Advertisement

ದೇವನಹಳ್ಳಿಯಲ್ಲಿ ಮಾವು ಮೇಳ

06:28 AM May 13, 2019 | Team Udayavani |

ದೇವನಹಳ್ಳಿ: ರಾಜ್ಯ ರಾಜಧಾನಿಯಿಂದ ಜಿಲ್ಲಾಡಳಿತ ದೇವನಹಳ್ಳಿ ತಾಲೂಕಿಗೆ ಸ್ಥಳಾಂತರಗೊಂಡ ಬಳಿಕ ರೈತರಿಂದ ನೇರವಾಗಿ ಗ್ರಾಹಕರಿಗೆ ನೈಸರ್ಗಿಕವಾದ ಮಾಗಿದ ಮಾವಿನ ಹಣ್ಣನ್ನು ತಲುಪಿಸುವ ಉದ್ದೇಶದಿಂದ ಇದೇ ಪ್ರಥಮ ಬಾರಿಗೆ ಮಾವು ಮೇಳ ಹಮ್ಮಿಕೊಳ್ಳಲು ಚಿಂತನೆ ನಡೆಸುತ್ತಿದೆ.

Advertisement

ದೇವನಹಳ್ಳಿ-ಚಿಕ್ಕಬಳ್ಳಾಪುರ ರಸ್ತೆಯ ರಾಣಿ ಕ್ರಾಸ್‌ ಅಥವಾ ಸಾದಹಳ್ಳಿ ಬಳಿಯಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟೋಲ್‌ ಬಳಿ ಮಾವು ಮೇಳ ಆಯೋಜಿಸಲು ಅಧಿಕಾರಿಗಳು ನಿರ್ಧರಿಸುತ್ತಿದ್ದಾರೆ. ಬೆಂಗಳೂರಿನ ಲಾಲ್‌ಬಾಗ್‌ ನಲ್ಲಿ ಮೇ.30ರಿಂದ ಮಾವು ಹಾಗೂ ಹಲಸು ಮೇಳ ನಡೆಯುತ್ತಿರುವುದರಿಂದ ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ಸಹ ನಡೆಸಲು ನಿರ್ಧರಿಸುತ್ತಿದ್ದಾರೆ.

ಒಂದೇ ಸೂರಿನಡಿ ಹಲವಾರು ತಳಿ: ಜಿಲ್ಲೆಯ ರೈತರನಷ್ಟೇ ಅಲ್ಲದೇ ನೆರೆಯ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೂ ಅನುಕೂಲವಾಗುವಂತೆ ಮಾವು ಮೇಳವನ್ನು ಹಮ್ಮಿಕೊಳ್ಳಲಾಗಿದೆ. ನೈಸರ್ಗಿಕ ಗುಣಮಟ್ಟದ ಮಾವಿನ ಹಣ್ಣಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಈ ಮೇಳದಿಂದ ಸಹಕಾರಿ ಆಗಲಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಮಾವು ಮೇಳ ಆಯೋಜಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೇಳ ನೋಡುವ ಅವಕಾಶ: ಈ ಹಿಂದೆ ಮಾವಿನ ಮೇಳ ನೋಡಬೇಕೆಂದರೆ ಹಾಗೂ ಅಲ್ಲಿ ಮಾವು ಮಾರಾಟ ಮಾಡಬೇಕೆಂದರೆ ಬೆಂಗಳೂರು ನಗರದ ಲಾಲ್‌ ಬಾಗ್‌ ಹೋಗಬೇಕಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಮಾವಿನ ಮಾರಾಟ ಮಾಡುವ ಸುವರ್ಣಾವಕಾಶ ಕಲ್ಪಿಸುತ್ತಿರುವುದರಿಂದ ವಿವಿಧ ತಳಿಯ ಹಣ್ಣುಗಳನ್ನು ಮಾವು ಮೇಳದಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಅವಕಾಶ ಜಿಲ್ಲೆಯ ಜನತೆಗೆ ದೊರೆಯಲಿದೆ.

ಜಿಲ್ಲಾ ಕೇಂದ್ರವಾದ ಬಳಿಕ ದೇವನಹಳ್ಳಿಯಲ್ಲಿ ಮೊದಲ ಮಾವು ಮೇಳ ಆಯೋಜಿಸಲು ತೋಟಗಾರಿಕೆ ಇಲಾಖೆಯೂ ಸಹ ಉತ್ಸಾಹದಿಂದ ಮುಂದೇ ಬಂದು ತಿಂಗಳ ಅಂತ್ಯದ ವೇಳೆಗೆ ದೇವನಹಳ್ಳಿ ಭಾಗದ ಜನತೆಗೆ ಹಣ್ಣಿನ ಸವಿರುಚಿ ನೀಡುವಂತೆ ಆಗಿದೆ. ಜಿಲ್ಲೆಯಲ್ಲಿ ಮಾವುಮೇಳ ಹಮ್ಮಿಕೊಂಡಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಪ್ರಚಾರ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳು ತ್ತಿದ್ದಾರೆ.

Advertisement

ನೋಂದಣಿಗೆ ಅವಕಾಶ: ಮಲ್ಲಿಕಾ, ಬಾದಾಮಿ, ರಸಪೂರಿ, ಸೇಂದೂರ, ತೋತಾಪುರಿ ಸೇರಿದಂತೆ ನಾನಾ ವೈವಿದ್ಯಮಯ ಹಣ್ಣುಗಳು ಒಂದೇ ಕಡೆ ಮೇಳೈಸಲಿದೆ. ಮೇಳದಲ್ಲಿ ಮಾವು ಮಾರಾಟ ಮಾಡಲು ಇಚ್ಚಿಸುವ ರೈತರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು 080-29787453 ಹಾಗೂ ಹೆಸರನ್ನು ನೋಂದಣಿ ಮಾಡಿಕೊಂಡು ಬೆಳೆಗಾರರು ಹಾಗೂ ಗ್ರಾಹಕರು ಮೇಳದ ಪ್ರಯೋಜನ ಪಡೆಯಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 4 ಹೆಕ್ಟೇರ್‌ ನಷ್ಟು ಮಾವು ಬೆಳೆದಿದ್ದು ಆಸಕ್ತ ಬೆಳೆಗಾಗರರು ಮೇಳದಲ್ಲಿ ಭಾಗವಹಿಸಿ ಮಾರಾಟ ಮಾಡಲು ತೋಟಗಾರಿಕೆ ಇಲಾಖೆಗೆ ಹೆಸರನ್ನು ನೋಂದಾಯಿಸುವಂತೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಾವು ಮೇಳ ಹಮ್ಮಿಕೊಳ್ಳಲಾಗುವುದು. ಬೆಳೆಗಾಗರರಿಗೆ ಇದರಿಂದ ಅನುಕೂಲವಾಗಲಿದೆ ಅದಕ್ಕಾಗಿ ಸಕಲ ಸಿದ್ಧತೆ ನಡೆಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೇವನಹಳ್ಳಿ ಸಮೀಪದ ಸಾದಹಳ್ಳಿ ಹತ್ತಿರವಿರುವ ಟೋಲ್‌ ಬಳಿ ಮಾವು ಮೇಳಕ್ಕೆ ಜಾಗ ಗುರುತಿಸುವ ಕೆಲಸ ಪ್ರಗತಿಯಲ್ಲಿದೆ.
-ಕರೀಗೌಡ, ಜಿಲ್ಲಾಧಿಕಾರಿ

ಮಾವು ಮೇಳ ಮಾಡಲು ಸೂಕ್ತ ಜಾಗವನ್ನು ಹುಟುಕಾಟ ನಡೆಸಲಾಗುತ್ತಿದೆ. ಆಸಕ್ತ ರೈತರು ಹೆಸರು ನೋಂದಾಯಿಸಬಹುದು. ಜಿಲ್ಲೆ ಮಾತ್ರವಲ್ಲದೇ ನೆರೆಯ ಜಿಲ್ಲೆಯ ಬೆಳೆಗಾರರೂ ಮೇಳದಲ್ಲಿ ಭಾಗವಹಿಸಬಹುದು.
-ರುದ್ರೇಶ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

* ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next