Advertisement

Mangaluru ಡ್ರಗ್ಸ್‌: ಪ್ರತೀ ಪ್ರಕರಣದಲ್ಲಿ ಕನಿಷ್ಠ 10 ಮಂದಿ ಬಂಧಿಸಿ

12:05 AM Nov 28, 2023 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಏರುಗತಿಯಲ್ಲಿರುವ ಮಾದಕ ವಸ್ತು ಪ್ರಕರಣಗಳನ್ನು ಹತೋಟಿಗೆ ತರಬೇಕಾದರೆ ಒಂದು ಪ್ರಕರಣಕ್ಕೆ ಸಂಬಂಧಿಸಿದ ಹತ್ತು ಮಂದಿಯನ್ನಾದರೂ ಬಂಧಿಸಲೇಬೇಕು ಎಂದು ರಾಜ್ಯ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅವರು ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಪರಿಶೀಲನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣಗಳ ಹಿಂದೆ ಒಳಸಂಚು ನಡೆದಿರುತ್ತದೆ. ಆರೋಪಿಗಳಲ್ಲಿ ಬಹುತೇಕರ ಕುಟುಂಬಸ್ಥರಿಗೆ ಇದು ಗೊತ್ತಿರುತ್ತದೆ, ಅವರಲ್ಲಿ ಕೆಲವರು ಪ್ರಕರಣದಿಂದ ತಲೆಮರೆಸಿಕೊಳ್ಳುತ್ತಾರೆ. ಒಂದು ಪ್ರಕರಣ ವರದಿಯಾದರೆ ಕನಿಷ್ಠ 10 ಜನರನ್ನು ಬಂಧಿಸಿದರೆ, ನಮ್ಮ ಮನೆಯವರೂ ಬಂಧನಕ್ಕೊಳಗಾಗುತ್ತಾರೆ ಎಂದು ಆರೋಪಿಗಳಲ್ಲಿ ಭಯ ಮೂಡುತ್ತದೆ, ನಾನು ಪೊಲೀಸ್‌ ಅಧಿಕಾರಿಯಾಗಿ ಇಂತಹ ಕ್ರಮ ಕೈಗೊಂಡಿದ್ದೆ ಎಂದವರು ಹೇಳಿದರು.

ಜಾಮೀನು ನೀಡಲು
ಬರುವವರನ್ನೂ ವಿಚಾರಿಸಿ
ದ.ಕ. ಜಿಲ್ಲೆಯ ಡ್ರಗ್ಸ್‌ ಪ್ರಕರಣಗಳಲ್ಲಿ ಶೇ. 95ರಷ್ಟು ಆರೋಪಿಗಳು ಮುಸ್ಲಿಂ ಸಮುದಾಯದವರೇ ಆಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಸಭೆಯಲ್ಲಿ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತೀ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಎಲ್ಲ ಒಳಸಂಚುದಾರರನ್ನು ಬಂಧಿಸಿದರೆ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯ. ಅಲ್ಲದೆ ಆರೋಪಿಗಳಿಗೆ ಜಾಮೀನಿಗೆ ಶೂರಿಟಿ ನೀಡುವವರನ್ನೂ ಪೊಲೀಸ್‌ ಪರಿಶೀಲನೆಗೆ ಒಳಪಡಿಸಬೇಕು ಎಂದರು.

ಸ್ಥಳೀಯ ಶಾಂತಿಸಭೆ
ಕರಾವಳಿಯಲ್ಲಿ ಧಾರ್ಮಿಕ ಭಾವನಾತ್ಮಕತೆ ಯಿಂದ ಸಣ್ಣ ಘಟನೆಗಳೂ ಕೋಮು ಗಲಭೆಗೆ ಕಾರಣವಾಗುತ್ತಿವೆ. ಇಂಥ ಪ್ರಕರಣಗಳು ನಡೆಯದಂತೆ ತಡೆಯಲು ಪೊಲೀಸ್‌ ಇಲಾಖೆಗೆ ಸೂಚಿಸಿದ್ದೇನೆ. ಅದಕ್ಕಾಗಿ ಕೋಮು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಪೊಲೀಸ್‌ ಠಾಣೆ ಮಟ್ಟದಲ್ಲಿ ಮಾತ್ರವಲ್ಲ, ಮೊಹಲ್ಲಾಗಳಲ್ಲಿ ಕೂಡ ಶಾಂತಿ ಸಭೆಗಳನ್ನು ನಡೆಸಬೇಕು. ಅಂತಹ ಪೊಲೀಸ್‌ ಠಾಣೆಗಳಲ್ಲಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದರು.

ಮಂಗಳೂರಲ್ಲಿ ವಕ್ಫ್ ಕಚೇರಿ
ವಕ್ಫ್ ಗೆ  ಸಂಬಂಧಿಸಿ ರಾಜ್ಯದಲ್ಲಿ 5 ಪ್ರದೇಶಿಕ ಕಚೇರಿಗಳನ್ನು ಸ್ಥಾಪಿಸಲು ಈ ಹಿಂದೆ ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ ನಾಲ್ಕು ಕಚೇರಿಗಳು ಆಗಿವೆ. ಈ ವರ್ಷ ಕರಾವಳಿಯ ದ.ಕ., ಉಡುಪಿ, ಉ.ಕ. ಜಿಲ್ಲೆಗಳಿಗೆ ಸಂಬಂಧಿಸಿ ಮಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಸರಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಇದು ಕಾರ್ಯರೂಪಕ್ಕೆ ಬಂದರೆ ಕರಾವಳಿಯ ಜನರು ಮೈಸೂರು, ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಬಹುದು ಎಂದರು.

Advertisement

ರಾಜ್ಯದಲ್ಲಿ 1 ಲಕ್ಷ ಎಕರೆಯಷ್ಟು ವಕ್ಫ್ ಆಸ್ತಿ ಒತ್ತುವರಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಸ್ತಿ ಉಳಿಸುವುದಕ್ಕಾಗಿ ಕಾರ್ಯಪಡೆ ರಚಿಸಲು ಶಿಫಾರಸು ಮಾಡಲಾಗಿದೆ. ಈಗಾಗಲೇ ಬಿಬಿಎಂಪಿ
ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್‌ ಮಾಡಿ ಅದಕ್ಕೆ ಹಿರಿಯ ಅಧಿಕಾರಿಯನ್ನು ನೇಮಕ ಮಾಡ ಲಾಗಿದೆ ಎಂದು ಅಜೀಮ್‌ ತಿಳಿಸಿದರು.

ಆಶ್ರಮಗಳಿಗೆ ಅನುದಾನದ ಕೊರತೆ
ಮಂಗಳೂರು: ಅಲ್ಪಸಂಖ್ಯಾಕ ಸಂಸ್ಥೆಗಳಿಂದ ನಡೆಸಲ್ಪಡುವ ಆಶ್ರಮಗಳಿಗೆ ಸರಕಾರದಿಂದ ನೀಡಲಾಗುವ ಅನುದಾನ ಕೊರೋನಾ ಬಳಿಕ ಸಮರ್ಪಕವಾಗಿಲ್ಲ. ಬೆಲೆ ಏರಿಕೆಯಿಂದ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೂ ಅನುದಾನದಲ್ಲಿ ಕಡಿತದಿಂದಾಗಿ ಆಶ್ರಮಗಳಲ್ಲಿರುವ ವಯೋವೃದ್ಧರು, ಅಂಗವಿಕಲರ ಯೋಗಕ್ಷೇಮಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ಅನುದಾನದ ಕ್ಲಪ್ತ ಸಮಯದಲ್ಲಿ ಒದಗಿಸುವ ಜತೆಗೆ ಅನುದಾನ ಮೊತ್ತ ಹೆಚ್ಚಳಕ್ಕೆ ಸರಕಾರಕ್ಕೆ ಶಿಫಾರಸು ಮಾಡುವಂತೆ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರಿಗೆ ದ.ಕ. ಜಿಲ್ಲೆಯ ವಿವಿಧ ಆಶ್ರಮಗಳ ಮುಖ್ಯಸ್ಥರು ಮನವಿ ಸಲ್ಲಿಸಿದರು.

ದ.ಕ. ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ನಡೆಸಿದ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು.

ಬರುವ ಹಣ ಸಾಲುತ್ತಿಲ್ಲ: “25 ವರ್ಷಗಳಿಂದ ನಡೆಸಲ್ಪಡುವ ನಮ್ಮ ಆಶ್ರಮದಲ್ಲಿ 281 ಮಂದಿ ಮಾನಸಿಕ ಸಮಸ್ಯೆಯವರು, ಅಂಗವಿಕಲರಿದ್ದಾರೆ. ಅವರ ಚಿಕಿತ್ಸೆ, ಆಹಾರ, ಅವರನ್ನು ನೋಡಿಕೊಳ್ಳಲು ಸಿಬಂದಿ ವೇತನ ಸೇರಿದಂತೆ ಸರಕಾರದಿಂದ ಪ್ರಸ್ತುತ ಸಿಗುತ್ತಿರುವ ಅನುದಾನದ ಖರ್ಚುವೆಚ್ಚ ಸರಿತೂಗಿಸಲು ಕಷ್ಟಸಾಧ್ಯವಾಗುತ್ತಿಲ್ಲ. ಈ ವರ್ಷದ ಬಜೆಟ್‌ ಇನ್ನೂ ಬಂದಿಲ್ಲ ಎಂದು ಬೆಳ್ತಂಗಡಿಯ ಸಿಯೋನ್‌ ಆಶ್ರಮದ ಯು.ಸಿ. ಪೌಲೋಸ್‌ ವಿವರಿಸಿದರು.

ಅನುದಾನ ಬರುತ್ತಿಲ್ಲ: ಜೆಪ್ಪು ಪ್ರಶಾಂತಿ ನಿಲಯದ ಭಗಿನಿ ಡೋರತಿ ಸಲ್ಡಾನ ಮಾತನಾಡಿ, ನಮ್ಮಲ್ಲಿ 300 ಮಂದಿ ನಿರ್ಗತಿಕರಿಗೆ ಆಶ್ರಯ ನೀಡಲಾಗಿದ್ದು, ಕೊರೋನಾ ಬಳಿಕ ಸರಕಾರದಿಂದ ಸಮರ್ಪಕವಾಗಿ ಅನುದಾನ ಬರುತ್ತಿಲ್ಲ. ಕೇಂದ್ರದಿಂದ ಅಕ್ಕಿ ಗೋಧಿ ಬರುತ್ತಿದೆ. 22-23ನೇ ಸಾಲಿನ ಅನುದಾನದಲ್ಲಿ ಶೇ. 50ರಷ್ಟು ಮಾತ್ರವೇ ಬಂದಿದೆ ಎಂದರು.

ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್‌ ಫ‌ಲಾಹ್‌ ಸಂಸ್ಥೆಯ ಅಧ್ಯಕ್ಷ ಶಾಹುಲ್‌ ಹಮೀದ್‌ ಮಾತನಾಡಿ, ಅಲ್ಪಸಂಖ್ಯಾಕ ಇಲಾಖೆಯ ಅನುದಾನ 3 ಸಾವಿರ ಕೋಟಿ ರೂ.ಗಳಿಂದ ಕಳೆದ ಅವಧಿಯಲ್ಲಿ 700 ಕೋಟಿ ರೂ.ಗಳಿಗೆ ಇಳಿಕೆಯಾಗಿತ್ತು. ಅಲ್ಪಸಂಖ್ಯಾಕ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಅರಿವು ಯೋಜನೆ ಸ್ಥಗಿತಗೊಂಡಿದೆ. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರಕಾರ ನಿಲ್ಲಿಸಿದೆ. ಮೆಟ್ರಿಕ್‌ ಅನಂತರದ ಅರ್ಜಿ ಸಲ್ಲಿಸಲು ಈ ವರ್ಷ ಅವಕಾಶವೇ ಇನ್ನೂ ಆರಂಭವಾಗಿಲ್ಲ ಎಂದರು.

ಅಧ್ಯಕ್ಷ ಅಜೀಮ್‌ ಪ್ರತಿಕ್ರಿಯಿಸಿ, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾಕರಿಗೆ 10 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದ್ದು, ಅದರಂತೆ ಬಜೆಟ್‌ನಲ್ಲಿ ಘೋಷಣೆಯಾದರೆ ಸಮಸ್ಯೆಗಳು ಬಗೆಹರಿಯಲಿವೆ. ಆಯೋಗದ ಪ್ರಾದೇಶಿಕ ವಿಭಾಗ ಕಚೇರಿಯನ್ನು ತೆರೆಯಲು ಕೂಡ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಯೂಸುಫ್ ವಿಟ್ಲ, ಮುನೀರ್‌ ಆತೂರು, ಫೆರ್ನಾಂಡಿಸ್‌, ಎ.ಕೆ. ಹ್ಯಾರಿಸ್‌ ವಿವಿಧ ಸಮಸ್ಯೆಗಳನ್ನು ವಿವರಿಸಿದರು.
ಆಯೋಗದ ವಿಶೇಷ ಕರ್ತವ್ಯಾಧಿಕಾರಿ ಮುಜೀಬುಲ್ಲಾ ಜಫಾರಿ, ಜಿ.ಪಂ. ಉಪ ಕಾರ್ಯದರ್ಶಿ ರಘು, ಅಲ್ಪಸಂಖ್ಯಾಕರ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೊಟ್ಟಾರಿ, ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್‌ ಹಾಗೂ ಆಯೋಗದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next