇಕೆಂದು
ಇಬ್ಬರೂ ನಿರ್ಧರಿಸಿದರು. ಒಂದೇ ಜಾತಿ ಮತ್ತು ಸಂಬಂಧಿಗಳೇ ಆಗಿದ್ದರಿಂದ ಎರಡೂ ಕುಟುಂಬಗಳ ಸಂಪೂರ್ಣ ಆಶೀರ್ವಾದ ಸಿಗುವ ಬಲವಾದ ನಂಬಿಕೆ ಇಬ್ಬರಲ್ಲೂ ಇತ್ತು. ಆದರೆ ವರನ ಕಡೆಯವರು ಮಾತ್ರ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರೆ ವಧುವಿನ
ಕಡೆಯವರ ಸುಳಿವು ಇರಲಿಲ್ಲ.

Advertisement

ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಕಾರ್ಯದರ್ಶಿ ಎಚ್‌.ಎಸ್‌.ಟಿ.ಸ್ವಾಮಿ ಮತ್ತಿತರರಿದ್ದರು. ಮುರುಘಾಮಠದಲ್ಲಿ ಸಂಪೂರ್ಣ ಚಂದ್ರ ಗ್ರಹಣದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಲಿಂಗದೀಕ್ಷೆ ಮತ್ತು ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಡಾ|ಶಿವಮೂರ್ತಿ ಮುರುಘಾ ಶರಣರು, ಮಾನವ ಜನಾಂಗಕ್ಕೆ ಒಕ್ಕರಿಸಿರುವ ಪಂಚಾಂಗ, ಶುಭ ದಿನ ಎನ್ನುವ ಮೌಡ್ಯದ ಗ್ರಹಣ ಬಿಡುಗಡೆ ಆಗಬೇಕಿದೆ
ಎಂದರು. ಸೂರ್ಯಗ್ರಹಣ, ಚಂದ್ರಗ್ರಹಣವು ಈ ಜಗತ್ತಿನ ಅಪೂರ್ವ ಸಂಗತಿ. ಗ್ರಹಣ ಸಂಭವಿಸುವುದು ಎಂದರೆ ನಿಸರ್ಗದ ವಿಸ್ಮಯ ಹಾಗೂ ಅದ್ಭುತಗಳು. ಅಂತಹ ಅಪರೂಪದ ಸನ್ನಿವೇಶ ನೋಡಿ ಖುಷಿ ಪಡಬೇಕು. ಆಷಾಢ ಮಾಸ, ಹುಣ್ಣಿಮೆ, ಅಮಾವಾಸ್ಯೆ, ಶುಭ ಅಶುಭ, ಮಂಗಳ ಅಮಂಗಳ ಅನ್ನುವ ಮೌಡ್ಯ ಬಿಡಬೇಕು.

ಉತ್ತಮ ಕಾರ್ಯಗಳಿಗೆ ಪ್ರತಿ ಕ್ಷಣ, ಪ್ರತಿ ದಿನ ಎಲ್ಲವೂ ಮಂಗಳವೇ. ಸರ್ವವೂ ಶುಭ ಕಾರ್ಯವೇ ಎಂದು ತಿಳಿಸಿದರು. ದೇಶದ ಜನತೆ ಬ್ರಿಟಿಷರ ದಾಸ್ಯದಿಂದ ಹೊರಬಂದರೂ ಪಂಚಾಂಗ, ಶುಭಗಳಿಗೆ ಎಂಬ ಮೌಡ್ಯ ದಾಸ್ಯದಿಂದ ಹೊರಬಂದಿಲ್ಲ ಇದು ವಿಪರ್ಯಾಸದ ಸಂಗತಿ. ಪಂಚಾಂಗ ಹಿಡಿದು ಕೆಲ ಜ್ಯೋತಿಷಿಗಳು ಸಮಾಜದಲ್ಲಿ ಭೀತಿಯ ಬೀಜ ಬಿತ್ತಿ ಮುಗ ಜನತೆಯನ್ನು ಪಾಪದ ಕೂಪಕ್ಕೆ ತಳ್ಳಿ ಹಾಳು ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. ಸೂರ್ಯ, ಚಂದ್ರ ಗ್ರಹಣಗಳು ನೂರಾರು ವರ್ಷಗಳಿಂದ ನಡೆಯುತ್ತ ಬಂದಿದೆ. 

ನಾವು ನೋಡುತ್ತಲೇ ಪ್ರಸಾದ ಮಾಡಿದೆವು. ಆದರೆ ಏನೂ ಆಗಲಿಲ್ಲ. ಅದೊಂದು ಸಹಜ ಕ್ರಿಯೆ. ಆದರೆ ಮಾಧ್ಯಮಗಳು ಹುಟ್ಟಿಸುತ್ತಿರುವ ಭಯದ ಪ್ರಸಾರದಿಂದ ಜನರಲ್ಲಿ ಭೀತಿ ಉಂಟಾಗಿದೆ ಎಂದರು

ದೇವರನ್ನು ಭಕ್ತಿಯಿಂದ ಪೂಜಿಸುತ್ತೇನೆ. ಅಷ್ಟೇ ನಂಬಿಕೆಯೂ ಇದೆ. ಆದರೆ ಶಾಸ್ತ್ರ, ಸಂಬಂಧ, ಕಂಕಣ ದಿನ ಎನ್ನುವ ಮೌಡ್ಯ, ಕಂದಚಾರಗಳನ್ನು ಒಪ್ಪುವುದಿಲ್ಲ. ಹಾಗಾಗಿ ಚಂದ್ರ ಗ್ರಹಣದ ದಿನ ಇಬ್ಬರು ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ.
●ಮರಡಿ ರಂಗ ನಾಯಕ, ವರ

Advertisement

Udayavani is now on Telegram. Click here to join our channel and stay updated with the latest news.

Next