Advertisement

ಮನ್ಸೂರ್‌ ಬಾಂಬ್‌ ಹೊಸ ಹೆಸರು ಲಿಂಕ್‌

02:13 AM Jun 24, 2019 | Sriram |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಆರೋಪ ಪ್ರಕರಣ ಮತ್ತೂಂದು ತಿರುವು ಪಡೆದುಕೊಂಡಿದೆ. ಐಎಂಎ ಮಾಲೀಕ ಮೊಹಮದ್‌ ಮನ್ಸೂರ್‌ ಖಾನ್‌ನದು ಎನ್ನಲಾದ ಯೂಟ್ಯೂಬ್‌ ವಿಡಿಯೋದಲ್ಲಿ, ಪ್ರಮುಖ ರಾಜಕೀಯ ನಾಯಕರು ಮಾತ್ರವಲ್ಲದೆ ಉಗ್ರ ಚಟುವಟಿಕೆಯ ವ್ಯಕ್ತಿಯೂ ವಂಚನೆ ಪ್ರಕರಣದಲ್ಲಿ ಇದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ.

Advertisement

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡಲಾಗಿರುವ ಮನ್ಸೂರ್‌ನದು ಎನ್ನಲಾದ ವಿಡಿಯೋದಲ್ಲಿ ಜೆಡಿಎಸ್‌ ಎಂಎಲ್ಸಿ ಶರವಣ, ರಾಜ್ಯ ಸಭೆ ಮಾಜಿ ಸದಸ್ಯ, ಕಾಂಗ್ರೆಸ್‌ ಮುಖಂಡ ರೆಹಮಾನ್‌ ಖಾನ್‌ ಸೇರಿದಂತೆ ಹಲವರಿಂದ ವಂಚನೆಯಾಗಿದೆ ಎಂಬ ಗಂಭೀರ ಆರೋಪಮಾಡಿದ್ದಾನೆ.

ಸಾಲ ಪಡೆಯುವ ಸಂಬಂಧ ಐಎಎಸ್‌ ಅಧಿಕಾರಿಯೊಬ್ಬರು 10 ಕೋಟಿ ರೂ. ಬೇಡಿಕೆಯಿಟ್ಟಿದ್ದರು. ಕಂಪೆನಿಯ ಮ್ಯಾನೇಜ್‌ಮೆಂಟ್ ಹಾಗೂ ಸಹಚರರೇ ನನಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದ್ದಾನೆ.

ನನಗೆ ವಂಚನೆ ಮಾಡಿದವರು ಹಣ ಪಡೆದವರ ಹೆಸರುಗಳ ಪಟ್ಟಿ ನನ್ನ ಬಳಿಯಿದೆ. ನನ್ನ ಕುಟುಂಬ ಹಾಗೂ ನನಗೆ ಪ್ರಾಣಭೀತಿಯಿದೆ.ನನ್ನ ಕುಟುಂಬದ ಪ್ರಾಣ ರಕ್ಷಣೆ ಸಲುವಾಗಿ ಆ ಹೆಸರುಗಳನ್ನು ಈಗ ಬಹಿರಂಗಪಡಿಸುವುದಿಲ್ಲ. ಪೊಲೀಸ್‌ ವಿಚಾರಣೆ ಹಾಗೂ ನ್ಯಾಯಾಲಯದ ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ನಾನು ಯಾವುದೇ ಪೋಂಜಿ ಸ್ಕೀಂ ನಡೆಸಿಲ್ಲ. ಇದು ಜನರ ಹಣವಾಗಿರುವುದರಿಂದ ಅದನ್ನು ಮರಳಿಸಬೇಕಿದೆ ಎಂದಿದ್ದಾನೆ.

Advertisement

ನಾನು ಭಾರತಕ್ಕೆ ವಾಪಾಸ್‌ ಬರಲು ಸಿದ್ಧನಿದ್ದೇನೆ. ಜೂನ್‌ 14ರಂದು ವಾಪಾಸ್‌ ಬರಲು ಬಂದಿದ್ದೆ. ಆದರೆ ನನ್ನ ಪಾಸ್‌ಪೋರ್ಟ್‌ ಜಪ್ತಿಯಾಗಿತ್ತು ಎಂದಿದ್ದಾನೆ.

ಐಎಂಎ ಕಂಪೆನಿ 13 ವರ್ಷಗಳಿಂದ 21 ಸಾವಿರ ಕುಟುಂಬಗಳಿಗೆ ಆದಾಯ ನೀಡುತ್ತಿದೆ. 1800 ಮಕ್ಕಳ ಶೈಕ್ಷಣಿಕ ಸೌಲಭ್ಯ ನೋಡಿಕೊಳ್ಳುತ್ತಿದೆ. 7300 ಮನೆಗಳಿಗೆ ರೇಷನ್‌ ನೀಡುತ್ತಿದೆ. ಐಎಂಎ ಇದುವರೆಗೂ 12 ಸಾವಿರ ಕೋಟಿ ರೂ. ಲಾಭ ಗಳಿಸಿದ್ದು, 2 ಸಾವಿರ ಕೋಟಿ ಕ್ಯಾಪಿಟಲ್ ಇನ್‌ವೆಸ್ಟ್‌ಮೆಂಟ್ ವಾಪಾಸ್‌ ನೀಡಿದ್ದೇವೆ.ನಮ್ಮ ಬಳಿ 1350 ಕೋಟಿ ರೂ.ಮೌಲ್ಯದ ಆಸ್ತಿಗಳಿವೆ. ಅದನ್ನು ಜನರಿಗೆ ಹಂಚಬೇಕು. ಶೇ 99ರಷ್ಟು ಜನರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.ನನ್ನ ಉದ್ಯಮದ ಕುಸಿತದ ಹಿಂದೆ ಕೇಂದ್ರ ರಾಜ್ಯಮಟ್ಟದ ಭ್ರಷ್ಟಾಚಾರಗಳು ನನ್ನನ್ನು ದಿವಾಳಿಯನ್ನಾಗಿಸಲು ಯತ್ನಿಸಿ ಯಶಸ್ವಿಯಾದವು ಎಂದಿದ್ದಾರೆ.

ಸತ್ಯವನ್ನು ಬಿಚ್ಚಿಡುತ್ತೇನೆ!: ‘ಅಲೋಕ್‌ ಕುಮಾರ್‌ ಬಳಿ ನಾನು ಮನವಿ ಮಾಡುತ್ತೇನೆ. ಅವರ ಮೇಲೆ ನನಗೆ ಭರವಸೆಯಿದೆ. ಅಲೋಕ್‌ ಕುಮಾರ್‌ ಅವರೇ…. (9902129090) ನಂಬರ್‌ಗೆ ಕರೆ ಮಾಡಿ. ನನಗೆ ವ್ಯವಸ್ಥೆಯ ಬಗ್ಗೆ ನಂಬಿಕೆಯಿದೆ, ನಾನು ವಾಪಾಸ್‌ ಬಂದು ನ್ಯಾಯ ಪಡೆಯುತ್ತೇನೆ, ಸತ್ಯವನ್ನು ಬಿಚ್ಚಿಡುತ್ತೇನೆ. ನಂತರ ಕಾನೂನು ಅದರ ಕೆಲಸ ಮಾಡುತ್ತದೆ. ಈ ಹಿಂದೆ ನಾನು ನಗರ ಪೊಲೀಸ್‌ ಆಯುಕ್ತರಿಗೆ ಕಳುಹಿಸಿದ್ದ ಆಡಿಯೋದಲ್ಲಿ ಕ್ಲಿಪ್ಪಿಂಗ್‌ನಲ್ಲಿ ನಮ್ಮ ಜೀವ ಹೇಗೆ ರಕ್ಷಣೆ ಮಾಡಿಕೊಂಡು ಪಲಾಯನಗೊಂಡೆವು ಎಂಬುದನ್ನು ಹೇಳಿದ್ದೇನೆ ಎಂದಿದ್ದಾರೆ.

ಜಮೀರ್‌ ನನಗೆ ಸಹಾಯ ಮಾಡಲು ಆಗೋಲ್ಲ !: ವಿಡಿಯೋದಲ್ಲಿ ಸಚಿವ ಜಮೀರ್‌ ಅಹ್ಮದ್‌ಖಾನ್‌ ಹೆಸರನ್ನು ಪ್ರಸ್ತಾಪಿಸಿರುವ ಮನ್ಸೂರ್‌, ” ನೀವು ಬನ್ನಿ ನಿಮ್ಮ ಜತೆಗೆ ನಾವಿದ್ದೇವೆ ಎಂದು ಜಮೀರ್‌ ಅಹ್ಮದ್‌ ಅವರು ಹೇಳಿರುವುದನ್ನು ಕೇಳಿದ್ದೇನೆ. ಆದರೆ, ಅವರು ನನಗೆ ಸಹಾಯ ಮಾಡಲು ಆಗುವುದಿಲ್ಲ. ಅದು ನನಗೆ ಗೊತ್ತಿದೆ” ಎಂದಿದ್ದಾನೆ.

ಯಾರ ಹೆಸರಿವೆ?

ಮನ್ಸೂರ್‌ನದು ಎನ್ನಲಾದ ವಿಡಿಯೋದಲ್ಲಿನ ಹೆಸರುಪಟ್ಟಿ ಇದು ರಾಜ್ಯ ಸಭೆಯ ಮಾಜಿ ಸದಸ್ಯರಾದ ಕೆ. ರೆಹಮಾನ್‌ ಖಾನ್‌, ಮೊಹಮದ್‌ ಉಬೈದುಲ್ಲಾ ಷರೀಪ್‌ ( ಕಾಂಗ್ರೆಸ್‌ ಕಾರ್ಯಕರ್ತ) ,ಮೊಹಮದ್‌ ಖಾಲೀದ್‌ ಅಹ್ಮದ್‌ (ಪತ್ರಕರ್ತ) , ‘ಉಗ್ರರೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ’ ಮುಕ್ತಿಯಾರ್‌ ಅಹ್ಮದ್‌ ಟಾಡಾ ,ಫೈರೋಜ್‌ ಅಬ್ದುಲ್ಲ ಸೇs್ ,ಪ್ರಸ್ಟೀಜ್‌ ಗ್ರೂಪ್‌ನ ಇರ್ಫಾನ್‌ ,ಜೆಡಿಎಸ್‌ ಎಂಎಲ್ಸಿ ಶರವಣ ,ಮುಫ್ತಿ ಇಫ್ತಿಕಾರ್‌ ಅಹ್ಮದ್‌ ಖಾಸ್ಮಿ ,ಶಂಶುದ್ದೀನ್‌,ಜೈನುಲ್ ಅಬಿದೀನ್‌
ಮನ್ಸೂರ್‌ ವಿಡಿಯೋ ಕುರಿ ತಾಗಿ ಸದ್ಯಕ್ಕೆ ಏನೂ ಕಮೆಂಟ್ ಮಾಡುವುದಿಲ್ಲ. ಪರಿಶೀಲನೆ ನಡೆಸಿ ಮಾತನಾಡುತ್ತೇನೆ.
-ಅಲೋಕ್‌ಕುಮಾರ್‌, ನಗರ ಪೊಲೀಸ್‌ ಆಯುಕ್ತ
Advertisement

Udayavani is now on Telegram. Click here to join our channel and stay updated with the latest news.

Next