Advertisement

ಪಡೀಲ್‌ ಅಂಡರ್‌ಪಾಸ್‌ ಕಾಮಗಾರಿ ಮುಗಿಯುತ್ತಿದ್ದಂತೆ ರಸ್ತೆಯೇ ಕುಸಿತ !

05:24 PM Jun 10, 2020 | Naveen |

ಮಹಾನಗರ: ರಾಷ್ಟ್ರೀಯ ಹೆದ್ದಾರಿ ಪಡೀಲ್‌ನಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದ್ದ ಎರಡನೇ ರೆಲ್ವೇ ಅಂಡರ್‌ಪಾಸ್‌ನ ಮಧ್ಯಭಾಗದಲ್ಲಿಯೇ ಧಿಡೀರ್‌ ಕುಸಿತ ಕಾಣಿಸಿಕೊಂಡಿದ್ದು, ಇದೀಗ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದೆ. ಉದ್ಘಾಟನೆ ಮೊದಲೇ ಈ ಲೋಪ ಗೋಚರಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ ಎನ್ನಬಹುದು.

Advertisement

ಕಳೆದ ಎರಡು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿತ್ತು. ಕೊನೆಯ ಹಂತದಲ್ಲಿ ರೋಲರ್‌ನಲ್ಲಿ ಡಾಮರು ಸಮತಟ್ಟುಗೊಳಿಸುವ ವೇಳೆ ವೇಳೆ ಡಾಮರು ರಸ್ತೆ ಕುಸಿದು ಸುಮಾರು 3 ಅಡಿ ಆಳದಷ್ಟು ದೊಡ್ಡದಾದ ಗುಂಡಿಯಾಗಿದೆ. ಈ ಅಂಡರ್‌ಪಾಸ್‌ನ ಒಳಗಡೆ ಒಳಚರಂಡಿ ಹರಿದುಹೋಗುತ್ತಿದ್ದು, ಕಾಮಗಾರಿ ನಡೆಯುವ ವೇಳೆ ವೇಳೆ ಈ ವಿಷಯ ಅರಿಯದೆ ಕಾಮಗಾರಿ ನಡೆಸಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಡಾಮರು ಕೆಲಸ ಪೂರ್ಣಗೊಂಡ ಬಳಿಕ ಕಳೆದ ಕೆಲವು ದಿನಗಳ ಹಿಂದೆ ಮಳೆಯಾಗಿದ್ದು, ಇದರಿಂದ ಮಣ್ಣು ಹದವಾಗಿತ್ತು. ಡಾಮರು ಹದಗೊಳಿಸುವ ವೇಳೆ ಒತ್ತಡ ಬಿದ್ದು ಕುಸಿತ ಉಂಟಾಗಿರಬಹುದು. ಕೆಲವು ದಿನದಲ್ಲಿಯೇ ಪಡೀಲ್‌ ಅಂಡರ್‌ಪಾಸ್‌ ಉದ್ಘಾಟನೆಯಾಗುವುದಿತ್ತು. ಆದರೆ ಇದೀಗ ಡಾಮರು ಕುಸಿತ ಉಂಟಾದ ಕಾರಣ, ಈ ಒಳಚರಂಡಿಯ ಮೂಲ ಪತ್ತೆ ಮಾಡಬೇಕಿದೆ. ಡಾಮರು ಅಗೆದು ಒಳಚರಂಡಿಗೆ ಸ್ಲ್ಯಾಬ್‌ ಅಳವಡಿಸಿ ಬಳಿಕ ಮರು ಡಾಮರು ಕಾಮಗಾರಿ ಆಗಬೇಕು. ಮಳೆಗಾಲ ಆದ ಕಾರಣ ಸದ್ಯದಲ್ಲೇ ಕಾಮಗಾರಿ ಕಷ್ಟ. ಹೀಗಿದ್ದಾಗ ಉದ್ಘಾಟನೆಗೆ ಇನ್ನೂ ಕೆಲವು ದಿನಗಳು ತಗಲುವ ನಿರೀಕ್ಷೆ ಇದೆ.

5 ಕೋಟಿ ರೂ. ಕಾಮಗಾರಿ
ರಾ.ಹೆ.75ರ ಪಡೀಲ್‌ನಲ್ಲಿ 5 ಕೋ. ರೂ. ವೆಚ್ಚದಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗುತ್ತಿದೆ. ಮಳೆ ನೀರು ಹರಿದು ಹೋಗುವ ಪ್ರದೇಶವಾದ್ದರಿಂದ ನೆಲಮಟ್ಟದಿಂದ ಸುಮಾರು 1.5 ಮೀ. ಎತ್ತರ ಮಣ್ಣು ಹಾಕಿ ರೈಲ್ವೇ ಇಲಾಖೆ ಸೇತುವೆ ಕಾಮಗಾರಿ ನಿರ್ವಹಿಸಿದೆ. ಭಾರತೀಯ ರೋಡ್‌ ಕಾಂಗ್ರೆಸ್‌ ನಿಯಮಾವಳಿಯಂತೆ 5.50 ಮೀ. ಎತ್ತರವಿದೆ. ಆರ್‌ಟಿಒ ನಿಯಮದಂತೆ ಕಂಟೈನರ್‌ ಸಹಿತ ಒಂದು ವಾಹನವು ಗರಿಷ್ಠ 4.8 ಮೀ. ಎತ್ತರವನ್ನು ಮಾತ್ರ ಹೊಂದಿರಬಹುದಾಗಿದೆ ಎಂಬುದು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ. ಪಾದಚಾರಿಗಳಿಗೆ ಸಂಚರಿಸಲು ಅನುವಾಗುವಂತೆ ಹೊಸ ಅಂಡರ್‌ಪಾಸ್‌ನಲ್ಲಿ ಸೌಕರ್ಯವಿದೆ. ಮಳೆ ನೀರು ನಿಲ್ಲದಂತೆ, ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ಚರಂಡಿ ಕಾಮಗಾರಿ ಮಾಡಲಾಗಿದೆ.

ಕಾಮಗಾರಿ ಯಾರು ಮಾಡಿದ್ದು ?
ಈ ಕಾಮಗಾರಿ ಮಾಡಿರುವುದು ಯಾರು ಎಂಬುವುದರ ಬಗ್ಗೆ ಹೆದ್ದಾರಿ ಇಲಾಖೆ ಮತ್ತು ರೈಲ್ವೇ ಇಲಾಖೆ ಪರಸ್ಪರ ಬೆರಳು ತೋರಿಸುವ ಮೂಲಕ ಘಟನೆಯಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಕಾಮಗಾರಿ ರೈಲ್ವೇ ಮಾಡಿದ್ದು ಎಂದು ಹೆದ್ದಾರಿ ಇಲಾಖೆ ಮುಖ್ಯಸ್ಥರು ಹೇಳಿದರೆ, ಹೆದ್ದಾರಿಯವರು ಮಾಡಿದ್ದು ಎಂದು ರೈಲ್ವೇ ಇಲಾಖೆಯವರು ತಿಳಿಸಿದ್ದಾರೆ. ಹೀಗಾಗಿ ಈ ಕೆಲಸ ಯಾರು ಮಾಡಿದ್ದು ಎಂಬುವುದು ಪ್ರಶ್ನೆಯಾಗಿಯೇ ಉಳಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next