Advertisement

ಅತಿರುದ್ರ ಮಹಾಯಾಗದಿಂದ ಹಲವು ಸತ್ಫಲ; ಮಾ. 5ರಂದು ಪೂರ್ಣಾಹುತಿ

10:56 AM Mar 04, 2023 | Team Udayavani |

ಮಣಿಪಾಲ: ಭಗವತ್‌ ಪ್ರೇರಣೆಯಿಂದ ಸಂಪನ್ನಗೊಳ್ಳುತ್ತಿರುವ ಅತಿರುದ್ರ ಮಹಾ ಯಾಗದಲ್ಲಿ ಬಹಳಷ್ಟು ಸತ್ಫಲಗಳಿವೆ. ಇದರಿಂದ ನಾಡಿಗೂ ಜನರಿಗೂ ಶ್ರೇಯಸ್ಸು ಲಭಿಸಲಿದೆ ಎಂದು ಶ್ರೀ ಕ್ಷೇತ್ರ ಕಲ್ಲಂಗಳ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಧಾರ್ಮಿಕ ಸಭೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿವಪಾಡಿ ಹಿಂದೆ ದಟ್ಟಾರಣ್ಯವಾಗಿತ್ತು. ಇಲ್ಲಿ ಪರಶುರಾಮರು ತಪಸ್ಸು ಮಾಡಿ, ದೇವತೆಗಳ ಆರಾಧನೆ ಮಾಡಿರುವ ಜತೆಗೆ ಋಷಿ ಮುನಿಗಳು ದೇವರ ಸಾಕ್ಷಾತ್ಕಾರವನ್ನು ಕಂಡಿದ್ದಾರೆ ಎಂಬ ಪ್ರತೀತಿ ಇದೆ. ಈ ಎಲ್ಲ ಪುಣ್ಯದ ಫ‌ಲದಿಂದ ಕ್ಷೇತ್ರದಲ್ಲಿ ಅತಿರುದ್ರ ಮಹಾಯಾಗ ನಡೆಯುತ್ತಿದೆ.

ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಠಾಕೂರ್‌ ಹಾಗೂ ಯಾಗ ಸಮಿತಿ ಅಧ್ಯಕ್ಷ, ಶಾಸಕ ರಘುಪತಿ ಭಟ್‌ ಅವರ ಶ್ರಮ ಹೆಚ್ಚಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಅಜಿತ್‌ ಹನುಮಕ್ಕನವರ್‌ ಮಾತನಾಡಿದರು. ದ.ಕ. ಮೀನುಗಾರರ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ, ಉದ್ಯಮಿ ಬಾಲಕೃಷ್ಣ ಶೆಣೈ, ಯಕ್ಷಗಾನ ಮೇಳಗಳ ಯಜಮಾನ ಪಿ. ಕಿಶನ್‌ ಹೆಗ್ಡೆ, ಶಾಸಕ ರಘುಪತಿ ಭಟ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ದಯಾನಂದ ರೆಡ್ಡಿ, ನಗರಸಭೆ
ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಚಂದ್ರಶೇಖರ್‌, ರಾಜು, ದೇಗುಲದ ಮೊಕ್ತೇಸರ ದಿನೇಶ್‌ ಪ್ರಭು, ಶುಭಕರ ಸಾಮಂತ್‌, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್‌ ಶ್ರೀಧರ ಸಾಮಂತ್‌, ಸತೀಶ್‌ ಪಾಟೀಲ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕುಕ್ಕೆಹಳ್ಳಿ ಉಪಸ್ಥಿತರಿದ್ದರು. ಮಹೇಶ್‌ ಠಾಕೂರ್‌ ಸ್ವಾಗತಿಸಿ, ಡಾ| ಬಾಲಕೃಷ್ಣ ಮಧ್ದೋಡಿ ವಂದಿಸಿ, ರತ್ನಾಕರ ಇಂದ್ರಾಳಿ ನಿರೂಪಿಸಿದರು.

ಇಂದು ಶಿವಪಾಡಿಗೆ ಶೃಂಗೇರಿ ಶ್ರೀ
ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದ ಅತಿರುದ್ರ ಮಹಾಯಾಗಕ್ಕೆ ಮಾ. 4ರಂದು ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ ನೀಡಲಿದ್ದಾರೆ. ಶ್ರೀಗಳನ್ನು ವೈಭವದ ಶೋಭಾಯಾತ್ರೆಯ ಮೂಲಕ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಅಪರಾಹ್ನ 3 ಗಂಟೆಗೆ ಪೂರ್ಣಕುಂಭ ಸಹಿತ ಶ್ರೀ ಕ್ಷೇತ್ರ ಶಿವಪಾಡಿಗೆ ಚಂಡೆ, ಭಜನ ತಂಡಗಳು, ವಿವಿಧ ವೇಷಭೂಷಣ, ಸ್ತಬ್ಧ ಚಿತ್ರಗಳು, ಕೀಲು ಕುದುರೆ, ಬ್ಯಾಂಡ್‌ ವಾದ್ಯ ಸಹಿತ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ಅನಂತರ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಅನುಗ್ರಹ ಸಂದೇಶ ನೀಡಲಿದ್ದಾರೆ. ಶಾಸಕ ರಘುಪತಿ ಭಟ್‌, ಯಾಗ ಸಮಿತಿಯ ಪದಾಧಿಕಾರಿಗಳು, ಟ್ರಸ್ಟ್‌ನ ಪದಾಧಿಕಾರಿಗಳು, ಪ್ರಧಾನ ಸೇವಾಕರ್ತರು ಉಪಸ್ಥಿತರಿರುವರು. ರಾತ್ರಿ 8ರಿಂದ ಪ್ರಸಿದ್ಧ ಟಿವಿ ರಿಯಾಲಿಟಿ ಶೋ ಜೀ ಸರಿಗಮಪ ಖ್ಯಾತಿಯ ಮಕ್ಕಳಿಂದ ಸಂಗೀತ ವೈವಿಧ್ಯ ಜರಗಲಿದೆ.

ಮಾ. 5ರಂದು ಪೂರ್ಣಾಹುತಿ
ಮಾ. 5ರ ಬೆಳಿಗ್ಗೆ 6ರಿಂದ ಏಕಾದಶ ಕುಂಡಗಳಲ್ಲಿ ಅತಿರುದ್ರ ಮಹಾಯಾಗ ಪ್ರಾರಂಭ, 11ರಿಂದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಪೂರ್ಣಾಹುತಿ ನಡೆಯಲಿದೆ. ಬಳಿಕ ಶ್ರೀ ದೇವರಿಗೆ ಕಲಶಾಭಿಷೇಕ, ಸಾಮೂಹಿಕ ಪ್ರಾರ್ಥನೆ, ಸ್ವಾಮೀಜಿ ಅವರಿಂದ ಫ‌ಲ ಮಂತ್ರಾಕ್ಷತೆ ನಡೆಯಲಿದೆ. ಅಪರಾಹ್ನ 2ರಿಂದ ಕಾಶ್ಮೀರ ವಿಜಯ ತಾಳಮದ್ದಳೆ ನಡೆಯಲಿದೆ. ರಾತ್ರಿ 8.30ರಿಂದ ಹಿನ್ನಲೆ ಗಾಯಕ, ಪ್ರಸಿದ್ಧ ಸಂಗೀತ ನಿರ್ದೇಶಕ ಅಜಯ್‌ ವಾರಿಯರ್‌ ಮತ್ತು ಸರಿಗಮಪ ಖ್ಯಾತಿಯ ಮನೋಜವಮ್‌ ಅವರಿಂದ ಭಕ್ತಿ ಸಂಗೀತ ರಸಮಂಜರಿ ನಡೆಯಲಿದೆ ಎಂದು ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ರಘುಪತಿ ಭಟ್‌ ಮತ್ತು ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಠಾಕೂರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next