Advertisement

ಸೈಕಲ್‌ ಸಂಚಾರದ “ಓಣಿ ರಸ್ತೆ’ಗೆ ಕೆಂಪು ಡಾಮರು!

02:05 PM Jul 14, 2022 | Team Udayavani |

ಓಣಿಕೆರೆ: ಕಪ್ಪು ಟಾರು ರಸ್ತೆ, ಮಣ್ಣಿನ ಕಚ್ಚಾ ರಸ್ತೆ, ಕಾಂಕ್ರೀಟ್‌ ರಸ್ತೆ ಇವೆಲ್ಲ ನೋಡಿದ್ದೇವೆ. ಈಗ ಮಂಗಳೂರಿನ ಕೆಲವೆಡೆ ಜನರಿಗೆ ಇನ್ನು ಮುಂದೆ ಕೆಂಪು ಬಣ್ಣದ ಡಾಮರು ರಸ್ತೆಯನ್ನೂ ಕಾಣಬಹುದು!

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಕೆಲವು ಓಣಿಗಳಲ್ಲಿರುವ ಡಾಮರು ರಸ್ತೆಯು ಕೆಂಪು ಬಣ್ಣದಿಂದ ಕಂಗೊಳಿಸಲಿದೆ. ಯಾಕೆಂದರೆ; ಸ್ಮಾರ್ಟ್‌ಸಿಟಿಯಲ್ಲಿ ಸೈಕಲ್‌ ಟ್ರ್ಯಾಕ್‌ ಯೋಜನೆಗೆ ಗುರುತಿಸಲಾದ ರಸ್ತೆ ಕೆಂಪು ಬಣ್ಣದಲ್ಲಿರಲಿದೆ. ನಗರದ ಮೋರ್ಗನ್ಸ್‌ಗೇಟ್ ನ ಓಣಿಕೆರೆಯಲ್ಲಿ ಕೆಲವು ಮೀಟರ್‌ವರೆಗೆ ಸದ್ಯ ಇಂತಹ ಡಾಮರು ಹಾಕಲಾಗಿದೆ.

ಸೈಕಲ್‌ ಟ್ರ್ಯಾಕ್‌ಗೆ ಸಂಬಂಧಿಸಿ ಅಂತಾರಾಷ್ಟ್ರೀಯ ನಿಯಮಾವಳಿಯ ಪ್ರಕಾರ ಬಣ್ಣದ ರಸ್ತೆಗೆ ಉದ್ದೇಶಿಸಲಾಗಿದೆ. ಇದನ್ನು ʼಪಿಗ್ಮೆಂಟೆಡ್‌ ಸೈಕಲ್‌ ಟ್ರ್ಯಾಕ್‌ ‘ ಎಂದು ಕರೆಯುತ್ತಾರೆ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಡೈರಕ್ಟರೇಟ್‌ ಆಫ್‌ ಅರ್ಬನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್‌ ವತಿಯಿಂದ ಮಂಗಳೂರಿನಲ್ಲಿ ಸೈಕಲ್‌ ಟ್ರ್ಯಾಕ್‌ ನಿರ್ಮಾಣವಾಗಲಿದೆ.

ನಗರದ ಓಣಿಗಳು, ರಸ್ತೆ ಬದಿಗಳಲ್ಲಿ ಟ್ರ್ಯಾಕ್‌ ಸಾಗಲಿದೆ. ಬೋಳಾರ ಬೋಟ್‌ ರಿಪೇರಿ ಯಾರ್ಡ್‌ನಿಂದ ಟಿಎಂಎ ಪೈ ಕನ್ವೆನ್ಶನ್‌ ಸಭಾಂಗಣದವರೆಗೆ ಹಾಗೂ ಮಾರ್ನಮಿಕಟ್ಟೆಯಿಂದ ಮತ್ತೂಂದು ಸೈಕಲ್‌ ಟ್ರ್ಯಾಕ್‌ ನಿರ್ಮಾಣವಾಗಲಿದೆ.

Advertisement

ಕೆಂಪು, ಹಳದಿ ಎಂಬ ಎರಡು ಪ್ರತ್ಯೇಕ ಪಥವಿರಲಿವೆ. ಕೆಂಪು ಪಥ ಸುಮಾರು 8 ಕಿ.ಮೀ. ಇರಲಿದ್ದು, ಇದು ನಗರದ ಓಣಿ ರಸ್ತೆಗಳಲ್ಲಿ ಸಾಗಲಿದೆ.

ʼಓಣಿ’ಗಳಿಗೆ ಹೊಸ ರೂಪ

ಹಳದಿ ಪಥ ಸುಮಾರು 4 ಕಿ.ಮೀ. ಇರಲಿದೆ. ಇದು ರಸ್ತೆ ಬದಿಯಲ್ಲಿ ಸಾಗಲಿದೆ. ನಗರದೊಳಗೆ ಅಲ್ಲಲ್ಲಿ ಇರುವ ಓಣಿಗಳನ್ನೇ ಸೈಕಲ್‌ ಪಥಗಳಾಗಿ ಮಾಡ ಲಾಗುತ್ತದೆ. ಈ ಪರಿಕಲ್ಪನೆಯಲ್ಲಿ ಮೂಡಿರುವುದೇ ಸೈಕಲ್‌ ಓಣಿ ಯೋಜನೆ. ನಮ್ಮಲ್ಲಿರುವ ಹಳೆಯ, ಜನರು ಕಾಲ್ನಡಿಗೆಗೆ ಬಳಸುವಂತಹ ಸುವ್ಯವಸ್ಥಿತ ಓಣಿಗಳು ಅದೃಷ್ಟವಷಾತ್‌ ಇನ್ನೂ ಉಳಿದುಕೊಂಡಿವೆ. ಇಲ್ಲಿ ಹೆಚ್ಚು ವಾಹನಗಳ ಭರಾಟೆಯಿಲ್ಲ; ಅವುಗಳನ್ನು ಬಳಸಿದರೆ ಸುರಕ್ಷಿತವಾಗಿ ಸೈಕಲ್‌ನಲ್ಲಿ ತೆರಳುವುದು ಸಾಧ್ಯ.

ಸೈಕಲ್‌ ಲೇನ್‌ಗಳನ್ನು ವಿದ್ಯಾರ್ಥಿಗಳೂ ಸಹಿತ ನಾಗರಿಕರು ಬಳಸಬಹುದಾಗಿದೆ. ಈ ಮೂಲಕ ನಗರದ ವಾಹನದಟ್ಟಣೆ ಕಡಿಮೆಗೊಳಿಸುವುದು, ಪರಿಸರ ಮಾಲಿನ್ಯ ಮುಕ್ತಗೊಳಿಸುವುದು ಗುರಿ.

ಉದ್ದೇಶಿತ ಸೈಕಲ್‌ ಟ್ರ್ಯಾಕ್‌ ರೂಟ್‌

*ಬೋಳಾರ ಬೋಟ್‌ ರಿಪೇರ್‌ ಯಾರ್ಡ್‌-ಕಾಸಿಯ ಸ್ಕೂಲ್‌-ಮಣಿಪಾಲ್‌ ಸ್ಕೂಲ್‌-ರೈಲ್ವೇ ನಿಲ್ದಾಣ-ಪುರಭವನ-ಸೆಂಟ್ರಲ್‌ ಮಾರುಕಟ್ಟೆ-ರಥಬೀದಿ ಹೂವಿನ ಮಾರುಕಟ್ಟೆ-ಬಿಇಎಂ ಶಾಲೆ-ಕೆನರಾ ಶಾಲೆ-ಶಾರದಾ ವಿದ್ಯಾಲಯ-ಕೆನರಾ ಕಾಲೇಜು-ಎಸ್‌ಡಿಎಂ ಕಾಲೇಜು-ಟಿಎಂಎ ಪೈ ಕನ್ವೆನ್ಷನ್‌ ಸೆಂಟರ್‌-ಶ್ರೀ ದೇವಿ ಕಾಲೇಜು

*ಮಾರ್ನಮಿಕಟ್ಟೆ ರೈಲ್ವೇ ಓವರ್‌ ಬ್ರಿಡ್ಜ್- ಸೈಂಟ್‌ ಜೋಸೆಫ್‌ ಕಾಲೇಜು-ರೋಶನಿ ನಿಲಯ-ಹೈಲ್ಯಾಂಡ್‌ ಕಾಫಿ ವರ್ಕ್‌-ತೆರಿಗೆ ಕಚೇರಿ.

ಏನಿದು ಬಣ್ಣದ ರಸ್ತೆ?

ಡಾಮರು ಸಿದ್ಧಪಡಿಸುವಾಗಲೇ ಅದಕ್ಕೆ  ʼಪಿಗ್ಮೆಂಟೆಡ್‌ʼಎಂಬ ಕೆಮಿಕಲ್‌ ಸೇರಿಸಲಾಗುತ್ತದೆ. ಈ ಮೂಲಕ ಡಾಮರಿನ ಬಣ್ಣ ಬದಲಾಗುತ್ತದೆ. ಈ ಬಣ್ಣ ಮಳೆ-ಬಿಸಿಲಿಗೂ ಹೋಗುವುದಿಲ್ಲ. ಶಾಶ್ವತವಾಗಿ ಇರುತ್ತದೆ. ಈ ರಸ್ತೆಗಳು ಇತರ ರಸ್ತೆಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಸದ್ಯ ಓಣಿಕೆರೆಯಲ್ಲಿ ಇಂತಹ ರಸ್ತೆ ನಿರ್ಮಿಸಲಾಗಿದೆ. ಮುಂದೆ ಇದನ್ನು ಉಳಿದ ಕಡೆಯಲ್ಲಿಯೂ ಜಾರಿ ಮಾಡಲಾಗುತ್ತದೆ ಎನ್ನುತ್ತಾರೆ ಸ್ಮಾರ್ಟ್‌ ಸಿಟಿ ಜನರಲ್‌ ಮ್ಯಾನೇಜರ್‌ ಅರಣ್‌ ಪ್ರಭ.

ಆಕರ್ಷಕ ರಸ್ತೆ: ನಗರದ ಪ್ರಮುಖ ರಸ್ತೆಗಳಲ್ಲಿನ ವಾಹನದ ಭರಾಟೆಯಲ್ಲಿ ಸೈಕಲ್‌ ಬಳಸುವವರಿಗೆ ಜಾಗವಿಲ್ಲದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಎರಡು ಕಡೆಗಳಲ್ಲಿ ಪ್ರತ್ಯೇಕ ಸುಸಜ್ಜಿತ ಸೈಕಲ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದನ್ನು ಆಕರ್ಷಕವಾಗಿ ಮಾಡುವ ಕಾರಣದಿಂದ ರಸ್ತೆಗೆ ಕೆಂಪು ಬಣ್ಣ ಇರುತ್ತದೆ.  – ಪ್ರೇಮಾನಂದ ಶೆಟ್ಟಿ, ಮೇಯರ್‌ ಪಾಲಿಕೆ

 

Advertisement

Udayavani is now on Telegram. Click here to join our channel and stay updated with the latest news.

Next