Advertisement

ಇಲಾಖೆಗಳ ನಡುವೆ ಮನ್ನಾ ಸಂಘರ್ಷ, 3766 ಕೋಟಿ ವಿದ್ಯುತ್‌ ಬಾಕಿ ಸಮಸ್ಯೆ

03:45 AM Jul 12, 2017 | Team Udayavani |

ಬೆಂಗಳೂರು: ಹತ್ತಾರು ವರ್ಷಗಳಿಂದ ಗ್ರಾಮ ಪಂಚಾಯತ್‌ಗಳಲ್ಲಿ ಬಾಕಿ ಉಳಿದಿದ್ದ 3,766 ಕೋಟಿ ರೂ. ವಿದ್ಯುತ್‌ ಬಿಲ್‌ ಮನ್ನಾ ಮಾಡಲು ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಇಂಧನ ಇಲಾಖೆಯ ಸಂಘರ್ಷ ದಿಂದಾಗಿ ಯಾವುದೇ ಪಂಚಾಯತ್‌ಗೆ ಈ ಸೌಲಭ್ಯ ಸಿಕ್ಕಿಲ್ಲ. 
ಬಹು ಹಿಂದೆಯೇ ಸರಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದರೂ ಇಂಧನ ಇಲಾಖೆ ಮಾತ್ರ ಇನ್ನೂ ಗ್ರಾಮ ಪಂಚಾಯತ್‌ಗಳ ವಿದ್ಯುತ್‌ ಬಿಲ್‌ನ ಬಾಕಿಗೆ ಬಡ್ಡಿ ಸೇರಿಸುತ್ತಲೇ ಇದೆ. ಇದರಿಂದಾಗಿ ಪಂಚಾಯತ್‌ಗಳ ವಿದ್ಯುತ್‌ ಬಿಲ್‌ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ..

Advertisement

ಈಗಾಗಲೇ ಸರಕಾರ ಬಿಲ್‌ನ ಬಾಕಿ ಮೊತ್ತವನ್ನು ಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಹಣ ಕಟ್ಟಲ್ಲ ಎಂದು ಪಂಚಾಯತ್‌ ರಾಜ್‌ ಇಲಾಖೆ ಹಠ ಹಿಡಿದಿದೆ.  2015ರ ಮಾರ್ಚ್‌ ಅಂತ್ಯದವರೆಗಿನ ಬಿಲ್‌ ಮನ್ನಾ ಆಗಿರುವುದರಿಂದ ಹೊಸ ಬಿಲ್‌ ಜತೆ ಹಳೆಯ ಬಾಕಿಯನ್ನು ಸೇರಿಸಬೇಡಿ. 2015‌ರ ಎಪ್ರಿಲ್‌ನಿಂದ ಹಿಂದಿನ ಬಾಕಿ ತೆಗೆದು ಝೀರೋ ಬಿಲ್‌ ಕೊಡುವಂತೆ ಪಂಚಾಯತ್‌ ರಾಜ್‌ ಸಚಿವಾಲ¿  ಇಂಧನ ಇಲಾಖೆಗೆ ಆಗ್ರಹಿಸುತ್ತಿದೆ. ಆದರೆ, ಇದಕ್ಕೆ ಒಪ್ಪದ ಇಂಧನ ಇಲಾಖೆ ಹಳೆ ಯದು ಮತ್ತು ಹೊಸ ಬಿಲ್‌ ಅನ್ನು ಸೇರಿಸುತ್ತಿದೆ. 

ಮನ್ನಾ ಏಕೆ?: ರಾಜ್ಯ ಸರಕಾರ ಗ್ರಾಮ ಪಂಚಾಯತ್‌ಗಳಿಗೆ ನೀಡುತ್ತಿದ್ದ ಅನುದಾನದಲ್ಲಿ ಶೇ.60‌ರಷ್ಟನ್ನು ವಿದ್ಯುತ್‌ ಬಿಲ್‌ ಪಾವತಿಸಲು ಬಳಕೆ ಮಾಡಲಾಗುತ್ತಿತ್ತು. ಇದರಿಂದಾಗಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹಣ ವಿನಿಯೋಗಿಸಲು ಆಗುತ್ತಿಲ್ಲ ಎಂದು ಪಂಚಾಯತ್‌ಗಳು ಸರಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದವು. ಇದಕ್ಕೆ ಮಣಿ ದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗ್ರಾ. ಪಂ.ಗಳಲ್ಲಿ ಬಾಕಿ ಉಳಿದಿರುವ ವಿದ್ಯುತ್‌ ಬಿಲ್‌ ಬಾಕಿ ಮೊತ್ತವನ್ನು ಮನ್ನಾ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರು. ಇದು ಗ್ರಾ.ಪಂ.ಗಳಿಗೆ ನಿಟ್ಟುಸಿರಿಗೂ ಕಾರಣವಾಗಿತ್ತು.

ಮನ್ನಾ ಹೇಗೆ?: ಬಾಕಿ ಇರುವ 3,766.81 ಕೋ. ರೂ. ವಿದ್ಯುತ್‌ ಬಿಲ್‌ ಅನ್ನು ಮನ್ನಾ ಮಾಡಿದರೆ ಇಂಧನ ಇಲಾಖೆಗೆ ಕಷ್ಟವಾಗುತ್ತದೆ ಎಂದು ಅರಿತ ಸರಕಾರ, ಬ್ಯಾಂಕ್‌ಗಳಿಂದ ಪಿಸಿಕೆಎಲ್‌ (ಪವರ್‌ ಕಂಪೆನಿ ಆಫ್ ಕರ್ನಾಟಕ ಲಿಮಿಟೆಡ್‌) ಮೂಲಕ ತನ್ನ ಭದ್ರತೆ ನೀಡಿ ಸಾಲ ಕೊಡಿಸಲು ತೀರ್ಮಾನಿಸಿತ್ತು. ಇದಕ್ಕಾಗಿ ಕೆಪಿಸಿಎಲ್‌ 
(ಕರ್ನಾಟಕ ಪವರ್‌ ಕಾರ್ಪೊರೇಶನ್‌ ಲಿಮಿಟೆಡ್‌) ನಿಂದ ಪಡೆದ ವಿದ್ಯುತ್‌ ಬಾಕಿ ಬಿಲ್ಲನ್ನು ಪಿಸಿಕೆಎಲ್‌ ಬ್ಯಾಂಕ್‌ಗಳಿಂದ ಸಾಲ ಪಡೆದು ತುಂಬಬೇಕು ಎಂದು ಸೂಚನೆ ನೀಡಿತ್ತು. 2015ರ ಮಾರ್ಚ್‌ವರೆಗೆ ಬೆಸ್ಕಾಂ 1,797 ಕೋ. ರೂ., ಮೆಸ್ಕಾಂ-219 ಕೋಟಿ, ಹೆಸ್ಕಾಂ-485 ಕೋಟಿ, ಜೆಸ್ಕಾಂ-748 ಕೋಟಿ ಹಾಗೂ ಚೆಸ್ಕ್-516 ಕೋಟಿ ರೂಪಾಯಿಗಳ ಬಾಕಿ ಉಳಿಸಿಕೊಂಡಿವೆ. ಎಸ್ಕಾಂಗಳು ಪಂಚಾಯತ್‌ಗಳ ಬಾಕಿ ಹೊರತಾಗಿಯೂ ಕೆಪಿಸಿಎಲ್‌ಗೆ 15,252 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಪಂಚಾಯತ್‌ಗಳ ಬಾಕಿ ಹಣಕ್ಕೆ ಮಾತ್ರ ಸರಕಾರ ಭದ್ರತೆ ಒದಗಿಸಲಿದೆ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬ್ಯಾಂಕ್‌ಗಳಿಂದಲೂ ಆಸಕ್ತಿ : ರಾಜ್ಯ ಸರಕಾರದ ಖಾತ್ರಿ ಮೇರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಪಿಸಿಕೆಎಲ್‌ಗೆ ಸಾಲ ನೀಡಲು ಆಸಕ್ತಿ ತೋರಿಸಿವೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next