ಪುಂಜಾಲಕಟ್ಟೆ: ಮಾವ ಮತ್ತು ಅಳಿಯನ ನಡುವಿನ ಗಲಾಟೆ ಅಳಿಯನ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಮಣಿನಾಲ್ಕೂರು ಗ್ರಾಮದ ಬಡೆಕೊಟ್ಟಿನಲ್ಲಿ ಶನಿವಾರ ಸಂಭವಿಸಿದೆ. ಇಲ್ಲಿನ ನಿವಾಸಿ ರಮಾನಂದ (52) ಮೃತಪಟ್ಟವರಾಗಿದ್ದು, ಮಾವ ಅಮ್ಮನ್ನ ಪೂಜಾರಿ (70) ಆರೋಪಿ.
ಘಟನೆ ವಿವರ
ಮೂಲತಃ ಬಣಕಲ್ ನಿವಾಸಿಯಾಗಿದ್ದ ರಮಾನಂದ ಬಡಗಿ ವೃತ್ತಿ ಯವರಾಗಿದ್ದು, ವಿವಾಹ ಬಳಿಕ ಹಲವು ವರ್ಷಗಳಿಂದ ಪತ್ನಿ ಮೋಹಿನಿಯ ತಂದೆ ಅಮನ್ನ ಪೂಜಾರಿ ಮನೆಯಲ್ಲಿ ವಾಸ್ತವ್ಯವಿದ್ದರು. ರಮಾನಂದ – ಮೋಹಿನಿ ದಂಪತಿಗೆ ಮೂವರು ಪುತ್ರಿಯರಿದ್ದಾರೆ. ಹಿರಿಯ ಮಗಳಿಗೆ ಕೆಲವು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಇನ್ನಿಬ್ಬರು ಮೂಡಬಿದಿರೆಯ ಬಟ್ಟೆಮಳಿಗೆಯಲ್ಲಿ ದುಡಿಯುತ್ತಿದ್ದಾರೆ. ಪತ್ನಿ ಮೋಹಿನಿ ಹತ್ತಿರದ ಮನೆಗಳಲ್ಲಿ ಮನೆಗೆಲಸ ನಿರ್ವಹಿಸುತ್ತಿದ್ದಾರೆ.
ಕೆಲವು ಸಮಯಗಳಿಂದ ಮಾವ ಅಮ್ಮನ್ನ ಪೂಜಾರಿ ಹಾಗೂ ರಮಾ ನಂದರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮನೆ ಪರಿಸರದಲ್ಲಿ ಭಾರೀ ಜನ ಜಮಾ ಯಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.
ಅಮ್ಮನ್ನ ಪೂಜಾರಿಗೆ ಎರಡು ವಿವಾಹವಾಗಿದ್ದು, ಮೋಹಿನಿಯ ತಾಯಿ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಇನ್ನೋರ್ವ ಪತ್ನಿ ಇಬ್ಬರು ಹೆಣ್ಣುಮಕ್ಕಳ ಜತೆ ಇದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕುಡಿದ ಮತ್ತಿನಲ್ಲಿ ಕೊಲೆ ನಡೆದಿದ್ದು, ಅದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ, ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೆಂಗಿನ ಹೊಂಡದಲ್ಲಿದ್ದಾನೆ!
ಶನಿವಾರ ಕೆಲಸಕ್ಕೆ ತೆರಳಿದ್ದ ಮೋಹಿನಿ ಮನೆಗೆ ಬಂದಾಗ ತಂದೆ ಆಘಾತ ಕ್ಕೊಳಗಾಗಿ ಕುಳಿತಿರುವುದು ಕಂಡು ಬಂದು ರಮಾನಂದರ ಬಗ್ಗೆ ವಿಚಾರಿಸಿದಾಗ, ತೆಂಗಿನ ಹೊಂಡದಲ್ಲಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಪರಿಶೀಲಿಸಿದಾಗ ಮನೆ ಹಿಂಭಾಗದ ತೆಂಗಿನ ಹೊಂಡದಲ್ಲಿ ರಮಾನಂದನ ಶವ ಪತ್ತೆಯಾಯಿತು. ರಮಾನಂದ ಅವರ ತಲೆ, ಹೊಟ್ಟೆ ಮತ್ತು ಕಾಲಿಗೆ ಕಡಿದ ಗಾಯಗಳಾಗಿವೆ. ಅಮ್ಮನ್ನ ಪೂಜಾರಿಗೂ ಹೊಡೆದಾಟದ ವೇಳೆ ಗಾಯಗಳಾಗಿದ್ದು, ಅವ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.