Advertisement

28ಕ್ಕೆ ಮಾನ್ವಿಯಲ್ಲಿ ಪತ್ರಿಕಾ ದಿನಾಚರಣೆ

03:00 PM Jul 24, 2019 | Naveen |

ರಾಯಚೂರು: ಮಾನ್ವಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಜು.28ರಂದು ಬೆಳಗ್ಗೆ 10:30ಕ್ಕೆ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಒಂದೊಂದು ತಾಲೂಕಿನಲ್ಲಿ ಪತ್ರಿಕಾ ದಿನಾಚರಣೆ ಮಾಡಲಾಗುತ್ತಿದೆ. ಕಳೆದ ವರ್ಷ ದೇವದುರ್ಗ, ಲಿಂಗಸುಗೂರಲ್ಲಿ ಆಚರಿಸಿದ್ದು, ಕಳೆದ ಬಾರಿ ರಾಯಚೂರಿನಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ಈ ಬಾರಿ ಮಾನ್ವಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಹಾಗೂ ರಾಯಚೂರು ರಿಪೋರ್ಟರ್ ಗಿಲ್ಡ್ ಮತ್ತು ಜಿಲ್ಲಾ ಸಂಪಾದಕರ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ವಿವಿಧ ಗಣ್ಯರನ್ನು ಕಾರ್ಯಕ್ರಮ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಆರ್‌.ಗುರುನಾಥ ಮಾತನಾಡಿ, ಪ್ರತಿ ವರ್ಷದಂತೆ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗಿಲ್ಡ್ನಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವಿವಿಧ‌ ದತ್ತಿ ಸ್ಮಾರಕ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿಯೂ ಸಂಘದಿಂದ 9 ಪ್ರಶಸ್ತಿ, ಒಬ್ಬರಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿ ರಿಪೋರ್ಟರ್ ಗಿಲ್ಡ್ನಿಂದಲೂ 7 ಪ್ರಶಸ್ತಿ ನೀಡಲಾಗುತ್ತಿದೆ ಎಂದರು. ಗಿಲ್ಡ್ ಸದಸ್ಯ ಈನಾಡು ರಂಗನಾಥ ಮಾತನಾಡಿದರು. ಪತ್ರಕರ್ತರಾದ ಪಾಷಾ, ಸುಶಿಲೇಂದ್ರ ಸೋದೆಗಾರ ಇದ್ದರು.

ವಿವಿಧ ಪ್ರಶಸ್ತಿಗಳಿಗೆ ಆಯ್ಕೆ: ರಾಯಚೂರು ವಾಣಿ ಪ್ರಾಯೋಜಿತ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಸುಶಿಲೇಂದ್ರ ಸೊದೆಗಾರ ಅವರನ್ನು ಆಯ್ಕೆ ಮಾಡಲಾಗಿದೆ. ಜಾಲಹಳ್ಳಿಯ ಉದಯವಾಣಿ ವರದಿಗಾರ ಚಂದ್ರಶೇಖರ ನಾಡಗೌಡಗೆ ದಿ| ಪ್ರಹ್ಲಾದಾಚಾರ್‌ ಜೋಶಿ ಸ್ಮರಣಾರ್ಥ ಪ್ರಶಸ್ತಿ, ಸ್ಪಂದನಾ ಸಂಸ್ಥೆ ನಂದಿಕೋಲಮಠ ಪ್ರಾಯೋಜಿತ ಪ್ರಶಸ್ತಿಗೆ ಮಾನ್ವಿ ಉದಯವಾಣಿ ವರದಿಗಾರ ರವಿ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಸುದ್ದಿಮೂಲ ಪ್ರಾಯೋಜಿತ ದಿ| ಪ್ರಕಾಶದಿನ್ನಿ ಸ್ಮಾರಕ ಪ್ರಶಸ್ತಿಗೆ ಸಿಂಧನೂರಿನ ಮಹ್ಮದ್‌ ಮುಸ್ತಫಾ, ಗ್ರಾಮೀಣ ವರದಿಗಾರಿಕೆಗೆ ಮಸ್ಕಿಯ ರವಿಕುಮಾರ ಗೌಡನಬಾವಿ, ನರಸಿಂಹಾಚಾರ್ಯ ಗುಡಿ ಸ್ಮರಣಾರ್ಥ ಪ್ರಶಸ್ತಿಗೆ ಲಿಂಗಸುಗೂರಿನ ಅಮರಯ್ಯ ಘಂಟಿ, ದಿ| ಪ್ರಹ್ಲಾದಾಚಾರ್‌ ಜೋಶಿ ಸ್ಮರಣಾರ್ಥ ಪ್ರಶಸ್ತಿಗೆ ಮಾನ್ವಿಯ ಮಾರೆಪ್ಪ, ದಿ| ಮಹಾದೇವಮ್ಮ ಬಸವರಾಜ ಸ್ವಾಮಿ ಸ್ಮರಣಾರ್ಥ ಪ್ರಶಸ್ತಿಗೆ ಸಿರವಾರದ ವೀರೇಶ ಹರಕಂಚಿ, ದಿ| ಈಶ್ವರಮ್ಮ ನರಸಪ್ಪ ಜಲ್ದಾರ್‌ ಸ್ಮರಣಾರ್ಥ ಪ್ರಶಸ್ತಿಗೆ ರಾಜ್‌ ಸುದ್ದಿವಾಹಿನಿ ಜಿಲ್ಲಾ ವರದಿಗಾರ ಸುರೇಶ ರೆಡ್ಡಿ, ಸಿದ್ಧಪ್ಪ ಹಳ್ಳೂರು ಸಿರವಾರ ಪ್ರಾಯೋಜಿತ ಪ್ರಶಸ್ತಿಗೆ ಕ್ಯಾಮರಾಮೆನ್‌ ಬಾಲರಾಜ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಇನ್ನು ರಿಪೋರ್ಟರ್ ಗಿಲ್ಡ್ನಿಂದ ಪ್ರತಿ ವರ್ಷ ಏಳು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಜಾಹೀರಾತು ವಿಭಾಗ, ಪ್ರಸರಣ ವಿಭಾಗ ಮತ್ತು ಪತ್ರಿಕಾ ವಿತರಣೆ ಕ್ಷೇತ್ರದಲ್ಲಿ ಸಾಧಿಸಿದ ಮೂವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಗುತ್ತಿದೆ.

ಗಿಲ್ಡ್ನಿಂದ ಕೊಡಮಾಡುವ ದಿ| ಎನ್‌.ಕೆ.ಕುಲಕರ್ಣಿ ಸ್ಮರಣಾರ್ಥ ಪ್ರಶಸ್ತಿಗೆ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಗಾರ ಶ್ರೇಯಸ್‌ ಹಾಗೂ ಕೊಪ್ಪಳ ಜಿಲ್ಲೆ ಕುಷ್ಟಗಿಯಿಂದ ನಾರಾಯಣರಾವ್‌ ಕುಲ್ಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ. ದಿದ್ದಗಿ ಕಿಶನ್‌ರಾವ್‌ ಸ್ಮರಣಾರ್ಥ ಪ್ರಶಸ್ತಿಗೆ ಮಹಾನಂದ ನಾಯಕ, ದಿ| ಬೊಮ್ಮನಾಳ ರಘುನಾಥಸಿಂಗ್‌ ಸ್ಮರಣಾರ್ಥ ಪ್ರಶಸ್ತಿಗೆ ವಿಶ್ವನಾಥ ಸಾಹುಕಾರ, ಪ್ರಕಾಶ ಮಸ್ಕಿ ಪ್ರಾಯೋಜಿತ ನೀಡುವ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಅನಿಲಕುಮಾರ, ಕೆ.ಶಿವನಗೌಡ ನಾಯಕ ಪ್ರಾಯೋಜಿತ ಪ್ರಶಸ್ತಿಗೆ ಛಾಯಾಗ್ರಾಹಕ ಶ್ರೀನಿವಾಸ ಇನಾಮದಾರ್‌ ಮತ್ತು ದಿ| ಅಡಿವೆಪ್ಪ ಸ್ಮಾರಕ ಪ್ರಶಸ್ತಿಗೆ ಪ್ರಭಾಕರ ಹುಡೇದ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದರ ಜೊತೆಗೆ ಜಾಹೀರಾತು ವಿಭಾಗದಲ್ಲಿ ಮುತ್ತಣ್ಣ ಎಂ.ಕಬ್ಬಿಣದ, ಪ್ರಸರಣ ವಿಭಾಗಕ್ಕೆ ಮುರಳೀಧರ ವೈದ್ಯ ಮತ್ತು ಮಾನ್ವಿ ತಾಲೂಕಿನ ಪೋತ್ನಾಳದ ಷಡಕ್ಷರಯ್ಯ ಸ್ವಾಮಿ ಅವರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next