Advertisement

Mangaluru ಸಮವಸ್ತ್ರದಲ್ಲೇ ಹಾರೆ ಹಿಡಿದು ಗುಂಡಿ ಮುಚ್ಚಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌

12:09 AM Jul 03, 2024 | Team Udayavani |

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ಕೆಪಿಟಿ ಜಂಕ್ಷನ್‌ ಬಳಿ ಉಂಟಾದ ಹೊಂಡಗಳನ್ನು ಸಂಚಾರಿ ಪೊಲೀಸರೇ ಕಾಂಕ್ರೀಟ್‌ ಹಾಕಿ ಮುಚ್ಚುವ ಕೆಲಸ ಮಾಡಿದ್ದಾರೆ!

Advertisement

ಮಂಗಳವಾರ ಬೆಳಗ್ಗೆ ಸಂಚಾರ ಪೂರ್ವ (ಕದ್ರಿ) ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಈಶ್ವರ್‌ ಸ್ವಾಮಿ, ಸಿಬಂದಿ ಸಿದ್ದರಾಜು ಮತ್ತು ಮಂಜು ಅವರು ಕಾಂಕ್ರೀಟ್‌ನ್ನು ತರಿಸಿ ತಾವೇ ಹಾರೆ ಹಿಡಿದು ಹೊಂಡಕ್ಕೆ ಹಾಕಿ ಸಮತಟ್ಟುಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರ್‌ ಸ್ವಾಮಿಯವರು, ಇತ್ತೀಚೆಗೆ ಇಲ್ಲಿನ ರಸ್ತೆ ಹೊಂಡಕ್ಕೆ ಬಿದ್ದು ಸ್ಕೂಟರ್‌ ಸವಾರರಾದ ಹಿರಿಯ ನಾಗರಿಕರೋರ್ವರು ಗಾಯಗೊಂಡಿದ್ದರು. ಅದನ್ನು ನೋಡಿದ ಮರುದಿನವೇ ಕಾಂಕ್ರೀಟ್‌ ತರಿಸಿ ಹಾಕಿದ್ದೆ. ಆದರೆ ಮಳೆ ಹೆಚ್ಚಿದ್ದರಿಂದ ಅದು ಸ್ವಲ್ಪ ಮಾತ್ರವೇ ಉಳಿದಿತ್ತು. ಮಂಗಳವಾರ ಮತ್ತೂಮ್ಮೆ ಕಾಂಕ್ರೀಟ್‌ ತರಿಸಿ ಹಾಕಿಸಿದ್ದೇವೆ. ಮಳೆ ಕಡಿಮೆಯಾಗಿದ್ದರಿಂದ ಅನುಕೂಲವಾಗಿದೆ ಎಂದಿದ್ದಾರೆ.

ಸಂಚಾರಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಕೂಡ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈಶ್ವರ್‌ ಸ್ವಾಮಿ ಮತ್ತು ಸಿಬಂದಿ ಕೆಪಿಟಿ ಜಂಕ್ಷನ್‌ ಮತ್ತು ನಂತೂರು ಜಂಕ್ಷನ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಕಳೆದ ಬಾರಿ ನಂತೂರಿನಲ್ಲಿ ಇದೇ ರೀತಿ ಹೊಂಡಗಳು ಆದಾಗ ಅಲ್ಲಿಗೂ ಕಾಂಕ್ರೀಟ್‌ ತರಿಸಿ ಹಾಕಿದ್ದರು.

Advertisement

ನಂತೂರಿನಲ್ಲಿಯೂ ಹೊಂಡ
ರಾಷ್ಟ್ರೀಯ ಹೆದ್ದಾರಿ- 66ರ ನಂತೂರು ಜಂಕ್ಷನ್‌ ಬಳಿಯಲ್ಲಿಯೂ ಈ ಬಾರಿ ಕೂಡ ಹೊಂಡಗಳು ಉಂಟಾಗಿವೆ. ಇದನ್ನು ಆರಂಭದಲ್ಲಿಯೇ ಸಮರ್ಪಕವಾಗಿ ಮುಚ್ಚಬೇಕು ಎಂಬುದು ವಾಹನ ಚಾಲಕರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next