Advertisement

‘ಪರಿಸರ, ಕಲೆ ಮತ್ತು ಶಾಂತಿ’ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಗೋಷ್ಠಿ

06:49 PM Jun 06, 2021 | Team Udayavani |

ಮಣಿಪಾಲ :  ಭೂಮಿಯ ಮೇಲಿನ ನಮ್ಮ ಜೀವನವು ಉತ್ತಮವಾಗಲು ಮತ್ತು ನಮ್ಮ ಸರ್ವನಾಶವನ್ನು ತಡೆಯಲು ಮಾನವ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವನ್ನು ಆಧರಿಸಿದ ಪರಿಸರ ನಾಗರಿಕತೆಯೇ ಮುಂದಿನ ದಾರಿ ಎಂಬುದು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್), ಯುನೆಸ್ಕೋ ಪೀಸ್ ಚೇರ್ ನ ಸಹಯೋಗದೊಂದಿಗೆ ಆಯೋಜಿಸಿದ್ದ ‘ಪರಿಸರ, ಕಲೆ ಮತ್ತು ಶಾಂತಿ’ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಗೋಷ್ಠಿಯ ಒಟ್ಟು ಸಾರವಾಗಿತ್ತು.

Advertisement

ನಾಲ್ಕು ವಿಶೇಷ ಉಪನ್ಯಾಸಗಳು, 45 ಸಂಶೋಧನಾ ಪ್ರಬಂಧಗಳ ಮಂಡನೆ, ಸಮಕಾಲೀನ ಸಮಸ್ಯೆಗಳು ಮತ್ತು ಭವಿಷ್ಯದ ಪರ್ಯಾಯಗಳಿಗೆ ಸಂಬಂಧಿಸಿದ ಚರ್ಚೆಗೆ ಈ ಎರಡು ದಿನಗಳು ಸಾಕ್ಷಿಯಾದವು (ಜೂನ್ 3 ಮತ್ತು 4, 2021). ಪರಿಸರ ಮತ್ತು ಸವಾಲುಗಳು, ಸಾಮಾಜಿಕ-ಆರ್ಥಿಕ ಸಮಸ್ಯೆಗಳು, ಸಾಹಿತ್ಯ, ಸಿನೆಮಾ, ಲಿಂಗ ಅಧ್ಯಯನ, ತತ್ವಶಾಸ್ತ್ರ, ವ್ಯಕ್ತಿಯಿಂದ-ಅಂತರರಾಷ್ಟ್ರೀಯ ಶಾಂತಿಯನ್ನೊಳಗೊಂಡು ಅನೇಕ ವಿಷಯಗಳು ಈ ಸಂದರ್ಭದಲ್ಲಿ  ಚರ್ಚಿಸಲ್ಪಟ್ಟವು.

ಇದನ್ನೂ ಓದಿ : ಸರ್ಕಾರಿ ಆಸ್ಪತ್ರೆ ವೈದ್ಯನ ಚಿಕಿತ್ಸೆಗೆ 1.5 ಕೋಟಿ ಕೊಟ್ಟ ಆಂಧ್ರ ಸಿಎಂ

ತಮ್ಮ ಉದ್ಘಾಟನಾ ಭಾಷಣದಲ್ಲಿ, ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ. ಡಿ. ವೆಂಕಟೇಶ್ ಅವರು ಮಾತನಾಡುತ್ತ, ಇವತ್ತು ನಾವು ಎದುರಿಸುತ್ತಿರುವ ಮತ್ತು ಪರಿಹರಿಸಬೇಕಿರುವ ಸಮಸ್ಯೆಗಳನ್ನು ವೈಯಕ್ತಿಕ, ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಸಂಬಂದಿತ ಎಂದು ವರ್ಗೀಕರಿಸಬಹುದು. ಮಾಹೆಯು ಪ್ರಾರಂಭಿಸುತ್ತಿರುವ ಹೊಸ ಶೈಕ್ಷಣಿಕ ಕಾರ್ಯಕ್ರಮಗಳು ಈ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿವೆ ಎಂದರು.

ತಮ್ಮ ಶಿಖರೋಪನ್ಯಾಸದಲ್ಲಿ ಯುನೆಸ್ಕೋ ಪೀಸ್ ಚೇರ್ ನ ಪ್ರೊ.ಎಂ.ಡಿ.ನಲಪತ್ ಅವರು “ಭಾರತೀಯ ನಾಗರಿಕತೆಯ ಮೂಲತತ್ವವೇ ‘ವಸುದೈವ ಕುಟುಂಬಕಂ’ (ಇಡೀ ಜಗತ್ತು ಒಂದು ಕುಟುಂಬ) ಎಂದು ಹೇಳಿದರು. ಗಾಂಧಿವಾದಿ ಕಲ್ಪನೆಯ ‘ಸೂಕ್ತ ವಿಧಾನಗಳು’ ಜೀವನದ ಪ್ರತಿಯೊಂದು ನಡಿಗೆಯಲ್ಲಿ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ, ಹಾಗೂ ಇವತ್ತಿನ ಸಾಂಕ್ರಾಮಿಕ ಸಮಯದಲ್ಲೂ ಪ್ರಧಾನ ತತ್ವವಾಗಬೇಕು” ಎಂದು ಹೇಳಿದರು.

Advertisement

‘ಅಂತಾರಾಷ್ಟ್ರೀಯ ಶಾಂತಿಯ ಸಾಧ್ಯತೆಗಳು: ಒಂದು ಗಾಂಧಿವಾದಿ ವಿಧಾನ’ ಕುರಿತ ತಮ್ಮ ಉಪನ್ಯಾಸದಲ್ಲಿ, ಖ್ಯಾತ ಪತ್ರಕರ್ತ ಸುಧೀಂದ್ರ ಕುಲಕರ್ಣಿ ಅವರು ಕೈಗಾರಿಕಾ ನಾಗರಿಕತೆಗೆ ಏಕೈಕ ಪರ್ಯಾಯವೆಂದರೆ ಪರಿಸರ ನಾಗರಿಕತೆಯೊಂದೇ  ಎಂದು ಸಮರ್ಥಿಸಿಕೊಂಡರು. ಹಿಂಸೆಯ ವಿವಿಧ ಮೂಲಗಳನ್ನು ಅಹಿಂಸೆ, ಪ್ರೀತಿ ಮತ್ತು ಸಹಾನುಭೂತಿಗಳೆಂಬ ಗಾಂಧಿವಾದಿ ಮೌಲ್ಯಗಳಿಂದ ಬದಲಿಸಬೇಕಿದೆ ಎಂದು ಅವರು ಹೇಳಿದರು.

‘ದಿ ಕಾಸ್ಮೋಸ್ ಅಂಡ್ ಹ್ಯೂಮನ್ ಕಾನ್ಷಿಯಸ್ನೆಸ್: ಮೆಟಾಫಿಸಿಕಲ್ ಎಕ್ಸ್‌ಪ್ಲೋರೇಶನ್ಸ್ ಥ್ರೂ ಸಿನೆಮಾ’ ಕುರಿತ ತಮ್ಮ ಉಪನ್ಯಾಸದಲ್ಲಿ ಖ್ಯಾತ ಬರಹಗಾರ ಪ್ರೊ. ಮನು ಚಕ್ರವರ್ತಿ ಮಾನವಕೇಂದ್ರೀಯ ದೃಷ್ಟಿಕೋನದಿಂದ, ಪ್ರಕೃತಿ ಕೇಂದ್ರಿತ ದೃಷ್ಟಿಕೋನಕ್ಕೆ ಬದಲಾವಣೆ, ಮತ್ತು ಮಾನವ – ಪ್ರಕೃತಿಯ ನಡುವಿನ ಸಾಮರಸ್ಯ, ಉತ್ತಮ ಜಗತ್ತಿಗಾಗಿ ಅತೀ ಅಗತ್ಯವಾದದ್ದು ಎಂದರು. ಕುಬ್ರಿಕ್, ತಾರ್ಕೋವಿಸ್ಕಿ ಮತ್ತು ಕುರೊಸಾವಾ ಚಿತ್ರಗಳ ಉದಾಹರಣೆಗಳೊಂದಿಗೆ ಅವರು ತಮ್ಮ ಮಾತುಗಳನ್ನು ಪುಷ್ಟಿಕರಿಸಿದರು.

‘ಟ್ಯಾಗೋರ್ ಮತ್ತು ಪರಿಸರ: ಫಿಲಾಸಫಿ ಆ್ಯಂಡ್ ಪ್ರಾಕ್ಸಿಸ್’ ಕುರಿತ ತಮ್ಮ ಉಪನ್ಯಾಸದಲ್ಲಿ  ಎಡಿನ್ಬರ್ಗ್ ನೇಪಿಯರ್ ವಿಶ್ವವಿದ್ಯಾಲಯದ ‘ಸ್ಕಾಟಿಷ್ ಸೆಂಟರ್ ಫಾರ್ ಟ್ಯಾಗೋರ್ ಸ್ಟಡೀಸ್’ ನ ನಿರ್ದೇಶಕರಾದ ಡಾ. ಬಾಶಾಬಿ ಫ್ರೇಸರ್, “ಟ್ಯಾಗೋರ್ ಅವರು  ಅರಣ್ಯ ವಿಶ್ವವಿದ್ಯಾಲಯ ಮತ್ತು ಶಾಂತಿ ನಿಕೇತನದಂತಹ ತಮ್ಮ ಕಲ್ಪನೆಯಲ್ಲಿ ಪ್ರತಿನಿಧಿಸುವಂತೆ ಪರಿಸರ ನಾಗರಿಕತೆಗೆ ಒಲವು ಉಳ್ಳವರಾಗಿದ್ದರು ಎಂದು ಹೇಳಿದರು. ಪ್ರಕೃತಿ ತನ್ನನ್ನು ಪ್ರೀತಿಸುವವರಿಗೆ ಎಂದಿಗೂ ದ್ರೋಹ ಮಾಡುವುದಿಲ್ಲ ಎಂದು ಅವರು ಉಲ್ಲೇಖಿಸಿದರು.

ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ವಿನೋದ್ ಭಟ್ ಅವರು ತಮ್ಮ ಭಾಷಣದಲ್ಲಿ, ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸಂಘರ್ಷಗಳ ಪರಿಹಾರಕ್ಕೆ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ಸಂಶೋಧನಾ ಪ್ರಕಟಣೆಯ ಕುರಿತು ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು. ಜಿಸಿಪಿಎಎಸ್ ನಿರ್ದೇಶಕರಾದ ಪ್ರೊ. ವರದೇಶ್ ಹಿರೇಗಂಗೆ ಅವರು ಶಾಂತಿ ಮತ್ತು ಪರಿಸರದ ಪರಿಶೋಧನೆ ಮತ್ತು ಅಭಿವ್ಯಕ್ತಿಗೆ, ಕಲೆ ಒಂದು ಮಾಧ್ಯಮವಾಗಬಹುದು ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ : ಸ್ಟುಡಿಯೋಗೆ ಕನ್ನ ಹಾಕಿದವರ ಹೆಡೆಮುರಿ ಕಟ್ಟಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next