Advertisement

Mangaluru: ರೈಲ್ವೇ ಗೇಟ್‌ ಕಿರಿಕಿರಿ ತಪ್ಪಿಸಲು ಮಾರ್ಗ ಯಾವುದು?

02:46 PM Aug 26, 2024 | Team Udayavani |

ಮಂಗಳೂರು: ಪಾಂಡೇಶ್ವರ ಮತ್ತು ಹೊಯ್ಗೆ ಬಜಾರ್‌ನಲ್ಲಿ ರೈಲ್ವೇ ಲೆವೆಲ್‌ ಕ್ರಾಸಿಂಗ್‌ನಿಂದಾಗಿ ಉಂಟಾಗುತ್ತಿರುವ ಕಿರಿಕಿರಿಯನ್ನು  ಹೇಗಾದರೂ ಮಾಡಿ ತಪ್ಪಿಸಲೇಬೇಕಾಗಿದೆ. ಯಾಕೆಂದರೆ, ಇದು ಕೇವಲ ಎರಡು ಪ್ರದೇಶಗಳ ಸಮಸ್ಯೆಯಲ್ಲ. ಆ ರಸ್ತೆ ಮೂಲಕ ಸಾಗುವ ಸಾವಿರಾರು ವಾಹನಗಳು, ಪ್ರಯಾಣಿಕರು, ಸುತ್ತಮುತ್ತಲಿನ ಹಲವಾರು ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮನೆಗಳ ಜನರ ಬದುಕಿನ ಪ್ರಶ್ನೆ. ಗೂಡ್ಸ್‌ ಶೆಡ್‌ಗೆ ದಿನಕ್ಕೆ 16ರಷ್ಟು ಪ್ರಯಾಣಿಕ ರೈಲುಗಳು ಅತ್ತಿಂದಿತ್ತ ಓಡಾಡುವಾಗ ಕನಿಷ್ಠ ನಾಲ್ಕು ಗಂಟೆ ರಸ್ತೆ ಬಂದ್‌ ಆಗಿಯೇ ಇರುತ್ತದೆ. ಆಗ ಸಿಕ್ಕಿ ಹಾಕಿಕೊಳ್ಳುವ ಜನರು ಪಡುವ ಪಾಡು ದೇವರಿಗೇ ಪ್ರೀತಿ. ಹಾಗಿದ್ದರೆ, ಈ ಸಮಸ್ಯೆಗೆ ಪರಿಹಾರ ಹೇಗೆ? ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಕೆಲವೊಂದು ತಾಂತ್ರಿಕ ಅಡಚಣೆಗಳಿವೆ ಎಂದು ರೈಲ್ವೇ ಇಲಾಖೆ ಹೇಳುತ್ತದೆ. ಆದರೆ, ಅದಕ್ಕೂ ಜನರ ಬದುಕಿಗೂ ಏನು ಸಂಬಂಧ? ಈ ಸಮಸ್ಯೆಯನ್ನು ಸೃಷ್ಟಿಸಿದ್ದು ಯಾರು ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಈ ತಾಂತ್ರಿಕ ಅಡಚಣೆಗಳ ಆಚೆಗೂ ಜನರ ಓಡಾಟವನ್ನು ಸ್ವಲ್ಪವಾದರೂ ಸಹನೀಯಗೊಳಿಸುವುದಕ್ಕೆ ಅವಕಾಶಗಳಿವೆ. ಉದಯವಾಣಿ ಸುದಿನ ಕೆಲವು ಗಣ್ಯರು ಮತ್ತು ಜನಪ್ರತಿನಿಧಿಗಳನ್ನು ಮಾತನಾಡಿಸಿದಾಗ ಸಮಸ್ಯೆಯ ವಿಸ್ತಾರ ಮತ್ತು ಅದಕ್ಕಿರುವ ಕೆಲವು ಪರಿಹಾರಗಳು ಕಂಡುಬಂದವು. ಗಣ್ಯರು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಇಲ್ಲಿದೆ.

Advertisement

ಪೀಕ್‌ ಅವರ್‌ನಲ್ಲಾದರೂ ರೈಲು ಸಂಚಾರವನ್ನು ನಿಲ್ಲಿಸಿ
ರೈಲು ಈ ಭಾಗದಲ್ಲಿ ಬಹಳ ನಿಧಾನವಾಗಿ ಸಂಚರಿಸುತ್ತದೆ, ಹಾಗಾಗಿ ಯಾವುದೇ ಅಪಾಯವಿರುವುದಿಲ್ಲ, ಅವರು ರೈಲು ಬರುವುದಕ್ಕೆ ಐದು ನಿಮಿಷ ಮೊದಲೇ ಗೇಟ್‌ ಹಾಕುತ್ತಾರೆ, ರೈಲು ಹೋಗಿ ಮೂರ್‍ನಾಲ್ಕು ನಿಮಿಷದ ಅನಂತರವೇ ಗೇಟ್‌ ತೆರೆಯುತ್ತಾರೆ, ಇದು ಮುಖ್ಯವಾಗಿ ಸಮಸ್ಯೆಗೆ ಕಾರಣ.

ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಸಮಸ್ಯೆಗೆ ಖಾಯಂ ಇತ್ಯರ್ಥವಾದರೆ ಬಹಳ ಉತ್ತಮ, ಇಲ್ಲವಾದರೆ ಕನಿಷ್ಠ ಗೇಟ್‌ ಹಾಕುವ ಟೈಮಿಂಗ್‌ ಆದರೂ ಕಡಿಮೆ ಮಾಡಲೇಬೇಕು, ಇಲ್ಲವಾದರೆ ಈ ಭಾಗದ ಎಲ್ಲರಿಗೂ ತೊಂದರೆಯೇ. ಹೆರಿಗೆ  ನೋವು ಬರುತ್ತಿರುವ ಮಹಿಳೆ ಇದ್ದರೆ ಹೆರಿಗೆಯೂ ವಾಹನದಲ್ಲೇ ಆಗಬಹುದೇನೋ!

ನಮ್ಮ ಸಂಸ್ಥೆಗೆ ಬರುವ ವಿದ್ಯಾರ್ಥಿಗಳು, ಸಿಬಂದಿಗಳೆಲ್ಲರಿಗೂ ಕಿರಿಕಿರಿ ಇದ್ದದ್ದೇ. ನಮ್ಮ ಸಂಸ್ಥೆ ಕಡೆಯಿಂದಲೂ ಡಿಸಿಗೆ ಮನವಿ ಮಾಡಿದ್ದಾರೆ. ಮುಖ್ಯ ವಾಗಿ ಪೀಕ್‌ ಅವರ್‌ನಲ್ಲಿ ರೈಲು ಬರುತ್ತದೆ, ಆಗ 10 ನಿಮಿಷ ಬಂದ್‌ ಮಾಡಿದರೆ ವಾಹನಗಳು  ಸಾಲುಗಟ್ಟಿ ನಿಲ್ಲುತ್ತವೆ. ಪೀಕ್‌ ಅವರ್‌ ಬಿಟ್ಟು ಬೇರೆ ಅವಧಿಯಲ್ಲಿ ಇಲ್ಲಿಗೆ ರೈಲು ನಿಲ್ಲಿಸಲು ಕಳುಹಿಸಲಿ. -ಎ. ಶ್ರೀನಿವಾಸ ರಾವ್‌, ಸಹಕುಲಾಧಿಪತಿ, ಶ್ರೀನಿವಾಸ್‌ ವಿ.ವಿ.

ರಾತ್ರಿ/ ವಿರಳ ಸಂಚಾರದ ಟೈಮಲ್ಲಿ ರೈಲುಗಳು ಬರಲಿ
ರೈಲನ್ನು ಗೂಡ್ಸ್‌ಶೆಡ್‌ ಯಾರ್ಡ್‌ಗೆ ತಂದು ನಿಲ್ಲಿಸುವುದಾದರೆ, ಆ ರೈಲು ಮರುದಿನ ಹೋಗುವುದಾದರೆ ರಾತ್ರಿಯೇ ತರುವುದು ಉತ್ತಮ. ಹಗಲಿನಲ್ಲಿ ಜನಸಂಚಾರ ಹೆಚ್ಚಿರುವಾಗ ತರಬಾರದು, ವಿರಳ ಸಂಚಾರವಿರುವಾಗ ತರಲಿ. ಮಂಗಳೂರು ಸೆಂಟ್ರಲ್‌ನಿಂದ ಬರುವ ರೈಲು ಹಾಗೂ ಯಾರ್ಡ್‌ನಿಂದ ತೆರಳುವ ರೈಲುಗಳು ಹೆಚ್ಚಿನ ವೇಗದಲ್ಲಿ ಸಂಚರಿಸಬಹುದು, ಆಗ ಗೇಟ್‌ ಬಳಿ ದಟ್ಟಣೆ ಹೆಚ್ಚುವುದಿಲ್ಲ. ಈಗ ರೈಲು ಬರುವುದಕ್ಕೆ ತೀರಾ ನಿಧಾನ ಮಾಡುತ್ತಿರುವುದು ಸಮಸ್ಯೆ ಜಟಿಲಕ್ಕೆ ಕಾರಣ. ಸಾಮಾನ್ಯವಾಗಿ ಪ್ರಯಾಣಿಕರ ರೈಲಿನ 21 ಬೋಗಿಗಳು ಗೇಟ್‌ ದಾಟಿ ಹೋಗಲು ಬಹಳ ಸಮಯ ತಗಲುತ್ತದೆ. ಇದರ ಒಂದು ತುದಿ ಹೊಗೆ ಬಜಾರ್‌, ಇನ್ನೊಂದು ಪಾಂಡೇಶ್ವರದಲ್ಲಿರುತ್ತದೆ, ಎರಡೂ ಕಡೆ ಬ್ಲಾಕ್‌ ಆಗುತ್ತದೆ.

Advertisement

ರೈಲು ದಾಟಿ ಹೋದ ಕೂಡಲೇ ಗೇಟನ್ನೂ ತೆಗೆಯದಿರುವುದು ಮತ್ತೂಂದು ಸಮಸ್ಯೆ. ಇನ್ನು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜನರೂ ಸ್ವಯಂ ಶಿಸ್ತು ಅನುಸರಿಸಬೇಕು.
– ಹನುಮಂತ ಕಾಮತ್‌, ಡೈಲಿ ರೈಲ್ವೇ ಯೂಸರ್ಸ್‌ ಕಮಿಟಿ ಸದಸ್ಯರು,  ಪಾಲ್ಘಾಟ್‌ ವಿಭಾಗ

ಗೂಡ್ಸ್‌ಶೆಡ್‌ ಪ್ರದೇಶವನ್ನುತೆರವುಗೊಳಿಸುವುದೇ ಉತ್ತಮ
ಈ ಮೊದಲು ಗೂಡ್ಸ್‌ ರೈಲುಗಳು ಬಂದರ್‌ನ ಗೂಡ್ಸ್‌ಶೆಡ್‌ ಪ್ರದೇಶಕ್ಕೆ ಸಂಚರಿಸುತ್ತಿದ್ದಾಗ ಪಾಂಡೇಶ್ವರ ಮತ್ತು ಹೊಗೆ ಬಜಾರ್‌ ಲೆವೆಲ್‌ ಕ್ರಾಸಿಂಗ್‌ನಲ್ಲಿ ಗೇಟ್‌ ಬಂದ್‌ ಮಾಡಿ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಹಲವು ಮನವಿಗಳು, ಹೋರಾಟಗಳ ಬಳಿಕ ಗೂಡ್ಸ್‌ ರೈಲುಗಳನ್ನು ಉಳ್ಳಾಲಕ್ಕೆ ಶಿಫ್ಟ್‌ ಮಾಡಲಾಯಿತು.

ಆದರೆ ಈಗ ಪ್ಯಾಸೆಂಜರ್‌ ರೈಲುಗಳನ್ನು ಗೂಡ್ಸ್‌ ಶೆಡ್‌ಗೆ ಕಳುಹಿಸುತ್ತಿರುವುದರಿಂದ ಮತ್ತೆ ಸಮಸ್ಯೆ ಉಂಟಾಗುತ್ತಿದೆ. ಈಬಗ್ಗೆ ಈಗಾಗಲೇ ರೈಲ್ವೇ ಸಚಿವರು, ಸಂಸದರು, ರೈಲ್ವೇ ಇಲಾಖೆಯ ಉನ್ನತ ಅಧಿಕಾರಿಗಳು ಇದ್ದಂತಹ ಸಭೆಯಲ್ಲಿ ವಿಷಯ ಪ್ರಸ್ತಾವಿಸಿ, ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದೆ.

ಅಂಡರ್‌ಪಾಸ್‌- ಓವರ್‌ಪಾಸ್‌ ನಿರ್ಮಾಣವೂ ಈ ಸಮಸ್ಯೆಗೆ ತತ್‌ಕ್ಷಣದ ಪರಿಹಾರ ಕೊಡುವುದಿಲ್ಲ. ಆದ್ದರಿಂದ ಗೂಡ್ಸ್‌ ಶೆಡ್‌ ಅನ್ನೇ ಇಲ್ಲಿಂದ ಸ್ಥಳಾಂತರಿಸಿ, ಜನ ವಸತಿ ಪ್ರದೇಶದಿಂದ ದೂರದಲ್ಲಿ ನಿರ್ಮಾಣ ಮಾಡುವುದು ಉತ್ತಮ. ಆದ್ದರಿಂದ ಈ ನಿಟ್ಟಿನಲ್ಲಿ ಇರುವ ಅವಕಾಶಗಳನ್ನು ಪರಿಶೀಲಿಸಲಾಗುವುದು.
– ಸುಧೀರ್‌ ಶೆಟ್ಟಿ ಕಣ್ಣೂರು,  ಮೇಯರ್‌

ಸರಕಾರ, ಜಿಲ್ಲಾಡಳಿತ, ಪಾಲಿಕೆಮೂಲಕ ಪರ್ಯಾಯ ಹುಡುಕಾಟ
ರೈಲ್ವೇ ಸಚಿವ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ. ಪರ್ಯಾಯ ಜಮೀನು ಒದಗಿಸಿದರೆ ಗೂಡ್ಸ್‌ಶೆಡ್‌ ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ರೈಲ್ವೇ ಅಧಿಕಾರಿಗಳು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಆದರೆ ಉಳ್ಳಾಲ, ಮಂಗಳೂರು, ಕಂಕನಾಡಿ ಭಾಗದಲ್ಲಿ ಭಾಗದಲ್ಲಿ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟು ಅಷ್ಟು ಜಮೀನು ಇಲ್ಲ. ಫರಂಗಿಪೇಟೆಯ ಬಳಿ ಸ್ವಲ್ಪ ಜಮೀನು ಇದೆಯಾದರೂ ಅಲ್ಲಿಂದ ರೈಲುಗಳನ್ನು ವಿವಿಧ ರೂಟ್‌ಗಳಿಗೆ ಬದಲಾವಣೆ ಮಾಡಿ ಓಡಿಸುವುದು ತುಂಬಾ ಕಷ್ಟ. ಪಾಂಡೇಶ್ವರದಲ್ಲಿ ಫ್ಲೈ ಓವರ್ – ಅಂಡರ್‌ಪಾಸ್‌ ನಿರ್ಮಾಣವೂ ಸುಲಭವಿಲ್ಲ. ಏನು ಮಾಡಬಹುದು ಎಂದು ಸರಕಾರ, ಜಿಲ್ಲಾಡಳಿತ, ಪಾಲಿಕೆ ಸೇರಿ ಯೋಜನೆ ರೂಪಿಸಿಕೊಡಿ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಸಾರ್ವಜನಿಕರ ಬೇಡಿಕೆಯಂತೆ ಗೂಡ್ಸ್‌ ರೈಲನ್ನು ಆಗಿನ ಸಂಸದ ನಳಿನ್‌ ಕುಮಾರ್‌ ಅವರ ಪ್ರಯತ್ನದ ಮೇರೆಗೆ ಉಳ್ಳಾಲಕ್ಕೆ ಸ್ಥಳಾಂತರಿಸಲಾಯಿತು. ಈಗ ಪ್ಯಾಸೆಂಜರ್‌ ರೈಲಿನಿಂದ  ಸಮಸ್ಯೆಯಾಗುತ್ತಿದೆ. ಸಂಸದ ಕ್ಯಾ| ಬ್ರಿಜೇಶ್‌ ಚೌಟರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ, ಸೂಕ್ತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.
– ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next