Advertisement

ಜನರಿಂದ ದೂರ ಉಳಿದಿಲ್ಲ; ಪ್ರಚಾರವೂ ಬೇಕಿಲ್ಲ: ಡಾ|ಕೆ.ಜಿ. ಜಗದೀಶ್‌

03:30 AM Jul 04, 2017 | Team Udayavani |

ಜಿಲ್ಲಾಧಿಕಾರಿಯಾದ ಬಳಿಕ ಡಾ| ಕೆ.ಜಿ. ಜಗದೀಶ್‌ ಮೊದಲ ವಿಶೇಷ ಸಂದರ್ಶನ
ಮಂಗಳೂರು: ಯಾವುದೇ ಪ್ರಚಾರ ಬಯಸದೆ ತಮ್ಮ ಪಾಡಿಗೆ ಸದ್ದಿಲ್ಲದೆ, ಕೆಲಸ ಮಾಡುತ್ತಿರುವ ಯುವ ಐಎಎಸ್‌ ಅಧಿಕಾರಿ ಡಾ| ಕೆ.ಜಿ. ಜಗದೀಶ್‌. ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಹತ್ತು ತಿಂಗಳು ಕಳೆದಿವೆ. ನಮ್ಮ ಜಿಲ್ಲಾಧಿಕಾರಿ ಯಾರು ಎಂದು ಕೇಳಿದರೆ ಅನೇಕರಿಗೆ ಇನ್ನೂ ಗೊತ್ತಿಲ್ಲ. ಅಷ್ಟರಮಟ್ಟಿಗೆ ಅವರು ಪ್ರಚಾರದಿಂದ ದೂರ ಉಳಿದಿದ್ದು, ಇಲ್ಲಿವರೆಗೆ ಬಹುಶಃ ಯಾವ ಮಾಧ್ಯಮಕ್ಕೂ ವಿಶೇಷ ಸಂದರ್ಶನ ಕೊಟ್ಟವರಲ್ಲ. ಆದರೆ‌ ಅಧಿಕಾರಿಗಳ ಪಾಲಿಗೆ ನೇರ ನುಡಿಯ ಖಡಕ್‌ ಜಿಲ್ಲಾಧಿಕಾರಿ. ಕಚೇರಿಯಲ್ಲಿ ಅಧಿಕಾರಿಗಳು ಓಡಾಡುವುದು ಕಾಣಿಸಿದರೆ, ‘ನೀವು ಯಾಕೆ ಇಲ್ಲಿಗೆ ಬಂದಿದ್ದು? ಜನ ನಿಮ್ಮನ್ನು ಕಾಯುತ್ತ ಕುಳಿತಿರುತ್ತಾರೆ ; ನೀವು ನಿಮ್ಮ ಕ್ಷೇತ್ರಕ್ಕೆ ಹೋಗಿ’ ಎಂದು ವಾಪಸ್‌ ಕಳುಹಿಸುತ್ತಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಕನ್ನಡಿಗರೇ ಆದ ಜಗದೀಶ್‌, ದ.ಕ. ಜಿಲ್ಲಾಧಿಕಾರಿಯಾದ ಬಳಿಕ ಇದೇ ಮೊದಲ ಬಾರಿಗೆ ‘ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

Advertisement


ಜಿಲ್ಲೆಗೆ ಬಂದು ಹತ್ತು ತಿಂಗಳಾಗಿದ್ದು, ದಕ್ಷಿಣ ಕನ್ನಡದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದಕ್ಷಿಣ ಕನ್ನಡ ತುಂಬಾ ಒಳ್ಳೆಯ ಹಾಗೂ ಅಭಿವೃದ್ಧಿಶೀಲ ಜಿಲ್ಲೆ. ಇಲ್ಲಿನ ಜನ ಕೂಡ ಕಾನೂನಿಗೆ ತುಂಬಾ ಗೌರವ ಕೊಡುತ್ತಾರೆೆ.

ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳಾಗಿ ಪೊನ್ನುರಾಜ್‌, ಭರತ್‌ಲಾಲ್‌ ಮೀಣ ಸೇರಿದಂತೆ ಅನೇಕ ಅಧಿಕಾರಿಗಳು ಒಳ್ಳೆಯ ಹೆಸರು ಮಾಡಿ ಹೋಗಿದ್ದಾರೆ; ಇನ್ನು ನೀವು?
ಪೊನ್ನುರಾಜ್‌, ಮೀಣ ಬಹಳ ಹೆಸರು ಮಾಡಿದ್ದು ನಿಜ. ನಾನು ಆ ಹಾದಿಯಲ್ಲಿ ಹೋಗುತ್ತಿಲ್ಲ. ನಾನು ಯಾವುದೇ ಜಿಲ್ಲೆಯಲ್ಲಿ ಕೆಲಸ ಮಾಡಿದರೂ ಹೆಸರು ಮಾಡಬೇಕೆಂಬ ಆಸೆ ಅಥವಾ ನಿರೀಕ್ಷೆ ನನ್ನ ಮನಸ್ಸಿನಲ್ಲಿಲ್ಲ. ನಾವು ಸರಕಾರದ ಅಧಿಕಾರಿಗಳು. ಸರಕಾರ ನಮಗೆ ಸಂಬಳ ಕೊಡುತ್ತದೆ. ನನ್ನ ಕೈಯಲ್ಲಾದ ಮಟ್ಟಿಗೆ ಒಳ್ಳೆಯ ಕೆಲಸ ಮಾಡಲು ಪ್ರಯತ್ನ ಮಾಡುತ್ತೇನೆಯೇ ಹೊರತು ಹಿಂದಿನ ಜಿಲ್ಲಾಧಿಕಾರಿಗಳ ಹಾದಿಯಲ್ಲಿ ಸಾಗುವ ಯಾವುದೇ ಉದ್ದೇಶವಿಲ್ಲ. ಪ್ರತೀ ಅಧಿಕಾರಿಗಳ ಕಾರ್ಯವೈಖರಿ ಬೇರೆ ಬೇರೆ ಇರುತ್ತದೆ. ಅದು ಇಷ್ಟವಿಲ್ಲದಾಗ ಸರಕಾರ ಬೇರೆ ಕಡೆಗೆ ವರ್ಗಾಯಿಸುತ್ತದೆ. ಇಷ್ಟವಿದ್ದರೆ ಅಲ್ಲೇ ಉಳಿದುಕೊಳ್ಳುತ್ತೇವೆೆ.

ಜಿಲ್ಲೆಯಲ್ಲಿ ಪದೇಪದೇ ಯಾಕೆ ಈ ರೀತಿ ಕೋಮು ಸಂಘರ್ಷ ನಡೆಯುತ್ತಿದೆ?
ಜಿಲ್ಲೆಯಲ್ಲಿ ಶೇ. 99.99ರಷ್ಟು ಜನರು ತುಂಬಾ ಒಳ್ಳೆಯವರು. ಅವರಿಗೆ ಈ ಜಗಳ, ಗಲಾಟೆ ಮಾತ್ರವಲ್ಲ ಪ್ರತಿಭಟನೆಗಳೂ ಬೇಡ. ರಾಜ್ಯದಲ್ಲೇ ಅತಿ ಕಡಿಮೆ ಪ್ರತಿಭಟನೆ ನಡೆಯುವ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿನವರು ಪರಿಶ್ರಮ ಜೀವಿಗಳು. ಆದರೆ ಕೇವಲ ಶೇ. 001ರಷ್ಟು ಜನ ಮಾತ್ರ ತಮ್ಮ ಸ್ವಾರ್ಥಕ್ಕಾಗಿ ಕೋಮು – ಗಲಭೆ ಸೃಷ್ಟಿಸಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆೆ. ಇಂತಹ ಎರಡು- ಮೂರು ಸಂಘಟನೆಗಳಿದ್ದು, ಅವರ ಕೃತ್ಯದಿಂದಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ.

ಹಾಗಾದರೆ ಇಂತಹ ಕೋಮು ಶಕ್ತಿಗಳನ್ನು ಮಟ್ಟ ಹಾಕಲು ಸಾಧ್ಯವಿಲ್ಲವೇ ?
ಬೇರೆ ಜಿಲ್ಲೆಗಳಲ್ಲಿ ಆಯಕಟ್ಟಿನ ಸ್ಥಳಗಳನ್ನು ಗುರಿಯಾಗಿಸಿ ಶಾಂತಿ ಕದಡುವ ಕೃತ್ಯ ಎಸಗುತ್ತಾರೆ. ಆದರೆ ಇಲ್ಲಿ ರಾತೋರಾತ್ರಿ ಇಬ್ಬರು- ಮೂವರು ಹೋಗಿ ಕುಗ್ರಾಮಗಳಲ್ಲಿ ಕೊಲೆ ಮಾಡಿ ಪರಾರಿಯಾಗುತ್ತಾರೆ. ಇಂಥ ಕೃತ್ಯಗಳನ್ನು ತಡೆಯುವುದು ಪೊಲೀಸರಿಗೂ ಸವಾಲಾಗಿರುತ್ತದೆ. ಆದರೆ ಈ ರೀತಿ ಕೋಮು ಗಲಭೆ ಸೃಷ್ಟಿಸುವ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಪಶ್ಚಿಮ ವಲಯ ಐಜಿಪಿ, ಎಸ್ಪಿ ಜತೆ ಸೇರಿ ಕಾರ್ಯತಂತ್ರವೊಂದನ್ನು ರೂಪಿಸಲಾಗುತ್ತಿದೆ.

Advertisement

ಇನ್ನು ಎಷ್ಟು ದಿನ ಅಂತ ಈ ರೀತಿ ನಿಷೇಧಾಜ್ಞೆ ಮುಂದುವರಿಸುವಿರಿ ? 
ಜಿಲ್ಲೆಯ ಕೆಲವು ಭಾಗದಲ್ಲಿ ಅಂದರೆ, ಬಂಟ್ವಾಳದ ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕದಡುವ ದುಷ್ಕರ್ಮಿಗಳಿದ್ದಾರೆ. ಇಂಥವರು ಎರಡೂ ಸಮುದಾಯದಲ್ಲಿದ್ದು, ಜನರಲ್ಲಿ ಭಯದ ವಾತಾವರಣವಿದೆ. ಆ ಕಾರಣಕ್ಕೆ 144 ಸೆಕ್ಷನ್‌ ಮುಂದುವರಿಸುತ್ತಿದ್ದು, ಜನ ಸಾಮಾನ್ಯರು ಹಾಗೂ ವ್ಯಾಪಾರಸ್ಥರಿಗೆ ತೊಂದರೆಯಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ.

ಕೋಮು-ಗಲಭೆಗೆ ಕಡಿವಾಣ ಹಾಕುವಲ್ಲಿ ಪೊಲೀಸರ ವೈಫಲ್ಯವಿದೆಯೇ?
ಪೊಲೀಸರು ಬೇರೆಯಲ್ಲ; ಜಿಲ್ಲಾಡಳಿತ ಬೇರೆಯಲ್ಲ. ಪೊಲೀಸರ ವೈಫಲ್ಯ ಎಂದಾದರೆ ಅದು ಜಿಲ್ಲಾಡಳಿತದ ವೈಫಲ್ಯವೂ ಹೌದು. ಆದರೆ, ಇಲ್ಲಿ ಪ್ರಶ್ನೆ ಅದಲ್ಲ. ಯಾವುದೋ ಒಂದು ಊರಿನಲ್ಲಿ ಒಂದು ಕೋಮಿನವರು ಮತ್ತೂಂದು ಕೋಮಿನ ಮೇಲೆ ಹಲ್ಲೆ, ಕೊಲೆಗೆ ಯತ್ನಿಸುತ್ತದೆ ಎಂದರೆ, ಅದನ್ನು ತತ್‌ಕ್ಷಣಕ್ಕೆ ತಡೆಯುವುದು ಪೊಲೀಸರಿಗೂ ಅಸಾಧ್ಯ. ಇಂತಹ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಆಗಿಲ್ಲ ಎಂದ ಮಾತ್ರಕ್ಕೆ ಅದು ಪೊಲೀಸರ ವೈಫಲ್ಯವಾಗುವುದಿಲ್ಲ. 

ದಕ್ಷಿಣ ಕನ್ನಡದಲ್ಲಿಯೂ ಮರಳು ಮಾಫಿಯಾ ಜೋರಾಗಿದ್ದರೂ ನೀವು ಕಣ್ಣುಮುಚ್ಚಿ ಕುಳಿತಿರುವುದು ಯಾಕೆ ? 
ನಮ್ಮ ಜಿಲ್ಲೆಯಲ್ಲಿ ಮರಳು ಮಾಫಿಯಾ ಜಾಸ್ತಿಯಿದೆ ಎಂದು ಹೇಳಿರುವುದಕ್ಕೆ ನನ್ನ ಸಹಮತವಿಲ್ಲ. ಹಾಗಂತ ಅಕ್ರಮ ಮರಳು ಸಾಗಾಟವಾಗುತ್ತಿಲ್ಲ ಎಂದು ಹೇಳಲಾರೆ. ಮರಳು ಕಳ್ಳ ಸಾಗಾಟವನ್ನು ಸಂಪೂರ್ಣ ತಡೆಹಿಡಿಯಲು ಸಾಧ್ಯವಿಲ್ಲ. ಬೇರೆ ಕಳ್ಳತನ ಸಮಾಜದಲ್ಲಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿ ತನಕ ಈ ಮರಳು ಕಳ್ಳತನವೂ ಇರುತ್ತದೆ. ಆದರೆ ಅಕ್ರಮ ಮರಳು ಸಾಗಾಟ ತಡೆಯಲು ಜಿಲ್ಲಾದ್ಯಂತ 18 ತಂಡಗಳನ್ನು ಮಾಡಲಾಗಿದ್ದು, ದಾಳಿ ಕೂಡ ನಡೆಯುತ್ತಿದೆ. ಹೀಗಿರುವಾಗ, ಜಿಲ್ಲಾಧಿಕಾರಿಯೇ ಖುದ್ದಾಗಿ ಸ್ಥಳಕ್ಕೆ ತೆರಳಿ ದಾಳಿ ಮಾಡಬೇಕಾದ ಅಗತ್ಯವೇನೂ ಇಲ್ಲ. 

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ?
ಹೌದು, ಮಕ್ಕಳನ್ನು ಮಾದಕ ವಸ್ತು ಸೇವನೆಯಿಂದ ರಕ್ಷಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ಸಮಿತಿಯಿದೆ. ಈ ಸಮಿತಿಯಲ್ಲಿ 4-5 ತಿಂಗಳಿಂದ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗಾಂಜಾ ಎನ್ನುವುದು ಸಣ್ಣ ವಿಚಾರವಲ್ಲ. ಆದರೆ ಈ ಬಗ್ಗೆ ಯುವಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲಾಧಿಕಾರಿಯವರು ಎಲ್ಲರಿಗೂ ಲಭ್ಯವಾಗುತ್ತಿಲ್ಲ; ಜನರೊಂದಿಗೆ ಹೆಚ್ಚು ಬೆರೆಯುತ್ತಿಲ್ಲ ಎಂದೆಲ್ಲ  ನಿಮ್ಮ ಮೇಲೆ ಆರೋಪವಿದೆಯಲ್ಲಾ ?
ಪ್ರತಿಯೊಬ್ಬರ ಕಾರ್ಯಶೈಲಿ ಭಿನ್ನವಾಗಿರುತ್ತದೆ. ನನ್ನ ಕಚೇರಿಗೆ ದಿನಕ್ಕೆ ಕನಿಷ್ಠ 100 ಮಂದಿ ಬಂದು ಭೇಟಿ ಮಾಡಿ ಹೋಗುತ್ತಾರೆ. ಇದನ್ನು ಹೊರತುಪಡಿಸಿದರೆ, ಯಾವುದೇ ಸಾಮಾಜಿಕ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನಗೆ ಇಷ್ಟವಿಲ್ಲ. ಖಾಸಗಿಯವರ ಜತೆ ನಾನು ಜಾಸ್ತಿ ಬೆರೆಯುವುದು ಕೂಡ ಇಲ್ಲ. ಇದು ನನ್ನ ಸ್ವಭಾವ. ಕರ್ತವ್ಯದ ಸಮಯದಲ್ಲಿ ಕರ್ತವ್ಯ ನಿಭಾಯಿಸುವೆೆ. ಬೆಳಗ್ಗೆ ಎದ್ದು ಟೆನ್ನಿಸ್‌, ಗಾಲ್ಫ್ ಆಡುತ್ತೇನೆೆ. ನನ್ನನ್ನು ಭೇಟಿ ಮಾಡಲು ಜನರಿಗೆ ಮುಕ್ತ ಅವಕಾಶವಿದೆ; ಅದಕ್ಕೆ ಯಾವ ಅಪಾಯಿಂಟ್‌ಮೆಂಟ್‌ ಕೂಡ ಬೇಕಿಲ್ಲ. ಅದುಬಿಟ್ಟು, ನಾನು ಮಾಡಿದ ಕೆಲಸವನ್ನು ಹೇಳಿಕೊಂಡು ಪ್ರಚಾರ ಗಿಟ್ಟಿಸುವುದು ಇಷ್ಟವಿಲ್ಲ. ಅನಗತ್ಯವಾಗಿ ಮಾಧ್ಯಮದ ಜತೆಗೂ ಮಾತನಾಡುವುದಿಲ್ಲ. ನನ್ನ 10 ತಿಂಗಳ ಅವಧಿಯಲ್ಲಿ 3 ಅಥವಾ 4 ಪತ್ರಿಕಾಗೋಷ್ಠಿ ಮಾಡಿರಬಹುದು. ಹಾಗಂತ ಮಾಧ್ಯಮದವರನ್ನು ಇಷ್ಟಪಡದ ವ್ಯಕ್ತಿ ನಾನಲ್ಲ.

ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಿಮ್ಮ ಯೋಜನೆಗಳೇನು?
ಮೊದಲನೆಯದಾಗಿ, ಸಸಿಹಿತ್ಲು ಬೀಚ್‌ ಅನ್ನು ಅಂತಾರಾಷ್ಟ್ರೀಯ ಸರ್ಫಿಂಗ್‌ ಕೇಂದ್ರವನ್ನಾಗಿಸಬೇಕೆನ್ನುವ ಯೋಚನೆಯಿದ್ದು, ಅದನ್ನು ಅಭಿವೃದ್ಧಿಪಡಿಸಲು 15 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಮಗ್ರ ಆದ್ಯತೆ ನೀಡಲು ಪ್ರತ್ಯೇಕ ಪ್ರವಾಸೋದ್ಯಮ ಸಮಿತಿ ರಚಿಸುವ ಬಗ್ಗೆ ಚರ್ಚಿಸಲಾಗುತ್ತಿದೆ.

– ಭರತ್‌ರಾಜ್‌ ಕಲ್ಲಡ್ಕ

Advertisement

Udayavani is now on Telegram. Click here to join our channel and stay updated with the latest news.

Next