Advertisement

24ರಿಂದ ನಗರದಲ್ಲಿ ಮಾವು-ಹಲಸು ಮೇಳ

10:11 AM May 22, 2019 | Team Udayavani |

ಮೈಸೂರು: ಮಾವು ಮತ್ತು ಹಲಸು ಬೆಳೆಗಾರರಿಗೆ ಉತ್ತಮ ಬೆಲೆ ದೊರಕಿಸುವ ಜೊತೆಗೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಾರ್ಬೈಡ್‌ ಮುಕ್ತ ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಸಾರ್ವಜನಿಕರಿಗೆ ದೊರಕಿಸುವ ಉದ್ದೇಶದಿಂದ ನಗರದ ಕರ್ಜನ್‌ ಪಾರ್ಕ್‌ ಆವರಣದಲ್ಲಿ ಮೇ 24 ರಿಂದ 28ರವರೆಗೆ ಐದು ದಿನಗಳ ಕಾಲ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌ ಮಾತನಾಡಿ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿರುವ ಈ ಮೇಳದಲ್ಲಿ ಮಾವಿನ ಹಣ್ಣಿನ 40 ಮಳಿಗೆಗಳು ಹಾಗೂ ಹಲಸಿನ ಹಣ್ಣಿನ 2 ಮಳಿಗೆಗಳನ್ನು ತೆರೆದು, ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದರು.

ಗ್ರಾಹಕ ಸ್ನೇಹಿ ಮೇಳ: ಮಾವು ಪ್ರಿಯರ ಆರೋಗ್ಯದ ಹಿತದೃಷ್ಟಿಯಿಂದ ಕ್ಯಾಲ್ಸಿಯಂ ಕಾರ್ಬೈಡ್‌ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಉತ್ಕೃಷ್ಟ ದರ್ಜೆಯ ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೆಂಧೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್‌, ದಶೇರಿ, ರತ್ನಗಿರಿ ಆಲ್ಪಾನ್ಸೋ ಮೊದಲಾದ ತಳಿಗಳ ಮಾವಿನ ಹಣ್ಣುಗಳನ್ನು ಮೇಳದಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

ಹಲವು ಮಾರಾಟಕ್ಕೂ ಅವಕಾಶ: ಮೈಸೂರು ಜಿಲ್ಲೆ ಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾಗಿ ಸುಮಾರು 4269 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯ ಲಾಗುತ್ತಿದ್ದು, ವಾರ್ಷಿಕ 38 ಸಾವಿರ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗುತ್ತಿದೆ ಎಂದು ಅಂದಾಜಿಸ ಲಾಗಿದೆ. ಈ ಬಾರಿ ಮಾವು ಜೊತೆಗೆ ಹಲಸು ಬೆಳೆ ಯನ್ನೂ ಪ್ರೋತ್ಸಾಹಿಸುವ ದೃಷ್ಟಿಯಿಂದ ಮೈಸೂರು, ಚಾಮರಾಜ ನಗರ, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾ ಪುರ ತಾಲೂಕಿನ ರೈತರಿಗೆ ಹಲಸಿನ ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಕಳೆದ ವರ್ಷ 65 ಟನ್‌ ಮಾಗಿಸಿದ ಹಣ್ಣನ್ನು ಮಾರಾಟ ಮಾಡಲಾಗಿತ್ತು. ಈ ವರ್ಷ ಮೇಳದಲ್ಲಿ ಅಂದಾಜು 100 ಟನ್‌ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

Advertisement

ಪರಿಸರ ಸ್ನೇಹಿ ಮೇಳ: ಮಾವು-ಹಲಸು ಮೇಳಕ್ಕೆ ಬರುವ ಮೈಸೂರಿನ ನಾಗರಿಕರು ಸ್ವ ಇಚ್ಛೆಯಿಂದ ಹಣ್ಣನ್ನು ಖರೀದಿಸಲು ಬಟ್ಟೆ ಬ್ಯಾಗ್‌ಗಳನ್ನು ತರಬೇಕೆಂದು ಕೋರಿದ ಅವರು, ರೈತರು ಕೂಡ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಲು ಪೇಪರ್‌ ಕರ್ಟನ್‌ ಬಾಕ್ಸ್‌ ಹಾಗೂ ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕೆಂದು ಅವರು ಮನವಿ ಮಾಡಿದರು.

ರೈತರು ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಲು ಪೇಪರ್‌ ಕರ್ಟನ್‌ ಬಾಕ್ಸ್‌ಗಳನ್ನು ಮಾವು ಅಭಿವೃದ್ಧಿ ಮಂಡಳಿಯ ನೋಂದಾಯಿತ, ಅಧಿಕೃತ ಸಂಸ್ಥೆಗಳು ಖರೀದಿಸಬಹುದು ಎಂದು ವೈಭವ್‌ ಪ್ಯಾಕೇಜಿಂಗ್‌ ಇಂಡಸ್ಟ್ರೀಸ್‌ ಮೊ.9743704037 ಅಥವಾ ಎಂ.ಎಸ್‌.ಪ್ಯಾಕೇಜಿಂಗ್‌ ಇಂಡಸ್ಟ್ರೀಸ್‌, ಮೊ.9008081990 ಸಂಸ್ಥೆಗಳನ್ನು ಸೂಚಿಸಲಾಗಿದೆ.

ಇಲಾಖಾ ದರದಲ್ಲಿ ಮಾರಾಟ: ಮಾವು ಮೇಳಕ್ಕೆ ಮೈಸೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶ ದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಗ್ರಾಹಕರು ಭೇಟಿ ನೀಡುವುದರಿಂದ ಮೈಸೂರು ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿರುವ ಹಣ್ಣು ಮತ್ತು ಅಲಂಕಾರಿಕ ಗಿಡಗಳನ್ನು ಇಲಾಖಾ ದರದಲ್ಲಿ ಮಾರಾಟ ಮಾಡಲು ಸಸ್ಯಸಂತೆಯನ್ನೂ ಆಯೋ ಜಿಸಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಹಬೀನಾ ನಿಶಾದ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next