Advertisement

ಗಾಂಜಾ ಪ್ರಕರಣ: ಓರ್ವ ಆರೋಪಿ ಬಂಧನ

05:41 PM Sep 07, 2020 | Suhan S |

ಮೊಳಕಾಲ್ಮೂರು: ತಾಲೂಕಿನ ವಡೇರಹಳ್ಳಿ ಗ್ರಾಮದ ಬಳಿ ಜಮೀನೊಂದರಲ್ಲಿ ಕೋಟ್ಯಂತರ ರೂ. ಮೌಲ್ಯದ ಗಾಂಜಾ ಬೆಳೆಯಲಾಗಿದ್ದ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಪ್ರಮುಖ ಆರೋಪಿಗಾಗಿ ಶೋಧ ಮುಂದುವರೆದಿದೆ.

Advertisement

ಇದೇ ವೇಳೆ ಜಮೀನನ್ನು ಲೀಸ್‌ ಗೆ ನೀಡಿದ್ದ ಮೂವರು ಮಾಲೀಕರ ಪೈಕಿ ಒಬ್ಬರಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದು, ರಾಂಪುರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಸೆ. 4 ರಂದು ವಡೇರಹಳ್ಳಿ ಬಳಿ ರಾಂಪುರ ಗ್ರಾಮದವರಿಗೆ ಸೇರಿದ 4.20 ಎಕರೆ ಜಮೀನಿನಲ್ಲಿ ಕೋಟ್ಯಂತರ ರೂ.ಮೌಲ್ಯದ ಗಾಂಜಾ ಪತ್ತೆಯಾಗಿತ್ತು. ಗಾಂಜಾ ಬೆಳೆದ ಜಮೀನನ್ನು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಗ್ರಾಮದ ರುದ್ರೇಶ (45) ಮತ್ತು ಕೂಡ್ಲಿಗಿ ತಾಲೂಕಿನ ಮಹದೇವಪುರದ ಸಮಂತ ಗೌಡ (42) ಅವರಿಗೆ ಗೇಣಿ ನೀಡಲಾಗಿತ್ತು. ಜಮೀನಿನ ಮಾಲೀಕರಾದ ಜಿ.ಬಿ. ಮಂಜುನಾಥ (45), ವೈ. ಜಂಬುನಾಥ (50) ಹಾಗೂ ಡಿ.ವೈ. ಮಂಜುನಾಥ (48) ಅವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಜಮೀನಿನ ಮಾಲೀಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ವೇಳೆ ವೈದ್ಯಕೀಯ ತಪಾಸಣೆ ನಡೆಸಿದಾಗ ಜಂಬುನಾಥ ಅವರಿಗೆ ಕೋವಿಡ್ ದೃಢಪಟ್ಟಿದೆ.

4.20 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಬುಡ ಸಮೇತ ಕೀಳಿಸಲಾಗಿದೆ. ಕಟ್ಟುಗಳನ್ನು ಕಟ್ಟಿ ತೂಕ ಹಾಕಿದ ನಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಜಿ. ರಾಧಿಕಾ ಭೇಟಿ ನೀಡಿ ಪರಿಶೀಲಿಸಿದರು.

ಜಮೀನನ್ನು ಗೇಣಿ ಪಡೆದು ಗಾಂಜಾ ಬೆಳೆದ ಆರೋಪ ಎದುರಿಸುತ್ತಿರುವ ರುದ್ರೇಶನ ಪತ್ತೆಗಾಗಿ ರಾಂಪುರ ಉಪ ಪೊಲೀಸ್‌ ಠಾಣೆಯ ಸಿಬ್ಬಂದಿ ತಿಮ್ಮಪ್ಪ ಹಾಗೂ ಪ್ರೇಮ್‌ಕುಮಾರ್‌ ತೆರಳಿದ್ದರು. ಇವರಿಬ್ಬರೂ ಶನಿವಾರ ರಾತ್ರಿ ಬೈಕ್‌ನಲ್ಲಿ ಹಿಂದಿರುಗುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಿಮ್ಮಪ್ಪ ಗಂಭೀರವಾಗಿ ಗಾಯಗೊಂಡಿರುವ ಘಟನೆಯೂ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next