Advertisement

ಮಂಗಳೂರು ಗಲಭೆ: ವೀಡಿಯೊ ಆಧರಿಸಿ ತನಿಖೆ ತೀವ್ರ

01:06 AM Dec 26, 2019 | Sriram |

ಮಂಗಳೂರು: ಮಂಗಳೂರಿನಲ್ಲಿ ಡಿ. 19ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಮತ್ತು ಸಾರ್ವಜನಿಕರಿಂದ ಲಭ್ಯವಾಗಿರುವ ವೀಡಿಯೋ ತುಣುಕುಗಳನ್ನು ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Advertisement

ತಪ್ಪಿತಸ್ಥರ ಪತ್ತೆಗೆ ಅನುಕೂಲವಾಗುವ ಉದ್ದೇಶ ದಿಂದ ವೀಡಿಯೋ ಮತ್ತು ಫೋಟೊ ಆಧಾರಿತ ಮಾಹಿತಿ ಒದಗಿಸು ವಂತೆ ನಗರ ಪೊಲೀಸ್‌ ಆಯುಕ್ತರು ಸಾರ್ವಜನಿಕರನ್ನು ಕೋರಿದ್ದರು. ಮನವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವಿವಿಧ ಆಯಾಮಗಳಲ್ಲಿ ತನಿಖೆ
ಪ್ರಕರಣವು ದೇಶದ ಗಮನ ಸೆಳೆದಿದ್ದು, ಪರ-ವಿರೋಧ ಚರ್ಚೆ, ಆರೋಪ-ಪ್ರತ್ಯಾರೋಪಗಳು ನಡೆಯು ತ್ತಿವೆ. ತನಿಖೆಯನ್ನು ಸಿಐಡಿಗೆ ವಹಿಸಲಾ ಗಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಮಂಗಳೂರು ಪೊಲೀಸರು ಗಲಭೆಕೋರರ ಪತ್ತೆ ಮತ್ತು ಬಂಧನಕ್ಕೆ ವಿಶೇಷ ತನಿಖಾ ತಂಡಗಳನ್ನು ರಚಿಸಿ ದ್ದಾರೆ. ಪ್ರತಿಯೊಂದು ತಂಡಕ್ಕೂ ಒಂದೊಂದು ಜವಾಬ್ದಾರಿ ವಹಿಸಿ ಕೊಡಲಾಗಿದೆ. ನಗರ ಅಪರಾಧ ಪತ್ತೆ ದಳದ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌, ಸಬ್‌ ಇನ್‌ಸ್ಪೆಕ್ಟರ್‌ ಕಬ್ಟಾಳ್‌ರಾಜ್‌, ಎಸಿಪಿಗಳಾದ ವೆಲೆಂಟೈನ್‌ ಡಿ’ಸೋಜಾ ನೇತೃತ್ವದ ತಂಡ, ಸುನೀಲ್‌ ನಾಯ್ಕ ನೇತೃತ್ವದ ತಂಡ, ಶ್ಯಾಮ್‌ಸುಂದರ್‌ ನೇತೃತ್ವದ ತಂಡ, ವಿನಯ್‌ ಗಾಂವ್ಕರ್‌ ನೇತೃತ್ವದ ತಂಡ, ಸೈಬರ್‌ ಅಪರಾಧಕ್ಕೆ ಸಂಬಂಧಿಸಿ ಗಿರೀಶ್‌ ನೇತೃತ್ವದ 2 ತಂಡ ಸೇರಿದಂತೆ ಒಟ್ಟು 10 ತಂಡಗಳನ್ನು ರಚಿಸಲಾಗಿದ್ದು, ವಿವಿಧ ದಿಕ್ಕಿನಲ್ಲಿ ತನಿಖೆ ಆರಂಭಿಸಿವೆ.

148 ಮಂದಿಯ ವಿರುದ್ಧ ಪ್ರಕರಣ
ಗೋಲಿಬಾರ್‌ನಲ್ಲಿ ಮೃತಪಟ್ಟವರು ಸೇರಿದಂತೆ ಒಟ್ಟು 148 ಮಂದಿ ವಿರುದ್ಧ ಬಂದರು ಮತ್ತು ಪಾಂಡೇಶ್ವರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಪಾಂಡೇಶ್ವರದಲ್ಲಿ ಒಂದು ಬಸ್‌ ಮತ್ತು ಕಾರಿಗೆ ಹಾನಿ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ ಅವರು ಬಂದರು ಠಾಣೆಗೆ 29 ಮಂದಿಯ ವಿರುದ್ಧ ದೂರು ನೀಡಿದ್ದಾರೆ.

ಪೊಲೀಸರೇ ದೂರುದಾರರು
ಉರ್ವ ಠಾಣೆಯ ಇನ್‌ಸ್ಪೆಕ್ಟರ್‌ ಶರೀಫ್‌ ಅವರ ಜತೆ ಕರ್ತವ್ಯ ನಿರ್ವಹಿಸುತ್ತಿದ್ದಾಗ 300-400 ಮಂದಿ ಅಪರಿಚಿತರ ಗುಂಪು ಕಲ್ಲು ಮತ್ತು ಸೋಡಾ ಬಾಟಲಿಗಳಿಂದ ಹಲ್ಲೆ ಮಾಡಿದ್ದು, ಗಾಯವಾಗಿದೆ. ಈ ಗುಂಪು ಟಯರ್‌ಗೆ ಬೆಂಕಿ ಹಚ್ಚಿ ಬಂದರು ಠಾಣೆಗೆ ಎಸೆಯಲು ಯತ್ನಿಸಿದೆ ಎಂದು ಕಾನ್‌ಸ್ಟೆಬಲ್‌ ಬೀರೇಂದ್ರ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿರುವ ಬಗ್ಗೆ ಮಹಿಳಾ ಕಾನ್‌ಸ್ಟೆಬಲ್‌ ಶೀಲಾ ದೂರು ನೀಡಿದ್ದಾರೆ.

Advertisement

ಸಬ್‌ ಇನ್‌ಸ್ಪೆಕ್ಟರ್‌ ಪ್ರದೀಪ್‌ ಅವರೊಂದಿಗೆ ಕರ್ತವ್ಯ ನಿರತನಾಗಿದ್ದಾಗ 200-300 ಮಂದಿ ಕಲ್ಲು, ಗಾಜು ಎಸೆದು ಇಲಾಖಾ ವಾಹನಕ್ಕೆ ಹಾನಿ ಉಂಟು ಮಾಡಿದ್ದಾರೆ ಎಂದು ಸತೀಶ್‌ ಕಟ್ಟಣ್ಣನವರ್‌ ಬಂದರು ಠಾಣೆಗೆ ದೂರು ನೀಡಿದ್ದಾರೆ. ಕದ್ರಿ ಇನ್‌ಸ್ಪೆಕ್ಟರ್‌ ಶಾಂತಾರಾಮ ಅವರು 40-45 ಮಂದಿ ವಿರುದ್ಧ ನೀಡಿದ ದೂರಿನಂತೆ ಎಫ್ಐಆರ್‌ ದಾಖಲಾಗಿದೆ. ಹೈಲ್ಯಾಂಡ್‌ ಆಸ್ಪತ್ರೆ ಆವರಣದಲ್ಲಿ 200-300 ಮಂದಿ ಅಕ್ರಮ ಕೂಟ ರಚಿಸಿ ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ತುರ್ತು ನಿಗಾ ವಿಭಾಗ ಸೇರಿದಂತೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಪಾಂಡೇಶ್ವರ ಪಿಎಸ್‌ಐ ಮಂಜುಳಾ ಅವರು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎರಡು ಸಂಘಟನೆಗಳಿಗೆ ಸೇರಿದ ಸುಮಾರು 45 ಜನರ ಹೆಸರನ್ನು ಉಲ್ಲೇಖೀಸಿ ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದವರ ವಿರುದ್ಧವೂ ಬಂದರು ಠಾಣೆಯಲ್ಲಿ 3 ಮತ್ತು ಉರ್ವ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.

ಬಂದೂಕು ಅಂಗಡಿ ಸದ್ಯ ಬಂದ್‌
ಗಲಭೆ ಬಗ್ಗೆ ಬಂದರು ಜುಮಾ ಮಸೀದಿ ರಸ್ತೆಯಲ್ಲಿರುವ ಬಂದೂಕು ಅಂಗಡಿಯ ಮಾಲಕರು ಕೂಡ ದೂರು ನೀಡಿದ್ದು, ದೂರಿನಲ್ಲಿ “ಗಲಭೆಕೋರರು ಅಂಗಡಿಯ ಹೊರಗಿನ ಬಾಗಿಲನ್ನು ತೆರೆದು ಒಳಗಿನ ಬಾಗಿಲು ತೆಗೆಯಲು ಯತ್ನಿಸಿದ್ದಾರೆ’ ಎಂದು ತಿಳಿಸಿದ್ದಾರೆ. ಗಲಭೆಯಿಂದ ಈ ಬಂದೂಕು ಅಂಗಡಿಗೆ ಹಾನಿಯಾಗಿದ್ದು, ಅದನ್ನು ಈಗ ಮುಚ್ಚಲಾಗಿದೆ. ಕಲ್ಲು ತೂರಾಟದಿಂದ ಎರಡು ಜುವೆಲರಿ ಅಂಗಡಿಗಳಿಗೂ ಹಾನಿಯಾಗಿರುವ ಬಗ್ಗೆ ಜುವೆಲರಿ ಅಂಗಡಿ ಮಾಲಕರು ಬಂದರು ಠಾಣೆಗೆ ದೂರು ನೀಡಿದ್ದಾರೆ.

ಮುಂದುವರಿದ ಪೊಲೀಸ್‌ ಭದ್ರತೆ
ಬಂದರು ಮತ್ತು ಸ್ಟೇಟ್‌ಬ್ಯಾಂಕ್‌ ಪರಿಸರದಲ್ಲಿ ಮೀಸಲು ಪೊಲೀಸ್‌ ಪಡೆಯ 8 ತುಕಡಿಗಳು ಭದ್ರತೆಯಲ್ಲಿ ತೊಡಗಿವೆ. ಬಂದರು ಪ್ರದೇಶದಲ್ಲಿ ಬುಧವಾರ ವ್ಯಾಪಾರ ವಹಿವಾಟು, ಜನ ಸಂಚಾರ ಸಹಜ ಸ್ಥಿತಿಯಲ್ಲಿತ್ತು.

ಕದ್ರಿ ಪ್ರಭಾರ ಇನ್‌ಸ್ಪೆಕ್ಟರ್‌ ಆಗಿ ಗಿರೀಶ್‌
ಕದ್ರಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಾಂತಾರಾಮ್‌ ಅವರ ಸ್ಥಾನಕ್ಕೆ ನಗರ ಸೈಬರ್‌ ಠಾಣಾ ಇನ್‌ಸ್ಪೆಕ್ಟರ್‌ ಗಿರೀಶ್‌ ಅವರನ್ನು ಪ್ರಭಾರವಾಗಿ ನೇಮಕಗೊಳಿಸಿ ಕಮಿಷನರ್‌ ಡಾ| ಹರ್ಷ ಆದೇಶಿಸಿದ್ದಾರೆ. ಪ್ರತಿಭಟನೆ, ಹಿಂಸಾಚಾರ ವೇಳೆ ಪೊಲೀಸರ ಕಾರ್ಯಾಚರಣೆ ಸಂದರ್ಭ ಕೆಲವು ಪ್ರಚೋದನಕಾರಿ ಮಾತುಗಳನ್ನು ಆಡಿರುವ ಆರೋಪವನ್ನು ಎದುರಿಸುತ್ತಿರುವ ಕದ್ರಿಪೊಲೀಸ್‌ ಠಾಣಾ ಇನ್‌ಸ್ಪೆಕ್ಟರ್‌ ಶಾಂತಾರಾಮ ಅವರನ್ನು ಠಾಣಾ ಕರ್ತವ್ಯ ದಿಂದ ಬಿಡುಗಡೆಗೊಳಿಸಲಾಗಿದೆ.

ನಿಷೇಧಾಜ್ಞೆ ತೆರವು;
ಭದ್ರತೆ ಮುಂದುವರಿಕೆ
ಮಂಗಳೂರು ನಗರದಲ್ಲಿ ಕೆಲವು ದಿನಗಳಿಂದ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದೆ. ಆದರೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಯಕಟ್ಟಿನ ಸ್ಥಳಗಳಲ್ಲಿ 32 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಜತೆಗೆ ಮೂರು ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸಲಾಗಿದೆ.

ಆರೋಪಿಗಳ ಭಾವಚಿತ್ರ ಸಂಗ್ರಹ
ಗಲಭೆಗೆ ಸಂಬಂಧಿಸಿ ಆರೋಪಿಗಳ ಭಾವಚಿತ್ರಗಳನ್ನು ಪತ್ತೆಹಚ್ಚಿ ಕ್ರೋಡೀಕರಿ ಸುವ ಕಾರ್ಯದಲ್ಲಿ ಪೊಲೀಸರು ನಿರತರಾ ಗಿದ್ದು, ಈಗಾಗಲೇ ನೂರಾರು ಮಂದಿ ಆರೋಪಿಗಳ ಭಾವಚಿತ್ರ ಪೊಲೀಸರಿಗೆ ಲಭ್ಯವಾಗಿದೆ. ಹಿಂಸಾಕೃತ್ಯದ ದೃಶ್ಯಾವಳಿ ಗಳನ್ನು ಆಧರಿಸಿ ಈ ಭಾವಚಿತ್ರಗಳನ್ನು ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ.

ಹಲವು ಅನುಭವಿ ಪೊಲೀಸರು ನಗರಕ್ಕೆ
ಈ ಹಿಂದೆ ನಗರದಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಗೊಂಡಿದ್ದ ಅನುಭವಿ ಪೊಲೀಸ್‌ ಅಧಿಕಾರಿಗಳನ್ನು ತನಿಖೆ ಮತ್ತು ಭದ್ರತೆ ದೃಷ್ಟಿಯಿಂದ ಮತ್ತೆ ಕರೆಸಿಕೊಳ್ಳಲಾಗಿದೆ. ಬೆಂಗಳೂರು ಸಿಸಿಬಿಯ ಎಸಿಪಿ ವೆಂಕಟೇಶ ಪ್ರಸನ್ನ, ಕಾರವಾರ ಡಿವೈಎಸ್‌ಪಿ ವೆಲೆಂಟೈನ್‌ ಡಿ’ಸೋಜಾ, ನಕ್ಸಲ್‌ ನಿಗ್ರಹ ಪಡೆಯ ಬೆಳ್ಳಿಯಪ್ಪ ಈಗ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಸಿಐಡಿಯ ಎಸಿಪಿ ಸೇರಿದಂತೆ 8 ಮಂದಿ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲೆ-ನೆರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ಕೂಡ ನಗರಕ್ಕೆ ತನಿಖೆ, ಭದ್ರತೆಗಾಗಿ ಕರೆಸಿಕೊಳ್ಳಲಾಗಿದೆ.

ಕಠಿನ ಕ್ರಮಕ್ಕೆ ಮುಖ್ಯಮಂತ್ರಿ, ಗೃಹ ಸಚಿವರ ಸೂಚನೆ
ಸಕೀìಟ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹಸಚಿವ ಬಸವರಾಜ ಬೊಮ್ಮಾಯಿ ಬುಧವಾರ ಬೆಳಗ್ಗೆ ಹಿರಿಯ ಪೊಲೀಸರ ಜತೆ ಸಭೆ ನಡೆಸಿ ಗಲಭೆಯಲ್ಲಿ ಶಾಮೀಲಾದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಬಂದೋಬಸ್ತ್ ಸಹಿತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ.

ವೀಡಿಯೋ: ಕೂಲಂಕಷ ತನಿಖೆ
ಪೊಲೀಸರಿಗೆ ಲಭ್ಯವಾಗಿ ಬಿಡುಗಡೆಗೊಂಡಿರುವ ವೀಡಿಯೋಗಳಲ್ಲಿ ದುಷ್ಕರ್ಮಿ ಗಳು ಮುಖ ಮರೆಮಾಚಿಕೊಂಡು ಸಿಸಿ ಕೆಮರಾಗಳನ್ನು ಬಾಗಿಸುತ್ತಿರುವುದು, ಗುಂಪಾಗಿ ಕಲ್ಲು ತೂರಾಟ ನಡೆಸುತ್ತಿರುವುದು, ಹಳೆಯ ಕಂಬ, ತಳ್ಳುಗಾಡಿ ಇತ್ಯಾದಿ ಗಳನ್ನು ರಸ್ತೆಗೆ ಅಡ್ಡಲಾಗಿ ಇರಿಸಿ ಮೀಸಲು ಪಡೆಯ ಪೊಲೀಸ್‌ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು, ರಸ್ತೆ ನಡುವೆ ಟಯರ್‌ ಉರಿಸುತ್ತಿರುವುದು ಇತ್ಯಾದಿ ದಾಖಲಾಗಿವೆ. ಪೊಲೀಸರು ತಮಗೆ ಲಭಿಸಿರುವ ವೀಡಿಯೋಗಳನ್ನು ಪರಿಶೀಲಿಸಿ, ದುಷ್ಕರ್ಮಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಗುಪ್ತಚರ ಇಲಾಖೆ, ಸಿಸಿಆರ್‌ಬಿ, ಸಿಸಿಬಿ, ಸೈಬರ್‌ ಅಪರಾಧ ದಳ ಸೇರಿದಂತೆ ವಿವಿಧ ವಿಭಾಗಗಳ ಪೊಲೀಸರಿಂದ ವಿವಿಧ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದಿದ್ದ ಅಜೀಜುದ್ದೀನ್‌ ರಸ್ತೆ, ಬೀಬಿ ಅಲಾಬಿ ರಸ್ತೆ, ಬಂದರು ಪ್ರದೇಶ, ನೆಲ್ಲಿಕಾಯಿ ರಸ್ತೆಯಲ್ಲಿರುವ ಕಟ್ಟಡ-ಮನೆಗಳಲ್ಲಿ ಅಳವಡಿಸಿರುವ ಸಿಸಿ ಟಿವಿಗಳ ಫ‌ೂಟೇಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮ್ಯಾಜಿಸ್ಟೀರಿಯಲ್‌ ತನಿಖೆ ಡಿ.28ರ ಬಳಿಕ ಆರಂಭ
ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ, ಗೋಲಿಬಾರ್‌ ಘಟನೆಯ ಬಗ್ಗೆ ಡಿ.28ರ ಬಳಿಕ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್‌ ತನಿಖೆ ಆರಂಭವಾಗುವ ಸಾಧ್ಯತೆಯಿದೆ.

ಮಂಗಳೂರು ಘಟನೆಯ ಬಗ್ಗೆ ಸರಕಾರ ಸಿಐಡಿ ಮತ್ತು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸಿತ್ತು. ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಜಿ. ಜಗದೀಶ್‌, ಮುಖ್ಯಮಂತ್ರಿಯವರ ಭೇಟಿ ಸೇರಿದಂತೆ ತುರ್ತು ಕಾರ್ಯಗಳ ಒತ್ತಡದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿಲ್ಲ. ಈ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು 3 ತಿಂಗಳುಗಳ ಕಾಲಾವಕಾಶ ಇದೆ. ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ವರದಿ ನೀಡಲಾಗುವುದು. ಡಿ. 28ರ ಬಳಿಕ ತನಿಖೆ ಆರಂಭಿಸಲಾಗುವುದು’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next