Advertisement

ಹದಗೆಟ್ಟ ಮಣೂರು-ಪಡುಕರೆ ಕರಾವಳಿ ರಸ್ತೆ: ಸಂಚಾರ ದುಸ್ತರ

10:22 PM Jul 01, 2019 | Sriram |

ಕೋಟ: ಮಣೂರು-ಪಡು ಕರೆಯಿಂದ ಬೀಜಾಡಿ, ಕೋಟೇಶ್ವರವನ್ನು ಸಂಪರ್ಕಿಸುವ ಮೀನುಗಾರಿಕೆ ರಸ್ತೆ ಹಲವು ಸಮಯದಿಂದ ಹದಗೆಟ್ಟಿದೆ. ಇದೀಗ ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಿದ್ದು ಸಂಚಾರ ದುಸ್ತರಗೊಂಡಿದೆ. ಹೀಗಾಗಿ ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Advertisement

ಪ್ರಮುಖ ರಸ್ತೆ
ಈ ರಸ್ತೆ ಮಣೂರು-ಪಡುಕರೆಯಿಂದ ಮುಂದೆ ಸಾಗಿ ಕೊಮೆ, ಬೀಜಾಡಿ, ಕೋಟೇಶ್ವರ ಮುಂತಾದ ಕಡಲ ಕಿನಾರೆಯ ಪ್ರಮುಖ ಊರುಗಳನ್ನು ಸಂಪರ್ಕಿಸುತ್ತದೆ. ಇದೀಗ ಈ ರಸ್ತೆಯ ಹಲವು ಕಡೆಗಳಲ್ಲಿ ಹೊಂಡಗಳು ಸೃಷ್ಠಿಯಾಗಿರುವುದರಿಂದ ಇಲ್ಲಿ ಪ್ರತಿದಿನ ಸಂಚಾರ ನಡೆಸುವ ಸಾವಿರಾರು ಮಂದಿ ಸ್ಥಳೀಯರು ಹಾಗೂ ಪಡುಕರೆಯ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಸ್ಥಳೀಯರಿಂದ ಪ್ರತಿಭಟನೆ
ರಸ್ತೆಯಲ್ಲಿ ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ತತ್‌ಕ್ಷಣ ದುರಸ್ತಿಗೊಳಿಸಬೇಕು ಎಂದು ರಿಕ್ಷಾ ಚಾಲಕರು ಮತ್ತು ಸ್ಥಳೀಯರು ಮಳೆಗಾಲದ ಆರಂಭದಲ್ಲಿ ಪ್ರತಿಭಟನೆ ನಡೆಸಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರು.

ಆಶ್ವಾಸನೆ ಬೇಡ; ಕೆಲಸ ಮಾಡಿ
ರಸ್ತೆ ಸಮಸ್ಯೆ ಕುರಿತು ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಹಾಗೂ ದುರಸ್ತಿಪಡಿಸುವುದಾಗಿ ಭರವಸೆ ನೀಡಲಾಗಿದೆ. ಆದರೆ ಇದುವರೆಗೆ ಕಾಮಗಾರಿ ನಡೆದಿಲ್ಲ. ಹೀಗಾಗಿ ಇನ್ನು ಮುಂದೆ ಜನಪ್ರತಿನಿಧಿಗಳ ಆಶ್ವಾಸನೆಯ ಮಾತಿನ ಬಗ್ಗೆ ನಮಗೆ ವಿಶ್ವಾಸವಿಲ್ಲ. ತತ್‌ಕ್ಷಣ ಕಾಮಗಾರಿ ಆರಂಭಿಸಬೇಕು
ಎನ್ನುವುದು ಸ್ಥಳೀಯರ ಮನವಿಯಾಗಿದೆ.

ಚರಂಡಿ ವ್ಯವಸ್ಥೆ ಇಲ್ಲ
ರಸ್ತೆಯಲ್ಲಿ ಮಳೆ ನೀರು ಹರಿದುಹೋಗಲು ಚರಂಡಿಯ ವ್ಯವಸ್ಥೆ ಇಲ್ಲದಿರುವುದರಿಂದ ಹಲವು ಕಡೆಗಳಲ್ಲಿ ರಸ್ತೆಯ ಮೇಲೆ ನೀರು ನಿಲ್ಲುತ್ತದೆ. ಹೀಗಾಗಿ ದುರಸ್ತಿಗೊಳಿಸಿ ಕೆಲವೇ ವರ್ಷಗಳಲ್ಲಿ ಮತ್ತೆ ಹಾಳಾಗುತ್ತದೆ. ಆದ್ದರಿಂದ ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಕೈಗೊಳ್ಳಬೇಕಿದೆ.

Advertisement

ದುರಸ್ತಿಗೆ ಯೋಜನೆ ಸಿದ್ಧಪಡಿಸಲಾಗಿದೆ
ರಸ್ತೆ ಸಮಸ್ಯೆಯನ್ನು ಸ್ಥಳೀಯ ಶಾಸಕರಾದ ಹಾಲಾಡಿ ಶ್ರೀನಿವಾಸ್‌ ಶೆಟ್ಟಿಯವರ ಗಮನಕ್ಕೆ ತರಲಾಗಿದೆ ಹಾಗೂ ಅವರ ಸೂಚನೆಯಂತೆ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ ಮತ್ತೂಮ್ಮೆ ಸಮಸ್ಯೆಯನ್ನು ತಿಳಿಸಿದಾಗ ಶೀಘ್ರದಲ್ಲಿ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿರ್ತುತಾರೆ.
-ಭುಜಂಗ ಗುರಿಕಾರ,
ಸ್ಥಳೀಯ ವಾರ್ಡ್‌ ಸದಸ್ಯರು ಕೋಟ ಗ್ರಾ.ಪಂ.

ಶೀಘ್ರ ದುರಸ್ತಿಗೊಳಿಸಿ
ಮಣೂರು ಪಡುಕರೆ ಮೀನುಗಾರಿಕೆ ರಸ್ತೆ ಹಲವು ಸಮಯದಿಂದ ಹಡಗೆಟ್ಟಿದೆ. ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಶೀಘ್ರ ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ಮಳೆಗಾಲದಲ್ಲಿ ರಿಕ್ಷಾ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಜತೆಗೆ ಪಡುಕರೆ-ಕೋಡಿ ರಸ್ತೆ ಕೂಡ ಹಾಳಾಗಿದ್ದು ಇದರ ದುರಸ್ತಿಗೂ ಕ್ರಮಕೈಗೊಳ್ಳಬೇಕು.
-ಯೋಗೇಂದ್ರ ಪಡುಕರೆ,
ಸ್ಥಳೀಯ ರಿಕ್ಷಾ ಚಾಲಕರು.

Advertisement

Udayavani is now on Telegram. Click here to join our channel and stay updated with the latest news.

Next